ಬಸವಕಲ್ಯಾಣದಲ್ಲಿ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಸಂಪನ್ನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಬಸವಕಲ್ಯಾಣದ ಬಂದವರ ಓಣಿಯಲ್ಲಿ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಶನಿವಾರ ಸಂಪನ್ನಗೊಂಡಿತು. ಐದು ದಿನಗಳ ಕಾಲ ಶಿವಯೋಗ ಅನುಷ್ಠಾನವನ್ನು ಹಮ್ಮಿಕೊಂಡಿದ್ದ ಲಿಂಗಾಯತ ಮಹಾಮಠದ ಪೂಜ್ಯಶ್ರೀ ಪ್ರಭುದೇವ ಸ್ವಾಮಿಗಳು ಶಿವಯೋಗ ಸಾಧನೆ ಅನುಷ್ಠಾನವನ್ನು ಸಮಾರೋಪಗೊಳಿಸಿದರು.

ಸಾನಿಧ್ಯ ವಹಿಸಿದ ಪೂಜ್ಯಶ್ರೀ ಪ್ರಭುದೇವ ಸ್ವಾಮಿಗಳು ಮಾತನಾಡಿ, ಅಕ್ಕಮಹಾದೇವಿ ಬರೆದಿರುವುದು ವಚನ, ಸ್ವರ ವಚನ, ಯೋಗಾಂಗ ತ್ರಿವಿಧಿ, ಕೊರವಂಜಿ ಸಾಹಿತ್ಯ, ಅದರಲ್ಲಿ ಯೋಗಾಂಗ ತ್ರಿವಿಧಿ ಎಂದರೆ ಈ ಜೀವ ಆ ದೇವನಲ್ಲಿ ಒಂದಾಗುವುದು.

ಅಕ್ಕಮಹಾದೇವಿ ತಾನು ಕಂಡುಂಡಿರುವ ಅನುಭವವನ್ನು ಶಬ್ದ ರೂಪಗಳಲ್ಲಿ ಅಂದರೆ ಯೋಗಾಂಗ ತ್ರಿವಿಧಿಯಲ್ಲಿ ಬರೆದಿದ್ದಾರೆ.

ಶಿವಯೋಗವೆಂದರೆ ಕಲ್ಲೊಳಗೆ ಅನಲ ಇರುವಂತೆ ನಮ್ಮೊಳಗಿನ ಜೀವಾತ್ಮವನ್ನು ಆ ಪರಮಾತ್ಮನಲ್ಲಿ ಒಂದು ಮಾಡಲು ಲಿಂಗಾಂಗ ಸಾಮರಸ್ಯ ಬಹಳ ಅವಶ್ಯಕ. ಅಕ್ಕಮಹಾದೇವಿ ಹೇಳಿರುವಂತೆ ಅಷ್ಟಾಂಗ ಯೋಗಕ್ಕಿಂತ ದೃಷ್ಟಿಯೋಗ ಮೇಲು. ದೃಷ್ಟಿ ಯೋಗದಲ್ಲಿ ನಾವು ಪರಮಾತ್ಮನೆತ್ತರಕ್ಕೆ ಏರಲು ಸಾಧ್ಯ.

ಯೋಗಾಂಗ ತ್ರಿವಿಧಿಯ ಪಠಣವನ್ನು ರಾಗದಿಂದ ಹಾಡಿದರೆ ರೋಗ ಗುಣಮುಖ. ಹುಟ್ಟು ಸಾವಿನ ಚಕ್ರದಿಂದ ಮುಕ್ತ. ಸಾಕೆನಿಸದ, ಸವೆಯದ ಪರಮಾತ್ಮನ ಸುಖದ ಅನುಭವ ಇದರಲ್ಲಿದೆ. ನಾವು ಡಾಂಬಿಕತನಕ್ಕೆ ಮಾರುಹೋಗದೆ ಅಕ್ಕನಲ್ಲಿ ಅಕ್ಕನ ವಚನಗಳಲ್ಲಿ ನಂಬಿಕೆ ಇಡಬೇಕು. ದಿನದಲ್ಲಿ ಐದು ವಚನಗಳನ್ನ ಓದಿದರೆ ನಮ್ಮ ದಿನ ಸುಗಮವಾಗುತ್ತದೆ.

ಯೋಗಾಂಗ ತ್ರಿವಿಧಿಯ ಪಠಣ ನಿರಂತರವಾಗಿರಬೇಕು. ಆನೆ ಎಲ್ಲಿ ಇದ್ದರೂ ತನ್ನ ಹಿಂಡನ್ನು ನೆನೆಯುವಂತೆ, ಗಿಳಿ ಪಂಜರದಲ್ಲಿದ್ದರೂ ತನ್ನ ಬಂಧು-ಬಳಗ ನೆನೆವಂತೆ, ಅಕ್ಕಮಹಾದೇವಿಯು ಈ ಲೌಕಿಕ ಮಧ್ಯದಲ್ಲಿ ಬದುಕುವುದಕ್ಕಿಂತ ಪರಮಾತ್ಮ ನಿನ್ನಲ್ಲಿ ಇಂಬಿಟ್ಟುಕೊ ಎಂದು ಪ್ರಾರ್ಥಿಸುತ್ತಾಳೆ. ಜೊತೆಗೆ ತಾಯಿ ಎಲ್ಲಿ ಇದ್ದರು ತನ್ನ ಮಗುವನ್ನ ನೆನೆವಂತೆ, ನಾವು ಯಾವಾಗಲೂ ಆ ದೇವನನ್ನ ನೆನೆಯಬೇಕು ಎಂದು ಪೂಜ್ಯರು ಹೇಳಿದರು.

ನೀಲಮ್ಮನ ಬಳಗದ ಸಹೋದರಿಯರು ಸಾಮೂಹಿಕವಾಗಿ ಭಕ್ತಿ ಭಾವದಿಂದ ಅಕ್ಕನ ಯೋಗಾಂಗ ತ್ರಿವಿಧಿಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಕಾರ್ಯಕ್ರಮದಲ್ಲಿ ಬಸವಗಿರಿಯ ಚನ್ನಬಸವಣ್ಣ, ಅನುಭವ ಮಂಟಪದ ಹಾಲಮ್ಮ ತಾಯಿ, ಲಿಂಗಾಯತ ಮಹಾಮಠದ ಗೋದಾವರಿ ತಾಯಿ, ನೀಲಮ್ಮನ ಬಳಗದ ತಾಯಂದಿರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *