ಚಿತ್ರದುರ್ಗ
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ೩೫ನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨ ಜೋಡಿಗಳ ವಿವಾಹ ನೆರವೇರಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಅಮಾವಾಸ್ಯೆ, ಆಷಾಢ, ಶೂನ್ಯಮಾಸಗಳಲ್ಲಿ ಮದುವೆಯಾದವರ ಮೊಮ್ಮಕ್ಕಳು ಇಲ್ಲಿ ಮದುವೆಯಾಗಿ ಸುಖವಾಗಿದ್ದಾರೆ. ಸರಳ ವಿವಾಹವೇ ಆದರ್ಶ. ಜನ ಮಾತನಾಡಬಹುದು ಆದರೆ ಕ್ರಿಯೆಯಲ್ಲಿ ತೊಡಗಿಸಿಕೊಂಡವರು ಕಡಿಮೆ. ಆದರೆ ಮುರುಘಾಮಠವು ಆ ಕೆಲಸ ಮಾಡುತ್ತಿದೆ ಎಂದರು.
ಮದುವೆಗಳಲ್ಲಿ ಅನೇಕರು ದುಂದುವೆಚ್ಚ ಮಾಡುತ್ತಾರೆ. ಇಂತಹ ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ನವಜೋಡಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಬಸವಾದಿ ಶರಣರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ನಮ್ಮಲ್ಲಿ ಶುಭ-ಅಶುಭ ಎಂಬುದು ಬರುವುದಿಲ್ಲ. ನಮ್ಮ ಮನಸ್ಥಿತಿಗಳು ಶುದ್ಧವಾಗಿದ್ದಾಗ ಮಾತ್ರ ಯಾವ ಅಡೆತಡೆಗಳು ಬರುವುದಿಲ್ಲ. ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕು. ನಮ್ಮ ದುಡಿಮೆ ನಮ್ಮ ಜೀವನಕ್ಕೆ ಇಟ್ಟುಕೊಳ್ಳಬೇಕು. ಅನಾವಶ್ಯಕವಾಗಿ ಖರ್ಚು ಮಾಡಬೇಡಿ ಎಂದು ಹೇಳಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ತುಂಬಿದುದು ತುಳುಕದು ನೋಡಾ ಎನ್ನುವ ಹಾಗೆ ಸಂಸಾರ ತುಂಬಿದ ಕೊಡವಾಗಬೇಕು. ಇಂದಿನ ನವ ವಧುವರರು ಸಂಸಾರ ಎನ್ನುವ ಕೊಡದಲ್ಲಿ ಇಳಿಯಬೇಕು. ಅದು ಪ್ರೀತಿ, ನಂಬಿಕೆ, ವಿಶ್ವಾಸ, ಹೊಂದಾಣಿಕೆಗಳಿAದ ತುಂಬಿರಬೇಕು ಎಂದು ತಿಳಿಸಿದರು.
ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಮುರುಘೇಂದ್ರ ಸ್ವಾಮಿಗಳು ಭಾಗವಹಿಸಿದ್ದರು.
ಜಮುರಾ ಕಲಾವಿದರು ಪ್ರಾರ್ಥನೆ ಮಾಡಿದರು. ಲಂಕೇಶ ದೇವರು ಸ್ವಾಗತಿಸಿದರು. ನಂದೀಶ್ ನಿರೂಪಿಸಿದರು.