ಗದಗ
ಫ.ಗು. ಹಳಕಟ್ಟಿಯವರು ಕನ್ನಡ ನಾಡು-ನುಡಿಯ ಅಭಿಮಾನಿಯಾಗಿದ್ದರು. ವಚನ ಸಾಹಿತ್ಯದಲ್ಲಿ ಅದಮ್ಯ ಆಸಕ್ತಿ ಹೊಂದಿದ್ದರಿಂದಲೇ ವಚನಗಳ ಸಂಶೋಧನೆ, ಸಂಗ್ರಹಣೆಯಿಂದ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಹಿತ್ಯದ ಪರಂಪರೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಆದ್ದರಿಂದ ಕರ್ನಾಟಕ ಸರಕಾರ ಫ. ಗು. ಹಳಕಟ್ಟಿಯವರ ಗೌರವಾರ್ಥ ಇವರ ಜನ್ಮದಿನವನ್ನು ಕರ್ನಾಟಕದಾದ್ಯಂತ ವಚನ ಸಂರಕ್ಷಣಾ ದಿನ ಎಂದು ಆಚರಿಸುತ್ತದೆ ಎಂದು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಶಾಂತಾ ತುಪ್ಪದ ಹೇಳಿದರು.
ಶ್ರೀ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದಿಂದ ಮಂಗಳವಾರ ವಚನ ಸಂರಕ್ಷಣಾ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ೬೧ ನೇ ಜಯಂತಿ ಮತ್ತು ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಗಿರಿಜಾ ಹಸಬಿಯವರು ಫ. ಗು. ಹಳಕಟ್ಟಿ ಅವರ ಕುರಿತು ಉಪನ್ಯಾಸ ನೀಡುತ್ತಾ, ಹಳಕಟ್ಟಿಯವರದು ಸಂಪೂರ್ಣ ನಿಸ್ವಾರ್ಥ ಮತ್ತು ತ್ಯಾಗ ಜೀವನದ ಬದುಕಾಗಿತ್ತು. ಶರಣ ತತ್ವದಂತೆ ಬದುಕು ಸಾಗಿಸಿದ ಸ್ಮರಣೀಯರು ಅವರು ಎಂದರು.

ಪ್ರಾರಂಭದಲ್ಲಿ ವಿಜ್ಞಾನ ಕೇಂದ್ರದ ಎಲ್ಲ ಸದಸ್ಯರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಜಯಶ್ರೀ ಉಗಲಾಟದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಶೆಟ್ಟರ ಅತಿಥಿಗಳನ್ನು ಪರಿಚಯಿಸಿದರು. ಅಕ್ಕಮಹಾದೇವಿ ಚಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ರತ್ನಕ್ಕ ಪಾಟೀಲ, ಅಕ್ಕಮಹಾದೇವಿ ಚಟ್ಟಿ, ವಿಶಾಲಾಕ್ಷಿ ಕುರಗೋಡ, ಶ್ರೀದೇವಿ ಶೆಟ್ಟರ, ಜಯಾ ಹಳ್ಳಿಕೇರಿ, ಉಮಾ ಕವಳಿಕಾಯಿ, ಸುಗ್ಗಲಾ ಎಳಮಲಿ, ಪುಷ್ಪಾ ಬಂಡಾರಿ, ಮಾಧುರಿ ಮಾಳೇಕೊಪ್ಪ, ವಿದ್ಯಾ ಗಂಜಿಹಾಳ, ಶಶಿಕಲಾ ಮಾಲಿಪಾಟೀಲ, ಸಂಗೀತಾ ಪಟ್ಟಣಶೆಟ್ಟಿ, ರತ್ನಾ ದಾಸರ, ಶಾರದಾ ಸಜ್ಜನರ, ಸುಶೀಲಾ ಕೋಟಿ, ವಿಜಯಲಕ್ಷ್ಮೀ ಚಿತ್ತಂಗಿ, ಸುಜಾತಾ ಮತ್ತಿತರರು ಉಪಸ್ಥಿತರಿದ್ದರು.