ಹಾವೇರಿ
ಇಲ್ಲಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಯವರ 15ನೇ ವರ್ಷದ ಪಟ್ಟಾಧಿಕಾರವನ್ನು ಆಚರಿಸಲು ಡಿಸೆಂಬರ್ 27ರಂದು ವಚನ ವಂದನ ಕಾರ್ಯಕ್ರಮ ಆಯೋಜಿಸಲಾಗಿದೆ.
51,000 ಮಂದಿ ಸಮ್ಮುಖದಲ್ಲಿ ವಚನಗಳ ಮೂಲಕವೇ ಸ್ವಾಮೀಜಿಗೆ ನಮನ ಸಲ್ಲಿಸಲೆಂದು ಸಿದ್ಧತೆ ನಡೆದಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಪಟ್ಟಣದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ.

ಸದಾಶಿವ ಸ್ವಾಮೀಜಿಯವರು ಕ್ರೀಡಾಂಗಣದ ಮಧ್ಯ ಭಾಗದಲ್ಲಿ ಪೀಠದಲ್ಲಿ ಕೂರಲಿದ್ದಾರೆ. 51 ಸಾವಿರ ಭಕ್ತರು, ಸ್ವಾಮೀಜಿಯವರ ಸುತ್ತಲೂ ವೃತ್ತಾಕಾರದಲ್ಲಿ ಕೂರಲಿದ್ದಾರೆ. ನಂತರ, ಬಸವಾದಿ ಶರಣರ ವಚನಗಳನ್ನು ಸಾಮೂಹಿಕವಾಗಿ ಹೇಳುವ ಮೂಲಕ ಸದಾಶಿವ ಸ್ವಾಮೀಜಿಗೆ ನಮನ ಸಲ್ಲಿಸಲಿದ್ದಾರೆ.
ವಚನ ವಂದನ ಕಾರ್ಯಕ್ರಮಕ್ಕಾಗಿ ಹಲವು ದಿನಗಳಿಂದ ತಯಾರಿ ನಡೆಯುತ್ತಿದೆ. ಜನಜಾಗೃತಿ ಪಾದಯಾತ್ರೆ ಸಂದರ್ಭದಲ್ಲಿಯೂ ಕಾರ್ಯಕ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಡಿಸೆಂಬರ್ 27 ಸಂಜೆ ಪ್ರತಿಯೊಬ್ಬರು ಕ್ರೀಡಾಂಗಣಕ್ಕೆ ಬರುವಂತೆ ಆಹ್ವಾನ ನೀಡಲಾಗುತ್ತಿದೆ.
‘ಇದೇ ಮೊದಲ ಬಾರಿಗೆ ವಚನ ವಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮೂಲಕ ಭಕ್ತರು, ತಮ್ಮ ಸ್ವಾಮೀಜಿಗೆ ನಮಿಸಲಿದ್ದಾರೆ. ಇದೊಂದು ಕಾರ್ಯಕ್ರಮ ವಿಶ್ವದಲ್ಲಿಯೇ ದಾಖಲೆ ಬರೆಯುವ ಕಾರ್ಯಕ್ರಮವಾಗಲಿದೆ’ ಎಂದು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಹೇಳಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಶೇಗುಣಸಿ ಶ್ರೀಗಳ ಪ್ರವಚನವೂ ಶುರುವಾಗಿದೆ.

ಪಾದಯಾತ್ರೆ:
ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಹಲವು ಸ್ವಾಮೀಜಿಗಳು ಪಾದಯಾತ್ರೆಯಲ್ಲಿ ಭಕ್ತರ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಭಕ್ತರು ತಮ್ಮ ಮನೆ ಹಾಗೂ ತಮ್ಮ ಓಣಿಯನ್ನು ಸ್ವಚ್ಛಗೊಳಿಸಿ ರಸ್ತೆ ಮಧ್ಯದಲ್ಲಿ ರಂಗೋಲಿ ಹಾಕಿ ಸ್ವಾಮೀಜಿಯವರನ್ನು ಭವ್ಯವಾಗಿ ಸ್ವಾಗತಿಸುತ್ತಿದ್ದಾರೆ.

ಹುಕ್ಕೇರಿಮಠದ ಭಕ್ತರಿಗೆ ರೂಪಿಸಿರುವ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ’ ಅಭಿಯಾನ ಯಶಸ್ವಿಯಾಗಿರುವುದು ಅಭಿಮಾನ ಮೂಡಿಸಿದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಶನಿವಾರ ಹೇಳಿದರು.
ಮಠದ ಭಕ್ತರು ದುಶ್ಚಟಗಳಿಂದ ಆರ್ಥಿಕ ಹಾಗೂ ಕೌಟುಂಬಿಕ ಸಂಕಷ್ಟ ಎದುರಿಸಬಾರದು. ಇದೇ ಕಾರಣಕ್ಕೆ ತಾಲೂಕಿನ 70 ಹಳ್ಳಿಗಳಲ್ಲಿ ಜನ ಜಾಗೃತಿ ರಥ ಸಂಚರಿಸಿದೆ, ಎಂದು ತಿಳಿಸಿದರು.

