ರಥಯಾತ್ರೆ ಸೇಡಂ, ಕೂಡಲಸಂಗಮ ಉತ್ಸವಗಳ ಮುಖ್ಯ ಆಕರ್ಷಣೆಯಾಗಿತ್ತು
ಕೂಡಲಸಂಗಮ
‘ಬಸವ ರಥ’ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ವಿಶೇಷ ಆಕರ್ಷಣೆಯಾಗಲಿದೆ.
ಇದನ್ನು ಸಿದ್ದಪಡಿಸಲು ಸುಮಾರು 20 ಲಕ್ಷ ಖರ್ಚಾಗುತ್ತದೆ. ಬಸವ ರಥವನ್ನು ತಯಾರು ಮಾಡುವವರನ್ನೂ ಗುರುತಿಸಲಾಗಿದೆ, ಆದೇಶ ನೀಡಿದ ಒಂದು ತಿಂಗಳಲ್ಲಿ ರಥ ಸಿದ್ದವಾಗುತ್ತದೆ ಎಂದು ಅಭಿಯಾನವನ್ನು ಆಯೋಜಿಸುತ್ತಿರುವ ಒಬ್ಬ ಪ್ರಮುಖರು ಕೆಲವು ದಿನಗಳ ಹಿಂದೆ ಹೇಳಿದ್ದರು.
ಇಷ್ಟೊಂದು ಹಣ ಖರ್ಚು ಮಾಡಿ ಸಿದ್ಧಪಡಿಸುತ್ತಿರುವ ‘ಬಸವ ರಥ’ವನ್ನು ಅಭಿಯಾನದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆದಷ್ಟು ಮುಂಚೆಯೇ ಅದನ್ನು ಸಿದ್ದಗೊಳಿಸಿ ಅಭಿಯಾನಕ್ಕೆ ಎರಡು ತಿಂಗಳ ಮುಂಚೆಯೇ ರಾಜ್ಯಾದ್ಯಂತ ಚಲಾಯಿಸಿ ಜನರಲ್ಲಿ ಜಾಗೃತಿ, ಕುತೂಹಲ ಮೂಡಿಸಲು ಪ್ರಯತ್ನಿಸಬೇಕು.
.

‘ಬಸವ ರಥ’ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲಿಂಗಾಯತ ಮಠಗಳಿಗೆ ಭೇಟಿ ನೀಡಿ, ಬಸವಣ್ಣನವರಿಗೆ ಪುಷ್ಪಾರ್ಚನೆ ಮಾಡಿ, ಬಸವ ಕಾರ್ಯಕರ್ತರ ಜೊತೆ ಕೆಲವು ರಸ್ತೆಗಳಲ್ಲಿ ಮೆರವಣಿಗೆ ನಡೆಸಬಹುದು. ಇದಕ್ಕೆ ಸ್ಥಳೀಯ ಪ್ರಮುಖರನ್ನು ಆಹ್ವಾನಿಸಬಹುದು. ಬಸವ ಸಂಘಟನೆಗಳಲ್ಲಿ ಒಗ್ಗಟ್ಟು, ಕಾರ್ಯಕರ್ತರಲ್ಲಿ ಉತ್ಸಾಹ, ಜನರಲ್ಲಿ ಆಸಕ್ತಿ ಮೂಡಿಸಲು ಇದರಿಂದ ಸಾಧ್ಯವಾಗುತ್ತದೆ.
ಇನ್ನು ಕೆಲವೇ ದಿನಗಳಲ್ಲಿ ಅಭಿಯಾನದ ಜಿಲ್ಲಾ ಸಮಿತಿಗಳ ರಚನೆಯಾಗಿ ಕಾರ್ಯ ಶುರುವಾಗಿರುತ್ತದೆ. ಜಿಲ್ಲಾ, ತಾಲೂಕು ಮಟ್ಟದ ಬಸವ ಸಂಘಟನೆಗಳೆಲ್ಲ ಸಕ್ರಿಯವಾಗಿ ಪೂರ್ವಸಿದ್ಧತೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತವೆ. ಬಸವ ರಥ ಹೋದೆಡೆಯೆಲ್ಲಾ ಇವುಗಳ ಕೆಲಸ ಚುರುಕಾಗುವ ಸಾಧ್ಯತೆಯೂ ಇದೆ.
ಇತ್ತೀಚೆಗೆ ನಡೆದಿರುವ ಹಲವಾರು ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಇದೇ ರೀತಿ ರಥಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿವೆ.
ಜನವರಿ ತಿಂಗಳಲ್ಲಿ ಸೇಡಂನಲ್ಲಿ ನಡೆದ ಭಾರತ ಸಂಸ್ಕೃತಿ ಉತ್ಸವದ ರಥ ಕೆಲವು ಜಿಲ್ಲೆಗಳಲ್ಲಿ ತಾಲೂಕು ಮಟ್ಟದಲ್ಲಿ ಸಂಚರಿಸಿತು. ಬೇರೆ ಬೇರೆ ಊರುಗಳಲ್ಲಿನ ಲಿಂಗಾಯತ ಮಠಗಳಿಂದಲೇ ಪ್ರಚಾರ ಕೆಲಸ ಶುರುಮಾಡಿತು. ಭಾಲ್ಕಿ ಶ್ರೀಗಳು, ಗಂಗಾಂಬಿಕೆ ಅಕ್ಕನಂತವರೂ ಇದರಲ್ಲಿ ಪಾಲ್ಗೊಂಡರು.

ನಮ್ಮ ಪರಂಪರೆಯ ಹೊರಗಿನವರು ತಮ್ಮ ಕಾರ್ಯಕ್ರಮಗಳಿಗೆ ನಮ್ಮ ಮಠಗಳ, ಗುರುಗಳ ನೆರವಿನಿಂದ ಪ್ರಚಾರ ಮಾಡುತ್ತಿದ್ದಾರೆ. ಕನಿಷ್ಠವಾಗಿ ನಾವೂ ಕೂಡ ಆ ಪ್ರಯತ್ನ ಮಾಡದಿದ್ದರೆ ನಮ್ಮ ಸಮುದಾಯದ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನಾವು ವಿಫಲವಾಗುತ್ತೇವೆ ಎಂದು ಅನಿಸುತ್ತದೆ.
ಕೂಡಲಸಂಗಮದಲ್ಲಿ ಬಸವ ಜಯಂತಿಯಂದು ನಡೆದ ಕರ್ನಾಟಕ ಸರಕಾರದ ಅನುಭವ ಮಂಟಪ ಕಾರ್ಯಕ್ರಮಕ್ಕೂ ಪ್ರಚಾರ ನೀಡಲು ಎರಡು ರಥಗಳು ರಾಜ್ಯವಿಡೀ ಸಂಚರಿಸಿದವು.
ಹಣ ಹಾಕಿ ರಥಗಳನ್ನು ಆಕರ್ಷಕವಾಗಿ ಸಿದ್ಧಪಡಿಸಿದರೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗಂಭೀರ ಪ್ರಯತ್ನ ನಡೆಯಲಿಲ್ಲ. ರಥಯಾತ್ರೆಯ ವೇಳಾಪಟ್ಟಿಯೇ ಲಭ್ಯವಿರಲ್ಲಿಲ್ಲ. ಅನೇಕ ಊರುಗಳಲ್ಲಿ ರಥ ಬಂದು ಹೋಗಿದ್ದೂ ಗೊತ್ತಾಗಲಿಲ್ಲ.
ಆದರೂ ಹೋದಲ್ಲೆಲ್ಲಾ ಬಸವ ಸಂಘಟನೆಗಳನ್ನು, ಕಾರ್ಯಕರ್ತರನ್ನು ಈ ರಥಗಳು ಆಯಸ್ಕಾಂತದಂತೆ ಸೆಳೆದವು. ಬಸವ ಭಕ್ತರು ತಾವಾಗಿಯೇ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ರಥ ಬರುವ ದಿನ ಕೇಳಿಕೊಂಡು ಅದು ಬರುವ ಸ್ಥಳದಲ್ಲಿ ಉತ್ಸಾಹದಿಂದ ನೆರೆದಿದ್ದರು.
ಬಸವ ಮೀಡಿಯಾ ಈ ಮುಂಚೆ ವರದಿ ಮಾಡಿದಂತೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಇಳಕಲ್, ಬಸವನ ಬಾಗೇವಾಡಿ, ಚಿಕ್ಕೋಡಿ, ಹುನಗುಂದ, ಮಹಾಲಿಂಗಪುರ , ಕೂಡಲಸಂಗಮ ಹೀಗೆ ಇನ್ನೂ ಅನೇಕ ಪಟ್ಟಣಗಳಲ್ಲಿ ಕೂಡಲ ಸಂಗಮದ ರಥಯಾತ್ರೆಗೆ ಸಂಭ್ರಮದ ಸ್ವಾಗತ ದೊರೆತು, ನೂರಾರು ಜನರಿದ್ದ ಮೆರವಣಿಗೆಗಳಲ್ಲಿ ಪಾಲ್ಗೊಂಡವು.
ಅನೇಕ ಕಡೆ ಬಸವ ಜಯಂತಿ ಕಾರ್ಯಕ್ರಮಗಳಲ್ಲಿಯೂ ರಥಗಳು ಯಶಸ್ವಿಯಾಗಿ ಬಳಕೆಯಾದವು.
ಅಭಿಯಾನ ಯಶಸ್ವಿಯಾಗಬೇಕಾದರೆ ಈ ಎಲ್ಲಾ ಅನುಭವಗಳ ಲಾಭವನ್ನು ನಾವು ಪಡೆದುಕೊಳ್ಳಬೇಕು. ಅಭಿಯಾನದ ಬಸವ ರಥವನ್ನು ಆದಷ್ಟು ಬೇಗ ಸಿದ್ದಪಡಿಸಿ ಒಂದು ದಕ್ಷ ಕಾರ್ಯಕ್ರಮ ರೂಪಿಸಿ ಪ್ರಚಾರಕ್ಕೆ ಕಳಿಸಬೇಕು.
ಬಸವ ರಥ ಅಭಿಯಾನದ ಪೂರ್ವಸಿದ್ಧತೆಯ ಕೇಂದ್ರಬಿಂದುವಾಗಲಿ.
ಸ್ಥಳೀಯ ಮಠಾಧೀಶರು ಜಾತಿ ಬೇಧ ಬಿಟ್ಟು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಠಾಧೀಶರ ಒಕ್ಕೂಟ ಮನವಿ ಮಾಡಬೇಕು
ನಾಗರಬಾವಿ ಬಸವ ಬಳಗ 1000 ಜನ ಸದಸ್ಯರಿದ್ದೇವೆ ಅಭಿಯಾನ ಯಶಸ್ವಿಯಾಗಲು ಕೈಜೋಡಿಸುತ್ತೇವೆ , ನಾವು ಏನು ಮಾಡಬೇಕು ಎಂಬ ವಿಚಾರವಾಗಿ ತಿಳಿಸಿ, ಶಿವನಗೌಡ. ಜಿ.ಪಾಟೀಲ್ ಅಧ್ಯಕ್ಷರು ನಾಗರಬಾವಿ ಬಸವ ಬಳಗ, 9900100238.
ಸಪ್ಟಂಬರ ತಿಂಗಳಲ್ಲಿ ಬರುವ ಬಸವ ರಥ ಆಯಾ ಸ್ಥಳಗಳಿಗೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ನೋಡಿಕೊಳ್ಳುಬೇಕು. ಏಕೆಂದರೆ ಕರ್ನಾಟಕ ಸರಕಾರದಿಂದ ಆಯೋಜಿಸಿದ ಅನುಭವ ಮಂಟಪ ರಥ ಬೀದರದಿಂದ ಕಲಬುರಗಿಗೆ ಮದ್ಯಾನ 1 ಗಂಟೆಗೆ ಬರುವುದೆಂದು ತಿಳಿಸಿದರು ನಂತರ 3 ಗಂಟೆಗೆ ನಂತರ 5 ಗಂಟೆಗೆ ನಂತರ ರಾತ್ರಿ 8 ಗಂಟೆಗೆ ಬರುವುದಾಗಿ ತಿಳಿಸಿದರು ಆದರೆ ಅದು ಬಂದದ್ದು ರಾತ್ರಿ ಸುಮಾರು 9 ಗಂಟೆಗೆ. ಸರಿಯಾದ ಮಾಹಿತಿ ಇಲ್ಲದ್ದರಿಂದ ಸಮಯಕ್ಕೆ ಸರಿಯಾಗಿ ಬಾರದಿರುವುದರಿಂದ ಬಹಳಷ್ಟು ಜನ ಭಾಗವಹಿಸುವದಾಗಲಿಲ್ಲ. ತಡವಾದುದಕ್ಕೆ ದಾರಿಯಲ್ಲಿ ಬರುವಾಗ ವಿಷಯ ತಿಳಿದ ಗ್ರಾಮಸ್ಥರು ಬರಮಾಡಿಕೊಳ್ಳುತ್ತಿದ್ದರೆಂದು ಹೇಳಿದರು. ಆದ್ದರಿಂದ ಸಂಘಟಕರು ಈ. ಸಮಯದ ಬಗ್ಗೆ ಗಮನಹರಿಸಬೇಕೆಂದು ವಿನಂತಿ.
ನಾಗರಭಾವಿ ಬಸವ ಬಳಗದ ಅಧ್ಯಕ್ಷರಿಗೆ ಶರಣು ಶರಣಾರ್ಥಿಗಳು , ತಾವು ಆಯೋಜಿಸಿದ ಹಲವಾರು ಕಾರ್ಯಕ್ರಮಗಳನ್ನು ನಾನು ನೋಡಿದ್ದೇನೆ ತುಂಬ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸುತ್ತೀರಿ , ಬೆಂಗಳೂರಿನಲ್ಲಿ ಎಲ್ಲ ಬಸವಾಭಿಮಾನಿಗಳನ್ನು ಒಂದು platform ಅಥವಾ ಒಂದೇ ವೇದಿಕೆಗೆ ತರುವ ಕೆಲಸವಾಗಬೇಕಾಗಿದೆ , ಅನೇಕ ಭಾಗಗಳಲ್ಲಿ ನಮಗೆ ಅಸ್ತಿತ್ವವೇ ಇಲ್ಲದಂತಾಗಿದೆ , ಈ ನಿಟ್ಟಿನಲ್ಲಿ ನಾಗರಭಾವಿ ಬಸವ ಬಳಗದಂತೆ ಬೆಂಗಳೂರಿನ ಕನಿಷ್ಟ ೨೫ ಭಾಗಗಳಲ್ಲಿ ಬಸವತತ್ವ ಪರ ಸಂಘಟನೆಯಾಗಬೇಕಾಗಿದೆ ತಮ್ಮ ಸಹಕಾರ ಮಾರ್ಗದರ್ಶನ ಇರಲಿ.