ಅಭಿಯಾನ: ಜಂಟಿ ಸಭೆ ಕರೆಯಲು ಜಾಲಿಮ ಜಿಲ್ಲಾ ಘಟಕಗಳಿಗೆ ಜಾಮದಾರ್ ಸೂಚನೆ

ಬಸವ ಮೀಡಿಯಾ
ಬಸವ ಮೀಡಿಯಾ

ಐದು ಉಪ ಸಮಿತಿಗಳು; ಜಾತಿಭೇದವಿಲ್ಲದೆ ಲಿಂಗಾಯತ ಮಠ, ಸಂಘಟನೆಗಳಿಗೆ ಅಹ್ವಾನ

ಬೆಂಗಳೂರು

ಸಪ್ಟೆಂಬರ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಕುರಿತು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಜೂನ್ ೪ ಕಳಿಸಿರುವ ಪತ್ರದಲ್ಲಿ ಜಿಲ್ಲಾ ಮಟ್ಟದ ಜಂಟಿ ಸಭೆಯನ್ನು ಕರೆಯುವ ದಿನಾಂಕನ್ನು ಶೀಘ್ರವಾಗಿ ನಿಧ೯ರಿಸಿ ಜಾಲಿಮ ಕೇಂದ್ರ ಕಚೇರಿ ಮತ್ತು ಮಠಧೀಶರ ಒಕ್ಕೂಟಕ್ಕೆ ತಿಳಿಸಲು ಹೇಳಲಾಗಿದೆ.

ಪ್ರತಿ ಜಿಲ್ಲೆಯಲ್ಲಿನ ಎಲ್ಲಾ ಲಿಂಗಾಯತ ಮಠಗಳನ್ನು ಮತ್ತು ಎಲ್ಲಾ ಹೆಸರಿನ ಲಿಂಗಾಯತ ಸಂಘಟನೆಗಳನ್ನು ಜಾತಿಭೇದ ಮಾಡದೆ ಸಭೆಗೆ ಆಹ್ವಾನಿಸಲು ಪತ್ರದಲ್ಲಿ ಸೂಚಿಸಲಾಗಿದೆ.

ಸಭೆಯಲ್ಲಿ ಐದು ಉಪಸಮಿತಿಗಳನ್ನು ರಚಿಸಲು ಹೇಳಲಾಗಿದೆ: ಅಭಿಯಾನದ ಉಸ್ತುವಾರಿಗೆ ಸಾಮಾನ್ಯ ಸಮಿತಿ, ಸ್ಟೇಜ ಕಾರ್ಯಕ್ರಮಗಳ ಉಪಸಮಿತಿ, ಹಣಕಾಸು ಮತ್ತು ಸಂಪನ್ಮೂಲ ಸಂಗ್ರಹಣ ಸಮಿತಿ, ಪ್ರಚಾರ ಸಮಿತಿ, ಭೋಜನ ಕಾಯ೯ಕ್ರಮ ಸಮಿತಿ.

ಪತ್ರದಲ್ಲಿ ಸಾವ೯ಜನಿಕ ಸಂವಾದ, ವಚನ ಮೆರೆವಣಿಗೆ, ಉಪನ್ಯಾಸ, ವಚನ ಸಂಗೀತಗಳಿರುವ ಅಭಿಯಾನದ ಸ್ವರೂಪವನ್ನು ಸ್ಥೂಲವಾಗಿ ವಿವರಿಸಲಾಗಿದೆ. ಆಯಾ ಜಿಲ್ಲೆಯಲ್ಲಿ ಬಸವ ತತ್ವಗಳ ಬಗ್ಗೆ ವಿದ್ವತ್ಪೂಣ೯ವಾಗಿ ಮಾತನಾಡಬಲ್ಲ ವ್ಯಕ್ತಿಗಳನ್ನು ಹಾಗೂ ವಚನ ಸಂಗೀತವನ್ನು ಸುಶ್ರಾವ್ಯವಾಗಿ ಹಾಡಬಲ್ಲವರ ತಂಡಗಳನ್ನು ಗುರುತಿಸಲೂ ಹೇಳಲಾಗಿದೆ.

ಗುರುವಾರ ಶ್ರೀಮಠಕ್ಕೆ ಹೋಗಿ ಮನವಿ ಪತ್ರ ನೀಡಿದ ಬಸವ ಸಂಘಟನೆಗಳಿಗೆ ಪೂಜ್ಯ ಡಾ. ತೋಂಟದ ಸಿದ್ದರಾಮ ಶ್ರೀಗಳು ಅಭಿಯಾನ ನಡೆಸಲು ೧೫ ಸದಸ್ಯರ ಜಿಲ್ಲಾ ಸಮಿತಿಗಳನ್ನು ರಚಿಸುವುದಾಗಿ ಹೇಳಿದ್ದರು.

ಜಾಮದಾರ್ ಅವರ ಪತ್ರದ ಪೂರ್ಣ ಪಾಠ

ಲಿಂಗಾಯತ ಜಾಗೃತಿ ಅಭಿಯಾನ ೨೦೨೫

ಜಾಗತಿಕ ಲಿಂಗಾಯತ ಮಹಾಸಭೆಯ
ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರುಗಳಿಗೆ,

ವಿಷಯ: ೨೦೨೫ರ ಸಪ್ಟೆಂಬರ ತಿಂಗಳಲ್ಲಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ
ಲಿಂಗಾಯತ ಜಾಗೃತಿ ಅಭಿಯಾನವನ್ನು ಸಂಘಟಿಸುವ ಕುರಿತು.

ಆತ್ಮೀಯ ಮಿತ್ರರೆ,

ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದ ವತಿಯಿಂದ ಬೆಳಗಾವಿ ಮತ್ತು ಧಾರವಾಡಗಳಲ್ಲಿ ಈ ಹಿಂದೆ ನಡೆದ ಜಂಟಿ ಸಬೆಗಳಲ್ಲಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ೨೦೨೫ನೆ ಸಾಲಿನ ಸಪ್ಟೆಂಬರ ತಿಂಗಳಲ್ಲಿ ಲಿಂಗಾಯತ ಜಾಗೃತಿ ಅಭಿಯಾನವನ್ನು ಸಂಘಟಿಸಲು ನಿಣ೯ಯಿಸಿದ್ದು ತಗಮಗೆಲ್ಲರಿಗೂ ಈಗಾಗಲೆ ತಿಳಿದ ವಿಷಯ. ಈ ಬಗ್ಗೆ ಮುಂದುವರೆದು ಏನು ಮಾಡಬೇಕೆಂಬ ಬಗ್ಗೆ ಈ ಕೆಳಗಿನಂತೆ ಕ್ರಮ ತೆಗೆದುಕೊಳ್ಳಲು ವಿನಂತಿಸಲಾಗಿದೆ:

(೧) ಪ್ರತಿ ಜಿಲ್ಲೆಯಲ್ಲಿನ ಎಲ್ಲ ಲಿಂಗಾಯತ ಮಠಗಳನ್ನು ತಕ್ಷಣ ಗುರುತಿಸಬೇಕು. ಜಾತಿಭೇದವಿಲ್ಲದೆ ಎಲ್ಲ ಲಿಂಗಾಯತ ಜಾತಿಗಳ ಮಠಾಧೀಶರನ್ನು ಕರೆಯಬೇಕು. ಅನೇಕ ಮಠಾಧೀಶರು ಇನ್ನೂ ಮಠಾಧೀಶರ ಒಕ್ಕೂಟದ ಸದಸದ್ಯರಾಗಿಲ್ಲ. ಆದಾಗ್ಯೂ ಅವರೆಲ್ಲರನ್ನು ಈ ಸಭೆಗೆ ಆಹ್ವಾನಿಸಬೇಕು. ಹೀಗೆ ಈಗಾಗಲೆ ಒಕ್ಕೂಟದ ಸದಸ್ಯರಾಗಿರುವ ಮತ್ತು ಸದಸ್ಯರಾಗದಿರುವ ಮಠಾಧೀಶರನ್ನೂ ಒಂದೆಡೆ ಕೂಡಿಸಿ, ಜಾಗತಿಕ ಲಿಂಗಾಯತ ಮಹಾಸಭೆಯು ಒಂದು ಜಂಟಿ ಸಭೆಯನ್ನು ಕರೆಯಬೇಕು.

(೨) ಅದೇ ರೀತಿ, ಆಯಾ ಜಿಲ್ಲೆಯಲ್ಲಿರುವ ಎಲ್ಲ ಹೆಸರಿನ ಲಿಂಗಾಯತ ಸಂಘಟನೆಗಳನ್ನೂ ಗುರುತಿಸಬೇಕು. ಜಾತಿಭೇದ ಮಾಡುವ ಅಗತ್ಯವಿಲ್ಲ, ಎಲ್ಲ ಲಿಂಗಾಯತ ಪಂಗಡಗಳ ಸಂಘಟನೆವರನ್ನೂ ಕರೆಯಬಹುದು. ಅವರೆಲ್ಲರನ್ನೂ ಈ ಸಭೆಗೆ ಆಹ್ವಾನಿಸಬೇಕು.

(೩) ಸಪ್ಟೆಂಬರ ತಿಂಗಳಿನ ಯಾವ ಯಾವ ದಿನಾಂಕಗಳಂದು ಯಾವ ಯಾವ ಜಿಲ್ಲೆಯಲ್ಲಿ ಅಭಿಯಾನ ನಡೆಸಬೇಕೆಂಬ ನಿಣ೯ಯವನ್ನು ಜಂಟಿ ಸಮಿತಿಯು ಈಗಾಗಲೇ ನಿರ್ಧರಿಸಿದೆ. ಅದರ ಒಂದು ಲಿಸ್ಟನ್ನು ತಮ್ಮ ಮಾಹಿತಿಗಾಗಿ ಈ ಪತ್ರಕ್ಕೆ ಅಂಟಿಸಿದ್ದೇನೆ. ದಯವಿಟ್ಟು ಅದನ್ನು ಗಮನದಲ್ಲಿ ಇಟ್ಟುಕೊಂಡು ಆದಷ್ಟು ಬೇಗ ನಿಮ್ಮ ನಿಮ್ಮ ಜಿಲ್ಲಾ ಮಟ್ಟದ ಜಂಟಿ ಸಭೆಯನ್ನು ಕರೆಯುವ ದಿನಾಂಕನ್ನು ತಾವು ಪ್ರತಿಯೊಬ್ಬರು ಶೀಘ್ರವಾಗಿ ನಿಧ೯ರಿಸಿ ಆ ದಿನಾಂಕಗಳನ್ನು ಜಾಲಿಮದ ಕೇಂದ್ರ ಕಚೇರಿಗೂ ಮತ್ತು ಮಠಧೀಶರ ಒಕ್ಕೂಟಕ್ಕೂ ತಿಳಿಸಲು ವಿನಂತಿಸಲಾಗಿದೆ.

(೪) ಮಠಾಧೀಶರ ಒಕ್ಕೂಟದ ವತಿಯಿಂದ ಮಠಾಧೀಶರ ಒಂದು ತಂಡವೂ ಕೂಡ ಜಾಲಿಮದ ಒಂದು ತಂಡದೊಂದಿಗೆ ನಿಮ್ಮ ಸಭೆಗೆ ಬರುತ್ತದೆ. ಆ ಸಭೆಯಲ್ಲಿ ನಿಧ೯ರಿಸುವ ಮಹತ್ವದ ವಿಷಯಗಳು ಈ ಕೆಳಗಿನಂತೆ ಇವೆ:

(ಅ) ಜಾಗೃತಿ ಅಭಿಯಾನದ ಒಂದು ಭಾಗವಾಗಿ “ಸಾವ೯ಜನಿಕ ಸಂವಾದ” ಕಾಯ೯ಕ್ರಮವನ್ನು ನಡೆಸಲಾಗುವುದು. ಅದನ್ನು ಆಯಾ ದಿನಾಂಕದಂದು ಎಲ್ಲಿ ನಡೆಸಬೇಕೆಂಬುದನ್ನು ನೀವು ನಿಧ೯ರಿಸಬೇಕು. ಅದಕ್ಕೆ ಕನಿಷ್ಟ ಎರಡು-ಮೂರು ಗಂಟೆ ಸಮಯ ನಿಗದಿ ಮಾಡಬೇಕು. ಆ ದಿನಾಂಕ, ಸ್ಥಳ, ಮತ್ತು ಮುಕ್ತ ಸಂವಾದದ ಬಗ್ಗೆ ಸಾಕಷ್ಟು ಪ್ರಚಾರ ಮಾಡಬೇಕು ಮತ್ತು ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತರು ಅದರಲ್ಲಿ ಭಾಗವಹಿಸುವಂತೆ ಪ್ರಚಾರ ಮಾಡುವ ವ್ಯವಸ್ಥೆಯನ್ನು ಹಮ್ಮಿಕೊಳ್ಳಬೇಕು;

(ಆ) ಆಯಾ ನಿಗದಿತ ದಿನಾಂಕದಂದು ನಿಮ್ಮ ನಗರದ ಪ್ರಮುಖ ಬೀದಿಗಳ ಮುಖಾಂತರ ಹಾಯ್ದುಹೋಗುವಂತೆ ಲಿಂಗಾಯತ ಮಹಿಳೆಯರು ವಚನಕಟ್ಟುಗಳನ್ನು ತಲೆಯ ಮೇಲಿಟ್ಟು ಸಾಗುವ ಭವ್ಯ ಮೆರೆವಣಿಗೆಯನ್ನು ಏಪ೯ಡಿಸಬೇಕು;

(ಇ) ನಿಮ್ಮ ಜಿಲ್ಲೆಯಲ್ಲಿ ಬಸವ ತತ್ವಗಳ ಬಗ್ಗೆ ವಿದ್ವತ್ಪೂಣ೯ವಾಗಿ ಮಾತನಾಡಬಲ್ಲ ವ್ಯಕ್ತಿಗಳ ಒಂದು ಲಿಸ್ಟನ್ನು ನೀವೆ ತಯಾರಿಸಬೇಕು. ಅವರಲ್ಲಿ ಜಿಲ್ಲೆಯ ಕಾಲೇಜು/ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿರಬಹುದು/ ಪ್ರಸಿದ್ಧ ಪ್ರವಚಕಾರರಿರಬಹುದು ಅಥವಾ ನುರಿತ ಸ್ವಾಮೀಜಿಗಳೂ ಇರಬಹುದು. ಅವರನ್ನು ಗುರುತಿಸಿ ಜಾಲಿಮ ಮತ್ತು ಒಕ್ಕೂಟದ ಕೇಂದ್ರ ಕಚೇರಿಗೆ ತಿಳಿಸಬೇಕು. ಅವರಿಗೆ ಬೇರೆ ಬೇರೆ ವಿಷಯಗಳನ್ನು ಹಂಚಲಾಗುದವುದು. ಹಾಗೆ ಕೊಟ್ಟ ವಿಷಯದ ಮೇಲೆ ಅವರು ಸೂಕ್ತ ಸಾಹಿತ್ಯವನ್ನು ಓದಿ ಸುಮಾರು ೨೦ರಿಂದ ೨೫ ನಿಮಿ಼ಷದ ಭಾಷಣ ಮಾಡಬೇಕು ಮತ್ತು ಪ್ರಶ್ನೆಗಳಿಗೆ ಉತ್ತರಿಸಬೇಕು ಅಲ್ಲದೆ ಸಾವ೯ಜನಿಕ ಸಂವಾದದಲ್ಲಿ ಅಗತ್ಯವಾಗಿ ಭಾಗವಹಿಸಬೇಕು.

(ಈ) ಅದೇ ರೀತಿ, ನಿಮ್ಮ ಜಿಲ್ಲೆಯಲ್ಲಿನವರೇ ಆದ ವಚನ ಸಂಗೀತವನ್ನು ಸುಶ್ರಾವ್ಯವಾಗಿ ಹಾಡಬಲ್ಲವರ ಒಂದೆರಡು ತಂಡಗಳನ್ನು ಅಥವಾ ಮೂರು ನಾಲ್ಕು ವ್ಯಕ್ತಿಗಳನ್ನು ನೀವು ಗುರುತಿಸಬೇಕು ಮತ್ತು ಈ ಸಂಬೆಗೆ ಅವರನ್ನು ಆಹ್ವಾನಿಸಬೇಕು.

(ಉ) ಸಂಜೆ ೫.೩೦ ಗಂಟೆಯಿಂದ ೮.೩೦ ವರೆಗೆ ಮುಖ್ಯ ಸಮಾರಂಭವನ್ನು ನೆರವೇರಿಸಬೇಕು. ಅದಕ್ಕಾಗಿ ಸೂಕ್ತವಾದ ಒಂದು ಸಭಾಭವನವನ್ನು ತಾವು ಗುರುತಿಸಿ ನಿಮ್ಮ ಜಿಲ್ಲೆಗೆ ನೀಡಿದ ದಿನಾಂಕದಂದು ಅಲ್ಲಿ ಈ ಸಮಾರಂಭವನ್ನು ನಡೆಸುವ ಸಲುವಾಗಿ ಪ್ರಚಾರ ಮಾಡಬೇಕು,

(ಊ) ಮುಖ್ಯ ಸಮಾರಂಭ ಮುಗಿದ ಮೇಲೆ ಸಾವ೯ಜನಿಕರಿಗೆ ಸಂಜೆಯ ಭೋಜನದ ವ್ಯವಸ್ಥೆ ಮಾಡಬೇಕು.

(ಎ) ಈ ಎಲ್ಲ ಕಾಯ೯ಕ್ರಮಗಳನ್ನು ಎಲ್ಲ ಮಠಾಧೀಶರೊಂದಿಗೆ ಮತ್ತು ಎಲ್ಲ ಲಿಂಗಾಯತ ಸಂಘ ಸಂಸ್ಥೆಗಳ ಸಹಭಾಗಿತ್ವದ ಜೊತೆಗೆ ಏಪ೯ಡಿಸುವ ಸವ೯ ವ್ಯವಸ್ಥೆಗಳನ್ನು ಮಾಡುವ ಅತ್ಯಂತ ಗುರತರ ಜವಾಬ್ದಾರಿಯು ತಮ್ಮೆಲ್ಲರ ಮೇಲಿದೆ. ಈ ಕಾಯ೯ಕ್ರಮದ ಮೂಲಕ ಎಲ್ಲ ಮಠಾಧೀಶರನ್ನು, ಎಲ್ಲ ಬಸವ ಪರ ಸಂಘಟನೆಗಳನ್ನು ಸಂಘಟಿಸಿ ಒಡೆದುಹೋಗಿರುವ ಬೃಹತ್‌ ಲಿಂಗಾಯತ ಸಮುದಾಯವನ್ನು ಒಂದುಗೂಡಿಸುವ ಸಾವ೯ಕಾಲಿಕ ಮಹತ್ವದ ಒಂದು ಸುಂದರ ಅವಕಾಶವನ್ನು ತಾವೆಲ್ಲರೂ ಸಮಥ೯ವಾಗಿ ನೆರವೇರಿಸುತ್ತೀರೆಂಬ ಅಚಲ ನಂಬಿಕೆ ನಮ್ಮೆಲ್ಲರಿಗೂ ಇದೆ. ಈ ಬಗ್ಗೆ ಈ ಕೆಳಗೆ ಸೂಚಿಸಿದ ತಂಡಗಳನ್ನು/ಉಪಸಮಿತಿಗಳನ್ನು ರಚಿಸುವುದು ಸೂಕ್ತ. ಈ ಕಾಯ೯ಕ್ರಮದ ಮಹತ್ವದ ಬಗ್ಗೆ ಶ್ರೀ ಗೊ. ರು. ಚನ್ನಬಸಪ್ಪನವರು ಬರೆದ ಒಂದು ಟಿಪ್ಪಣಿಯನ್ನೂ ಈ ಪತ್ರಕ್ಕೆ ಲಗತ್ತಿಸಲಾಗಿದೆ. ದಯವಿಟ್ಟು ಓದಲು ವಿನಂತಿಸಲಾಗಿದೆ.

(೧) ಸಮಸ್ಥ ಕಾಯ೯ಕ್ರಮದ ಯೋಜನೆ, ನಿವ೯ಹನೆ, ಮತ್ತು ಉಸ್ತುವಾರಿಗಾಗಿ ಒಂದು ಮುಖ್ಯ ಸಾಮಾನ್ಯ ಸಮಿತಿ ರಚಿಸಿಕೊಳ್ಳುವುದು: ಸಾಮಾನ್ಯ ಸಮಿತಿಯಿಂದ ಈ ಕೆಳಗಿನ ಕಾಯ೯ಕ್ರಮಗಳನ್ನು ತಕ್ಷಣ ಮಾಡಬೇಕು:

(ಅ) ಮಠಾಧೀಶರನ್ನು ವೈಯಕ್ತಿಕವಾಗಿ ಭೆಟ್ಟಿಯಾಗಿ ಈ ಕಾಯ೯ಕ್ರಮಗಳಿಗೆ ಆಹ್ವಾನಿಸುವುದು; ಮತ್ತು
(ಬ) ಅದೇ ರೀತಿ ಜಿಲ್ಲೆಯಲ್ಲಿನ ಎಲ್ಲ ಬಸವ ಪರ ಸಂಘಸಂಸ್ಥೆಗಳನ್ನು ಭೆಟ್ಟಿಯಾಗಿ, ಆಹ್ವಾನಿಸಿ ಅವರನ್ನು ಈ ಕಾಯ೯ಕ್ರಮದಲ್ಲಿ ಭಾಗವಹಿಸಿವಂತೆ ಮನ ಒಲಿಸುವುದು;
(ಕ) ಸಮಥ೯ ಭಾಷಣಕಾರರನ್ನು ಗುರರುತಿಸಿ ಆಹ್ವಾನಿಸುವುದು ಮತ್ತು
(ಡ) ಒಳ್ಳೆಯ ವಚನ ಸಂಗೀತಗಾರರನ್ನು ಅಥವಾ ಅವರ ತಂಡಗಳನ್ನು ಗುರುತಿಸಿ ಆಹ್ವಾನಿಸುವುದು.

(೨) ಸ್ಟೇಜ ಕಾಯ೯ಕ್ರಗಳ ಉಪಸಮಿತಿ – (ನಿರೂಪಕರು, ಸಂಯೋಜಕರು, ಆಮಂತ್ರಣ ಪತ್ರಿಕೆ, ಅಜೆಂಡಾ ತಯಾರಿಕೆ, ಸ್ಟೇಜ ರಚನೆ, ಬಸವಣ್ಣನವರ ಮೂತಿ೯/ ಫೋಟೋ, ಶಟಸ್ಥಳ ಧ್ವಜ, ಸ್ಟೇಜ ಗೋಡೆಗೆ ದೊಡ್ಡದಾದ ಫ್ಲೇಕ್ಷ ಪೋಸ್ಟರಿನ ಹಿನ್ನೆಲೆ ಚಿತ್ರ, ಧ್ವಣಿ ವಧ೯ಕ ವ್ಯವಸ್ಥೆ, ವಿದ್ಯುದ್ವೀಪ ವ್ಯವಸ್ಥೆ, ಮಾಧ್ಯಮ ಪ್ರತಿನಿಧಿಗಳಿಗೆ ಸ್ಥಳಾವಕಾಶ, ಪುಷ್ಪ ಗುಚ್ಛಗಳು, ಹೂವುಗಳ ಪಾತ್ರೆ, ಪೂಜಾ ಸಾಮಗ್ರಿ ಇತ್ಯಾದಿಗಳ ವ್ಯವಸ್ಥೆಗಾಗಿ); ಮೆರವಣಿಗಾಗಿ, ವಚನ ಕಟ್ಟುಗಳನ್ನು ಒದಗಿಸುವ, ಮಹಿಳೆಯರನ್ನು ಸಂಘಟಿಸುವ ವ್ಯವಸ್ತೆ; ಡೊಳ್ಳು ನಗಾರಿ, ಕರಡಿ ಮಜಲು, ಭಜನ ತಂಡಗಳು, ವೀರಗಾಸೆ ಇತ್ಯಾದಿ ತಂಡಗಳ ವ್ಯವಸ್ಥೆ, ಎಲ್ಲಿಂದ ಎಲ್ಲಿಯ ವರೆಗೆ ಮೆರವಣಿಗೆಯ ಬೀದಿ ಮತ್ತು ಮಾಗ೯ಗಳ ನಿಣ೯ಯ ಮತ್ತು ಪೋಲಿಸ ಪರವಾಣಿಗೆ ಪಡೆಯುವುದು ಇತ್ಯಾದಿ;

(೩) ಹಣಕಾಸು ಮತ್ತು ಸಂಪನ್ಮೂಲ ಸಂಗ್ರಹಣ ಸಮಿತಿ;

(೪) ಪ್ರಚಾರ , ಪ್ರಸಾರ, ಬ್ಯಾನರ್ಸ, ಪೋಸ್ಟರ್ಸ, ಪ್ಯಾಂಪ್ಲೆಟ್ಸ ಇತ್ಯಾದಿಗಳಿಗಾಗಿ ಒಂದು ಉಪಸಮಿತಿ;

(೫) ಭೋಜನ ಕಾಯ೯ಕ್ರಮ ಉಪಸಮಿತಿ.

ತಮ್ಮ ಮಾಹಿತಿಗಾಗಿ ಈ ಕೆಳಗಿನ ಪ್ರತ್ಯೇಕ ಪತ್ರಗಳನ್ನು ನೀಡಲಾಗಿದೆ:

(೧) ಮಠಾಧೀಶರ ಒಕ್ಕೂಟದ ಸದಸ್ಯರ ಲಿಸ್ಟ
(೨) ಮಠಾಧೀಶರಿಗೆ ಅವರ ಒಕ್ಕೂಟದ ಅಧ್ಯಕ್ಷರು ಬರೆದ ಪತ್ರ
(೩) ಸಪ್ಟೆಂಬರ ತಿಂಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ದಿನಾಂಕಗಳನ್ನು ನಿಗದಿಸಿದ ಪತ್ರ.
(೪) ಗೊ.ರು.ಚ. ಅವರ ಟಿಪ್ಪಣಿ.

ಮೇಲಿನ ಎಲ್ಲ ಗುರುತರ ಜವಾಬ್ದಾರಿಗಳನ್ನು ತಾವೆಲ್ಲರೂ ಸಮಥ೯ವಾಗಿ ಸಕಾಲಕ್ಕೆ ಸಮಗ್ರವಾಗಿ ನಿವ೯ಹಿಸುತ್ತೀರೆಂಬ ಭರವಸೆ ನಮ್ಮೆಲ್ಲರಿಗೂ ಇದೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

ಜಾಗತಿಕ ಲಿಂಗಾಯತ ಮಹಾಸಭೆಯ ಪರವಾಗಿ

(ಶಿ.ಮ.ಜಾಮದಾರ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
6 Comments
  • ಒಳ್ಳೆಯ ಮತ್ತು ಪ್ರೋತ್ಸಾಹದಾಯಕ ಬೆಳವಣಿಗೆ. ಎಲ್ಲರೂ ಕೈಜೋಡಿಸೋಣ ಮತ್ತು ಒಂದು ಐತಿಹಾಸಿಕ ಅಭಿಯಾನವಾಗಿ ರೂಪಿಸೋಣ. ದೊಡ್ಡ ಮಟ್ಟದಲ್ಲಿ ಮಹಿಳೆಯರನ್ನೂ ಒಳಗೊಳ್ಳಬೇಕು. ಜಾಲಿಮಾದ ಮಹಿಳಾ ಘಟಕಗಳನ್ನು, ರಾಷ್ಟ್ರೀಯ ಬಸವದಳದ ಮಹಿಳಾ ಘಟಕಗಳನ್ನು, ಶರಣ ಸಾಹಿತ್ಯ ಪರಿಷತ್ತಿನ ಕದಳಿ ವೇದಿಕೆಯನ್ನು ದೊಡ್ಡ ಮಟ್ಟದಲ್ಲಿ ಒಳಗೊಳ್ಳಬೇಕು. ಮಹಿಳಾ ಉಪನ್ಯಾಸಕರ ಪಟ್ಟಿಯನ್ನು ಪ್ರತ್ಯೇಕವಾಗಿ ತಯಾರಿಸಿ ಪ್ರತಿಯೊಂದು ಸಭೆಯಲ್ಲೂ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯಿಂದ ಉಪನ್ಯಾಸ ಕೊಡಿಸುವ ವ್ಯವಸ್ಥೆಯಾದರೆ ಅರ್ಥಪೂರ್ಣವಾಗುತ್ತದೆ.

    • ವೈದಿಕ ಆಚರಣೆಗಳನ್ನು ಬಿಟ್ಟು ವಚನಾಧಾರಿತ ಆಚರಣೆ ಮಾಡುವುದನ್ನು ಜಾರಿಗೆ ಬರುವಂತಾಗಬೇಕು. ವಚನಾಚರಣೆ ಮಾಡುವವರು ಪ್ರತಿಯೊಂದು ಹಳ್ಳಿಯಲ್ಲಿ
      ಇರುವಂತಾಗಬೇಕು.ಅದಕ್ಕಾಗಿ ಜಾಲಿಮ ತರಬೇತಿ ನೀಡಬೇಕು. ಇದು ಬೇಗ ಆದಷ್ಟು ಒಳ್ಳೆಯದು.ಗೃಹಪ್ರವೇಶ ಉಡಿತುಂಬುವ ಮದುವೆ ಇತ್ಯಾದಿಗಳಿಗೆ ವಚನಾಚರಣೆ ಲಭ್ಯ ವಿಲ್ಲದ್ದರಿಂದ ಲಿಂಗಾಯತರು ವೈದಿಕ/ಜಂಗಮರನ್ನೇ ಅವಲಂಬಿಸುವಂತಾಗಿದೆ. ಇದರಿಂದ ವಚನಗಳನ್ನು ಬಸವ ತತ್ವವನ್ನು ಹಳ್ಳಿಯ ಜನರಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ತಲುಪಲು ಆಗುತ್ತಿಲ್ಲ. ಆಚರಣೆ ಬೇಡ ಅನ್ನುವುದು ಅಂದರೆ ಅವರಿಗೆ ಎದುರು ಹಾಕಿಕೊಂಡತ್ತಾಗುತ್ತದೆ. ಆದ್ದರಿಂದ ಆಚರಣೆಗಳು ಯಾವುದೇ ಇರಲಿ ಅವೆಲ್ಲ ವಚನಗಳ ಆಧಾರಿತ ನಡೆದರೆ ಜನರು ಸಮ್ಮತಿಸುತ್ತಾರೆ ಬೇಡ ಜಂಗಮರೂ ವಚನಗಳ ಮೂಲಕವೇ ಆಚರಣೆಗಳನ್ನು ನಡೆಸಲು ಸಿದ್ದರಾಗುತ್ತಾರೆ ಮತ್ತು ವಚನಗಳನ್ನು ಓದುತ್ತಾರೆ ಏಕೆಂದರೆ ಅವರಿಗೆ ಸಂಸ್ಕೃತ ಶ್ಲೋಕ/ ವಚನ ಮುಖ್ಯ ಅಲ್ಲ ಅವರ ಹೊಟ್ಟೆ ತುಂಬಿಸಿಕೊಳ್ಳುವುದು ಮುಖ್ಯ. ಆದ್ದರಿಂದ ವಚನಾಧಾರಿತ ಆಚರಣೆ ಮೊದಲು ಒತ್ತು ಕೊಟ್ಟು ಆಮೇಲೆ ಏಕದೇವೊ ಪಾಸನೆ, ಮೌಢ್ಯತೆಯ ಬಗ್ಗೆ ಜನರಿಗೆ ತಿಳಿಹೇಳಬಹುದೆಂದು ನನ್ನ ಅನಿಸಿಕೆ . ಶರಣುಶರಣಾರ್ಥಿಗಳು.

  • (೩) ಸಪ್ಟೆಂಬರ ತಿಂಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ದಿನಾಂಕಗಳನ್ನು ನಿಗದಿಸಿದ ಪತ್ರ.
    ಮೇಲ್ಕಾಣಿಸಿದ ಪಟ್ಟಿಯನ್ನು ಮೇಲಿನ ಲೇಖನದೊಂದಿಗೆ ಹಾಕಿರಿ.

  • ಶ್ರೀಜಾಮದಾರ ಸಾಹೇಬರು,ಮಹಾ ಪ್ರಧಾನ ಕಾರ್ಯದರ್ಶಿಯವರು ‘ಲಿಂಗಾಯತ ಮಹಾ ಸಭಾ ಬೆಂಗಳೂರು’ಇವರ ಸಲಹೆ ಸೂಚನೆಗಳು ಅಭಿಯಾನಕ್ಕೆ ಸೂಕ್ತ ಆಗಿವೆ. ಇನ್ನೊಂದು ಸಲಹೆ ನೀಡಬೇಕೆಂದಿರುವೆ. ಅದೇನಂದರೆ,ಆಯಾಯಾ ಜಿಲ್ಲೆಯಲ್ಲಿ ಮುಖ್ಯ ಕಾರ್ಯಕ್ರಮ ಮುಗಿದ ನಂತರ-ಇನ್ನೊಂದು ಜಿಲ್ಲೆಗೆ ಅದೇ ಗುಂಪಿನವರು ಹೋಗುವುದಾದರೆ ಒಂದು ದಿನ ವಿಶ್ರಾಂತಿ ಬೇಕಾಗಬಹುದು. ಅದಕ್ಕಾಗಿ ಒಂದು ದಿನ ಬಿಟ್ಟು ಮತ್ತೊಂದು ದಿನ ಕಾರ್ಯಕ್ರಮ ಇಟ್ಟುಕೊಳ್ಳಬೇಕಾಗುತ್ತದೆ.ಆಗ ಸಪ್ಟಂಬರ ಅಲ್ಲದೇ ಅಕ್ಟೋಬರ್ ಕೂಡ ಈ ಕಾರ್ಯಕ್ರಮಗಳನ್ನು ಜರುಗಿಸಬೇಕಾಗುತ್ತದೆ. ಪ್ರತಿ ಜಿಲ್ಲೆಗೂ ಬೇರೆಬೇರೆ ಗುಂಪುಗಳಾದರೆ-ಸಪ್ಟಂಬರ ಒಂದು ತಿಂಗಳು ಸಾಕಾಗುತ್ತದೆ. ಈ ಸೂಚನೆ ಮುಖ್ಯಸ್ಥರಲ್ಲಿ ಇರಲಿ,ಎಂಬುದು ನನ್ನ ನಮ್ರ ವಿನಂತಿ. ಶರಣಾರ್ಥಿಗಳು.

    • ಒಳ್ಳೆಯ ಬೆಳವಣಿಗೆ
      . ಒಳ ಪಂಗಡಗಳ ಭೇದವಿಲ್ಲದೆ ಈ ಕಾರ್ಯಸಾಗಬೇಕು. ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಾಗದು. ಗುರು ವಿರಕ್ತರನ್ನು ಕೂಡ ಒಂದೇ ವೇದಿಕೆಯಲ್ಲಿ ಉಪಸ್ಥಿತ ಗೊಳಿಸಿ ಸಾಗುವುದು ಶ್ರೇಷ್ಠ. ಇದು ಬಸವೇಶ್ವರರ ಐಕ್ಯತೆಯ ಮಂತ್ರಕ್ಕೆ ಶೋಭೆ

Leave a Reply

Your email address will not be published. Required fields are marked *