ಸಮಾಜದ ಎಲ್ಲಾ ವರ್ಗಗಳಲ್ಲಿ ಅಭಿಯಾನ ಜಾಗೃತಿ ಮೂಡಿಸಬೇಕು
ಗದಗ
ಎಂತವನಾದಡೇನು ಲಿಂಗವ ಮುಟ್ಟಿದವನೆ ಕೀಳುಜಾತಿ
ಕುಲವಹುದು ತಪ್ಪದು ಲಿಂಗ ಮುಟ್ಟಲೋಡನೆ
ಹೊನ್ನಹುದು ತಪ್ಪದು ಪರುಷ ಮುಟ್ಟಲೋಡನೆ
ಕೂಡಲಸಂಗಮದೇವನೊಲ್ಲ ಸರ್ವಸಂದೇಹಿಗಳ
ನಮ್ಮ ಜನರು ಮಠ ಮತ್ತು ಸ್ವಾಮಿಗಳಲ್ಲಿ ಅಪಾರ ನಂಬಿಕೆ ಗೌರವ ಇಟ್ಟುಕೊಂಡಿರುವುದರಿಂದ ಶಂಖದಿಂದ ಬಂದದ್ದು ತೀರ್ಥ ಎನ್ನುವಂತೆ ಬಸವ ಸಂಸ್ಕೃತಿ ಗಟ್ಟಿಯಾಗಿಸಲು ಮಠಾಧೀಶರ ಒಕ್ಕೂಟದಿಂದಲೇ ಸಾಧ್ಯ.
ಅಭಿಯಾನದ ಉದ್ದೇಶ
ಬಸವ ಸಂಸ್ಕೃತಿ ಅಭಿಯಾನ ಜನಸಾಮಾನ್ಯರಲ್ಲಿ ಅಂಟಿಕೊಂಡಿರುವ ಮೌಢ್ಯಾಚರಣೆಯನ್ನು ನಿವಾರಿಸಲಿ. ಗುಡಿಗುಂಡಾರಗಳ ಸೃಷ್ಠಿ ಮಾಡಿ ಜೋತಿಷ್ಯದ ಭಯೋತ್ಪಾದಕರು ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮುಗ್ಧ ಜನರಂತೂ ಇವರಿಗೆ ಬಲಿಪಶು ಆಗುತ್ತಾ ಇದ್ದಾರೆ. ಇಲ್ಲಿ ಶರಣ ಸಂಸ್ಕೃತಿ ಅರಿವು ಮೂಡಿಸಿ ಹಣದ, ಸಮಯದ ಅಪವ್ಯಯ, ತಪ್ಪಿಸಬೇಕು. ಮುಖ್ಯವಾಗಿ ಸ್ತ್ರೀಯರಲ್ಲಿ ಬಸವ ಸಂಸ್ಕೃತಿಯ ಪ್ರಜ್ಞೆ ಗಟ್ಟಿಗೊಳಿಸಬೇಕು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಭಯವಿದ್ದು ಕಲ್ಲು ದೇವರ ಮುಂದೆ ನಿಂತು ತಮ್ಮಲ್ಲಿಯ ಭಯ ವ್ಯಕ್ತಪಡಿಸುವುದು ವ್ಯರ್ಥ ಪ್ರಯತ್ನವೆಂಬುದನ್ನು ತಿಳಿಸಬೇಕು. ಈ ಅಭಿಯಾನದಿಂದ ಅವರಲ್ಲಿರುವ ಭಯ ನಿವಾರಣೆ ಮಾಡಿ ಯುವಶಕ್ತಿಯನ್ನು ಜಾಗೃತಗೊಳಿಸಲು ಸಾಧ್ಯ.
ದೊಡ್ಡವರೆನಿಸಿಕೊಳ್ಳುವವರು ಸಂಪ್ರದಾಯ, ಸುಳ್ಳು ಪರಂಪರೆಗಳನ್ನು ನಿರಾಕರಿಸುವಲ್ಲಿ ಗಣಾಚಾರಿಗಳಾಗಬೇಕು.
ಬೇರೆ ಬೇರೆ ಧರ್ಮಗಳಿಗಿಂತ ಲಿಂಗಾಯತ ಧರ್ಮ ಹೇಗೆ ಭಿನ್ನವಾಗಿದೆ ಎಂಬುದನ್ನು ಮನೆ ಮನೆಗೆ ಮುಟ್ಟಿಸುವ ಮೂಲಕ ಮನೆ ಮಹಾಮನೆಗಳನ್ನಾಗಿ ಮಾಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಮಕ್ಕಳೆಲ್ಲಾ ಪಾಲಕರನ್ನು ಅನುಕರಣೆ ಮಾಡುವಂತಾಗಬೇಕು.
- ಇಂದಿನ ಯುವಶಕ್ತಿ ಮೊಬೈಲ್ ಹಾವಳಿಯಿಂದ ಜೀವನವನ್ನು ಬರ್ಬರ ಮಾಡಿಕೊಳ್ಳುತ್ತಿದ್ದಾರೆ. ಜಾತಿ, ಲಿಂಗ, ಧರ್ಮ ತಾರತಮ್ಯವಿಲ್ಲದೆ ಜನಸಾಮಾನ್ಯ ಮಹಿಳೆಯರೂ ಇದಕ್ಕೆ ಬಲಿಯಾಗುತ್ತಿದ್ದಾರೆ.
ಇವರಿಗೆ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ನಡೆಸಿ, ಇದರ ವೈಜ್ಞಾನಿಕ ಪ್ರಯೋಜನಗಳಾದ ಕಾಸ್ಮಿಕ್ ಎನರ್ಜಿ, ಮೆಲಾಟಿನ್ ರಸ ಬಿಡುಗಡೆ, ಏಕಾಗ್ರತೆ, ಸ್ಮರಣ ಶಕ್ತಿ, ರೋಗನಿರೋಧಕ ಶಕ್ತಿ ವೃದ್ಧಿ ತಿಳಿಸಿ ಮಕ್ಕಳನ್ನು ಮೊಬೈಲ್ ಹಾವಳಿಯಿಂದ ಪಾರು ಮಾಡಬೇಕು.
- ಸಣ್ಣ ಸಣ್ಣ ಮಕ್ಕಳು ಸಂಸ್ಕೃತ ವೇದ ಶ್ಲೋಕ ಹೇಳಿ ಗಿನ್ನಿಸ್ ರೆಕಾರ್ಡ್ ಮಾಡಿದ್ದು ನೋಡಿದಾಗ ನಮಗೆ ನಾಚಿಕೆಯಾಗಬೇಕು. ಮಕ್ಕಳಿಗೆ ವಚನ ಕಂಠಪಾಠ (ತಿಳಿಯುವ ಮುದಕೊಡುವ ಕನ್ನಡ ಭಾಷೆಯಲ್ಲಿರುವ) ಮಾಡಿಸಿ ಹೇಳಿಸುವಲ್ಲಿ ಮಕ್ಕಳನ್ನು ಪರಿವರ್ತಿಸುವಲ್ಲಿ ಮಹಿಳೆಯರ ಸಂಘಟನೆಗಳು ಜಾಗೃತಗೊಳಿಸಬೇಕು.
- ಎಲ್ಲಾ ಕಾಯಕ ಜೀವಿಗಳನ್ನು, ಆಯಾ ಶರಣ ಜಯಂತಿಗಳನ್ನು ಆಚರಿಸುವ ಆಯಾ ಸಮಾಜದವರೆಲ್ಲರನ್ನು ಒಗ್ಗೂಡಿಸಬೇಕು. ಶರಣತತ್ವ ಬದ್ಧತೆ ಕಾಯಕನಿಷ್ಟೆ ಎಲ್ಲಾ ಸಮಾಜ ಬಾಂಧವರಲ್ಲಿ ಮೂಡಿಸುವ ಕಾರ್ಯವಾಗಬೇಕು.
ಒಟ್ಟಾರೆ ಸಮಾಜದ ಎಲ್ಲಾ ವರ್ಗಗಳಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಬೇಕು.
ಪೂರ್ವ ಸಿದ್ಧತೆ :
ಬಸವಪರ ಸಂಘಟನೆಗಳನ್ನು ಮುಖ್ಯವಾಗಿ ಮಹಿಳೆಯರನ್ನು ಒಗ್ಗೂಡಿಸಬೇಕು. ಒಂದು ಸಮಾಜದಲ್ಲಿ ಒಬ್ಬರಾದರು ಲಿಂಗಾಯತರಿದ್ದರೆ ಸಾಕು ಅವರ ಸುತ್ತಲಿರುವವರನ್ನೆಲ್ಲ ಬದಲಾಯಿಸಬಹುದು. ಒಬ್ಬ ಮಹಿಳೆಯಿಂದ ಇಡೀ ಕುಟುಂಬವೆ ಬಸವಮಯ ಆಗಲು ಸಾಧ್ಯ. ತೊಟ್ಟಿಲು ತೂಗೋ ಕೈ ಜಗತ್ತನ್ನೆ ಬೆಳಗಬಲ್ಲದು ಎಂಬಂತೆ ಒಬ್ಬ ಲಿಂಗಾಯತ ಮಹಿಳೆ ಕೋಟಿ ಲಿಂಗಾಯತರನ್ನು ಸೃಷ್ಠಿಸಬಲ್ಲಳೆಂಬಂತೆ ಸಿದ್ಧತೆ ಇರಬೇಕು
ವಚನ ಸಾಹಿತ್ಯದ ಮೇಲೆ ಉಪನ್ಯಾಸಗಳನ್ನು ತಯಾರಿಸಿ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆ ಮಠಗಳಲ್ಲಿ ಮೇಲಿಂದ ಮೇಲೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುಬೇಕು. ಗ್ರಾಮೀಣ ಪ್ರದೇಶದ ಜನ ಸೇರುವ ಸ್ಥಳ ಗುರುತಿಸಿಕೊಂಡು, ಅವರಿಗೆ ಬಸವ ಸಂಸ್ಕೃತಿಯನ್ನು ಯಾವ ರೀತಿ ಮುಟ್ಟಿಸಬೇಕೆಂದು ತಜ್ಞರ ಜೊತೆ ಚರ್ಚಿಸಬೇಕು. ಮಹಿಳೆಯರಿಗೆ ತರಬೇತಿ ನೀಡಿ ಅವರಿಂದ ಎಲ್ಲಾ ಕಡೆ ತತ್ವ ಪ್ರಚಾರ ಮಾಡಿಸುವ ಪ್ರಯತ್ನದ ಸಿದ್ಧತೆಯಾಗಬೇಕು.
ಅಭಿಯಾನದಲ್ಲಿ ಮಹಿಳೆಯರು
ಅಭಿಯಾನ ಗಂಡು ಹೆಣ್ಣು ಭೇದ ಭಾವ ತೊರೆದು ಹೊರಬರುವ ವೇದಿಕೆಯಾಗಬೇಕು. ಮಹಿಳೆಯರಿಂದಲೇ ಕಾರ್ಯಕ್ರಮಗಳು ಸಂಘಟನೆಯಾಗಬೇಕು. ಸಮಾಜದಲ್ಲಿ ಸುಧಾರಣೆಯಾಗಬೇಕಿರುವುದು ಮನೆಯಿಂದ, ಮಹಿಳೆಯಿಂದ.
ಭ್ರಷ್ಟತೆ, ಗೊಡ್ಡು ವೃತಾಚರಣೆ, ಮೂಢನಂಬಿಕೆ, ಕಂದಾಚಾರ, ಮೌಢ್ಯತೆಗಳ ವಿರುದ್ಧ ಮಹಿಳೆಯರನ್ನು ಸಂಘಟಿಸಬೇಕು. ಒಬ್ಬಳಿಂದ ಪರಿವರ್ತನೆ ಮಾಡಲು ಅಸಾಧ್ಯ. ಸಂಘಟನೆ ಮೂಲಕವಾದಾಗ ಇದು ಸದ್ಯ.
೧೨ನೇ ಶತಮಾನದಲ್ಲಿ ಮಹಿಳೆಯರನ್ನು ಮುಂಚೂಣಿಯಲ್ಲಿ ತರುವಂತೆ ಇಂದು ಕೂಡಾ ಶಾಲೆ ಬಿಟ್ಟವರಿಗೆ ಅಕ್ಷರಜ್ಞಾನ ಉನ್ನತ ವ್ಯಾಸಾಂಗ ವೃತ್ತಿ ತರಬೇತಿಯಂತಹ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಸಂಘಟಿಸಬೇಕು.
ಚಟುವಟಿಕೆಗಳು
೧) ಅರಿವು ಜಾಗೃತಿ ಕಾರ್ಯಕ್ರಮಗಳು: ಅಕ್ಕಮ್ಮನ ಜಾತಿ ನಿರಾಕರಣೆ, ಲಿಂಗಮ್ಮನ ಲಿಂಗನಿಷ್ಟೆ, ಸತ್ಯಕ್ಕನ ಕಾಯಕನಿಷ್ಟೆ, ಸೂಳೆ ಸಂಕವ್ವೆಯ ನಿಷ್ಟಾಭಕ್ತಿ, ಲಕ್ಕಮ್ಮನ ದುರಾಶೆಯ ನಿರಾಕರಣೆ ಇವುಗಳನ್ನು ಇಂದಿನ ಮಹಿಳೆಯರಿಗೆ ತಿಳಿಸುವುದು. ಅವರು ಮಾಡುವ ಲಕ್ಷವ್ವ ಗೌರವ್ವನ ಪೂಜೆಗೆ ತಿಲಾಂಜನ ಇಡಿಸಿ, ಹರಕೆ ವೃತಗಳನ್ನು ಬಿಡಿಸಿ ಲಿಂಗ ಬದ್ಧತೆಯ ಅರಿವು ಮೂಡಿಸುವುದು.
೨) ಹೆಣ್ಣು ಅಸ್ಪೃಶ್ಯಳು – ಹೆಣ್ಣಿನ ಋತು ಸ್ರಾವದ ಸಹಜ ಕ್ರಿಯೆಯಿಂದ ದೇವರನ್ನು ಪೂಜಿಸಲು ಅನರ್ಹಳು ಎನ್ನುವುದರ ವಿರುದ್ಧ ಹೊಲೆಗಂಡಲ್ಲದೆ ಪಿಂಡಕ್ಕೆ ನೆಲೆಗಾಶಯವಿಲ್ಲ, ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು ಎಂಬ ಶರಣರ ಮಾತಿನಂತೆ ಅರಿವು ಜಾಗೃತಿ ಮೂಡಿಸಬೇಕು.
೩) ವ್ಯಕ್ತಿ ಶ್ರೇಷ್ಟ ಅಧಮ ಎನಿಸಿಕೊಳ್ಳುವುದು ಜಾತಿಯಿಂದಲ್ಲ ನಡೆಯಿಂದ ಸಾಧ್ಯ. ಸನ್ನಡತೆಯಿಲ್ಲದಿದ್ದರೆ ಅವನೇ ಕೀಳು ಜಾತಿಯವ “ಗುಣದಿಂದ ಹಾರವನಲ್ಲದೆ ಅಗಣಿತ ವಿದ್ಯಾಭ್ಯಾಸದಿಂದ ಹಾರುವನಲ್ಲ” ಎಂಬ ಅರಿವು ಮೂಡಿಸುವುದು.
೪) ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಎಂಬುದ ಮರೆತು ಗಂಡ ಹೆಂಡತಿ ಸಂಪತ್ತನ್ನು ಗಳಿಸುವಲ್ಲಿ ಬದುಕುವ ಮಾರ್ಗ ಯಾವುದೆಂಬುದನ್ನು ಅರಿಯದೆ ಮಕ್ಕಳು ಮತ್ತು ಭವಿಷ್ಯದ ಕಡೆಗೆ ಚಿಂತಿಸದೆ ವಿವಾಹ ವಿಚ್ಚೇದನಕ್ಕೆ ಒಳಗಾಗುವರು. ಇಂತವರಿಗೆ ಶರಣರ ಕಾಯಕದ ಪರಿಕಲ್ಪನೆ ಹಂಚಿ ತಿನ್ನುವ ದುಡಿದ ಪ್ರತಿಫಲದಲ್ಲಿ ಅಲ್ಪವನ್ನು ಸಮಾಜಕ್ಕೆ ವಿನಿಯೋಗಿಸುವ ಅರಿವು ಮೂಡಿಸಬೇಕು
೫) ಇಂದು ಪ್ರತಿಯೊಬ್ಬ ಮಹಿಳೆಯರು ಧಾರಾವಾಹಿ ಹುಳುಗಳಾಗಿಬಿಟ್ಟಿದ್ದಾರೆ. ಆ ಎಲ್ಲ ಮನೆಗಳು ವಚನ ಓದುವ ಮೂಲಕ ಮನೆಗಳೆಲ್ಲ ಮಹಾ ಮನೆಗಳಾಗಬೇಕು. ರಾತ್ರಿ ಶಾಲೆಗಳಂತೆ ಮಹಿಳಾ ಸಂಘಟನೆಗಳು ನಾಯಕತ್ವ ವಹಿಸಿ ಧಾರಾವಾಹಿ ದಾಸರಾದ ಮಹಿಳೆಯರನ್ನು ಹೊರಗೆ ತರುವ ಪ್ರಯತ್ನವಾಗಬೇಕು.
೬) ಬೀದಿ ನಾಟಕಗಳು, ರೂಪಕಗಳು, ಜಾನಪದ ಸಾಹಿತ್ಯದ ಪ್ರಕಾರಗಳಾದ ಡೊಳ್ಳು ಕುಣಿತ, ಕಂಸಾಳೆ, ಒಡುಪುಗಳನ್ನು ಹೇಳುವ ಕಲೆಗಳಲ್ಲಿ ವಚನಗಳನ್ನು ಬಳಸಿ ಜನರಿಗೆ ಜಾಗೃತಿ ಉಂಟುಮಾಡಿದರೆ ವಚನ ಸಾಹಿತ್ಯಕ್ಕೆ ಕೊಡುವ ದೊಡ್ಡ ಕಾಣಿಕೆ ಆಗುತ್ತದೆ.