ಮಠಾಧೀಶರಿಗೆ ಬಸವಣ್ಣ ಎಟಿಎಂ ಕಾರ್ಡ್: ಡಾ. ಮೀನಾಕ್ಷಿ ಬಾಳಿ

ಕಲಬುರಗಿ

ನಾಡಿನ ಬಹುತೇಕ ಮಠಾಧೀಶರಿಗೆ ಬಸವಣ್ಣ ಎಟಿಎಂ ಕಾರ್ಡ್ ಆಗಿದ್ದಾರೆ ಎಂದು ಪ್ರಗತಿಪರ ಚಿಂತಕಿ ಡಾ. ಮೀನಾಕ್ಷಿ ಬಾಳಿ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿಯಲ್ಲಿ ಗುಲ್ಬರ್ಗ ವಿವಿಯ ಹರಿಹರ ಸಭಾಂಗಣದಲ್ಲಿ ಸೋಮವಾರ ಜರುಗಿದ ಕರ್ನಾಟಕ ಚಿಂತನಾ ಪರಂಪರೆಗಳು ಮತ್ತು ಕನ್ನಡ ಸಾಹಿತ್ಯ ಕುರಿತ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯ, ಸಿದ್ಧಾಂತಕ್ಕೂ ಮಠಾಧೀಶರಿಗೆ ಯಾವುದೇ ಸಂಬಂಧವಿಲ್ಲ. ಮಠಾಧೀಶರು ವಚನ ಸಾಹಿತ್ಯ ಓದುವುದಿಲ್ಲ. ಓದಿದರೆ ಅವರು ಮಠಾಧೀಶರಾಗಿ ಉಳಿಯುವುದಿಲ್ಲ ಎಂದು ಹೇಳಿದರು.

ಕನ್ನಡದಲ್ಲಿ ವೈದಿಕ, ಅವೈದಿಕ, ಚಾರ್ವಾಕ, ಲೋಕಾಯತ, ಜೈನ, ಬೌದ್ಧ ಪರಂಪರೆಗಳಿದ್ದವು. ಆದರೆ ವಚನ, ದಾಸ, ತತ್ವಪದ ಹಾಗೂ ಇನ್ನಿತರ ಜನಪರ ಮತ್ತು ಜೀವಪರವಾದ ಚಿಂತನೆಗಳು ಇಂದಿಗೂ ಮುಂದುವರಿದುಕೊಂಡು ಬಂದಿವೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅವರು, ತತ್ವಪದಗಳಲ್ಲಿ ಹೆಣ್ಣನ್ನು ಕೀಳಾಗಿ ಕನಿಷ್ಟವಾಗಿ ಕಾಣಲಾಗಿದೆ ಎಂಬ ಆಪಾದನೆಯಿದೆಯಲ್ಲ? ಎಂದು ಕೇಳಿದಾಗ, ವೈದಿಕ ಸಾಹಿತ್ಯವನ್ನು ವಿರೋಧಿಸಿ ಹುಟ್ಟಿಕೊಂಡ ವಚನ ಸಾಹಿತ್ಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಲಾಗಿತ್ತು. ಅದರಂತೆ ತತ್ವಪದ ಸಾಹಿತ್ಯ ಕೂಡ. ಆದ್ದರಿಂದ ಇಡೀ ತತ್ವಪದ ಸಾಹಿತ್ಯದ ಮೇಲೆ ಈ ಆಪಾದನೆ ಮಾಡುವುದು ತಪ್ಪಾಗಲಿದೆ ಎಂದು ವಿವರಿಸಿದರು.

ಆತ್ಮ- ಪರಮಾತ್ಮ ಬೇರೆ, ಆತ್ಮ, ಪರಮಾತ್ಮ ಒಂದೇ, ಆತ್ಮ ಪರಮಾತ್ಮ ನಾನೇ ಎನ್ನುವ ಚಿಂತನಾ ಪರಂಪರೆಗಳ ಮಧ್ಯೆ ತಾತ್ವಿಕ ಸ್ಪಷ್ಟತೆ, ಜನಮುಖಿ ಪರಂಪರೆಗಳ ನೆಲೆ ನಿಲುವುಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಅಭಿಪ್ರಾಯಪಟ್ಟರು.

ಗೋಷ್ಠಿಯ ಸಮನ್ವಯಕಾರರಾಗಿದ್ದ ಡಾ. ಪಿ. ನಂದಕುಮಾರ ಅವರ ಪ್ರಶ್ನೆಗೆ ಮಠಾಧಿಪತಿಗಳು ಬಸವಣ್ಣನ ವಾರಸುದಾರರಲ್ಲ ಎಂದು ಹೇಳಿದರು.

Share This Article
1 Comment
  • ತಮ್ಮ ಎಲ್ಲ ಪ್ರವಚನ, ಆಶೀರ್ವಚನದಲ್ಲಿ ಬಸವಾದಿ ಶರಣರ ವಚನಗಳನ್ನು ಚನ್ನಾಗಿ ಸಂದರ್ಭಕ್ಕೆ ತಕ್ಕಲ್ಲಿ ಹೇಳುತ್ತಾರೆ, ಸಂಗೀತಾ ಹಾಡಿಸುತ್ತಾರೆ.
    ಆದರೆ ಮಾತಾಡೋ ಮೊದಲು ಮತ್ತು ಕೊನೆಗೆ ಪಂಚಾಚಾರ್ಯ, ರೇಣುಕಾಚಾರ್ಯ ರಿಗೆ ಜಯಘೋಷ ಹಾಕೋ ಸ್ವಾಮೀಜಿಗಳೇ ಬಹಳ ಇದ್ದಾರೆ.
    ನಾವೂ ನಿಜ ಬಸವ ನಿಷ್ಠರು ಮೊದಲು ಜಾಗೃತ ಗೋಳ್ಳೋಣ….

Leave a Reply

Your email address will not be published. Required fields are marked *