ಮಾನ್ವಿ
ಕರ್ನಾಟಕದ ಉದ್ದಗಲಕ್ಕೂ ಸಂಚರಿಸಲಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮನಪೂರ್ವಕವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾನ್ವಿಯ ಚಿಕಲ್ಪರಿವಿಯ ಶ್ರೀ ರುದ್ರಮುನೇಶ್ವರ ಮಠದ ಪೂಜ್ಯ ಸದಾಶಿವ ಸ್ವಾಮೀಜಿ ಅವರು ಭಕ್ತರಿಗೆ ಕೋರಿದರು.
ಮಾನ್ವಿ ಪಟ್ಟಣದಲ್ಲಿ ರವಿವಾರ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಸೆಪ್ಟೆಂಬರ್ 5 ರಂದು ರಾಯಚೂರಿಗೆ ಅಭಿಯಾನ ಬರಲಿದೆ. ಅಂದು ಇಡೀ ದಿವಸ ಎಲ್ಲಾ ಕಾರ್ಯಕ್ರಮಗಳಲ್ಲಿ ಮನಪೂರ್ವಕವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು, ಇದು ನಮ್ಮ ಆತ್ಮೀಯತೆಯ ಪ್ರಶ್ನೆ. ಬಸವಾದಿ ಶರಣರ ಪರಂಪರೆಯವರಾದ ನಾವು ಅವರ ವಿಚಾರಗಳನ್ನು ವಿಶ್ವದ ಉದ್ದಕ್ಕೂ ಪಸರಿಸುವ ಕೆಲಸ ಮಾಡಬೇಕಿದೆ. ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ. ನಮ್ಮ ಉತ್ಸಾಹ ಅಭಿಯಾನಕ್ಕೆ ಮಾತ್ರ ಸೀಮಿತವಾಗಬಾರದು, ಮುಂದೆಯೂ ನಿರಂತರವಾಗಿ ಬಸವಾದಿ ಶರಣರ ಆಶಯಗಳ ಜೊತೆಗೆ ನಡೆಯಬೇಕು.

ಅಕ್ಟೋಬರ್ 5 ರಂದು ಬೆಂಗಳೂರಿನಲ್ಲಿ ಜರುಗುವ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವಭಕ್ತರು ಪಾಲ್ಗೊಳ್ಳಬೇಕು, ಅದಕ್ಕೆ ಈಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಬಿ. ಪಾಟೀಲ ಬೆಟ್ಟದೂರು, ಬಸವಾದಿ ಶರಣರ ಸಮಗ್ರ ಕ್ರಾಂತಿಯಲ್ಲಿ ಧರ್ಮ ಒಂದು ಭಾಗವಷ್ಟೇ, ಅದರ ಹೊರತಾಗಿ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಬೇಕಿದೆ. ನಾವು ಜಾತಿ ಉಪಜಾತಿಯ ಮಿತಿಗಳನ್ನು ದಾಟಿ ಬಸವಾದಿ ಶರಣರ ವಿಚಾರಗಳಿಗಾಗಿ ಒಂದಾಗುವ ತುರ್ತು ಅಗತ್ಯವಿದೆ ಎಂದರು.
ಸಭೆಯಲ್ಲಿ ಅಮರೇಶ್ವರಿ ಮಲ್ಲಿಕಾರ್ಜುನ, ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ, ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಹರಿಹರ ಪಾಟೀಲ, ಬಸವ ಕೇಂದ್ರದ ಜಿ.ಎಂ. ರಂಗಪ್ಪ, ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ, ನಾಗರತ್ನಮ್ಮ ಪಾಟೀಲ, ತಿಮ್ಮಾರೆಡ್ಡಿ ಭೋಗಾವತಿ, ಡಾ. ಶರಣಪ್ಪ, ಮಲ್ಲನಗೌಡ ನಕ್ಕುಂದಿ, ಶರಣಬಸವ ನೀರಮಾನ್ವಿ, ನಾಗರಾಜ ಬಳೆಗಾರ, ದೇವೇಂದ್ರ ದುರ್ಗದ ಮತ್ತಿತರರು ಇದ್ದರು.