ಲಿಂಗಸೂಗೂರು
ಪಟ್ಟಣದಲ್ಲಿ ಅಕ್ಕನ ಬಳಗದ ವತಿಯಿಂದ ‘ನವವಚನ ಚಿಂತನ’ ಕಾರ್ಯಕ್ರಮ ಸೆಪ್ಟೆಂಬರ್ 22ರಿಂದ ಅಕ್ಟೊಬರ್ 1ರವರೆಗೆ ನಡೆಯಿತು.
ಪ್ರತಿದಿನ 12ನೇ ಶತಮಾನದ ಶರಣೆಯರ ಜಿವನ ಚರಿತ್ರೆ ಕುರಿತು ಅನುಭಾವ ಗೋಷ್ಠಿಗಳು ನಡೆದವು.
12ನೇ ಶತಮಾನ ಕರ್ನಾಟಕದ ಧಾರ್ಮಿಕ ಸಾಹಿತ್ಯ, ಸಾಂಸ್ಕೃತಿಕ, ಇತಿಹಾಸದಲ್ಲಿ ಸುವರ್ಣ ಅಕ್ಷರಗಳಿಂದ ಬರೆದಿಡುವಂತಹದ್ದು.

ಈ ಅವಧಿಯಲ್ಲಿ ಸಂಪ್ರದಾಯವಾದಿಗಳ ಹಾಗೂ ಪುರೋಹಿತ ಶಾಹಿಗಳ ವಿರುದ್ಧ ಮಹಾಕ್ರಾಂತಿಯನ್ನು ಮಾಡಿ, ಸ್ತ್ರೀ ಸಮಾನತೆಯನ್ನು ನೀಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ.
ಹೀಗೆ ಬಸವಾದಿ ಶರಣರ ಮಾರ್ಗದರ್ಶನದಲ್ಲಿ ಅನೇಕ ಸ್ತ್ರೀಯರು ಬದುಕಿನ ಅರ್ಥವನ್ನು ಕಂಡುಕೊಂಡರು. ಇಂತಹ ಶರಣೆಯರ ಜೀವನ ಚರಿತ್ರೆಯನ್ನು ದಿನಾಲು ಚಿಂತನೆಗೈಯಲಾಯಿತು.

ಮೊದಲ ದಿನ ಶರಣೆ ಸತ್ಯಕ್ಕ ಅವರ ಬಗ್ಗೆ ಶರಣೆ ಸುಮಿತ್ರ ಪಾಟೀಲ ಅವರು ಚಿಂತನೆ ಗೈದರು. ಎರಡನೆ ದಿನ ಶರಣೆ ಸೂಳೆ ಸಂಕವ್ವ ಜೀವನ ಚರಿತ್ರೆ ಕುರಿತು ಸುಮಾ ಗುಂಡಪ್ಪ ಸಜ್ಜನ್ಯ ಅವರು ಅನುಭಾವ ನೀಡಿದರು. ಮೂರನೇ ದಿನ ಶರಣೆ ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮ ತಾಯಿಯ ಬಗ್ಗೆ ದಾನಮ್ಮ ಚೆನ್ನಿಗಾವಿ ಅವರು ಅನುಭಾವ ನೀಡಿದರು. ನಾಲ್ಕನೇ ದಿನ ಶರಣೆ ನೀಲಾಂಬಿಕೆ ಆದರ್ಶಮಯ ಜೀವನ ಕುರಿತು ಡಾ. ಲತಾ ಶಿವಬಸಪ್ಪ ಹೆಸರುರ ಅವರು ಅನುಭಾವ ನೀಡಿದರು.
ಐದನೆ ದಿನದಂದು ಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ಜೀವನ ಚರಿತ್ರೆ ಕುರಿತು ಶಿಲ್ಪಾ ಉಮೇಶ ನಾರನಾಳ ಅವರು ಅನುಭಾವ ನೀಡಿದರು. ಆರನೇ ದಿನ ಶರಣೆ ಅಕ್ಕನಾಗಮ್ಮ ಅವರ ಜೀವನ ಚರಿತ್ರೆ ಕುರಿತು ನಾಗರತ್ನ ಶಿಕ್ಷಕಿ ಅವರು ಅನುಭಾವ ನೀಡಿದರು. ಏಳನೇ ದಿನ ಶರಣೆ ಜೇಡರ ದಾಸಿಮಯ್ಯ ಅವರ ಪತ್ನಿ ದುಗ್ಗಳೆ ಅವರ ಆದರ್ಶ ಜೀವನ ಕುರಿತು ಗಂಗಮ್ಮ ಮೇಘರಾಜ್ ಅವರು ಅನುಭಾವ ನೀಡಿದರು.

ಎಂಟನೆ ದಿನ ಶರಣೆ ಗಂಗಾಂಬಿಕೆ ತಾಯಿಯ ಜೀವನ ಚರಿತ್ರೆ ಕುರಿತು ಕವಿತಾ ರುದ್ರಪ್ಪ ಲೋಕಪುರ ಅವರು ಅನುಭಾವ ನೀಡಿದರು. 9ನೇ ದಿನದಂದು ಶರಣೆ ಮೋಳಿಗೆ ಮಹಾದೇವಿ ಅವರ ಜೀವನ ಕುರಿತು ಶರಣೆ ಯಶೋಧ ಶಿಕ್ಷಕಿಯರು ಅನುಭಾವ ನೀಡಿದರು.
ಹತ್ತನೇ ದಿನದಂದು ಸಮಾರೋಪ ಸಮಾರಂಭ ನಡೆಸಲಾಯಿತು. ಅಂದು 12 ನೇ ಶತಮಾನದ ಶರಣೆಯರ ಕುರಿತು ಚೈತ್ರ ಸತ್ಯಂಪೇಟ ಅವರು ಅನುಭಾವ ನೀಡಿದರು.

ಸಾನಿಧ್ಯವನ್ನು ಪೂಜ್ಯ ಸಿದ್ದಲಿಂಗ ಸ್ವಾಮಿಗಳು, ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪ, ಲಿಂಗಸುಗೂರು ಅವರು ವಹಿಸಿ ಮಾತನಾಡಿದರು.
ದಿನಾಲು ಬಂದಂತ ಸದ್ಭಕ್ತರಿಗೆ ಪ್ರಸಾದವನ್ನು ಏರ್ಪಡಿಸಲಾಗಿತ್ತು. ಒಟ್ಟಾರೆ ಮಹಿಳೆಯರೆ ಅನುಭಾವ, ನಿರೂಪಣೆ, ಅಧ್ಯಕ್ಷತೆ, ಹೀಗೆ ಎಲ್ಲವೂ ಮಹಿಳೆಯರಿಂದ ನಡೆದು, ಕಾರ್ಯಕ್ರಮ ಯಶಸ್ವಿಗೊಂಡಿತು.
ಶರಣ ಶರಣೆಯರು ಪಾಲ್ಗೊಂಡು ವಿಷಯ ತಿಳಿದುಕೊಂಡು ಹರ್ಷ ವ್ಯಕ್ತಪಡಿಸಿದರು. ಇನ್ನು ಮುಂದೆ ಹೀಗೆ ಮುಂದುವರೆಯಲಿ ಎಂದು ಎಲ್ಲರೂ ಅಭಿಪ್ರಾಯಪಟ್ಟರು.
ಶರಣು ಶರಣಾರ್ಥಿಗಳು , ಇದು ನಾಡಿನ ಬೇರೆ ಬೇರೆ ಭಾಗದಲ್ಲಿಯೂ ಈ ರೀತಿಯ ವಿನೂತನ ಗೋಷ್ಟಿಗಳನ್ನು ಎಲ್ಲರೂ ಅಳವಡಿಸಿಕೊಳ್ಳಲಿಕ್ಕೆ ಮಾದರಿ ಅನಿಸಿದೆ, ಎಲ್ಲ ಶರಣೆ ತಾಯಂದಿಯರಿಗೆ ಶರಣಾರ್ಥಿಗಳು.