ಸನಾತನ ಸಂಸ್ಕೃತಿಯನ್ನು ಪೋಷಿಸುವ ವಿಶಿಷ್ಟ ಮಠ ಸುತ್ತೂರು: ಪ್ರದೀಪ್ ಕುಮಾರ್ ಕಲ್ಕೂರ

ಬಸವ ಮೀಡಿಯಾ
ಬಸವ ಮೀಡಿಯಾ

ಇಂದು ಪ್ರತಿಯೊಂದನ್ನು ಲೌಕಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಎಷ್ಟೋ ಸಂದರ್ಭದಲ್ಲಿ ಸ್ತ್ರೀ ಸಮಾನತೆ, ಸಮಾಜ ಸಮಾನತೆಯಂತಹ ಲೌಕಿಕ ದೃಷ್ಟಿಯಲ್ಲಿ ವಚನಗಳನ್ನು ನೋಡಲಾಗುತ್ತಿದೆ…

ಮಂಗಳೂರು

ವಚನಗಳು ಸನಾತನ ಸಂಸ್ಕೃತಿಯ ಸಾರ, ಪೂಜ್ಯ ದೇಶಿಕೇಂದ್ರ ಮಹಾಸ್ವಾಮಿಗಳ ಸುತ್ತೂರು ಮಠ ಸನಾತನ ಸಂಸ್ಕೃತಿಯನ್ನು ಪೋಷಿಸುವಂತ ವಿಶಿಷ್ಟ ಮಠವೆಂದು ಪ್ರದೀಪಕುಮಾರ ಕಲ್ಕೂರ ಶನಿವಾರ ಹೇಳಿದರು.

ಕಲ್ಕೂರ ಅವರು ಮಂಗಳೂರಿನಲ್ಲಿ ನಡೆದ ಒಂದು ದಿನದ ವಚನ ಸಾಹಿತ್ಯ ಸಮ್ಮೇಳನದ ಪ್ರಧಾನ ಆಯೋಜಕರು. ಇವರು ಪ್ರಸಿದ್ಧ ಕಲ್ಕೂರ ಪ್ರತಿಷ್ಠಾನದ ಮುಖ್ಯಸ್ಥರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರು ಕೂಡ.

ಸಮ್ಮೇಳನದಲ್ಲಿ ಕಲ್ಕೂರ ಅವರು ಆಶಯ ಭಾಷಣ ಮಾಡುತ್ತ ಸುತ್ತೂರು ಮಠ ನೂರಾರು ವಿದ್ಯಾಸಂಸ್ಥೆಗಳನ್ನು, ಅನಾಥಾಲಯಗಳನ್ನು, ಸಂಸ್ಕಾರ ಕೇಂದ್ರಗಳನ್ನು, ಸಂಸ್ಕೃತ ಶಾಲೆಗಳನ್ನು ನಡೆಸುತ್ತ, ಸನಾತನ ಸಂಸ್ಕೃತಿಯನ್ನು ಪೋಷಿಸುವ ವಿಶಿಷ್ಟ ಮಠವಾಗಿದೆ ಎಂದು ಬಣ್ಣಿಸಿದರು.

ಕಳೆದ 10 ವರ್ಷದಿಂದ ಸುಮಾ ಮಾನ್ವಿ ಅವರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ವತಿಯಿಂದ ಈ ಭಾಗದಲ್ಲಿ‌ ಕೆಲಸ ಮಾಡುತ್ತ ಬಂದಿದ್ದಾರೆ. ಅವರು ಈ ವರ್ಷ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು ಬರುತ್ತಿದ್ದಾರೆ ಎಂದು ಹೇಳಿದರು. ಆಗ ಇದು ಕೇವಲ ಸಣ್ಣ ಕಾರ್ಯಕ್ರಮ ಆಗಬಾರದು, ಒಂದು ವಚನ ಸಾಹಿತ್ಯ ಸಮ್ಮೇಳನವಾಗಬೇಕು ಎಂದು ನಿರ್ಣಯ ಮಾಡಲಾಯಿತು ಎಂದು ಹೇಳಿದರು.

ಸುತ್ತೂರು ಶ್ರೀಗಳು ಬರುತ್ತಿರುವುದರಿಂದ ಮಾಜಿ ಉಪರಾಷ್ಟ್ರಪತಿ ಅವರ ಮಗ ಅರವಿಂದ ಜತ್ತಿ ಅವರು ಕೂಡ ಬರಲು ಒಪ್ಪಿಕೊಂಡರು. ಇವೆಲ್ಲಾ ಕಾರಣಗಳಿಂದ ಇಂದು ವಚನ ಸಾಹಿತ್ಯ ಸಮ್ಮೇಳನ ಗಣಪತಿಯ ಪ್ರಾರ್ಥನೆಯೊಂದಿಗೆ ವಿದ್ಯುಕ್ತವಾಗಿ ಸಾಕ್ಷಾತ್ಕಾರವಾಗಿದೆ, ಇದನ್ನು ನಾವೆಲ್ಲ ಸಂಭ್ರಮಿಸಬೇಕು, ಎಂದು ಹೇಳಿದರು.

ವಚನ ಸಾಹಿತ್ಯ ಯಾರಿಗೂ ಸೀಮಿತವಲ್ಲ

ಕಲ್ಕೂರ ಅವರು ಇಂದು ಸಾಧಕರನ್ನು ಕೆಲವು ಜನಾಂಗಗಳಿಗೆ ಸೀಮಿತ ಮಾಡುವ ಪ್ರವೃತಿ ಬೆಳೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕೃಷ್ಣ ಜಯಂತಿಯನ್ನು ಯಾದವರಿಗೆ, ಕನಕದಾಸ ಜಯಂತಿಯನ್ನು ಕುರುಬರಿಗೆ, ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ಜನಾಂಗಕ್ಕೆ ಸೀಮಿತಗೊಳಿಸಲಾಗುತ್ತಿದೆ.

ಶರಣರ ವಚನ ಸಾಹಿತ್ಯ ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕಾದಂತ ಸನಾತನ ಸಂಸ್ಕೃತಿಯ ಸಾರ. ವಚನ ಸಾಹಿತ್ಯ ಕೇವಲ ವೀರಶೈವರಿಗೆ ಅಥವಾ ಇನ್ನೊಬ್ಬರಿಗೆ ಸೀಮಿತವಲ್ಲ, ಎಂದು ‘ಲಿಂಗಾಯತ’ ಪದ ಬಳಸದೇ ಕಲ್ಕೂರ ಹೇಳಿದರು.

ಹಾಲನ್ನು ಕಾಯಿಸಿದಾಗ ಹೇಗೆ ಮೇಗ ಮೇಲೆ ಬರುತ್ತದೆಯೋ ಹಾಗೆ ವಚನಗಳು ನಮ್ಮ ಸಂಸ್ಕೃತಿಯ ಮೇಗು ಎಂದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡುತ್ತಾ,ಈ ಸಮ್ಮೇಳನ ರೂವಾರಿ ಈ ಭಾಗದಲ್ಲಿ ಸಾಂಸ್ಕೃತಿಕ ಶಕ್ತಿಯ ಹಿನ್ನೆಲೆಯಾಗಿ ಪ್ರದೀಪಕುಮಾರ ಕಲ್ಕುರ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

77
ವಚನಗಳು ಶಾಸ್ತ್ರಗಳು ಒಂದೇ

ಶಾಸ್ತ್ರಗಳಲ್ಲಿ ಇರುವುದನ್ನೇ ವಚನಗಳು ಸರಳ ಕನ್ನಡದಲ್ಲಿ ಹೇಳಿದವು ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಲೌಕಿಕವಾದ ವಿಷಯಗಳು ಮಾತ್ರವಿಲ್ಲ

ನೂರಾರು ಶರಣರು ಶಾಸ್ತ್ರಬದ್ದ ಕೃತಿಗಳಿಗೆ ವಿದಾಯ ಹೇಳಿ ಸರಳವಾದ ಮಾತುಗಳನ್ನು ಸಾಹಿತ್ಯಗೊಳಿಸಿದರು. ಕೇವಲ ಲೌಕಿಕವಾದ ವಿಷಯಗಳು ಮಾತ್ರವಲ್ಲದೆ ಭಗವಂತನ ಜೊತೆ ತಾದ್ಯಾತ್ಮ ಸಾಧಿಸುವಂತಹ ವಿಷಯಗಳನ್ನೂ ಕೂಡ ವಚನಕಾರರು ವಿವರಿಸಿದರು, ಎಂದು ಸುತ್ತೂರು ಶ್ರೀ ಹೇಳಿದರು.

ಇಂದು ಪ್ರತಿಯೊಂದನ್ನು ಲೌಕಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಎಷ್ಟೋ ಸಂದರ್ಭದಲ್ಲಿ ಸ್ತ್ರೀ ಸಮಾನತೆ, ಸಮಾಜ ಸಮಾನತೆಯಂತಹ ಲೌಕಿಕ ದೃಷ್ಟಿಯಲ್ಲಿ ವಚನಗಳನ್ನು ನೋಡಲಾಗುತ್ತಿದೆ.

ಆದರೆ ಸಮಾಜದ ಸಾಮಾನ್ಯ ಮನುಷ್ಯನೂ ಕೂಡ ಭಗವಂತನನ್ನು ಅರ್ಥ ಮಾಡಿಕೊಳ್ಳಲು, ಆರಾಧಿಸಲು, ಸಮೀಕರಿಸಿಕೊಳ್ಳಲು ಅವಕಾಶ ಮಾಡಿಕೊಡುವುದು ಬಸವಣ್ಣನವರ ಆಶಯವಾಗಿತ್ತು. ಅವರಿಗೆ ಇಷ್ಟಲಿಂಗ ಬರೀ ಧಾರ್ಮಿಕ ಸಂಕೇತ ಮಾತ್ರವಾಗಿರಲಿಲ್ಲ ಸಮಾನತೆ ಸಾರುವ ಸಂಕೇತ ಕೂಡ ಆಗಿತ್ತು.

ಇದರ ಕುರಿತಾಗಿ ಮಹಾಸಭೆ, ಶರಣ ಸಾಹಿತ್ಯ ಪರಿಷತ್ ಮತ್ತು ಹಲವಾರು ಸಂಘ ಸಂಸ್ಥೆಗಳು ರಾಜ್ಯದ ಒಳಗೆ ಮತ್ತು ಹೊರಗೆ ಅರ್ಥಪೂರ್ಣ ಕೆಲಸ ಮಾಡುತ್ತಿವೆ, ಎಂದು ಸುತ್ತೂರು ಶ್ರೀ ಹೇಳಿದರು.

Share This Article
2 Comments
  • ಸನಾತನ ಸಂಸ್ಕ್ರತಿಯನ್ನು ಸುತ್ತೂರು ಮಠ ಪೋಷಿಸಲಿ, ಅದು ಅವರ ಆಯ್ಕೆ , ಆದರೆ ವಚನ ಸಾಹಿತ್ಯವನ್ನು ಸನಾತನದ ಶಾಸ್ರ್ರಗಳ ಭಾಗ ಎಂದು ಹೇಳುವುದು ಈ‌ಮಹನೀಯರು ಸಮ್ಮತಿಸುವುದು ಅಕ್ಷಮ್ಯ ಅಪರಾಧ, ಇದು ತಮ್ಮ ವಯ್ಯಕ್ತಿಕ ಹಿತಾಸಕ್ತಿಗೆ ವಚನ ಸಮ್ಮೇಳನ ನಡೆಸಿದ ಹಾಗಿದೆ

Leave a Reply

Your email address will not be published. Required fields are marked *