ಬೈಲಹೊಂಗಲ
ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆ ಕೀರ್ತಿಗೆ ಭಾಜನರಾದರೆ, ವಚನಗಳನ್ನು ಪ್ರವಚನಗಳ ಮುಖಾಂತರ ವಿಶ್ವವ್ಯಾಪಿ ಮನೆ ಮನಗಳಿಗೆ ಮುಟ್ಟಿಸಿದ ಶ್ರೇಯಸ್ಸು ಲಿಂಗಾನಂದ ಪೂಜ್ಯರಿಗೆ ಸಲ್ಲುತ್ತದೆ, ಪೂಜ್ಯದ್ವಯರು ಜಗದ್ವಂದ್ಯರು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಸವದತ್ತಿಯ ಅಧ್ಯಕ್ಷೆ ಕಸ್ತೂರಿ ಹೂಲಿ ಹೇಳಿದರು.
ಪಟ್ಟಣದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿ ಬಸವನಗರ ಅಭಿವೃದ್ಧಿ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಏರ್ಪಡಿಸಿದ್ದ ಲಿಂಗಾನಂದ ಶ್ರೀಗಳ ಸಂಸ್ಮರಣೆ ವಚನ ಸಂರಕ್ಷಣೆ ದಿನಾಚರಣೆ ಹಾಗೂ ವಿಶ್ವ ಯೋಗ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ 31ನೆಯ ಅನುಭಾವ ಗೋಷ್ಟಿಯಲ್ಲಿ ಉಪನ್ಯಾಸ ನೀಡಿದ ಅವರು, ಕಲ್ಯಾಣ ಕ್ರಾಂತಿಯ ನಂತರ ಹುಳ ಹತ್ತುತ್ತಿರುವ ವಚನ ತಾಡೋಲೆಗಳನ್ನು ಬಡತನದ ಬೇಗೆಯಲ್ಲು ಬೆಂದು ವಚನ ಸಾಹಿತ್ಯ ರಕ್ಷಿಸಿ ಕನ್ನಡ ಸಾಹಿತ್ಯಕ್ಕೆ ವಿಶ್ವಸಾಹಿತ್ಯದ ಮಾನ್ಯತೆಯನ್ನು ತಂದು ಕೊಟ್ಟ ಶ್ರೇಯಸ್ಸು ಫ.ಗು. ಹಳಕಟ್ಟಿ ಶರಣರಿಗೆ ಸಲ್ಲಿದರೆ, ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ಸ್ವತಂತ್ರ ಲಿಂಗಾಯತ ಧರ್ಮದ ಧರ್ಮ ಗ್ರಂಥ ವಚನ ಸಾಹಿತ್ಯ ಎಂಬುದನ್ನು ಜಗತ್ತಿಗೆ ಸಾರಿದವರು ಲಿಂಗಾನಂದರು ಎಂದು ನುಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ವಿಶ್ವ ಯೋಗ ದಿನಾಚರಣೆ ಕುರಿತು ಆನ್ಲೈನ್ ಮೂಲಕ ಮಾತನಾಡುತ್ತಾ, ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗ ಸಾಧಕನ ಶಾರೀರಿಕ ಮಾನಸಿಕ ಸ್ವಾಸ್ಥ್ಯ ಸಾರಿದ ಯೋಗ ವಿಶ್ವ ವ್ಯಾಪಿಯಾಗಿದೆ. ಶರಣರ ಶಿವಯೋಗ ಜಾತಿ ಮತ ಪಂಥ ಬೇದ ಮೀರಿ ಶಿವಜೀವರೈಕ್ಯ ಸಾಧಿಸಿ ವ್ಯಕ್ತಿ ಸಮಾಜದ ಸ್ವಾಸ್ಥ್ಯದೊಂದಿಗೆ ವಿಶ್ವ ಕುಟುಂಬತ್ವ ಸಾರಿದೆ ಎಂದರು.
ಸಾಹಿತಿ ಅನ್ನಪೂರ್ಣ ಕನೋಜ್ ಮಾತನಾಡಿದರು. ದುಂಡಯ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶ.ಸಾ.ಪ ಅಧ್ಯಕ್ಷ ಸಂತೋಷ್ ಕೊಳವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಶೋಕ ಸಾಲಿ, ಗಂಗಯ್ಯ ಮನವಳ್ಳಿಮಠ, ಮಹದೇವ ಕರಡಿಗುದ್ದಿ, ಹನುಮಂತಪ್ಪ ಮಸ್ತನ್ನವರ್, ಶ್ರೀಶೈಲ ಗದಗ, ರಾಮಲಿಂಗ ಕಾಡನ್ನವರ, ಮಂಗಲಾ ಅಕ್ಕಿ, ಪಾರಕ್ಕ ಸೇಬಣ್ಣವರ, ಕಲಾವತಿ ಕಡಕೋಳ, ಸಾವಿತ್ರಿ ಹೊತ್ತಿಗಿಮಠ, ಕಮಲಾಕ್ಷಿ ಅರಳಿಕಟ್ಟಿ, ಸುವರ್ಣ ಬಿಜುಗುಪ್ಪಿ, ಮೀನಾಕ್ಷಿ ಹವಳಪ್ಪನವರ, ಕೀರ್ತಿ ಕರೋಶಿ, ಅನುಸೂಯ ಗದಗ, ವಿಜಯ ಹಾಲಭಾಂವಿ, ಪಾರವ್ವ ಎತ್ತಿನಗುಡ್ಡ, ಹಿರಿಯ ನಾಗರಿಕ ವೇದಿಕೆಯ ಸದಸ್ಯರು, ನಗರದ ನೂರಾರು ಶರಣರು ಉಪಸ್ಥಿತರಿದ್ದರು.

ಶಿವಲೀಲಾ ಹುಲಿಕಟ್ಟಿ ಸ್ವಾಗತಿಸಿದರು, ವಿದ್ಯಾ ನಿಲಪ್ಪನವರ ಪರಿಚಯಿಸಿದರು. ಗೌರವದೇವಿ ತಾಳಿಕೋಟಿಮಠ ವಂದಿಸಿದರು. ಅನುರಾಧ ಕರಡಿಗುದ್ದಿ ನಿರೂಪಿಸಿದರು.