ಇತಿಹಾಸದ ಅತ್ಯಂತ ಚರ್ಚಿತ ಸಾಂಸ್ಕೃತಿಕ ಸಂಕೇತ ಬಸವಣ್ಣ, ಅವರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ಗಂಗಾವತಿ
ಬಸವಣ್ಣ ಕೇವಲ ಚರಿತ್ರೆಯಲ್ಲ, ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, 900 ವರ್ಷಗಳಿಂದ ಮತ್ತೆ ಮತ್ತೆ ವರ್ತಮಾನವಾಗಿ ಕವಿಗಳಿಂದ, ಚಿಂತಕರಿಂದ, ವಿಮರ್ಶಕರಿಂದ ,ಪಂಡಿತರಿಂದ , ಜನಪದರಿಂದ, ರಾಜಕಾರಣಿಗಳಿಂದ ಹಿಡಿದು ಮಠಾಧೀಶರವರೆಗೂ ಮತ್ತು ಜನಸಾಮಾನ್ಯನವರಿಗೂ ಮರು ಚಿಂತನೆಗೊಳ್ಳುತ್ತಾ, ವಿಮರ್ಶೆಗೊಳ್ಳುತ್ತಾ, ಆಯಾಕಾಲದ ಅಗತ್ಯಗಳ ಮತ್ತು ಸ್ವಯಂವಿರೋಧಿಗಳ ಚೌಕಟ್ಟಿನಲ್ಲಿ ಮಾರ್ಪಾಡು ಹೊಂದುತ್ತಾ ಬಂದ ಅತ್ಯಂತ ಚರ್ಚಿತ ಒಂದು ಸಾಂಸ್ಕೃತಿಕ ಸಂಕೇತ ಬಸವಣ್ಣ.
ಇಂತಹ ಬಸವಣ್ಣನನ್ನು ನಾವು ಅರ್ಥೈಸಿಕೊಳ್ಳುವುದು ಹೇಗೆ ಎನ್ನುವುದು ಇಂದಿನ ಜರೂರುಗಳಲ್ಲಿ ಒಂದು ಅನಿಸುತ್ತೆ. ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಂದನ್ನು ಜಾತಿಯ ಆಧಾರವಾಗಿ, ಸಮುದಾಯ ಆಧಾರವಾಗಿ ಅಖಂಡವಾದ ಮಹಾತ್ಮರವನ್ನು ಖಂಡ ಖಂಡವಾಗಿ ವಿಭನ್ನಿಸುವ ಪರಿಪಾಠ ನಡೆದು ಬಂದಿದೆ. ಆಯಾ ಸಮುದಾಯಕ್ಕೆ ಒಬ್ಬೊಬ್ಬ ಮಹಾತ್ಮರಂತೆ ಗುತ್ತಿಗೆ ಹಿಡಿದು ಸಮಾಜವನ್ನು ಭಿನ್ನಗೊಳಿಸುವ ಕಾರ್ಯದಲ್ಲಿ ಇಂದಿನ ಕಾರ್ಯಾಂಗ ಮತ್ತೆ ಮಠಾಂಗಗಳು ಜೋರಾಗಿ ಸಾಗುತ್ತಿವೆ.
ಅಂಬೇಡ್ಕರ ದಿನಾಚರಣೆ ಬಂದರೆ ದಲಿತರಿಗಷ್ಟೆ ಸೀಮಿತ, ಕನಕದಾಸ ಜಯಂತಿ ಬಂದರೆ ಹಾಲುಮತ ಸಮಾಜಕ್ಕಷ್ಟೆ ಸೀಮಿತ, ಭಗೀರಥ ಜಯಂತಿ ಬಂದರೆ ಉಪ್ಪಾರ ಸಮುದಾಯಕ್ಕೆ, ಜಗಜೀವನ್ ರಾಮ್ ಜಯಂತಿ ಬಂದರೆ ಮಾದಿಗ ಸಮುದಾಯಕ್ಕೆ, ಟಿಪ್ಪು ಜಯಂತಿ ಬಂದರೆ ಮುಸ್ಲಿಂರಗಷ್ಟೆ ಎನ್ನುವಂತೆ ಹೀಗೆ ಜಯಂತಿಗಳ ಮಹಾಪುರ ಕಾಣಿಕೆ ಕೊಟ್ಟು ಬಿಟ್ಟಿದೆ ಇಂದಿನ ಕಾರ್ಯಾಂಗ. ಅದರಂತೆ ಬಸವಣ್ಣನ ಜಯಂತಿ ಲಿಂಗಾಯತರಿಗಷ್ಟೆ ಸಿಮೀತ ಎನ್ನುವ ಈ ಕಾಲದಲ್ಲಿ ಅಖಂಡತ್ವವನ್ನು ಸಾರಿದಂತ ಮಹಾತ್ಮರನ್ನು ಹೀಗೆ ಖಂಡ ಖಂಡವಾಗಿ ವಿಭನ್ನಿಸಿದ ಈ ಕಾಲಘಟ್ಟದಲ್ಲಿ ಬಸವಣ್ಣನನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎನ್ನುವ ಗೊಂದಲದಲ್ಲಿ ಜನಸಾಮಾನ್ಯನು ಇರುವುದಂತು ಸತ್ಯ.
ಬಸವಣ್ಣ ಎಂದರೆ ಒಳಗೊಳ್ಳುವ ಸಂಸ್ಕ್ರತಿ. ಆತ್ಮಾವಲೋಕನದ ಪ್ರತೀಕ, ಅಂತರ್ ನಿರೀಕ್ಷಣೆಯ, ಆತ್ಮಪರೀಕ್ಷೆಯ ಅನುಭಾವದಲ್ಲಿ ಆಧಾರವಿಲ್ಲದ ಎಲ್ಲವನ್ನೂ ವಿಮರ್ಶನೆಗೊಳಪಡಿಸುವ ವ್ಯಕ್ತಿತ್ವ. ಅಂತರಂಗ ಬಹಿರಂಗಗಳ ಮಂಥನದಿಂದ ಒಂದು ಮಾಂತ್ರಿಕ ಹೊಸತನವನ್ನು ಹುಟ್ಟಿಸುವ ಧ್ವನಿ ಶಕ್ತಿ. ಇಂತಹ ಬಸವಣ್ಣನ್ನು ತಮ್ಮ ವ್ಯೆಕ್ತಿಗತ ಮತ್ತು ಗುಂಪಿನ ಸ್ವಾರ್ಥಕ್ಕೆ ನಮ್ಮ ಅನುಕೂಲವಾದ ಚೌಕಟ್ಟಿನಲ್ಲಿ ತುರುಕಿ ಬಿಡಲು ಹೊರಟಿದ್ದಾರೆ. ಬಸವಣ್ಣನವರಂತಾಗಲು ಧೈರ್ಯವಿಲ್ಲ, ಆ ಧೈರ್ಯವನ್ನು ತಾಳುವ ಶಕ್ತಿಯೂ ಇಲ್ಲ, ಬಸವಣ್ಣನೆಂಬ ಆ ಜಂಗಮಶೀಲತ್ವವನ್ನು ತಮ್ಮ ಬಂಡವಾಳದ ಸ್ವಾರ್ಥಕ್ಕಾಗಿ ಸ್ಥಾವರಗೊಳಿಸಲು ಹೊರಟಿರುವ ಈ ಕಾಲಘಟ್ಟದಲ್ಲಿ ಬಸವಣ್ಣನನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ಯಾವ ಅಸಮಾನತೆಯ ವ್ಯವಸ್ಥೆಯ ವಿರುದ್ದ ಬಂಡಾಯವೆದ್ದ ಬಸವಣ್ಣನನ್ನು ಇಂದು ಅದೇ ಅಸಮಾನತೆ ವ್ಯವಸ್ಥೆಯೊಳಗೆ ಸಮ್ಮಿಲನಗೊಳಿಸುತ್ತಿರುವುದು ಒಂದು ಸಾಂಸ್ಕೃತಿಕ ವಿಪರ್ಯಾಸವೇ ಸರಿ. ಬಸವಣ್ಣ ಶ್ರೇಣಿಕ್ರತ ಜಾತಿವ್ಯವಸ್ಥೆಯನ್ನು ಧಿಕ್ಕರಿಸಿ, ಈ ಸಮಾಜದ ಶೂದ್ರ ಅಂತ್ಯಜರನ್ನು ಸಮಾಜೋಧಾರ್ಮಿಕ ವ್ಯವಸ್ಥೆಯ ಮುನ್ನಲೆಗೆ ತರುವ ಸಲುವಾಗಿ ಹುಟ್ಟಿಕೊಂಡಿದ್ದು ಲಿಂಗಾಯತ ಅಂದೋಲನ. ಸಮಾನತೆಯ ಸಂಕೇತಗಳಾದ ಲಿಂಗ, ಜಂಗಮ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮಂತ್ರಗಳು ಇಂದು ಜಾತಿಯ ಲಾಂಛನಗಳಾಗಿ ಮಾರ್ಪಟ್ಟಿವೆ.ಸಂಕೇತ ಮತ್ತು ಲಾಂಛನಗಳ ನಡುವಿನ ಧಾರ್ಮಿಕ-ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಅರಿಯದೇ ಇಂದು ನಿರ್ಜಾತಿಕರಣದ ಲಿಂಗಾಯತದಲ್ಲಿ ನೂರೆಂಟು ಒಳಪಂಗಡಗಳು ಹುಟ್ಟಿಕೊಂಡಿವೆ.
ವರ್ಣಾಶ್ರಮದಲ್ಲಿ ಅನಿಷ್ಠ ನಿಸಿದ್ದ ಆಚರಣೆಗಳನ್ನು ನಿರ್ನಾಮ ಮಾಡಲು ಹುಟ್ಟಿಕೊಂಡಿದ್ದ ಲಿಂಗಾಯತದಲ್ಲಿ ತನ್ನ ಅಸ್ಥಿತ್ವ ಮತ್ತು ಅಸ್ಮೀತೆಯನ್ನು ಗುರುತಿಸಿಕೊಳ್ಳಲಾರದಷ್ಟು ವೈದಿಕತೆ ಬೆಳಸಿಕೊಂಡ ಈ ಕಾಲಘಟ್ಟದಲ್ಲಿ ತಾತ್ವಿಕತೆಯನ್ನು ಮರುಪ್ರಶ್ನಿಸುವ ಜರೂರಿದೆ.
ಲಿಂಗವೆಂದರೆ ಸಾಮಾಜಿಕ ಧಾರ್ಮಿಕ ಅಸಮಾನತೆಯನ್ನು ನಾಶಮಾಡಿ ಸಾಂಸ್ಕೃತಿಕ ಐಕ್ಯತೆಯನ್ನು ಸಾಧಿಸುವುದರ ರೂಪಕವಾಗಿ ಪ್ರತಿನಿಧಿಸಬೇಕಿದ್ದ ಲಿಂಗ, ಇಂದು ಅಸಮಾನತೆಯ ರೂಪಕವಾಗಿ ತೋರುತ್ತಿದೆ. ಸಮುದಾಯದ ಸೂಪ್ತ ಮನಸ್ಸಿನಲ್ಲಿ ಬೇರೂರಿದ್ದ ಅಸಮಾನತೆಯನ್ನು ನಾಶಗೊಳಿಸಿದ್ದರ ರೂಪಕವಾದ ಮತ್ತು, ಆತ್ಮಗೌರವ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದ್ದ “ದೇಹವೆ ದೇವಾಲಯ” ಎನ್ನುವ ಸ್ಲೋಗನ್ ಇಂದು ವೇದಿಕೆಯ ಮೇಲಿನ ಭಾಷಣವಾಗಿದೆ. ಬಸವಣ್ಣನ್ನು ಬಂಡವಾಳವಾಗಿಸಿಕೊಂಡಿರುವ ಬಂಡವಾಳಶಾಹಿಗಳು, ಜಾತಿವಾದಿಗಳು, ರಾಜಕಾರಣಿಗಳು, ಜಾತಿಪರ ತಾವೆಂದು ಕಂಕಣ ಕಟ್ಟಿ ಹೋರಾಡುತ್ತಿರುವ ವೇಷಧಾರಿಗಳ ಮಧ್ಯೆ ಬಸವಣ್ಣನನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು.
ಇಷ್ಟೊಂದು ಸಾಕಷ್ಟು ವೈರುಧ್ಯ ಮತ್ತು ವಿಪರ್ಯಾಸಗಳ ನಡುವೆ ನಮ್ಮ ಬಸವಣ್ಣ ಯಾರು? ಬಸವಣ್ಣನನ್ನು ಬಸವಣ್ಣನ ಭಾವದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಬಸವಣ್ಣ ಕೂಡಲಸಂಗಮನನ್ನು ಹೇಗೆ ಅರ್ಥ ಮಾಡಿಕೊಂಡ ಹಾಗೆ ಬಸವಣ್ಣನನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸ್ವಾನುಭವದ, ಆತ್ಮಶೋಧನೆ, ಆತಂಕದ ಅನುಮಾನಗಳ, ತಲ್ಲಣದ ಉತ್ಕಟವಾದ ಭಾವಗಳ ಮೂಲಕ ಬಸವಣ್ಣನ ಸಮಕಾಲೀನ ಶರಣರು ಬಸವಣ್ಣನನ್ನು ಹೇಗೆ ಅರ್ಥ ಮಾಡಿಕೊಂಡರು ಹಾಗೆ, ಸ್ಥಾವರವಲ್ಲದ ಜಂಗಮಶೀಲನಾದ ಸರಳತೆ ಸಮಾನತೆಯ ಬಸವಣ್ಣ ನಮಗೆ ಅರ್ಥವಾಗಬೇಕಿದೆ. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.