ಬೆಂಗಳೂರಿನಲ್ಲಿ ಎತ್ತರದ ಬಸವಣ್ಣನವರ ಪ್ರತಿಮೆಯ ನಿರ್ಮಾಣ
ಚಿತ್ರದುರ್ಗ
ಶರಣರ ವಚನಗಳನ್ನು. ತತ್ವ ಚಿಂತನೆಗಳು ಮುಂದಿನ ತಲೆಮಾರಿನವರಿಗೂ ತಲುಪಿಸಲು ಸುತ್ತೂರು ಶ್ರೀಗಳ ನೇತೃತ್ವದಲ್ಲಿ 500 ಕೋಟಿ ರೂಪಾಯಿ ಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದೆಂದು ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಶನಿವಾರ ಹೇಳಿದರು.
ನಗರದಲ್ಲಿ ನಡೆಯುತ್ತಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ಸಾಂಸ್ಕೃತಿಕ ನಾಯಕನೆಂದು ಘೋಷಿಸಿ ಒಂದು ವರ್ಷವಾಗುತ್ತಿದೆ. ಇದು ಬರೀ ಘೋಷಣೆಗೆ ಸೀಮಿತವಾಗಬಾದರು, ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಲು ಒಂದು ಯೋಜನೆ ಕೂಡ ಸಿದ್ಧವಾಗಬೇಕೆಂಬ ಎಲ್ಲರ ಅಭಿಪ್ರಾಯವಾಗಿದೆ, ಎಂದರು.
ಒಮ್ಮೆಲೇ 500 ಕೋಟಿ ಕೇಳುವ ಬದಲು ಪ್ರತಿ ವರ್ಷ ಬಜೆಟಿನಲ್ಲಿ 100 ಕೋಟಿ ಕೇಳಬಹುದೆಂದು ಎಂ ಬಿ ಪಾಟೀಲ್ ಸಲಹೆ ನೀಡಿದರು.
ರಾಜ್ಯದಲ್ಲಿ ಸಮಾಜದ ಮುಖಂಡರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು, ಶ್ರೀ ಬಸವಲಿಂಗ ಪಟ್ಟದ ದೇವರು, ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಎಸ್ ಎಂ ಜಾಮದಾರ್, ಸಿ. ಸೋಮಶೇಖರ್, ಗೊ.ರು. ಚೆನ್ನಬಸಪ್ಪರಂತವರು ಸೇರಿ ಈ ಯೋಜನೆಯನ್ನು ರೂಪಿಸಬೇಕು. ಈ ಪ್ರಯತ್ನದ ನೇತೃತ್ವ ವಹಿಸಿಕೊಂಡು ಮಾರ್ಗದರ್ಶನ ನೀಡಲು ಸುತ್ತೂರು ಶ್ರೀಗಳು ಒಪ್ಪಿಕೊಂಡಿದ್ದಾರೆಂದು ಹೇಳಿದರು.
ಯೋಜನೆ ತಯಾರಿಸಿಕೊಂಡು ಎಲ್ಲಾ ಪೂಜ್ಯರು ಮತ್ತು ಗಣ್ಯರು ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ಬಜೆಟಿನಿಂದಲೇ ಕೆಲಸ ಶುರುವಾಗುವಂತೆ ಪ್ರಯತ್ನಿಸಬೇಕು, ಎಂದು ಕರೆ ನೀಡಿದರು.
“ಸುತ್ತೂರು ಶ್ರೀಗಳ ಮಾತಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಲ್ಲಾ ಅನ್ನೋದಿಲ್ಲ. ಸಿದ್ದರಾಮಯ್ಯ ಯಾರ ಮಾತು ಕೇಳುತ್ತಾರೆ ಅಂದರೆ ಅದು ಸುತ್ತೂರು ಶ್ರೀಗಳ ಮಾತು, ಎಂದು ಎಂ ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
(ಸುತ್ತೂರು ಮಠ ಸಿದ್ದರಾಮಯ್ಯನವರ ಕ್ಷೇತ್ರ ವರುಣದಲ್ಲಿದೆ. ಲಿಂಗಾಯತರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಸುತ್ತೂರು ಶ್ರೀಗಳ ಬೆಂಬಲದಿಂದ ಸಿದ್ದರಾಮಯ್ಯ ಗೆದ್ದು ಬರುತ್ತಿದ್ದಾರೆ)
ತಮ್ಮ ಭಾಷಣದಲ್ಲಿ ಎಂ ಬಿ ಪಾಟೀಲ್ 500 ಕೋಟಿ ರೂಪಾಯಿಗಳ ಯೋಜನೆಯಡಿಯಲ್ಲಿ ಮಾಡಬೇಕಿರುವ ಕೆಲವು ಮುಖ್ಯವಾದ ಕೆಲಸಗಳನ್ನೂ ಗುರುತಿಸಿದರು.
- ಬೆಂಗಳೂರಿನಲ್ಲಿ ಎತ್ತರದ ಬಸವಣ್ಣನವರ ಪ್ರತಿಮೆಯ ನಿರ್ಮಾಣ
- ಬಸವ ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯದ ಸ್ಥಾಪನೆ
- ಪ್ರತಿ ಜಿಲ್ಲೆಯಲ್ಲಿ ಬಸವ ಭವನ
- ದುಸ್ಥಿತಿಯಲ್ಲಿರುವ ಶರಣ ಕ್ಷೇತ್ರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ
ಮುಖ್ಯಮಂತ್ರಿಗಳು ಬಸವಾದಿ ಶರಣರ ಸಿದ್ಧಾಂತದಲ್ಲಿ ಬಲವಾದ ನಂಬಿಕೆಯಿಟ್ಟಿದ್ದಾರೆ. ಅವರು ಈ ಯೋಜನೆಗೆ ಸ್ಪಂದಿಸುತ್ತಾರೆ ಎಂಬ ಆಶಯವನ್ನು ಪಾಟೀಲರು ವ್ಯಕ್ತಪಡಿಸಿದರು.
ಎಂ ಬಿ ಪಾಟೀಲರಿಗೆ ಅಬಿನಂದನೆಗಳು🙏🙏
ಬಸವತತ್ವ ಆಧಾರಿತ ಲಿಂಗಾಯತ ಮಾತಾಧೀಷರುಗಳು ಮತ್ತು ಮುಖಂಡರುಗಳು ತೀರ್ಮಾನಿಸಿ ಯೋಜನೆ ರೂಪಿಸಿ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಚರ್ಚಿಸಬೇಕು ಅನ್ನುವುದು ಸೂಕ್ತ. ಇಂತಹ ಮಠಾಧೀಶರೆ ನೇತೃತ್ವ ವಹಿಸಬೇಕೆಂಬುದು ಸರಿಯಲ್ಲ. ಸುತ್ತೂರು ಶ್ರೀಗಳು ಎಂದೂ ಸಾರ್ವಜನಿಕವಾಗಿ ಬಸವಪರ ನಿಲುವು ವ್ಯಕ್ತಪಡಿಸಿದವರಲ್ಲ. ಅವರು ನಾಜೂಕಾಗಿ ಹಿಂದುತ್ವ ಶಕ್ತಿಗಳು ಮತ್ತು ಬಸವ ಪರಂಪರೆಯ ಸಂಘಟನೆಗಳಿಗೂ ಬೇಸರವಾಗದಂತೆ ವ್ಯವಾಹರಿಸುತ್ತಿದ್ದಾರೆ. ನಿಜವಾಗಿ ಇಂತಹ ನಿಲುವುಗಳು ದೀರ್ಘಕಾಲೀನ ಭವಿಷ್ಯದಲ್ಲಿ ಲಿಂಗಾಯತ ಧರ್ಮಕ್ಕೆ ತೊಡಕುಗಳನ್ನುಂಟುಮಾಡುತ್ತವೆ.