ಕಲಬುರ್ಗಿ:
ವಚನ ಸಾಹಿತ್ಯ ಮತ್ತು ತತ್ವಪದಗಳು ಒಂದೇ ಸಿದ್ದಾಂತವನ್ನು ಸಾರುವ ಉದ್ದೇಶ ಹೊಂದಿವೆ, ಅನುಭಾವ ಸಮಾಜ ಕಟ್ಟುವುದು ಬಸವಣ್ಣನವರ ನಿಲುವಾಗಿತ್ತು , ಅಂತೆಯೇ ತತ್ವಪದಕಾರರು ಕೂಡ ಅದೇ ಆಶಯವನ್ನು ಹೊಂದಿದವರಾಗಿದ್ದರು ಎಂದು ಖಾಜಾ ಬಂದಾನವಾಜ್ ವಿವಿ ಸಹಾಯಕ ಪ್ರಾಧ್ಯಾಪಕ ಸಂಗನಗೌಡ ಹಿರೇಗೌಡ ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗೈಕ್ಯ ಗುರುಪಾದಪ್ಪ ಶಿವಲಿಂಗಪ್ಪ ಘಂಟಿ ಸ್ಮರಣಾರ್ಥ ಜರುಗಿದ ಅರಿವಿನ ಮನೆ 880 ನೆಯ ದತ್ತಿ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ- ತತ್ವಪದಗಳು’ ವಿಷಯವಾಗಿ ಮಾತನಾಡಿದರು.
ಅನಕ್ಷರಸ್ಥ ಜನಪದರು ಭಜನೆಗಳಲ್ಲಿ ವಚನಗಳನ್ನು ಹೇಳುತ್ತಾರೆ. ವಚನ ಸಾಹಿತ್ಯ ಹುಟ್ಟಿದ್ದು 12ನೇ ಶತಮಾನದಲ್ಲಿ, ತತ್ವಪದಗಳು ಹುಟ್ಟಿದ್ದು 18ನೇ ಶತಮಾನದಲ್ಲಿ. ವಚನ ಮತ್ತು ತತ್ವಪದಗಳು ಅನೋನ್ಯವಾಗಿ ಅನನ್ಯವಾಗಿ ಬೆಳೆದು ಬಂದಿವೆ.

ವಚನಗಳು ನಿದರ್ಶನ ಹೇಳಿ ಒಂದು ತೀರ್ಮಾನಕ್ಕೆ ಬಂದರೆ, ತತ್ವಪದಗಳು ಒಂದು ತೀರ್ಮಾನ ಹೇಳಿ ನಿದರ್ಶನ ಹೇಳುತ್ತವೆ. ವಚನಗಳಲ್ಲಿ ಜನಸಾಮಾನ್ಯರನ್ನು ಹಿಡಿದಿಡುವ ಒಂದು ಶಕ್ತಿ ಇರುವುದರಿಂದಲೇ ಅವು ಜನ ಸಾಮಾನ್ಯರಲ್ಲಿ ಇಂದು ಕೂಡ ಉಳಿದುಕೊಂಡು ಬಂದಿವೆ.
ವಚನಕಾರರು ಹೇಳಿರುವಂತೆ ಲಿಂಗವನ್ನು ಪೂಜಿಸಿ ಲಿಂಗವಾಗು, ಅಂಗದ ಗುಣಗಳನ್ನು ಅಳಿಯಬೇಕೆಂದು ತತ್ವಪದಕಾರರು ಕೂಡ ಹೇಳಿದ್ದಾರೆ. ಹೀಗಾಗಿ ವಚನ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯದಲ್ಲಿ ತೀರ ಹತ್ತಿರದ ಸಾಮ್ಯತೆ ನಾವು ಕಾಣುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ ಪಾಳ, ಬಂಡಪ್ಪ ಕೇಸುರ್, ದತ್ತಿ ದಾಸೋಹಿಗಳಾದ ಚಂದ್ರಕಾಂತ ಘಂಟಿ, ಉದ್ದಂಡಯ್ಯ ಮತ್ತಿತರರು ಭಾಗವಹಿಸಿದ್ದರು.
