ಚಿತ್ರದುರ್ಗ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಎಸ್.ಜೆ.ಎಂ.ಐ.ಟಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 20ರಿಂದ 22ರವರೆಗೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ-ಕಾಲೇಜುಗಳಿಗೆ ಆಯೋಜಿಸಲಾಗಿದ್ದ ಜಮುರಾ ಕಪ್-2025 ಕ್ರೀಡಾಕೂಟದ ಸಮಾರಂಭವನ್ನು ಶ್ರೀಮುರುಘಾಮಠದ ಅನುಭವಮಂಟಪದಲ್ಲಿ ಅಯೋಜಿಸಲಾಗಿತ್ತು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಗಳು, ಶ್ರೀಮಠದ ಕಾರ್ಯಕ್ರಮಗಳು ಯಾವತ್ತೂ ಪ್ರಯೋಗಾತ್ಮಕವಾಗಿರುವಂತಹವು. ಇದೇ ಮೊದಲ ಬಾರಿ ನಮ್ಮ ವಿದ್ಯಾಪೀಠದ ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವಂತೆ ಮಾಡಿರುವುದು ಈ ಜಮುರಾ ಕಪ್ ಕ್ರೀಡಾಕೂಟ.

ವಿದ್ಯಾರ್ಥಿಗಳಿಗೆ ಕೊಠಡಿಯೊಳಗಿನ ತರಗತಿಗಳಷ್ಟೇ ಮುಖ್ಯವಾಗಬಾರದು. ಕ್ರೀಡೆಗಳಲ್ಲಿ ಎಷ್ಟೊಂದು ಅವಕಾಶಗಳಿವೆ. ಎಷ್ಟೊಂದು ಪ್ರತಿಭೆಗಳು ಅನಾವರಣಗೊಂಡಿವೆ ಎಂಬುದನ್ನು ಈ ಜಮುರಾ ಕಪ್ ೨೦೨೫ರ ಪ್ರಯೋಗವೇ ಸಾಕ್ಷಿಯಾಗಿದೆ.

ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಬಿಂಬಿಸಿದರೆ ಸಂಗೀತ ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಚಿತ್ರದುರ್ಗದ ವಿವಿಧ ಸಂಗೀತ ಬಳಗದ ಕಲಾವಿದರು ಬಸವಾದಿ ಶರಣರ ವಚನಗಳನ್ನು ಹೃದಯ ತುಂಬಿ ಹಾಡಿ ವಚನಗಳಿಗೆ ಜೀವ ತುಂಬಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮುರುಘೇಂದ್ರ ಸ್ವಾಮಿಗಳು, ಎಸ್ಜೆಎಂಐಟಿ ಪ್ರಾಚಾರ್ಯ ಡಾ. ಭರತ್ ಪಿ.ಬಿ, ಶ್ರೀಬೃಹನ್ಮಠ ಪಿಯು ಕಾಲೇಜಿನ ಪ್ರಾಚಾರ್ಯ ಪಿ.ಎಂ. ಜಿ. ರಾಜೇಶ್, ಡಾ. ಟಿ.ಎಸ್. ನಾಗರಾಜ್, ಡಾ. ರಘುನಾಥ ರೆಡ್ಡಿ, ರವಿಶಂಕರ್, ಪುಷ್ಪವಲ್ಲಿ, ಡಾ. ಸವಿತಾ, ಡಾ. ಈಶ್ವರಪ್ಪ, ಡಾ. ಕುಮಾರಸ್ವಾಮಿ ಕೆ, ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು, ದೈಹಿಕ ಶಿಕ್ಷಕರು ಉಪನ್ಯಾಸಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಜಮುರಾ ಕಲಾಲೋಕ, ಶ್ರೀಮುರುಘರಾಜೇಂದ್ರ ಬೃಹನ್ಮಠ, ಶ್ರೀ ಗಾನಯೋಗಿ ಸಂಗೀತ ಬಳಗದ ನೂರಕ್ಕೂ ಹೆಚ್ಚು ಕಲಾವಿದರು ಸಮೂಹ ಗಾಯನದ ಮೂಲಕ ಹನ್ನೆರಡನೇಯ ಶತಮಾನದ ಶಿವಶರಣರ ವಚನಗಳಿಗೆ ಜೀವ ತುಂಬಿದರು.