ಲಿಂಗಾಯತ ಇತಿಹಾಸ ತಿರಸ್ಕರಿಸುವವರು ಲಿಂಗಾಯತ ಸಮಾಜವನ್ನೂ ತಿರಸ್ಕರಿಸಲಿ
ಬೆಂಗಳೂರು
ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳ 1066ನೇ ಜಯಂತಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಶ್ರೀಮಠದ ಮಠಾಧಿಪತಿ ಪೂಜ್ಯ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು, “ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ಶ್ರೀಮಠದ ಪ್ರಥಮ ಜಗದ್ಗುರುಗಳಾಗಿದ್ದು, ಈ ಮಠಕ್ಕೆ 10ನೇ ಶತಮಾನದಿಂದಲೂ ಅಸ್ತಿತ್ವವಿದೆ” ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ “ಆದಿಯೋಗಿಗಳು ನಿಜವಾಗಿಯೂ 10ನೇ ಶತಮಾನದಲ್ಲಿ ಇದ್ದರೇ?”, “ಆ ಕಾಲದ ಮಠವು ಲಿಂಗಾಯತ ಅಥವಾ ವೀರಶೈವ ಪರಂಪರೆಗೆ ಸೇರಿದ್ದಿತ್ತೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ಸಾಮಾನ್ಯ ಲಿಂಗಾಯತರು ಹಾಗೂ ಬಸವಾಭಿಮಾನಿಗಳಲ್ಲಿ ಚರ್ಚೆ ಮತ್ತು ಗೊಂದಲಕ್ಕೆ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ ವಿಷಯವನ್ನು ಭಾವನಾತ್ಮಕವಾಗಿ ಅಲ್ಲ, ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನೆಯ ಆಧಾರದಲ್ಲಿ ಪರಿಶೀಲಿಸುವುದು ಅಗತ್ಯವಾಗಿದೆ.

ಮೊದಲು ಸ್ಪಷ್ಟಪಡಿಸಬೇಕಾದ ಸತ್ಯವೇನೆಂದರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಉದ್ಭವಿಸಿದ ಸಾಮಾಜಿಕ–ಧಾರ್ಮಿಕ ಚಳವಳಿಯಾಗಿದೆ. 10ನೇ ಶತಮಾನದಲ್ಲಿ ಲಿಂಗಾಯತ ಅಥವಾ ವೀರಶೈವ ಎಂಬ ಪ್ರತ್ಯೇಕ ಧರ್ಮ ಅಥವಾ ಸಂಪ್ರದಾಯ ಅಸ್ತಿತ್ವದಲ್ಲಿರಲಿಲ್ಲ. ಆದ್ದರಿಂದ 10ನೇ ಶತಮಾನದಲ್ಲಿ ಇದ್ದಿರಬಹುದಾದ ಯಾವುದೇ ಮಠವನ್ನು “ಲಿಂಗಾಯತ ಮಠ” ಎಂದು ಕರೆಯುವುದು ಐತಿಹಾಸಿಕವಾಗಿ ಸರಿಯಲ್ಲ.
ಕಾಳಾಮುಖ ಪರಂಪರೆ
10ನೇ ಶತಮಾನದ ಶಾಸನಗಳು, ತಾಮ್ರಶಾಸನಗಳು ಹಾಗೂ ಪುರಾತತ್ವ ಅಧ್ಯಯನಗಳಿಂದ ತಿಳಿದುಬರುವಂತೆ, 9ರಿಂದ 11ನೇ ಶತಮಾನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಳಾಮುಖ ಶೈವ ಪರಂಪರೆ ಅತ್ಯಂತ ಪ್ರಬಲವಾಗಿತ್ತು.
ಕಾಳಾಮುಖರು ಪಾಶುಪತ ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದು, ಶಿವನ ಆರಾಧನೆ, ಭಸ್ಮಧಾರಣೆ, ವ್ರತ–ನಿಯಮಗಳು ಹಾಗೂ ಶೈವ ಆಗಮಾಧಾರಿತ ಆಚರಣೆಗಳನ್ನು ಪಾಲಿಸುತ್ತಿದ್ದರು.
ಇತಿಹಾಸಕಾರರಾದ ಡಾ. ಡಿ.ಸಿ. ಸಿರ್ಕಾರ್, ಡಾ. ಎಂ. ಚಿದಾನಂದಮೂರ್ತಿ, ಪ್ರೊ. ಶೆಟ್ಟರ್ ಮುಂತಾದವರು ತಮ್ಮ ಸಂಶೋಧನಾ ಕೃತಿಗಳಲ್ಲಿ, ಕರ್ನಾಟಕದ ಅನೇಕ ಪುರಾತನ ಮಠಗಳು ಮೊದಲಿಗೆ ಕಾಳಾಮುಖ ಶೈವ ಕೇಂದ್ರಗಳಾಗಿದ್ದವು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಈ ಹಿನ್ನೆಲೆಯನ್ನು ಗಮನಿಸಿದರೆ, 10ನೇ ಶತಮಾನದಲ್ಲಿ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ಕಾಳಾಮುಖ ಶೈವ ಪರಂಪರೆಯ ಸ್ವಾಮಿಯಾಗಿದ್ದಿರಬೇಕು ಎಂದು ಹೇಳಬಹುದು.
ಬಸವಯುಗ
12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮೊದಲಾದ ಶರಣರು ಅಂದಿನ ಶೈವ ಧರ್ಮದ ಒಳಗೇ ಒಂದು ಮಹತ್ವದ ಕ್ರಾಂತಿಯನ್ನು ಆರಂಭಿಸಿದರು.
ಜಾತಿ ವ್ಯವಸ್ಥೆ, ಕರ್ಮಕಾಂಡ, ಮಠ–ಮಂದಿರದ ಪುರೋಹಿತಶಾಹಿಯನ್ನು ತಿರಸ್ಕರಿಸಿ, ಇಷ್ಟಲಿಂಗ ಧಾರಣೆ, ಅನುಭವ ಮಂಟಪ, ಕಾಯಕ–ದಾಸೋಹ ಎಂಬ ಮಾನವೀಯ ತತ್ವಗಳನ್ನು ಪ್ರತಿಷ್ಠಾಪಿಸಿದರು. ಇದುವೇ ಲಿಂಗಾಯತ ಧರ್ಮದ ಮೂಲತತ್ವ.
ಈ ಕಾಲಘಟ್ಟದಲ್ಲಿ ಕಾಳಾಮುಖ ಶೈವ ಪರಂಪರೆಯ ಅನೇಕ ಸ್ವಾಮಿಗಳು ಮತ್ತು ಶೈವಸ್ಥಾನಗಳು ಬಸವತತ್ವದ ಪ್ರಭಾವಕ್ಕೆ ಒಳಗಾಗಿ, ತಮ್ಮ ಮೂಲ ಶೈವ ಆಚರಣೆಗಳನ್ನು ತೊರೆದು ಇಷ್ಟಲಿಂಗಧಾರಿಗಳಾಗಿ ಲಿಂಗಾಯತ ಧರ್ಮವನ್ನು ಅನುಸರಿಸಿದರು. ಇದು ಕೇವಲ ಧಾರ್ಮಿಕ ಬದಲಾವಣೆ ಮಾತ್ರವಲ್ಲ, ಒಂದು ದೊಡ್ಡ ಸಾಮಾಜಿಕ ಪರಿವರ್ತನೆಯಾಗಿತ್ತು.
ವಿರಕ್ತ ಪರಂಪರೆ
ಬಸವಯುಗದ ನಂತರ ಲಿಂಗಾಯತ ಧರ್ಮದಲ್ಲಿ ವಿರಕ್ತ ಮಠಗಳ ಪರಂಪರೆ ರೂಪುಗೊಂಡಿತು. ಈ ಮಠಗಳು ಶೈವ ಆಗಮಾಧಾರಿತವಲ್ಲ; ಬದಲಾಗಿ ವಚನ ಸಾಹಿತ್ಯ, ಶರಣ ಸಂಪ್ರದಾಯ ಮತ್ತು ಬಸವಾದಿ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಮುಂದುವರಿದವು.
ಇಂದಿನ ಸುತ್ತೂರು ಮಠದ ಆಚರಣೆಗಳನ್ನು ಪರಿಶೀಲಿಸಿದರೆ ಅಲ್ಲಿ ಇಷ್ಟಲಿಂಗ ಪೂಜೆ, ವಚನ ಪಾಠ, ಶರಣ ಸಂಪ್ರದಾಯ ಇದೆ. ಶ್ರೀಮಠವು ಶೈವ ಪರಂಪರೆಯಿಂದ ವಿರಕ್ತ ಪರಂಪರೆಗೆ ಹೊರಳಿರುವುದು ಕಾಣಿಸುತ್ತದೆ.

ಜಯಂತಿ ಆಚರಣೆ
ಈ ಹಿನ್ನೆಲೆಯಲ್ಲಿ, 10ನೇ ಶತಮಾನದಲ್ಲಿ ಇದ್ದಿರಬಹುದಾದ ಕಾಳಾಮುಖ ಶೈವ ಸ್ವಾಮಿಯ ಜಯಂತಿಯನ್ನು, ಅದು ಕೂಡ ಭಾರತದ ರಾಷ್ಟ್ರಪತಿಗಳ ಸಮ್ಮುಖದಲ್ಲಿ, ವಿಜೃಂಭಣೆಯಿಂದ ಆಚರಿಸಿರುವುದು ಶೈವ ಪರಂಪರೆಯನ್ನು ಮಹಿಮೆಪಡಿಸಿದಂತಾಗಿದೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಇಡೀ ಕಾರ್ಯಕ್ರಮದಲ್ಲಿ ಬಸವಣ್ಣನವರ ಹೆಸರು, ಫೋಟೋ ಕಾಣಿಸದಂತೆ ನೋಡಿಕೊಂಡಿರುವುದು ನೋಡಿದರೆ ಇವರಿಗೆ ಲಿಂಗಾಯತರಾಗಿರಲು ಇಷ್ಟವಿಲ್ಲವೆಂದು ತೋರುತ್ತದೆ.
ಇದು ಉದ್ದೇಶಪೂರ್ವಕವಾಗಿ ಲಿಂಗಾಯತ ಧರ್ಮವು ಶೈವ ಧರ್ಮದ ಉಪಶಾಖೆಯೆಂಬ ತಪ್ಪು ಕಲ್ಪನೆ ಬಿಂಬಿಸಿ ಬಸವಣ್ಣನವರ ಧಾರ್ಮಿಕ–ಸಾಮಾಜಿಕ ಕ್ರಾಂತಿಯನ್ನು ಅಳಿಸಲು ನಡೆಯುತ್ತಿರುವ ಪ್ರಯತ್ನದಂತೆ ತೋರುತ್ತದೆ.
ಇದರಿಂದ ಸಾಮಾನ್ಯ ಲಿಂಗಾಯತರು ಹಾಗೂ ಬಸವಾಭಿಮಾನಿಗಳಲ್ಲಿ ಗೊಂದಲ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಐತಿಹಾಸಿಕ ಪ್ರಾಮಾಣಿಕತೆಯಿರಲಿ
ಶ್ರೀಮಠದ ಪುರಾತನ ಇತಿಹಾಸವನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ ನಂತರದ ಐತಿಹಾಸಿಕ ಬೆಳವಣಿಗೆಗಳನ್ನು ತಿರಸ್ಕರಿಸುತ್ತಿರುವುದು ಯಾವ ಕಾರಣಕ್ಕೆ?
ಇತಿಹಾಸವನ್ನು ಗೌರವಿಸುವುದೇ ಮಠದ ಗೌರವ. ಇತಿಹಾಸವನ್ನು ಮರೆತರೆ ಯಾರಿಗೂ ಶ್ರೇಯಸ್ಸಲ್ಲ. ಇದನ್ನು ಸುತ್ತೂರು ಸ್ವಾಮೀಜಿ ಮನಸ್ಸಿನಲ್ಲಿ ಇಟ್ಟುಕೊಳ್ಳಲಿ. ಅವರು ಲಿಂಗಾಯತ ಇತಿಹಾಸವನ್ನು ತಿರಸ್ಕರಿಸುವಂತೆ ಲಿಂಗಾಯತ ಸಮಾಜವನ್ನೂ ತಿರಸ್ಕರಿಸಲಿ ನೋಡೋಣ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g
b

ಕಾಳಮುಖ ಶೈವರು ಬಸವಣ್ಣನವರ ಕಾಲದಲ್ಲಿ ಲಿಂಗಾಯತ ಧರ್ಮ ಸೇರಿರುವುದು ಸತ್ಯ
ಹೌದು . . . ಬಸವಾನುಯಾಯಿ ಮಲೈ ಮಹದೇಶ್ವರರು ಗುರು ಮಲ್ಲೇಶರರ ಪವಿತ್ರ ಪ್ರಾಂತ್ಯಗಳಲ್ಲಿ ಶೈವ ಸಂಪ್ರದಾಯದ ಕಾಳಾಮುಖಿಗಳನ್ನು ವೈಭವೀಕರಿಸುತ್ತಿರುವುದು… . ಆದೂ ಅಪ್ಪಟ ಶರಣ ಸಂಪ್ರದಾಯದ ಮಠದಿಂದ … ಏಕೆಂಬುದೇ ತಿಳಿಯದಂತೆ ಆಗಿದೆ !
ಲಿಂಗಾಯತ ಧರ್ಮದ ಸಮಾವೇಶ, ಕಾರ್ಯಕ್ರಮಗಳಿಗೆ, ಸಭೆಗಳಿಗೆ ಈ ಸ್ವಾಮಿಗಳನ್ನು ಯಾಕೆ ಕರೆಯುತ್ತಿರಿ?
ಇದು ಕೂಡ ಲಿಂಗಾಯತರು ಮಾಡುವ ತಪ್ಪು ಅಲ್ಲವೇ?
ಇಂತಹ ಮಠಗಳಿಗೆ ಲಿಂಗಾಯತರು ತನು ಮನದಿಂದ ಭಕ್ತಿ ಯಿಂದ ಹೋಗಲಿ. ಹೊಟ್ಟೆ ತುಂಬಾ ಪ್ರಸಾದ ಸೇವನೆ ಮಾಡಲಿ.
ಆದರೆ ಒಂದು ರೂಪಾಯಿ ಕೂಡ ದಕ್ಷಿಣೆ, ಪೂಜಾ ಸೇವೆ, ದಾನ ಮಾಡಬೇಡಿರಿ.
ಲಿಂಗಾಯತರ ದುಡ್ಡು ಬೇಕು, ಧರ್ಮ ಬೇಡ. ಲಿಂಗಾಯತರು ಧನ ಸೇವೆ ಬಂದು ಮಾಡಿರಿ.
ಹೌದು, ಸರಿಯಾಗಿದೆ. ಅವರ ಸಂಪರ್ಕ ಬಿಡಿ. ಶಿವ ಅನ್ನುವ ಎಲ್ಲ ಶೈವರೂ ಬಸವಧರ್ಮಕ್ಕೆ ಒಡಂಬಡಿಕೆ ಮಾಡಿಕೊಂಡು, ಲಿಂಗ ಕಟ್ಟಿಕೊಂಡು ಲಿಂಗಾಯತ ರಾಗಿದ್ದಾರೆ. ಇದು ಇತಿಹಾಸ. ಆದರೆ ಬಸವಣ್ಣನವರು ಧರ್ಮವೇ ಕೊಡಲಿಲ್ಲ. ಪ್ರಚಾರಕರು ಎಂಬ ಭಾವನೆ ಇವರಲ್ಲಿದೆ. ಇವರ ಸಂಪರ್ಕಕ್ಕೆ ಬಂದ ಎಲ್ಲ ಸ್ವಾಮಿಜಿಗಳು ಕೂಡ ಇದನ್ನೇ ಇಂದು ಹೊರಹಾಕ್ತಾ ಇದ್ದಾರೆ. ಗಮನಿಸಿ.
ಸುತ್ತೂರು ಮಠ ಮುಖ್ಯವಾಗಿ ಬಸವಣ್ಣ ಮತ್ತು ಶರಣ ಚಳವಳಿಗೆ ಮಹತ್ವ ನೀಡುವುದಿಲ್ಲ. ಬಸವಣ್ಣಗಿಂತ ಅವರ ಮಠದ ಶ್ರೀ ಶ್ರೀ ಶ್ರೀ ಶ್ರೀ ಗಳು ಯಾವಾಗಲು hecchu
Suttur Mutt is running a Temple in USA. They have invested huge amount to build this temple dedicated to Lord Venkateshwara. So, Suttur Mutt is being a Virakta Mutt promoting Vaishnava & Shaiva Tenets openly. You can see the details of their web site. Its very openly collecting money in the name of Vaishnav & Shaiva Gods. So, the drama which Suttur Swamy is very very unfortunate as a Basava Philosophy Swamy. And we can understand why religion status to Lingayt is denied.
Please go through the website:
https://jssmission.org/dieties/
ನಿಜಗುಣ ಮೂರ್ತಿಯೇ ಲಿಂಗಾಯತರಲ್ಲ
ನನಗೆ ಗೊತ್ತಿಲ್ಲ ಮತ್ತು ಅಂತಹ ಸತ್ಯ ನಿಮಗೆ ಗೊತ್ತಿರಬಹುದು. ನಿಮಗೆ ಅದು ಹೇಗೆ ಗೊತ್ತಾಯಿತು ಅಂತ ತಿಳಿಯಪಡಿಸಬಹುದಿ. ಅವರು ಲಿಂಗಾಯತರಲ್ಲದಿದ್ದರೂ ಇರಲಿ ಬಿಡಿ. ಈಗ ಅವರು ಅಪ್ಪಟ ಬಸವ ಪ್ರೇಮಿ ಮತ್ತು ಬಸವ ಪ್ರಣೀತ ಲಿಂಗಾಯತರು. ಅವರು.
ರವೀಂದ್ರ ಸ್ವಾಮಿ ಹಿರೇಮಠ ಅವರೇ ತಾವು ನಿಜಗುಣ ಮೂರ್ತಿ ಅವರು ನಿಮ್ಮ ಪ್ರಕಾರ ಏಕೆ ಲಿಂಗಾಯತರಲ್ಲ? ದಯಮಾಡಿ ತಿಳಿಸಿ. ಹಾಗೆಯೇ ನಿಮ್ಮ ಪ್ರಕಾರ ಲಿಂಗಾಯತ ಎಂದರೆ ಏನು?
ಸುತ್ತೂರು ಮಠದ ಪರಂಪರೆ ಹತ್ತನೇ ಶತಮಾನದಷ್ಟು ಹಳೆಯದಾಗಿದ್ದು ಹಿಂದಿನ ಕಾಳಾಮುಖ ಮುಠವೇ ಆಗಿದ್ದರೆ ಮತ್ತು ಬಸವ ಯುಗದ ನಂತರವೂ ಅದೇ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದರೆ ಈಗ ಒಪ್ಪಿಕೊಳ್ಳಬಹುದಾಗಿತ್ತು ಆದರೆ ಮುಗ್ಧ ಭಕ್ತರಿಗೆ ಬಸವ ಪರಂಪರೆಯನ್ನು ತೋರಿಸಿ ಒಳಗೆ ಕಾಳಾಮುಖವಾದರೆ ಅದು ಸಮುದಾಯಕ್ಕೆ ಮಾಡುವ ದ್ರೋಹ
ಒಟ್ಟಾರೆ ಲಿಂಗಾಯತರೊಳಗೇ ಒಕ್ಕಟ್ಟು ಇಲ್ಲ ವೋ ಹೇಗೆ?ಡಾ ವಿಜಯ ಕುಮಾರ ಕಮ್ಮಾರ ರವರು ಸ್ಪಷ್ಟವಾಗಿ ಸತ್ತೂರ ಮಠ ಅಮೇರಿಕಾ USA ದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನ ಹುಟ್ಟೆಹಾಕುತ್ತಿರುವ ಕುರಿತು ತಿಳಿಸಿದ ಮೇಲೆ ಮುಗಿಯಿತು. ಇದರ ಮೇಲೆ ಲಿಂಗಾಯತ / ಬಸವಾಭಿ ಮಾನಿ ಗಳು ಸಮೀತಿ/ಕೇಂದ್ರ ಗಳು ನಿರ್ಧರಿಸಿ ಒಂದು ಪ್ರಕಟನೆಯ ನೀಡಿ ಮುಂದಿನ ಮಾರ್ಗ ದರ್ಶನ ಮಾಡಲಿ.
12ನೇ ಶತಮಾನ ಹಳೆಯ ಎಲ್ಲಾ ಮೌಢ್ಯಗಳನ್ನು ಮುರಿದು ಹೊಸದನ್ನು ಕಟ್ಟುಕೊಟ್ಟಿದ್ದಾರೆ. ಎಲ್ಲ ಹಿಂದಿನವೂ ಆಚರಿಸುವುದಕ್ಕೆ ಯೋಗ್ಯವಲ್ಲವೆಂದು ತೀರ್ಮಾನಿಸಿ ಹೊಸ ಆಚರಣೆ ಹೊಸ ತಿಳುವಳಿಕೆ ಹೊಸ ಪರಿಭಾಷೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ ವಚನಕಾರರು. ಅದನ್ನು ಒಪ್ಪಿಕೊಂಡು ಒಗ್ಗಿಸಿಕೊಂಡು ಮುಂದುವರಿಯುವುದು ಜಗತ್ ಮಾನ್ಯವಾಗುತ್ತದೆ.
10 ನೇ ಶತಮಾನದಲ್ಲಿ ಪಾಶುಪತ ಶೈವದ ಕಾಪಾಲಿಕರೇ ಉಗ್ರ ತಪಸ್ಸು ಸಾಧನೆ ಶಿವನ ಆರಾಧನೆ ಮಾಡುತ್ತಿದ್ದವರು … ಆಗ ಇಷ್ಟಲಿಂಗದ ಪರಿಕಲ್ಪನೆ . . . . ಲಿಂಗಾಯತ ಧರ್ಮದ ಅಸ್ತಿತ್ವವೇ ಇರಲಿಲ್ಲ, ! ಸುತ್ತೂರು ಮಠದ ಮೂಲವೂ 10 ರಿಂದ 12ನೇ ಶತಮಾನದ ವರೆಗೆ ಪಾಶುಪತ ಶೈವ ಮೂಲದ ಕಾಪಾಲಿಕರದ್ದೇ ಆಗಿತ್ತು.
12ನೇ ಶತಮಾನದಲ್ಲಿ ಬಸವಾದಿ ಶರಣರ ಪ್ರಭಾವಕ್ಕೆ ಒಳಗಾಗಿ ಅನೇಕ ಶೈವರಂತೆ ಪಾಶುಪತ ಶೈವ ಮೂಲದ ಕಾಪಾಲಿಕರೂ ಸಹ ಇಷ್ಟಲಿಂಗ ದೀಕ್ಷೆ ಪಡೆದು ಬಸವಾನುಯಾಯಿಗಳಾದರು ಎನ್ನುವುದು ಸಂಶೋಧಕರು ಇತಿಹಾಸಜ್ಞರ ಅಭಿಪ್ರಾಯ.
12ನೇ ಶತಮಾನದಿಂದ ಇಲ್ಲಿಯ ವರೆಗೂ ಸುತ್ತೂರು ಅಪ್ಪಟ ಬಸವ ತತ್ವದ ಮರವೇ ಆಗಿದೆ ಎಂಬುದರಲ್ಲಿ, ಎರಡು ಮಾತಿಲ್ಲ! ಇಂದು ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಶ್ರೀಮಠವು ಬಸವತತ್ವ ಪ್ರಸಾರ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದನ್ನು ಲಿಂಗಾಯತರು ಅಭಿಮಾನ ಗೌರವದಿಂದ ನೆನೆಸಲೇ ಬೇಕು !
ಆದರೆ ವಿಷಯ ಅದಲ್ಲ … ಭಾರತದ ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆದಂತಹ ಅಪೂರ್ವ ಸಮಾರಂಭದಲ್ಲಿ ಬಸವಣ್ಣನ ಚಿತ್ರ ಕಾಣದೇ ಇರಲು ಕಾರಣ? ಭಾರತದಾದ್ಯಂತ 10 ನೇ ಶತಮಾನದಲ್ಲಿ ಆಗಿಹೋದ ಲಿಂಗಾಯತ ಧರ್ಮಕ್ಕೆ ಸಂಬಂಧ ಇಲ್ಲದ ಪಾಶುಪತ ಶೈವ ಪರಂಪರೆಯ ಕಾಪಾಲಿಕ ಸ್ವಾಮಿಯನ್ನು ಇದ್ದಕ್ಕಿದ್ದಂತೆ ಮುನ್ನಲೆಗೆ ತರಲು ಕಾರಣ? ಈಗಿನ ಸಂದರ್ಭದಲ್ಲಿ ಇಷ್ಟಲಿಂಗ ಧರಿಸದ ಬಸವಾನುಯಾಯಿ ಅಲ್ಲದೆ ಕಾಪಾಲಿಕನನ್ನು ಲಿಂಗಾಯತ ಸಮಾಜ ಜಯಂತಿ ನೆಪದಲ್ಲಿ ಭಾರತದ ಸಂವಿಧಾನ ಮುಖ್ಯಸ್ಥರ ಸನ್ನಿಧಾನದಲ್ಲಿ ಮೆರೆಸಾಡುವುದು ಅದೆಷ್ಟು ಔಚಿತ್ಯಪೂರ್ಣ ? ಬಹುಶಃ ಈ ಅಪರೂಪದ ಜಯಂತಿ ಆಚರಣೆಯಲ್ಲಿ ಅಣ್ಣನ ಭಾವಚಿತ್ರ ಇರಲಿ ಬಿಡಲಿ … ಲಿಂಗಾಯತ ಸಮಾಜದ ಮಹತ್ತರ ನಿರೀಕ್ಷೆ ಸಾಂವಿಧಾನಿಕ ಮಾನ್ಯತೆ ಅವಶ್ಯಕತೆ ಕುರಿತು ಕನಿಷ್ಠ ಪ್ರಸ್ತಾಪ ಬೇಡವೇ ? ಶೈವ ಕಾಪಾಲಿಕ ಆದಿ ಶಿವಯೋಗಿಗಿಂತ ಅಣ್ಣನು ಕನಿಷ್ಠನಾದನೇ? ಬಸವಾದಿ ಶರಣರನ್ನು ಬಿಟ್ಟು ಜಯಂತಿ ನೆಪದಲ್ಲಿ ಇಷ್ಠಲಿಂಗಕ್ಕೆ ಸಂಬಂಧವೇ ಇಲ್ಲದ ಕಾಪಾಲಿಕ ಶೈವ ಯೋಗಿಯನ್ನು ಮೆರೆಸಾಡಲು ಆರಂಭಿಸುತ್ತಿರುವುದ ಹಿಂದಿನ ಉದ್ದೇಶವಾದರೂ ಏನು? ಶೈವ ಸಂಪ್ರದಾಯ ಹಿಂದೂ ಮೂಲಭೂತವಾದದ ಮೂಲಕ ಬಸವಾದಿ ಶರಣರನ್ನು ಹಿನ್ನೆಲೆಗೆ ಸರಿಸುವ ಯತ್ನವಿದಲ್ಲವೆ? ಬೇಲಿಯೇ ಎದ್ದು ಹೊಲವನ್ನು ತಿನ್ನ ಬಾರದಲ್ಲವೇ ಆತ್ಮೀಯ ಸೋಮಶೇಖರ್ ರವರೇ ?!
ತುಂಬಾ ಒಳ್ಳೆಯ, ಉಪಯುಕ್ತವಾದ ಮತ್ತು ಸಮಾಯೋಚಿತ ವಿಮರ್ಷಾತ್ಮಕ ಸಂಶೋಧನಾತ್ಮಕ ಲೇಖನ.
ತಮ್ಮಯ ಲೇಖನ ಸರಿಯಾಗಿದೆ. ಸುತ್ತೂರು ಶ್ರೀಗಳು ಉತ್ತರಿಸಬೇಕು. ಏಕೆ ಬದಲಾದರು?