ಭಕ್ತರು ಗುರುಗಳ ಮಾತು ಕೇಳುತ್ತಾರೆ. ಮಠಗಳಲ್ಲಿ ಜಾಗೃತಿ ಮೂಡಿದರೆ, ಭಕ್ತರಲ್ಲಿಯೂ ಜಾಗೃತಿ ಮೂಡುತ್ತದೆ. ಇದಕ್ಕಾಗಿಯೇ ಅಭಿಯಾನ ಮಠಗಳಿಂದಲೇ ಶುರುವಾಗಬೇಕು.
ರಾಮದುರ್ಗ
ಬಸವ ತತ್ವ ಜನರಿಗೆ ಸರಿಯಾಗಿ ಮುಟ್ಟದಿರಲು ಮುಖ್ಯ ಕಾರಣ ಮಠಗಳು.
ಬೆರಳಣಿಕೆಯಷ್ಟು ಪೂಜ್ಯರು ಮಾತ್ರ ಆಸಕ್ತಿಯಿಂದ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಮಿಕ್ಕವರು ತಮ್ಮ ಆಸ್ತಿ, ಪ್ರಭಾವ, ವೈಯಕ್ತಿಕ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವ ಕಡೆ ಮಾತ್ರ ಗಮನ ಕೊಡುತ್ತಿದ್ದಾರೆ.
ಕೆಲವು ಮಠಗಳು ಹೆಸರಿಗೆ ಬಸವ ಪರಂಪರೆಯಲ್ಲಿವೆ. ಆದರೆ ಅವು ಹೋಮ ಹವನ, ಪಂಚಾಂಗ, ಜ್ಯೋತಿಷ್ಯ ಮುಂತಾದ ಆಚರಣೆಗಳಲ್ಲಿ ಮುಳುಗಿವೆ.
ಮಠಗಳಿಗೆ ತಿಳುವಳಿಕೆ ನೀಡಿ ಸರಿ ದಾರಿಗೆ ತರಬೇಕು. ಮಠಗಳಿಗೆ ಭಕ್ತರಿದ್ದಾರೆ, ಗುರುಗಳ ಮಾತು ಅವರು ಕೇಳುತ್ತಾರೆ. ಬೇರೆಯವರು ಹೇಳಿದರೆ ಕೇಳುವುದಿಲ್ಲ. ಮಠಗಳಲ್ಲಿ ಜಾಗೃತಿ ಮೂಡಿದರೆ, ಭಕ್ತರಲ್ಲಿಯೂ ಜಾಗೃತಿ ಮೂಡುತ್ತದೆ. ಇದಕ್ಕಾಗಿಯೇ ಅಭಿಯಾನ ಮಠಗಳಿಂದಲೇ ಶುರುವಾಗಬೇಕು.
ಜೊತೆಗೆ ಅಭಿಯಾನ ತಳಮಟ್ಟದಿಂದ, ಹಳ್ಳಿಗಳಿಂದಲೇ ಶುರುವಾಗಬೇಕು. ವೇದಿಕೆ ಕಾರ್ಯಕ್ರಮಗಳಿಂದ ಹೆಚ್ಚಿನ ಪರಿಣಾಮವಾಗುವುದಿಲ್ಲ. ಏನೋ ಕಾರ್ಯಕ್ರಮ ನಡೆಸಿದ ತೃಪ್ತಿಯಾಗುತ್ತದೆ ಅಷ್ಟೇ. ಪ್ರವಚನ ಕೇಳಲು ಸಾವಿರಾರು ಜನ ಬರುತ್ತಾರೆ. ಆದರೆ ಪರಿವರ್ತನೆಯಾಗುವವರು ಬೆರಳಣಿಕೆಯಷ್ಟು ಮಾತ್ರ.
ಜನರ ಮನಸ್ಸು ಒಲಿಸಲು ಸಣ್ಣ ಸಣ್ಣ ಗುಂಪು ಮಾಡಿಕೊಂಡು ಹಳ್ಳಿಗಳಲ್ಲಿ ಸುತ್ತಾಡಬೇಕು. ಅವರ ಮನೆಗಳಲ್ಲಿ, ಚಾವಡಿಗಳಲ್ಲಿ ಮುಖ್ಯವಾಗಿ ಮಹಿಳೆಯರ ಜತೆ ಮಾತನಾಡಬೇಕು.
ಬಸವಣ್ಣ ಯಾರು, ಸ್ತ್ರೀಯರ ಸ್ವಾತಂತ್ರ್ಯಕ್ಕೆ ಹುಟ್ಟಿದ ಮನೆಯನ್ನೇ ತೊರೆದ ಅವರ ವ್ಯಕ್ತಿತ್ವ, ಅವರು ಕಟ್ಟಿದ ಪವಿತ್ರವಾದ ಮತ್ತು ಸುಭದ್ರವಾದ ಧರ್ಮ – ಎಲ್ಲಾ ಪರಿಚಯ ಮಾಡಿಕೊಡಬೇಕು.
ಲಿಂಗ ಪೂಜೆಯಿಂದ ದೊರೆಯುವ ದೈಹಿಕ, ಮಾನಸಿಕ ಅರೋಗ್ಯ, ನಿಜಾಚರಣೆ, ಏಕದೇವೋಪಾಸನೆ ಮುಂತಾದವುಗಳನ್ನೂ ಮನಮುಟ್ಟುವಂತೆ ಸರಳವಾಗಿ ತಿಳಿಸಬೇಕು. ವಚನಗಳನ್ನು ಓದಿ ತಿಳಿಸಬೇಕು. ಅವರಿಂದಲೂ ಓದಿಸಬೇಕು.
ಧಾರ್ಮಿಕ ಜಾಗೃತಿಯ ಜತೆಗೆ ಲಿಂಗಾಯತ ಧರ್ಮದ ಸಾಮಾಜಿಕ ಕಳಕಳಿಯನ್ನೂ ಪರಿಚಯ ಮಾಡಿಕೊಡಬೇಕು. ಜನರಲ್ಲಿ ಜಾತೀಯತೆ ಬೇರೂರಿದೆ. ಬಸವಾದಿ ಶರಣರ ಸಮಾನತೆಯ, ಮೂಢನಂಬಿಕೆ ವಿರೋಧಿಸಿದ ತತ್ವ ವೈಚಾರಿಕತೆಯನ್ನೂ ಪರಿಚಯ ಮಾಡಿಕೊಡಬೇಕು. ವಚನಗಳು ಸಂಸ್ಕೃತ ಮಂತ್ರಗಳ ಅನುವಾದವಲ್ಲ, ನಮ್ಮ ಭಿನ್ನ ವಿಶಿಷ್ಟ ಪರಂಪರೆ ಸಾಧನೆಯೆಂದು ಪರಿಚಯ ಮಾಡಿಕೊಡಬೇಕು.
ಸಂಘ ಪರಿವಾರದ ತೆಕ್ಕೆಯಲ್ಲಿ ಲಿಂಗಾಯತ ಹುಡುಗರೇ ಇದ್ದಾರೆ. ಅವರ ಜೊತೆ ಸಂಪರ್ಕ, ಸಂವಾದ ಬೆಳೆಸಲು ಪ್ರಯತ್ನಿಸಬೇಕು. ಅವರ ಮನೆಗಳಿಗೆ ಹೋಗಿ ಅವರ ಜೊತೆ ಮಾತನಾಡಬೇಕು.
ಲಿಂಗಾಯತ ಧರ್ಮದಲ್ಲಿ ಶಿವಾಚಾರ, ಸದಾಚಾರ ಮಾತ್ರಗಳಿಲ್ಲ. ಗಣಾಚಾರವೂ ಇದೆ. ಅಭಿಯಾನ ಆಯೋಜಿಸುತ್ತಿರುವವರು ಈ ವಿಷಯ ಮರೆಯಬಾರದು.
ಪೂಜ್ಯ ಬಸವ ಗೀತಾ ಮಾತಾಜಿ ಅವರಿಗೆ ಭಕ್ತಿಯ ಶರಣಾರ್ಥಿಗಳು ತಮ್ಮ ಭಾಷಣವನ್ನು ಲೇಖನದೊಂದಿಗೆ ಓದಿದೆ ಮನಸ್ಸಿಗೆ ಸಂತೋಷವಾಯಿತು ತಮ್ಮಂತ ಪ್ರವಚನಕಾರರು ಇವತ್ತಿನ ದಿವಸ ಬಹಳ ಅವಶ್ಯಕತೆ ಇದೆ ಇದೇ ರೀತಿ ತಮ್ಮ ಸೇವಾ ಮನೋಭಾವನೆ ಇವತ್ತಿನ ಯುವಜನಾಗಕ್ಕೆ ಲಭಿಸಲಿ ಭಕ್ತಿಯ ಶರಣು ಶರಣಾರ್ಥಿಗಳು
ಮಾತಾಜಿ ಅವರಿಗೆ ಶರಣು ಶರಣಾರ್ಥಿಗಳು ಮಾತಾಜಿ ತಾವು ಹೇಳುತ್ತಿರುವುದು ನಿಜ ಇಂದು ಲಿಂಗಾಯತ ಹುಡುಗರು ತಮ್ಮ ವಾಹನಗಳ ಮೇಲೆ ಜೈಬಸವ ಅನ್ನುವ ಬದಲಿಗೆ ತಮ್ಮ ವಾಹನಗಳ ಮೇಲೆ ಬೇರೆಯದನ್ನೇ ಬರೆಯುತ್ತಾರೆ ಪಾಲಕರು ತಮ್ಮ ಮಕ್ಕಳಿಗೆ ಬಸವ ಧರ್ಮದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ
ಶರಣು ಶರಣಾರ್ಥಿ
ಶರಣು ಶರಣಾರ್ಥಿ