ಶರಣ ಚಳುವಳಿಯ ಆತ್ಮಬಲ ಅಲ್ಲಮ
ಕಲಬುರಗಿ:
ಅನುಭವ ಮಂಟಪದ ಅಲ್ಲಮಪ್ರಭುಗಳು ಶರಣ ಚಳುವಳಿಯ ಆತ್ಮಬಲವಾಗಿದ್ದರು ಎಂದು ರಾಜ್ಯ ಪತ್ರಗಾರ ಇಲಾಖೆಯ ಕಲ್ಬುರ್ಗಿ ವಿಭಾಗದ ಹಿರಿಯ ಉಪನಿರ್ದೇಶಕರಾದ ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಅಣ್ಣಾರಾವ ಪಾಟೀಲ ಸರಡಗಿ ಸ್ಮರಣಾರ್ಥ ಜರುಗಿದ ಅರಿವಿನ ಮನೆ 881ನೆಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಮಾತನಾಡಿದರು.
ಅಲ್ಲಮನ ವಚನಗಳಲ್ಲಿ ಗೂಡಾರ್ಥವಿದೆ. ಅಲ್ಲಮನಿಗೆ ಚರಿತ್ರೆಯ ಹಂಗಿಲ್ಲ, ಒಂದೆಡೆ ನೆಲೆ ನಿಲ್ಲದ ವ್ಯಕ್ತಿ ಆತನಾಗಿದ್ದ. ಪ್ರಭುಲಿಂಗಲೀಲೆ ಓದುವಾಗ ಎಚ್ಚರವಿರಬೇಕೆಂದು ಶಿಶುನಾಳ ಶರೀಫರು ಹೇಳುತ್ತಾರೆ.
ಭಾರತವು ದರ್ಶನಗಳ ನೆಲೆಬೀಡಾಗಿದೆ. ಈ ದರ್ಶನಗಳಲ್ಲಿಯೇ ಅಲ್ಲಮಪ್ರಭುವಿನ ದರ್ಶನ ವಿಶಿಷ್ಟವಾಗಿದೆ. ಅಲ್ಲಮನ ಬೆಡಗು ಬೆರಗುಗೊಳಿಸುವಂತದ್ದು ಎಂದರು.
12ನೇ ಶತಮಾನದ ಚಳುವಳಿ ಅರಿಯಲು ಆ ಕಾಲದ ಸಾಮಾಜಿಕ ಮತ್ತು ರಾಜಕೀಯದ ಅರಿವಿರಬೇಕು. ಪಂಪ ಹೇಳುವಂತೆ ಛಲವೇ ಕುಲವಾಗಿದೆ, ಗುಣವೇ ಕುಲವಾಗಿದೆ, ಮಾನವ ಜಾತಿ ತಾನೊಂದೇ ವಲಂ ಆಗಿದೆ.
ಕೃತಕ ಅಧ್ಯಾತ್ಮಿಕತೆಯನ್ನು ಅಲ್ಲಮ ತಿರಸ್ಕರಿಸುತ್ತಾನೆ. ದೇವರು ಕಲ್ಲಾದರೆ ನಾನೇನಾಗಲಿ ಎಂದು ಪ್ರಶ್ನಿಸುತ್ತಾನೆ ಬಸವಣ್ಣ ಅಂತರ್ಮುಖಿಯಾಗಿದ್ದರೂ ಕೂಡ ಸಮಾಜಮುಖಿಯಾಗಿದ್ದರು. ಅಲ್ಲಮ ಹೆಚ್ಚು ಅಂತರ್ಮುಖಿಯಾಗಿದ್ದರು. ದೇಹ ದಂಡಿಸಿದರೆ ದೇವರು ದೊರಕಲಾರನು ಎಂಬುದು ಅಲ್ಲಮನ ನಿಲುವು.
ಅಲ್ಲಮ ಹೇಳುವಂತೆ ತಮ್ಮ ತಮ್ಮ ಭಾವಕ್ಕೆ ಲಿಂಗವ ಉಡಿಯಲ್ಲಿ ಕಟ್ಟಿಕೊಂಡರು, ತಮ್ಮ ತಮ್ಮ ಭಾವಕ್ಕೆ ದೇಹದ ಮೇಲೆ ಕಟ್ಟಿಕೊಂಡರು, ನಾನು ನನ್ನ ಮನದಲ್ಲಿ ಲಿಂಗವ ಕಟ್ಟಿಕೊಂಡೆ ಎನ್ನುತ್ತಾನೆ. ವಚನಕಾರರೆಲ್ಲ ಅರಿವು ಮತ್ತು ಆಚಾರಗಳೆರಡನ್ನು ಒಂದಾಗಿಸಿ ಬದುಕಿದವರು.
ಅಲ್ಲಮ ಹೇಳುವಂತೆ ಅಂತರಂಗದ ಅರಿವಿಗೆ ಆಚಾರವೇ ಕಾಯವಾಗಿದೆ. ಶರಣರಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳು ಇದ್ದರೆ ಅವು ಪ್ರಯೋಗಶೀಲತೆಯ ಸುಧಾರಣೆಗಳೆಂದು ಭಾವಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳ, ಬಂಡಪ್ಪ ಕೇಸುರ್, ದತ್ತಿ ದಾಸೋಹಿಗಳಾದ ನಾಗೇಂದ್ರಪ್ಪ ಅಣ್ಣಾರಾವ ಪಾಟೀಲ, ಉದ್ದಂಡಯ್ಯ ಭಾಗವಹಿಸಿದ್ದರು.
