ಕಲಬುರಗಿ
12ನೇ ಶತಮಾನದಲ್ಲಿ ಅಧ್ಯಾತ್ಮ ಹಸಿವಿದ್ದವರಿಗೆ ಕಲ್ಯಾಣವೇ ಕೈಲಾಸವಾಗಿತ್ತು ಎಂದು ಸಿದ್ಧರಾಮ ಯಳವಂತಗಿ ಹೇಳಿದರು.
ನಗರದ ಬಸವ ಮಂಟಪದಲ್ಲಿ ಈಚೆಗೆ ಜಾಗತಿಕ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಮಾದಾರ ಚನ್ನಯ್ಯ’, ‘ಗುಡ್ಡಾಪುರ ದಾನಮ್ಮ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹರಿಯುವ ನದಿಗಳಲ್ಲೆವೂ ಸಮುದ್ರ ಸೇರುವಂತೆ, 12ನೇ ಶತಮಾನದಲ್ಲಿ ಎಲ್ಲ ಮಾರ್ಗಗಳು ಕಲ್ಯಾಣಕ್ಕೆ ಬಂದು ಸೇರುತ್ತಿದ್ದವು. ಕಲ್ಯಾಣಕ್ಕೆ ಬಂದು ಶರಣರ ತತ್ವಗಳನ್ನು ತಿಳಿದುಕೊಳ್ಳಲು ಯಾವುದಾದರೂ ಮಾರ್ಗದ ಮೂಲಕ ಕಲ್ಯಾಣವನ್ನು ತಲುಪುತ್ತಿದ್ದರು ಎಂದರು.
ಸಿದ್ಧರಾಮರ ಸಮಾಜ ಸೇವೆಯಿಂದ ಪ್ರಭಾವಿತರಾದ ಲಿಂಗಮ್ಮ (ದಾನಮ್ಮ) ಮುಂದೆ ಅವರ ಮಾರ್ಗದರ್ಶನ ಪಡೆದರು. ನಂತರ ಕಲ್ಯಾಣಕ್ಕೆ ಬಂದು ಶರಣರ ವಚನಗಳನ್ನು ಅರ್ಥೈಸಿಕೊಂಡರು ಎಂದು ಹೇಳಿದರು.

ವಿಶ್ವನಾಥ ಡೊಣ್ಣೂರ ಅವರು ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು ಹಾಗೂ ಒಕ್ಕಲಿಗ ಮುದ್ದಣ್ಣ ಕುರಿತು ಉಪನ್ಯಾಸ ನೀಡಿದರು.
ಮಹಾಸಭಾದ ಜಿಲ್ಲಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಕಾರ ಶರಣ ಸಂಗಮ ಕಾರ್ಯಕ್ರಮದ ಉದ್ಧೇಶವನ್ನು ವಿವರಿಸಿದರು.
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು. ಸಿದ್ದಲಿಂಗೇಶ್ವರ ಬುಕ್ ಡಿಪೊ ಸಂಸ್ಥಾಪಕ ಬಸವರಾಜ ಜಿ.ಕೊನೇಕ್ ಅವರನ್ನು ಸನ್ಮಾನಿಸಲಾಯಿತು. ಮಹಾಸಭಾ ಕಾರ್ಯದರ್ಶಿ ಅಶೋಕ ಘೂಳಿ, ಬಸವರಾಜ ಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.