ಅಭಿಯಾನದ ಬಗ್ಗೆ ಮನಬಿಚ್ಚಿ ಮಾತನಾಡಿದ ಅಣಬೇರು ರಾಜಣ್ಣ

ಎಂ. ಎ. ಅರುಣ್
ಎಂ. ಎ. ಅರುಣ್

ಅಭಿಯಾನದಲ್ಲಿರೋ ಶ್ರೀಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರನ್ನು ಯಾರೂ ತಡೆಯೋದಿಕ್ಕೆ ಆಗುವುದಿಲ್ಲ.

ದಾವಣಗೆರೆ

ಜಾಗತಿಕ ಲಿಂಗಾಯತ ಮಹಾಸಭಾಕ್ಕೂ, ಅಖಿಲ ಭಾರತ ವೀರಶೈವ ಮಹಾಸಭೆಗೂ ಎಣ್ಣೆ ಸೀಗೆಕಾಯಿ.

ವೀರಶೈವ ಮಹಾಸಭಾ ಗಟ್ಟಿಯಾಗಿ ಅಪ್ಪಿಕೊಂಡಿರುವ ಪಂಚಪೀಠಗಳೂ ಲಿಂಗಾಯತ ಮಠಾಧೀಪತಿಗಳ ಒಕ್ಕೂಟವೂ ಎಣ್ಣೆ ಸೀಗೆಕಾಯಿ.

ಜಾತಿ ಗಣತಿಯಲ್ಲಿ ‘ವೀರಶೈವ ಲಿಂಗಾಯತ’ ಅಂತಲೆ ಬರೆಸಿ ಎಂದು ವೀರಶೈವ ಮಹಾಸಭಾ ಹಠ ಹಿಡಿದು ಕುಳಿತಿದೆ. ‘ಲಿಂಗಾಯತ’ ಮಾತ್ರ ಬರೆಸಿ ಎನ್ನುವುದು ಅಭಿಯಾನದ ದೊಡ್ಡ ಸಂದೇಶ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಎಲ್ಲಾ ಬಸವ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ.

ಇದು (ಅಭಿಯಾನ) ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರೋಗಗ್ರಸ್ಥ ಮನಸ್ಸುಗಳ ಹುನ್ನಾರ ಎಂದು ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಆದೇಶ ನೀಡಿದ್ದಾರೆ.

ಹೀಗಿದ್ದರೂ ಅನೇಕ ಜಿಲ್ಲೆಗಳಲ್ಲಿ ವೀರಶೈವ ಮಹಾಸಭೆಯ ಘಟಕಗಳು ಅಭಿಯಾನಕ್ಕೆ ಕೈ ಜೋಡಿಸಿ ದುಡಿಯುತ್ತಿವೆ. ಆದರೆ ಅವರಲ್ಲಿ ಕೆಲವರಲ್ಲಿ ಒಂದು ಅಳಕೂ ಇದೆ.

ಒಂದು ಜಿಲ್ಲೆಯ ಕಾರ್ಯಕ್ರಮದಲ್ಲಿ ಒಬ್ಬರು ಪ್ರಭಾವಿ ರಾಜಕಾರಣಿ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಇವರು ವೀರಶೈವ ಮಹಾಸಭೆಯಲ್ಲಿಯೂ ಚುರುಕಾಗಿದ್ದಾರೆ. ಇವರಿಗೆ ಕರೆ ಮಾಡಿದಾಗ ಅಭಿಯಾನದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಲು ಸ್ವಲ್ಪ ಹಿಂಜರಿದರು.

“ಬಸವಣ್ಣನವರ ಕೆಲಸ ಅಂತ ಮಾಡ್ತಾ ಇದೀವಿ. ಲಿಂಗಾಯತ, ವೀರಶೈವ ವಿಷಯಕ್ಕೆ ಕೈ ಹಾಕುವುದಿಲ್ಲ. ಅದನ್ನೆಲ್ಲಾ ದೊಡ್ಡವರು ನೋಡಿಕೊಳ್ಳಲಿ,” ಎಂದು ಹೇಳಿದರು.

ಅನೇಕ ಜಿಲ್ಲೆಗಳಲ್ಲಿ ವೀರಶೈವ ಮಹಾಸಭೆಯ ಘಟಕಗಳು ಅಭಿಯಾನಕ್ಕೆ ಕೈ ಜೋಡಿಸಿ ದುಡಿಯುತ್ತಿವೆ.

ಆದರೆ ದಾವಣಗೆರೆಯಲ್ಲಿ ಅಭಿಯಾನ ಯಶಸ್ವಿಯಾಗಿ ನಡೆಸಿಕೊಟ್ಟ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಅಣಬೇರು ರಾಜಣ್ಣನವರಿಗೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ. ಅವರು ದಾವಣಗೆರೆಯ ಕಾರ್ಯಕ್ರಮಗಳಲ್ಲಿ ಅಭಿಯಾನದ ಬಗ್ಗೆ ವಿವರವಾಗಿ, ಮುಕ್ತವಾಗಿ ಮಾತನಾಡಿದರು.

ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ “ನಾನು ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ಶಾಮನೂರು ಶಿವಶಂಕರಪ್ಪ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

‘ಇವರು ಅಲ್ಲಿ ಹೋಗಿ ವೀರಶೈವ ಲಿಂಗಾಯತ ಅಂತ ಹೇಳ್ತಾರೆ, ಇಲ್ಲಿ ಬಂದು ಲಿಂಗಾಯತ ಅಂತ ಹೇಳ್ತಾರೆ’ ಎಂದು ಮಾಧ್ಯಮಗಳು ಬರೆಯಬಹುದು,” ಎಂದು ರಾಜಣ್ಣ ಹೇಳಿದರು.

“ಒಳ್ಳೆ ಕೆಲಸ ಮಾಡೋರಿಗೆ ಇಂತಹ ಸಮಸ್ಯೆಗಳು ಹುಟ್ಟಿಕೊಂಡು ಬಿಡ್ತವೆ. ನಾನು ಅದಕೆಲ್ಲ ಬೆಲೆ ಕೊಡಲ್ಲ,” ಅಂತಲೂ ಅವರೇ ಹೇಳಿದರು.

ಒಳ್ಳೆ ಕೆಲಸ ಮಾಡೋರಿಗೆ ಇಂತಹ ಸಮಸ್ಯೆಗಳು ಹುಟ್ಟಿಕೊಂಡು ಬಿಡ್ತವೆ.

ಭಾಷಣ ಮುಂದುವರೆಸಿ ರಾಜಣ್ಣ ತಾವು ಅಭಿಯಾನದ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ನೇಮಕವಾದ ರೀತಿಯನ್ನು ವಿವರಿಸಿದರು.

“ಪಂಡಿತಾರಾಧ್ಯ, ಪಾಂಡೋಮಟ್ಟಿ, ಬಸವಪ್ರಭು ಶ್ರೀಗಳು ಅಭಿಯಾನದ ಪೂರ್ವಭಾವಿ ಸಭೆಗೆ ಕರೆದರು. ಗುರುಗಳು ಹೇಳಿದರು ಅಂತ ಹೋದೆ.

ಹೋದ ಮೇಲೆ ಇದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಾರ್ಯಕ್ರಮ ಅಂತ ಗೊತ್ತಾಯ್ತು. ನಾನು 50,000 ರೂಪಾಯಿ ದಾಸೋಹ ಕೊಡ್ತೀನಿ ಅಂತ ಹೇಳಿದೆ. ಆದರೆ ಶ್ರೀಗಳು ಪ್ರಸಾದವೆಲ್ಲ ನೀವೇ ನೋಡಿಕೊಳ್ಳಬೇಕು ಅಂತ ಹೇಳಿ ಸಮಿತಿಯ ಅಧ್ಯಕ್ಷರಾಗಿ ಘೋಷಣೆಯನ್ನೂ ಮಾಡಿಬಿಟ್ಟರು.”

ಅಭಿಯಾನದ ಸಿದ್ಧತೆ, ಕಾರ್ಯಕ್ರಮಗಳು ರಾಜಣ್ಣನವರಿಗೆ ಸಂತೃಪ್ತಿ ತಂದು ಕೊಟ್ಟಿದೆ.

“15 ದಿನ ಕೆಲಸದಲ್ಲಿ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ನಮ್ಮ ತಂಡದವರು ಮುಖ್ಯವಾಗಿ ತಾಯಂದಿರು ಎಲ್ಲ ಕಡೆ ಹೋಗಿ ಪ್ರಚಾರ ಮಾಡಿದರು. ಆರು ಲಕ್ಷ ರೂಪಾಯಿ ಎರಡೇ ದಿನದಲ್ಲಿ ಸಂಗ್ರಹವಾಯ್ತು. ಆಮೇಲೆ ಸಾಕು ಅಂತ ನಾವೇ ನಿಲ್ಲಿಸಿದ್ವಿ.

ಸಂವಾದದ್ದಲ್ಲಿ 15-16 ವರ್ಷದ ಮಕ್ಕಳು ಬಸವಣ್ಣನವರ ಮೇಲೆ ಎಂತೆಂತ ಪ್ರಶ್ನೆಗಳನ್ನು ಕೇಳಿದರು. ಅದನ್ನು ಕೇಳಿ ನನಗೆ ಆಶ್ಚರ್ಯವಾಯಿತು.

ಸಂಜೆ ಒಂದೂವರೆ ಗಂಟೆ ಪಾದಯಾತ್ರೆಯಲ್ಲಿ ನಡೆದದ್ದು ನಮಗೆಲ್ಲರಿಗೂ ದೊಡ್ಡ ರೋಮಾಂಚನ, ತೃಪ್ತಿ ತಂದುಕೊಟ್ಟಿದೆ,” ಎಂದು ರಾಜಣ್ಣ ಹೇಳಿದರು.

ಈ ಮಾತು ಕೇಳಿದಾಗ ಇವರಿಗೆ ವೀರಶೈವ ಮಹಾಸಭೆಯಲ್ಲಿ ಇಷ್ಟು ದಿನ ಇಂತಹ ಅನುಭವ ಪಡೆಯಲು ಅವಕಾಶ ಸಿಗಲಿಲ್ಲವೇ ಎಂದು ಅನಿಸಿತು. 120 ವರ್ಷಗಳ ಒಂದು ಪ್ರಭಾವಿ ಸಾಮಾಜಿಕ ಸಂಘಟನೆ ಬರೀ ರಾಜಕೀಯ ಮಾಡಿಕೊಂಡು ಕಾಲ ಕಳೆಯುತ್ತಿರುವುದು ಲಿಂಗಾಯತರ ದುರ್ದೈವ.

120 ವರ್ಷಗಳ ಒಂದು ಪ್ರಭಾವಿ ಸಂಘಟನೆ ಬರೀ ರಾಜಕೀಯ ಮಾಡಿಕೊಂಡು ಕಾಲ ಕಳೆಯುತ್ತಿರುವುದು ಲಿಂಗಾಯತರ ದುರ್ದೈವ.

ದಿನಪೂರ್ತಿ ಅಭಿಯಾನದಲ್ಲಿ ಮಿಂದಿದ್ದ ರಾಜಣ್ಣ ಸಂಜೆಯ ಸಮಾವೇಶದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಸ್ವಲ್ಪ ಹೊತ್ತು ತಾವು ವೀರಶೈವ ಮಹಾಸಭಾದ ಹಿರಿಯ ಪದಾಧಿಕಾರಿ ಎಂದು ಮರೆತು, ಸಂಪೂರ್ಣವಾಗಿ ಬಸವ ಪ್ರಜ್ಞೆಯಲ್ಲಿ ಮನಬಿಚ್ಚಿ ಮಾತನಾಡಿದರು.

“ಕಳೆದ 15 ದಿನಗಳಿಂದ ಬಸವ ಸಂಸ್ಕೃತಿ ಅಭಿಯಾನವನ್ನು ವಾಟ್ಸ್ ಆಪ್, ಯುಟ್ಯೂಬ್ ನಲ್ಲಿ ನೋಡುತ್ತಿದ್ದೇನೆ. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ, ಬೀದರಿನಲ್ಲಿ 40-50,000 ಜನ ಸೇರಿದ್ದರು.

ಬೆಂಗಳೂರಿನ ಸಮಾರೋಪದಲ್ಲಿ 400 ಸ್ವಾಮಿಗಳು ಸೇರಿ ಸಮಾಜಕ್ಕೆ ದೊಡ್ಡ ಸಂದೇಶ ಕೊಡುತ್ತಾರೆ. ಅವರು ತೆಗೆದುಕೊಳ್ಳುವ ಮಹತ್ವದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಬೇಕು.

ಸಮಾರೋಪದಲ್ಲಿ 400 ಸ್ವಾಮಿಗಳು ಸಮಾಜಕ್ಕೆ ದೊಡ್ಡ ಸಂದೇಶ ಕೊಡುತ್ತಾರೆ.

ನಮ್ಮ ಸಮಾಜದಲ್ಲಿ ಬಡವರು, ಕಡುಬಡವರು ಇದ್ದಾರೆ. ಅವರಿಗೆ ಸರಕಾರದಿಂದ ವಂಚನೆಯಾಗಿದೆ. ಅವರ ಸ್ಥಿತಿ ಸುಧಾರಿಸಬೇಕಾದರೆ ಶ್ರೀಗಳ ನಿರ್ಣಯದಂತೆ ಎಲ್ಲರೂ ನಡೆಯಬೇಕು,” ಎಂದು ಹೇಳಿದರು.

ಅಭಿಯಾನದ ಮೇಲೆ ಕೆಲವು ಮಠಾಧೀಶರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಹೊಟ್ಟೆಕಿಚ್ಚಿನ ಮಾತು.

ಭಾಷಣ ಮುಂದುವರೆಸಿ ರಾಜಣ್ಣ ಮುಖ್ಯ ವಿಷಯಕ್ಕೆ ಬಂದರು.

“ಅಭಿಯಾನ ಶುರುವಾದ ಮೇಲೆ ಕೆಲವು ಮಠಾಧೀಶರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಶುದ್ಧ ಸುಳ್ಳು, ಹೊಟ್ಟೆಕಿಚ್ಚಿನ ಮಾತು. ಅಹಂಕಾರಿಗಳಿಗೆ ಸ್ನೇಹಿತರು ಇರುವುದಿಲ್ಲ. ಅಂತವರಿಂದ ಈ ಘಾತಕದ ಕೆಲಸ ನಡೆಯುತ್ತಿವೆ.

ಇಲ್ಲಿರೋ ಶ್ರೀಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಮೇಲೆ ಬಸವಣ್ಣನವರ ಕೃಪೆಯಿದೆ. ಅವರನ್ನ ಯಾರೂ ತಡೆಯೋದಿಕ್ಕೆ ಆಗುವುದಿಲ್ಲ,” ಎಂದು ಹೇಳಿದರು.

ಈ ಸಮಾರಂಭಕ್ಕೆ ಶಾಮನೂರು ಶಿವಶಂಕರಪ್ಪ ಜಾಗ ದುಡ್ಡಿಲ್ಲದೆ ಕೊಟ್ಟಿದ್ದಾರೆ ಅಂತ ಹೇಳಿ, ಅಭಿಯಾನಕ್ಕೆ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರ ಪರೋಕ್ಷ ಬೆಂಬಲವಿದೆ ಎಂದು ಸೂಚಿಸಿ ರಾಜಣ್ಣ ತಮ್ಮ ಮಾತುಗಳನ್ನು ಮುಗಿಸಿದರು.

ಅಭಿಯಾನಕ್ಕೆ ಶಾಮನೂರು ಶಿವಶಂಕರಪ್ಪ ದುಡ್ಡಿಲ್ಲದೆ ಜಾಗ ಕೊಟ್ಟಿದ್ದಾರೆ

ಬಸವ ಮೀಡಿಯಾ ಟ್ರಸ್ಟಿನ ಸದಸ್ಯ ಶಾಂತಕುಮಾರ ಹರ್ಲಾಪುರ ‘ನಾವು ಸೋತಿರುವುದು ಬಸವ ತತ್ವವನ್ನು ಜನರಿಗೆ ತಲುಪಿಸುವಲ್ಲಿ. ಒಂದು ಸಾರಿ ಬಸವ ತತ್ವ ಪರಿಚಯವಾದರೆ ಜನ ತಾವಾಗೆಯೇ ಬದಲಾಗುತ್ತಾರೆ’ ಎಂದು ಆಗಾಗ ಹೇಳುತ್ತಿರುತ್ತಾರೆ.

ಈ ಮಾತು ಎಷ್ಟು ಸತ್ಯ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
1 Comment
  • The discussion about Lingayat is healthy and appreciable.
    We all Lingayats should support it wholeheartedly.
    This is overdue
    Jai Lingayat and Basavanna’s teachings
    🌹🌹🌹🙏🙏🙏🙏

Leave a Reply

Your email address will not be published. Required fields are marked *