ಚಿತ್ರದುರ್ಗ
ಸೆಪ್ಟಂಬರ್ ತಿಂಗಳಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಕುರಿತು ಸುಧೀರ್ಘವಾಗಿ ಮಾತನಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಶನಿವಾರ ಕರೆಕೊಟ್ಟರು. ಇದಕ್ಕೆ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಪ್ಪಿಕೊಂಡರು.
ಮುರುಘರಾಜೇಂದ್ರ ಬ್ರಹನ್ಮಠದಲ್ಲಿ ಶನಿವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಉದ್ದೇಶಿಸಿ ಜಾಮದಾರ ಮಾತನಾಡಿದರು.

ಸಮ ಸಮಾಜದ ನಿರ್ಮಾಣ, ವ್ಯಸನ ಮುಕ್ತ ಸಮಾಜದ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸುವುದು, ಮಹಿಳೆಯರ ಘನತೆಯನ್ನು ಕಾಪಾಡುವುದು, ವ್ಯಕ್ತಿತ್ವ ವಿಕಸನ ಮುಂತಾದವುಗಳು ಅಭಿಯಾನದ ಆಶಯಗಳೆಂದು ವಿವರಿಸಿದರು.
ಅಭಿಯಾನದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ, ಅವರು ನೀಡಿದ ವಚನ ಸಂವಿಧಾನ ಬಗ್ಗೆ ತಿಳಿಸಲಾಗುವುದು ಎಂದು ಹೇಳಿ ಬಸವ ಸಂಸ್ಕೃತಿಯ ಅಭಿಯಾನದಲ್ಲಿ ಜಿಲ್ಲಾ ಸಮಿತಿಯ ಜವಾಬ್ದಾರಿಗಳನ್ನು ವಿವರಿಸಿದರು.

ಶರಣರ ಐತಿಹಾಸಿಕ ಸತ್ಯ ಮತ್ತು ನಿಲುವುಗಳು ಸಾರ್ವಜನಿಕರಿಗೆ, ಬಸವಾಭಿಮಾನಿಗಳಿಗೆ ಅರ್ಥೈಸುವ ಅನಿವಾರ್ಯತೆ ಇದೆ ಎಂದು ಹೇಳಿ ವಚನ ದರ್ಶನ, ಮಿಥ್ಯ ವರ್ಸಸ್ ಸತ್ಯ ಪುಸ್ತಕ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಮುಂದೆ ನಡೆಸಲಿರುವ ಜಾತಿ ಮರು ಜನಗಣತಿಯ ಬಗ್ಗೆ ಚರ್ಚಿಸಿದ ಜಾಮದಾರ್, ಈ ನಡುವೆ ಸಭಿಕರಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಸಕ್ತ ಸಾಲಿನಲ್ಲಿ ವಾರ್ಷಿಕ ವಿಶೇಷ ಮಹಾ ಸಮ್ಮೇಳನ ಒಂದು ಕಡೆ ಏರ್ಪಡಿಸಬೇಕು, ಅಲ್ಲಿ ನಿಜಾಚರಣೆಗಳ ವಿಧಿ ವಿಧಾನಗಳ ತರಬೇತಿ ನೀಡಬೇಕು, ಇದರೊಂದಿಗೆ ಎಲ್ಲ ಪಂಗಡಗಳ ಒಳಪಂಗಡಗಳ ವಧು ವರರ ಸಮ್ಮೇಳನ ಆದರೆ ಒಳಿತು ಎಂದು ಹೇಳಿದರು.

ಸಭೆಯ ಸಾನಿಧ್ಯವನ್ನು ವಹಿಸಿದ್ದ ಸಾಣೇಹಳ್ಳಿಯ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ‘ಬಸವ ಸಾಂಸ್ಕೃತಿಕ ಅಭಿಯಾನ’ದ ಸಿದ್ದತೆಯ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ನ್ಯಾಯಾಧೀಶ ಎನ್. ಕೆಂಪೇಗೌಡರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಪ್ರಭುಚನ್ನಬಸವ ಮಹಾಸ್ವಾಮಿಗಳು, ಪೂಜ್ಯ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿದರು. ಸಭೆಯಲ್ಲಿ ಬಸವಪ್ರಭು ಸ್ವಾಮೀಜಿ ದಾವಣಗೆರೆ, ಗುರುಮಿಟ್ಕಲ್, ಕಲಬುರಗಿ ಪೂಜ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ‘ವಚನದರ್ಶನ ಮಿಥ್ಯ – ಸತ್ಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉಳಿದ ಜಿಲ್ಲೆಗಳಲ್ಲಿ ಕೂಡ ಶೀಘ್ರವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಕರ್ನಾಟಕ ಸರ್ಕಾರವು ಮುಂದಿನ ಮೂರು ತಿಂಗಳಲ್ಲಿ ನಡೆಸಲಿರುವ ಜಾತಿ ಮರುಗಣತಿಯ ಕುರಿತು ತೆಗೆದುಕೊಳ್ಳಬೇಕಾದ ಜಾಗೃತಿ ಕ್ರಮಗಳು ಮತ್ತು
ಕೇಂದ್ರ ಸರಕಾರದಿಂದ 2026-27ರಲ್ಲಿ ನಡೆಯಲಿರುವ ಜಾತಿಗಣತಿಯ ಬಗ್ಗೆ ಲಿಂಗಾಯತರಲ್ಲಿ ತಿಳುವಳಿಕೆ ಮೂಡಿಸುವ ಕ್ರಮಗಳನ್ನು ಚರ್ಚಿಸಲಾಯಿತು.

ವಚನ ಟಿ.ವಿ.ಯ ಪ್ರೊ. ಸಿದ್ದು ಯಾಪಲಪರವಿ ಅವರನ್ನು ಮಹಾಸಭಾದ ಮಾಧ್ಯಮ ವಿಭಾಗದ ಪ್ರಧಾನ ಸಂಚಾಲಕರನ್ನಾಗಿ ನೇಮಿಸಲು ನಿರ್ಣಯ ಕೈಕೊಳ್ಳಲಾಯಿತು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜ ರೊಟ್ಟಿ, ಉಪಾಧ್ಯಕ್ಷರುಗಳಾದ ಎಸ್. ಮಹಾದೇವಪ್ಪ, ಬಸವರಾಜ ಧನ್ನೂರ, ಮಹಾರಾಷ್ಟ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಣಜೆ, ಜಿ.ವಿ. ಕೊಂಗವಾಡ, ಪರಮೇಶ್ವರ ಕಾಗಿನೆಲೆ, ಡಾ. ಜೆ.ಎಸ್. ಪಾಟೀಲ, ಸವಿತಾ ನಡಕಟ್ಟಿ, ನಳಿನಿ ಮಹಾಗಾಂವಕರ, ಪ್ರಭುಲಿಂಗ ಮಹಾಗಾಂವಕರ, ಶೈಲಜಾ ಬಾಬು, ಅಶೋಕ ಮಳಗಲಿ, ಮುರಿಗೆಪ್ಪ ಬಾಳಿ, ಚಂದ್ರಶೇಖರ ಗುಡಸಿ, ಬಸನಗೌಡ ಹರನಾಳ, ಪಿ. ರುದ್ರಪ್ಪ, ಸುಮಂಗಲಾ ಸಕ್ರಿ, ಗಂಗಾಧರಪ್ಪ, ರುದ್ರಮುನಿ ಆವರಗೆರೆ, ಬಸವರಾಜ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.