ಕಲ್ಬುರ್ಗಿ
ರಾಜ್ಯದ ವಿವಿಧ 40ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ ಜ.17, 18 ಮತ್ತು 19 ರಂದು ಮೂರು ದಿನಗಳ ಕಾಲ ಭಾರತದ ಬಹುತ್ವದ ಸಂಸ್ಕೃತಿ ಪ್ರತಿಪಾದನೆ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ -2025ರ ಕಲಬುರಗಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವದ ಸಂಚಾಲಕರಾದ ಮೀನಾಕ್ಷಿ ಬಾಳಿ, ಆರ್.ಕೆ. ಹುಡಗಿ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹುಸಂಸ್ಕೃತಿಯು ಭಾರತದ ಹೆಗ್ಗುರುತು. ವೈವಿಧ್ಯತೆಯಲ್ಲಿ ಏಕತೆ ಭಾರತದ ವೈಶಿಷ್ಟತೆ. ಇಂತಹ ಬಹುತ್ವ ಭಾರತದ ಮೇಲೆ ವೈದಿಕ ಧಾರ್ಮಿಕತೆಯ ಯಜಮಾನಿಕೆಯ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನಗಳು ನಡೆಯುತ್ತಿರುವುದು ಇದೀಗ ಎದ್ದು ಕಾಣುತ್ತಿದೆ ಎಂದರು.
ನೆಲಮೂಲ ಸಂಸ್ಕ್ರತಿಗಳನ್ನು ತುಳಿದಿಕ್ಕಿ, ವೈದಿಕ ಧಾರ್ಮಿಕತೆಯನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸುವ ಹುನ್ನಾರಗಳನ್ನು ವಿರೋಧಿಸಿ ‘ಬಹುತ್ವ ಭಾರತ, ಸಶಕ್ತ ಭಾರತ’ ಎನ್ನುವ ಪ್ರತಿಪಾದನೆಯಲ್ಲಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ವನ್ನು ಇದೇ 2025 ಜನವರಿ 17 ರಿಂದ 19 ರವರೆಗೆ ಕಲಬುರ್ಗಿ ಮಹಾನಗರದಲ್ಲಿ ಆಯೋಜಿಸಲಾಗುತ್ತಿದೆ. ಸುಮಾರು ನಲವತ್ತಕ್ಕೂ ಅಧಿಕ ವಿವಿಧ ಜನ ಸಂಘಟನೆಗಳು ಒಡಗೂಡಿದ ‘ಸೌಹಾರ್ದ ಕರ್ನಾಟಕ’ ವು ವ್ಯವಸ್ಥೆಗೊಳಿಸುತ್ತಿದೆ ಎಂದರು.
ಕರ್ನಾಟಕ ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕಗಳು ಕೋಮು ಸೌಹಾರ್ದತೆ, ಸಾಮರಸ್ಯ ಸಂಸ್ಕೃತಿಯ ನೆಲೆವೀಡಾಗಿದೆ. ಆಚಾರ, ವಿಚಾರ, ಹಬ್ಬ, ಸಾಮಾಜಿಕ ಧಾರ್ಮಿಕ ಉತ್ಸವಗಳಲ್ಲಿ, ಜನಜೀವನದಲ್ಲಿಯೂ ಇವು ಹಾಸು ಹೊಕ್ಕಾಗಿವೆ. ಶರಣ ಬಸಪ್ಪ ಅಪ್ಪ ದೇವಸ್ಥಾನ – ಖಾಜಾ ಬಂದೇ ನವಾಜ ದರ್ಗಾ, ತಿಂತಿಣಿ ಮೌನೇಶ್ವರ, ಚಾಂಗಿದೇವ, ಶಿಶುನಾಳ ಶರೀಫ-ಗುರು ಗೋವಿಂದ ಭಟ್ಟ, ಬಾಬಾ ಬುಡನ್ ದರ್ಗಾ ದತ್ತಪೀಠ, ಮುಂತಾದ ಶರಣರು, ಸೂಫಿ ಸಂತರು, ತತ್ವ ಪದಕಾರರ ಪರಂಪರೆ ಉಜ್ವಲವಾದುದು. ಜಾತಿ ತಾರತಮ್ಯ, ಲಿಂಗ ತಾರತಮ್ಯ ವಿರೋಧಿಸಿದ, ಎಲ್ಲ ರೀತಿಯ ಅಸಮಾನತೆಗಳನ್ನು ತೊಲಗಿಸಲು ಪಣ ತೊಟ್ಟಿದ್ದ 12 ನೆಯ ಶತಮಾನದ ಕಾಯಕ ಜೀವಿ ಶರಣರ ಮಹಾನ್ ಚಳುವಳಿ ನಡೆದ ಪ್ರದೇಶವಿದು. ಇಂತಹ ಪ್ರದೇಶದಲ್ಲಿ ವಚನ ಚಳುವಳಿಗೆ, ಶರಣರ ಪರಂಪರೆಗೆ ಮಸಿ ಬಳಿಯುವ ಪ್ರಯತ್ನಗಳೂ ನಡೆದಿವೆ. ವಚನ ಚಳುವಳಿಯನ್ನು ಅನ್ಯಾಯ, ಅಸಮಾನತೆಗಳ ಅಡಿಪಾಯವಾಗಿರುವ ವೈದಿಕ ತತ್ವಗಳೊಂದಿಗೆ ಸಮೀಕರಿಸುವ, ಅದರ ಮುಂದುವರೆದ ಭಾಗ ಎನ್ನುವ ವಿಕೃತ ಪ್ರತಿಪಾದನೆಗಳು ಆರಂಭಗೊಂಡಿವೆ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ವೈವಿಧ್ಯತೆಯ ಸಂಸ್ಕೃತಿಯನ್ನೇ ಅಪೋಶನ ಮಾಡುವ ಕುತಂತ್ರಗಳನ್ನು ಎದುರಿಸಿ ಹಿಮ್ಮೆಟ್ಟಿಸುವುದು ಇಂದಿನ ಜರೂರಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ವಚನ ಚಳುವಳಿಯ ಮೂಲ ಆಶಯಗಳನ್ನು ಹಾಗೂ ಸಮಾಜದ ಸೌಹಾರ್ದ ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಾನಾ ಧಾರ್ಮಿಕ, ಸಾಮಾಜಿಕ ಸಂಘಟನೆಗಳೂ, ವ್ಯಕ್ತಿಗಳೂ ಕೂಡಿ ಕಲ್ಬುರ್ಗಿಯಲ್ಲಿ ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದರು.
ಮೊದಲ ದಿನ ಜ. 17ರಂದು ಬೆಳಿಗ್ಗೆ 10.30 ಕ್ಕೆ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಾತೋಶ್ರೀ ದಾಕ್ಷಾಯಿಣಿ ಶರಣಬಸಪ್ಪ ಅಪ್ಪ ಅವರು ವಾಹನ ಜಾತಾಕ್ಕೆ ಚಾಲನೆ ನೀಡಲಿದ್ದಾರೆ.
ಎರಡನೇ ದಿನವಾದ ಜ.18ರಂದು ಬೆಳಿಗ್ಗೆ 10:00 ಗಂಟೆಯಿಂದ ನಗರದ ಪಂಡಿತ್ ರಂಗಮಂದಿರದಲ್ಲಿ ‘ಭಾವೈಕ್ಯದ ಸಮನ್ವಯ ಗಾಯನ ಗಮಲು’ ಘೋಷಣೆಯಡಿ ದಿನವಿಡಿ ತತ್ವಪದ, ಸೂಫಿಪದ, ವಚನ ಗಾಯನ ಮತ್ತು ಖವ್ವಾಲಿ ಕಾರ್ಯಕ್ರಮಗಳು ನಡೆಯಲಿವೆ.
ಕೊನೆಯ ದಿನ ಜ.19ರಂದು ಬೆಳಿಗ್ಗೆ 10 ರಿಂದ ಕನ್ನಡ ಭವನದಿಂದ ಮೆರವಣಿಗೆ ನಡೆಸಿ ಜಗತ್ ವೃತ್ತದಲ್ಲಿ ಸೌಹಾರ್ದತೆಯ ಉತ್ಸವದ ಬಹಿರಂಗ ಸಮಾವೇಶ ನಡೆಯಲಿದೆ. ಸ್ಥಳೀಯರು ಸೇರಿದಂತೆ ರಾಜ್ಯದ ಬೇರೆಲ್ಲ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭುಲಿಂಗ ಮಹಾಗಾಂವಕರ್, ಮಹಾಂತೇಶ್ ಕೌಲಗಿ, ಪ್ರಭು ಖಾನಾಪುರೆ, ಮಹಮ್ಮದ್ ಅಫಜಲ್, ಧನರಾಜ ತಾಂಬೋಳೆ, ಕಾಶೀನಾಥ ಅಂಬಲಗೆ, ಸುರೇಶ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು
ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರಮುಖರು
ಪರಮಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ ಸಾಣೇಹಳ್ಳಿ
ಮನಿಪ್ರ ತೋಂಟದ ಸಿದ್ದರಾಮ ಸ್ವಾಮೀಜಿ ಗದಗ
ಮಘಚ ಬಸವಲಿಂಗ ಪಟ್ಟದ್ದೇವರು ಭಾಲ್ಕಿ
ಪರಮಪೂಜ್ಯ ಗುರುಮಹಾಂತ ಸ್ವಾಮಿಗಳು ಇಲಕಲ್
ಪರಮಪೂಜ್ಯ ಜ್ಞಾನಪ್ರಕಾಶ ಸ್ವಾಮಿಗಳು ಮೈಸೂರು
ಪೂಜ್ಯ ನಿಜಗುಣಾನಂದ ಸ್ವಾಮಿಗಳು ಬೈಲೂರು
ಮಾತೆ ಗಂಗಾಂಬಿಕೆ ಪಾಟೀಲ
ಪೂಜ್ಯ ದ್ರಾಕ್ಷಾಯಿಣಿ ಅಪ್ಪ,
ಹಜರತ್ ಖ್ವಾಜಾ ಬಂದೇನವಾಜ್ ಗೇಸುದರಾಜ್,
ಪೂಜ್ಯ ಸಂಗಾನಂದ ಭಂತೇಜಿ,
ಖಾದ್ರಿ ಮುಸ್ತಾಫ್ ಮಳಖೇಡ ದರ್ಗಾ,
ಫಾದರ್ ಲೋಬೋ ಸೇಂಟ್ ಮೇರಿ ಚರ್ಚ್,
ಶ್ರೀ ಗುರುಮೀತ್ ಸಿಂಗ್,
ಚಿಂತಕ ರಹಮತ್ ತರಿಕೇರೆ,
ಕೆ. ಎಸ್. ವಿಮಲಾ,
ಜಗದೀಶ ಪಾಟೀಲ,
ಬಸವರಾಜ ಸೂಳಿಭಾವಿ,
ಮುನಿರ ಕಾಟಿಪಳ್ಳ
ಜ್ಞಾನಜ್ಯೋತಿ ಭಂತೇಜಿ,
ಚೆನ್ನಬಸವ ಸ್ವಾಮಿಜೀ
ಪ್ರೊ. ಟಿ. ಆರ್. ಚಂದ್ರಶೇಖರ,
ದಿನೇಶ ಅಮಿನಮಟ್ಟು,
ಎಸ್. ಎಂ. ಜಾಮದಾರ,
ಡಾ. ಎಸ್.ವೈ.ಗುರುಶಾಂತ,
ಪ್ರೊ. ಆರ್.ಕೆ.ಹುಡಗಿ,
ಕಾಶಿನಾಥ ಅಂಬಲಗೆ,
ನೀಲಾ ಕೆ,
ಪ್ರಭುಲಿಂಗ ಮಹಾಗಾಂವಕರ್,
ಆರ್. ಜಿ. ಶೆಟಗಾರ್,
ಶ್ರೀಶೈಲ ಮಸೂತಿ
ನಾನೂ ಹೋಗುತ್ತೇನೆ. ನೀವೂ ಬನ್ನಿ 🙏
ಲಿಂಗಾಯತ ಧರ್ಮದ ಬೆಳವಣಿಗೆಗೆ ಇದೊಂದು ದಾರಿದೀಪವಾಗಲಿ.