ಯಾರನ್ನೂ ಟೀಕಿಸದೆ, ಹೀಯಾಳಿಸದೆ, ನೋಯಿಸದೆ ಅಭಿಯಾನ ನಡೆಯಲಿ

ಸರ್ವ ಧರ್ಮಗಳ ವೇದಿಕೆಯಾಗಲಿ, ವಚನಗಳ ಮಹತ್ವ, ಅವುಗಳ ಓದಿನ ಲಾಭ ತಿಳಿಸಿ

ಕಲಬುರಗಿ

ಬಸವ ರೇಡಿಯೋದ ಸಹಭಾಗಿತ್ವದಲ್ಲಿ “ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಹಿಳೆಯರ ಪಾತ್ರ” ಎನ್ನುವ ವಿಷಯವನ್ನಿಟ್ಟುಕೊಂಡು ವಾರಪೂರ್ತಿ ಸಂವಾದ, ಚರ್ಚೆ ನಡೆಯುತ್ತಿದೆ. ಅತಿಥಿ ಸಂಪಾದಕರಾದ ಡಾ. ಸರ್ವಮಂಗಳಾ ಸಕ್ರಿ, ಸೋಮಶೇಖರಪ್ಪ ಹಿರಿಯೂರು, ನಾಗರತ್ನ ಮುಂತಾದವರು ಮನಸೆಳೆಯುವಂತೆ ಗೂಗಲ್ ಮೀಟ್ ಮೂಲಕ ನಡೆಸುತ್ತಿರುವುದು ಸಂತೋಷದ ವಿಷಯ.

ಅಭಿಯಾನದ ಅಗತ್ಯ

ಇಂದು ವಿಜ್ಞಾನ, ತಂತ್ರಜ್ಞಾನ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಮನುಷ್ಯ ತಂತ್ರಜ್ಞಾನದ ಅಡಿಯಾಳಗಿದ್ದಾನೆ. ಇಂಥ ಸಂದರ್ಭದಲ್ಲಿ ಹಳೆಯ ಸಾಮಾಜಿಕ ಪಿಡುಗುಗಳು ಹಾಗೆಯೇ ಮುಂದುವರಿದಿದೆ. ಮೋಸ, ವಂಚನೆ, ಭ್ರಷ್ಟಾಚಾರ, ಮಹಿಳಾ ಶೋಷಣೆ, ಅತ್ಯಾಚಾರ, ಇತ್ಯಾದಿ ನಡೆಯುತ್ತಲೇ ಸಾಗಿದೆ. ಇವುಗಳ ಮದ್ಯದಲ್ಲೇ ನಾಗರಿಕ ಸಮಾಜ ಮುಂದುವರಿದೆ.

ಹಿಂದೆ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಬದುಕಿದ ರೀತಿ ಇಂದಿಗೂ ಆದರ್ಶ. ಪ್ರಸ್ತುತ ಅಣ್ಣ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಈ ಲಿಂಗಾಯತ ಧರ್ಮದ ಆಳ, ಅಗಲ ಇನ್ನಷ್ಟು ಮಾನ್ಯತೆ ಪಡೆಯುತ್ತದೆ. ಹಾಗಾಗಿ ಜನರ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಉನ್ನತೀಕರಣಕ್ಕಾಗಿ ಶರಣರು ಕಟ್ಟಿ ಕೊಟ್ಟ ವಚನ ಸಾಹಿತ್ಯ ಮಾದರಿಯಾಗಿದೆ. ಅದಕ್ಕಾಗಿ ಈ ಅಭಿಯಾನ ಇಂದಿನ ಅಗತ್ಯ ಅಷ್ಟೇ ಅಲ್ಲ ಈ ಕ್ಷಣದ ತುರ್ತು ಎಂದು ಹೇಳಬಹುದು.

ಇದನ್ನು ಒಂದು ಉದಾಹರಣೆಯ ಮೂಲಕ ಹೇಳಿದರೆ ಇನ್ನೂ ಸ್ಪಷ್ಟವಾಗುತ್ತದೆ. ಇತ್ತೀಚೆಗೆ “ಹಿಂದುಳಿದ ಜಾತಿಗಳ ಒಕ್ಕೂಟ, ಜಿಲ್ಲಾ ಶಾಖೆ ಬೀದರ” ನಲ್ಲಿ ಬಸವ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಉಪನ್ಯಾಸ ನೀಡಲು ಹೋಗಿದ್ದೆ. ಆಗ ನಾನು, ‘ಹಿಂದುಳಿದ ಜಾತಿಗಳ ಒಕ್ಕೂಟ ಎಂದು ಹೇಳುವ ಬದಲು ವಿವಿಧ ಕಾಯಕಗಳ ಒಕ್ಕೂಟ ಎಂದು ಹೇಳುತ್ತೇನೆ’ ಎಂದೆ. ಎಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಿದರು. ಹನ್ನೆರಡನೇ ಶತಮಾನದಲ್ಲಿ ಅಣ್ಣ ಬಸವಣ್ಣ ಮತ್ತು ಇತರ ಶರಣರು ಜಾತಿ ನಿರ್ಮೂಲನೆ ಮಾಡಿದರೂ, ಇಂದು ನಾವು ಅದೇ ಜಾತಿ ಪದ್ಧತಿಗೇ ಅಂಟಿಕೊಂಡಿದ್ದೇವೆ. ಇದರ ನಿವಾರಣೆ ಆಗಬೇಕಾದರೆ ಜನರಲ್ಲಿ ಮತ್ತೆ ಜಾಗೃತಿ ಮೂಡಿಸಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಈ ಅಭಿಯಾನ ಅಗತ್ಯವಾಗಿದೆ.

ಸ್ವರೂಪ

ಸ್ವರೂಪ ಹೇಗಿರಬೇಕೆಂದರೆ ‘ಸರ್ವ ಧರ್ಮಗಳ ಸಮನ್ವಯ’ ಎನ್ನುವ ರೀತಿಯಲ್ಲಿ ಎಲ್ಲಾ ಧರ್ಮದವರು ಒಂದುಗೂಡಬೇಕು. ಇದು ಈ ಅಭಿಯಾನಕ್ಕೆ ಭದ್ರ ಬುನಾದಿಯಾಗುವುದರಲ್ಲಿ ಸಂಶಯವಿಲ್ಲ.

ನಮ್ಮ ತಂದೆ ಬಿ.ಜಿ. ಸಿದ್‌ಬಟ್ಟೆಯವರು, “ಅಣ್ಣ ಬಸವಣ್ಣನವರು, ‘ವಿಶ್ವವೇ ನನ್ನ ಮನೆ, ಮಾನವ ಜನಾಂಗವೇ ನನ್ನ ಕುಟುಂಬ’ ಎನ್ನುವ ರೀತಿಯಲ್ಲಿ ಬದುಕಿದವರು” ಎಂದು ಹೇಳುತ್ತಿದ್ದರು. ಹಾಗಾಗಿ ಈ ಅಭಿಯಾನದಲ್ಲಿ ಎಲ್ಲಾ ಜಾತಿ, ಮತ, ಧರ್ಮದವರನ್ನು ಒಳಗೊಂಡು, ಯಾರನ್ನೂ ಟೀಕಿಸದೆ, ಹೀಯಾಳಿಸದೆ, ನೋಯಿಸದೆ, ವಿಮರ್ಶಿಸದೆ, ಕೇವಲ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಒಂದು ಸ್ವರೂಪ ನೀಡುವುದು ಅವಶ್ಯಕ. ಆಗ ‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ, ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದಿಸಯ್ಯ’ ವಚನವು ಸಾರ್ಥಕತೆಯನ್ನು ಪಡೆಯುತ್ತದೆ.

ಕಾರ್ಯಕ್ರಮಗಳು ಹೇಗಿರಬೇಕು?

ಇದುವರೆಗೆ ಎಲ್ಲರೂ ತಮ್ಮ ಉಪನ್ಯಾಸದಲ್ಲಿ ಕಾರ್ಯಕ್ರಮ ಏನೇನು ಒಳಗೊಂಡಿರಬೇಕು ಎನ್ನುವುದನ್ನು ಹೇಳಿದ್ದಾರೆ. ಉಪನ್ಯಾಸ, ಸಂವಾದ, ಚರ್ಚೆ, ಸಂಗೀತ, ನೃತ್ಯ, ನಾಟಕ, ರೂಪಕ ಇತ್ಯಾದಿ ಇರಲಿ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಅವುಗಳಲ್ಲಿ ಈ ಕೆಳಗಿನ ಅಂಶಗಳು ಇರುವಂತೆ ಗಮನಿಸಬೇಕಾಗಿದೆ.

  • ವೈಜ್ಞಾನಿಕ ದೃಷ್ಟಿಕೋನದಿಂದ ಶರಣರ ತತ್ವಗಳು ಮತ್ತು ವಚನ ಸಾಹಿತ್ಯವನ್ನು ನೋಡುವ ಕ್ರಮ ರೂಢಿಸಬೇಕು.
  • ಲಿಂಗಪೂಜೆಯನ್ನು ಸರಳವಾಗಿ ಮಾಡುವ ವಿಧಾನವನ್ನು ಮಠಾಧೀಶರ ಮೂಲಕ ತಿಳಿಸಿ ಕೊಡಬೇಕು.
  • ಅಷ್ಟಾವರಣ, ಪಂಚಾಚಾರ, ಷಟಸ್ಥಲ ಇವುಗಳನ್ನು ಸರಳೀಕರಿಸಿ ಜನ ಸಾಮಾನ್ಯರಿಗೆ ತಿಳಿಸುವ ಮಾರ್ಗ ಕಂಡುಕೊಳ್ಳಬೇಕಾಗಿದೆ. ಇತ್ತೀಚೆಗೆ ಈ ಕುರಿತು ಸಾಣೇಹಳ್ಳಿ ಶ್ರೀಗಳು ಪೂಜ್ಯ ಪಂಡಿತಾರಾಧ್ಯರು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.
  • ವಚನ ಸಾಹಿತ್ಯದ ಮಹತ್ವವನ್ನು ಮತ್ತು ಅದರಿಂದಾಗುವ ಲಾಭಗಳನ್ನು ತಿಳಿಸಿಕೊಡಬೇಕು.
    ವಚನಗಳ ನಿಜಾರ್ಥವನ್ನು ತಿಳಿಸಲು ಸಾಮಾಜಿಕ ಜಾಲತಾಣಗಳ ಬಳಸುವುದು.
  • ಶರಣರು ಬದುಕಿದ ರೀತಿಯನ್ನು ಅನುಕರಿಸಿ, ನಾವು ಜನ ಸಾಮಾನ್ಯರು ನಮ್ಮ ಬದುಕಿನಲ್ಲಿ ನಡೆ-ನುಡಿ ಸಮನ್ವಯಗೊಳಿಸುವ ರೀತಿಯನ್ನು ಕಲಿಸಬೇಕು.
  • ಜೀವನ ಕೌಶಲ್ಯ ತರಬೇತಿ (Life Skill Training) ಅಥವಾ ವ್ಯಕ್ತಿತ್ವ ವಿಕಾಸ ಶಿಬಿರ (Personality Development Workshop).

ನಾನು ಇತ್ತೀಚೆಗೆ ಬೆಂಗಳೂರಿನ ಶಂಪಾ ಪ್ರತಿಷ್ಟಾನದಲ್ಲಿ ‘ಅಕ್ಕಮಹಾದೇವಿಯ ಅಂತರಂಗ ಪಯಣ ಮತ್ತು ಅಧ್ಯಾತ್ಮ’ ವಿಷಯವನ್ನು ಈ ಹಿನ್ನೆಲೆಯಲ್ಲೇ ಮಾತನಾಡಿದಾಗ, ಅದು ಬಹಳ ಪ್ರಭಾವಶಾಲಿಯಾಗಿ ಮೂಡಿ ಬಂತು. ಅದಕ್ಕಾಗಿ ಆಧುನಿಕವಾದ ಜ್ಞಾನಶಾಖೆಯ ಮೂಲಕವೂ ವಚನ ಸಾಹಿತ್ಯವನ್ನು ಬಳಸಿ ಹೇಳಿದರೆ, ಯುವ ಜನತೆಯನ್ನು ಆಕರ್ಷಿಸಲು ಸಾಧ್ಯ.

ಪೂರ್ವಸಿದ್ಧತೆ

ಪೂರ್ವ ಸಿದ್ಧತೆಗೆ ಪ್ರತಿ ಜಿಲ್ಲೆಯಲ್ಲಿ ಸಮಿತಿಯೊಂದನ್ನು ರಚಿಸಬೇಕು. ಆ ಸಮಿತಿಯು ಆಯಾ ಜಿಲ್ಲೆಯಲ್ಲಿರುವ ವಿವಿಧ ಧರ್ಮಗಳ ಮುಖಂಡರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದು.

ಸಂಪನ್ಮೂಲ ವ್ಯಕ್ತಿಗಳಿಗೆ ವಚನ ಸಾಹಿತ್ಯದ ವಿವಿಧ ಆಯಾಮಗಳ ವಿಷಯಗಳು ಒಳಗೊಳ್ಳುವಂತೆ ವಿಷಯ ಆಯ್ಕೆ ಮಾಡುವುದು. ಶಾಲೆ, ಕಾಲೇಜು, ಬಸವಾಭಿಮಾನದ ಬಳಗಗಳ ಮೂಲಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಾಲೂಕು ಮತ್ತು ಜಿಲ್ಲೆಯ ಮಟ್ಟದಲ್ಲಿ ಹಾಕಿಕೊಳ್ಳುವುದು.

ಅಭಿಯಾನದಲ್ಲಿ ಮಹಿಳೆಯರಿಗೆ ಮುನ್ನೆಲೆಗೆ ತರುವುದು ಹೇಗೆ?

ಇಂದಿನ ಆಧುನಿಕ ಕುಟುಂಬ ಮತ್ತು ಅಲ್ಲಿಯ ಮಹಿಳೆಯ ಜವಾಬ್ದಾರಿಗಳು ಭಿನ್ನವಾಗಿವೆ.

  • ಉದ್ಯೋಗಸ್ಥ ಮಹಿಳೆ (ಸೂಪರ್ momಗಳು)
  • ತಾಯಿ ಸ್ಥಾನ ನಿಭಾಯಿಸುತ್ತಿರುವ ಮಹಿಳೆ (ಮನೆಗೆಲಸ ಮುಗಿದ ನಂತರ ಟಿವಿ ಅಥವಾ ಮೊಬೈಲ್ ದಾಸರು)

ಈ ಎರಡೂ ವರ್ಗದ ಮಹಿಳೆಯರು ಮನಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು. ಅದಕ್ಕೆ ಬೇಕಾಗಿರುವುದು ಒಂದಿಷ್ಟು ಓದಿನಲ್ಲಿ ಆಸಕ್ತಿ, ಬರಹದಲ್ಲಿ ತೊಡಗಿಸಿಕೊಳ್ಳುವ ಮನಸು. ಓದು, ಬರಹ ಇಲ್ಲದವರು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೇಳುವುದು, ವೀಕ್ಷಿಸುವುದು.

ಅನೇಕ ಮಹಿಳೆಯರು ಅಕ್ಕನ ಬಳಗ, ಕದಳಿ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕ, ಬಸವ ಸಮಿತಿ, ಮುಂತಾದ ಸಂಘ, ಸಂಸ್ಥೆಗಳ ಒಡನಾಟವಿದ್ದವರು, ತಮ್ಮೊಳಗಿನ ಪ್ರತಿಭೆಯನ್ನು ತಾವೇ ಗುರುತಿಸಿಕೊಂಡು, ತಾವು ಯಾವುದಕ್ಕೆ ಅರ್ಹರು ಎನ್ನುವುದನ್ನು ವೈಯಕ್ತಿಕವಾಗಿ ತಾವೇ ಮಹಿಳೆಯರು ನಿರ್ಧರಿಸಬೇಕು. ಸ್ವಯಂ ಇಚ್ಛೆಯಿಂದ ಅಭಿಯಾನದಲ್ಲಿ ಭಾಗಿಯಾಗಲು ಮುಂದೆ ಬರಬೇಕು.

ಮಹಿಳೆಯರು ನಾಯಕತ್ವ ನಿಭಾಯಿಸುವುದು ಹೇಗೆ? ಇದೊಂದು ಸವಾಲು.

ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಶರಣರ ತತ್ವ, ಚಿಂತನೆ, ವಚನಗಳ ಪ್ರಭಾವ ತೀರಾ ವಿರಳ. ಹೆಚ್ಚಿನ ಸಂಖ್ಯೆಯ ಪರಿವಾರಗಳಲ್ಲಿ ತಂದೆ ಮನೆಗೆ ಹಿರಿಯ, ಯಜಮಾನ, ಅವನೇ ಎಲ್ಲಾ ನಿರ್ಣಯಗಳಿಗೆ ತೆಗೆದುಕೊಳ್ಳುತ್ತಾನೆ. ಕೆಲವು ಸುಶಿಕ್ಷಿತ, ಪ್ರಜ್ಞಾವಂತ ಮಹಿಳೆಯರನ್ನು ಹೊರತುಪಡಿಸಿದರೆ, ಎಲ್ಲರ ಮನೆಯೂ ಪಿತೃ ಪ್ರಧಾನವಾಗಿದೆ. ಆದರೆ ಅಕ್ಕಮಹಾದೇವಿಯ ಈ ವಚನವನ್ನು ತಿಳಿದು, ಅರಿತು ಬಾಳಿದರೆ ಸಂಸಾರ ಸುಖಮಯವಾಗುತ್ತದೆ.

“ಗಂಡ ಮನೆಗೆ ಒಡೆಯನಲ್ಲ
ಹೆಂಡತಿ ಮನೆಗೆ ಒಡತಿಯೇ? ಒಡತಿಯಲ್ಲ
ಗಂಡಹೆಂಡಿರ ಸಂಬಂಧವಿಲ್ಲಯ್ಯಾ
ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ
ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು”

“ಶರಣಸತಿ ಲಿಂಗಪತಿ” ಭಾವ ಈ ವಚನದಲ್ಲಿದೆ. ಪ್ರತಿಯೊಂದು ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಈ ಒಳಾರ್ಥವನ್ನು ಅರಿತರೆ ಸಂಸಾರ ಸುಖಕರವಾಗುತ್ತದೆ.

ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಮನೆಯೇ ಮೊದಲಾಗಬೇಕು. ಆಗ ಅವಳು ನಿರ್ಭಯವಾಗಿ ಸಾಮಾಜಿಕ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯ. ಹಾಗೆಯೇ ಈ ಅಭಿಯಾನದಲ್ಲೂ ಪ್ರಜ್ಞಾಪೂರ್ವಕವಾಗಿ ತಮಗೆ ವಹಿಸಿದ ಕರ್ತವ್ಯಗಳನ್ನು ತಮ್ಮ ಜಿಲ್ಲೆಯ ಮಟ್ಟದಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ.

ಅಭಿಯಾನದಲ್ಲಿ ನಿಜಾರ್ಥದ ಭಾಗವಹಿಸುವಿಕೆ ಹೇಗಿರಬೇಕು?

ಅನೇಕ ಸಂಘ, ಸಂಸ್ಥೆಗಳ ಮಹಿಳೆಯರ ನಿಸ್ವಾರ್ಥ, ನಿಸ್ಪೃಹ ಮನಸಿನ ಸೇವೆಯನ್ನು ಈ ‘ಬಸವ ಸಂಸ್ಕೃತಿ ಅಭಿಯಾನ’ ಬಯಸುತ್ತದೆ. ಈ ವಿಷಯವನ್ನು ಶರಣ ಗಜೇಶ ಮಸಣಯ್ಯನ ವಚನದಿಂದ ತಿಳಿಯಬಹುದು.

“ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು,
ಮಹಾಲಿಂಗ ಗಜೇಶ್ವರದೇವಾ,
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ”

ಯಾವುದೇ ಪದವಿಯ ಆಸೆಗೆ ಅಂಟಿಕೊಳ್ಳದೆ, ನಮಗೆ ಸಾಧ್ಯವಾಗುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಗಜೇಶ ಮಸಣಯ್ಯ ಹೇಳುವಂತೆ “ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು” ಎನ್ನುವ ರೀತಿಯಲ್ಲಿ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಅಭಿಮಾನದಿಂದ ಭಾಗಿಯಾದರೆ ಯಶಸ್ಸು ಖಂಡಿತ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
2 Comments
  • ಒಳ್ಳೆಯ ಮತ್ತು ಉಪಯುಕ್ತ ಅಭಿಪ್ರಾಯ. ಇಂತಹ ಅಭಿಪ್ರಾಯಗಳನ್ನು ಮಠಾಧೀಶರ ಒಕ್ಕೂಟ ಅಭಿಯಾನದ ಉಪನ್ಯಾಸಕರ ಮಾರ್ಗದರ್ಶಿ ಪಟ್ಟಿಯಲ್ಲಿ ಸೇರಿಸಿಕೊಳ್ಳಲೀ.

  • ಒಳ್ಳೆಯ ಹಾಗೂ ಪ್ರಸ್ತುತ, ನಿಮ್ಮ ಅಭಿಪ್ರಾಯ ಗಳಿಗೆ ಶರಣು ಶರಣಾರ್ಥಿಗಳು💐🙏

Leave a Reply

Your email address will not be published. Required fields are marked *