ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವದ ಮೊದಲ ದಿನ
ಬೀದರ
ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯ ನಿಸರ್ಗದ ಮಡಿಲಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲಿಂಗೈಕ್ಯ ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವ ಶುಕ್ರವಾರ ಆರಂಭಗೊಂಡಿತು.

ಮೊದಲಿಗೆ ಗುರುವಚನ ಪರುಷಕಟ್ಟೆಗೆ ತೆರಳಿ, ಪ್ರಭುದೇವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗುರು ವಚನಗಳಿಗೆ ಪುಷ್ಪವೃಷ್ಟಿಗೈದು, ಗೌರವ ಸಮರ್ಪಿಸಲಾಯಿತು.
ಬಳಿಕ ಧಾರವಾಡದ ಬಸವ ಭಕ್ತ ಬಸವರಾಜ ಹಡಪದ ಅವರು ಷಟ್ಸ್ಥಲ ಧ್ವಜಾರೋಣಗೈದರು. ಧ್ವಜಗೀತೆಯ ನಂತರ ಶರಣ ಸಂಕುಲದಿಂದ ಬಸವ ಜಯಘೋಷ ಮೊಳಗಿದವು. ಅನಂತರ ಅಕ್ಕನವರ ಐಕ್ಯ ಮಂಟಪದಲ್ಲಿ ವಚನಗಳನ್ನು ಓದಿ, ಬಸವಮಂತ್ರ ಪಠಣಗೈದು, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು.

ಮಳೆರಾಯನ ಕೃಪೆಯಿಂದ ತಂಪಾದ ವಾತಾವರದಲ್ಲಿ ಕೋಗಿಲೆ, ನವಿಲುಗಳ ಶಬ್ದಗಳ ಮಧ್ಯದಲ್ಲಿ ವಚನ ಪಾರಾಯಣ ಸುಸೂತ್ರವಾಗಿ ನಡೆಯಿತು. ಭಕ್ತಿಭಾವ ಉಕ್ಕಿಸಿತು.
ಅಕ್ಕ ಅನ್ನಪೂರ್ಣತಾಯಿ ಬಸವ ತತ್ವ ಪ್ರಚಾರಕ್ಕೆ ತಮ್ಮ ಬದುಕು ಸಮರ್ಪಿಸಿಕೊಂಡಿದ್ದರು. ಅವರ ಬಸವ ನಿಷ್ಠೆ ಅನುಕರಣೀಯ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವದ ಮೊದಲ ದಿನವಾದ ಶುಕ್ರವಾರ ನಡೆದ ಸಾಮೂಹಿಕ ವಚನ ಪಾರಾಯಣ ಹಾಗೂ ಅನುಭಾವ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನನಗೆ ಅಕ್ಕನವರು ಗುರುವಾಗಿದ್ದರೆ, ಅವರಿಗೆ ಬಸವಣ್ಣ ಗುರುವಾಗಿದ್ದರು. ಕಾರಣ, ಅಕ್ಕನವರ ಬೋಧನೆಗಳೇ ನನಗೆ ಬಸವಣ್ಣನವರ ಬೋಧನೆಗಳಾಗಿದ್ದವು. ಅಕ್ಕ ನನಗೆ ಗುರುವಷ್ಟೇ ಅಲ್ಲ; ತಾಯಿಯಾಗಿಯೂ ಪೋಷಿಸಿದ್ದಾರೆ ಎಂದು ನೆನೆದರು.
ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಕೇವಲ ತತ್ವ ಅರಿತರೆ ಸಾಲದು. ಅದನ್ನು ರ್ಕಾರೂಪಕ್ಕೆ ತರಬೇಕು ಆಗ ಮಾತ್ರ ಬದುಕು ಅರಳುತ್ತದೆ. ವಿಸ್ತಾರಗೊಳ್ಳುತ್ತದೆ ಎಂದು ತಿಳಿಸಿದರು.

ಚರಜಂಗಮ ಸಿದ್ರಾಮಪ್ಪ ಕಪಲಾಪುರೆ ಮಾತನಾಡಿ, ಅರಣ್ಯದಂತಿದ್ದ ಈ ನೆಲ ಅಕ್ಕನವರು ಪಾದವಿಟ್ಟಿದ್ದರಿಂದ ಬಸವಗಿರಿ ಆಯಿತು. ಪವಿತ್ರ ಕ್ಷೇತ್ರವಾಯಿತು. ಅಕ್ಕನವರು ಮನೆ ಮನೆಗಳ ಮೇಲೆ ಬಸವ ಧ್ವಜ ಹಾರಿಸುವುದು, ವಚನ ಓದುವುದು, ಬಸವ ಚರಿತ್ರೆ ಓದುವುದನ್ನು ಕಲಿಸಿ ಅನಿಷ್ಠ ಪದ್ಧತಿಗಳನ್ನು ಹೊಡೆದೊಡಿಸಿದರು ಎಂದು ಹೇಳಿದರು. ಇನ್ನೊಬ್ಬರ ನೋವು ನಲಿವುಗಳಿಗೆ ಸ್ಪಂದಿಸಿ ಧೈರ್ಯ ತುಂಬುತ್ತಿದ್ದ ಮಾತೃ ಸ್ವರೂಪಿ ಅಕ್ಕನನ್ನು ಕಳೆದುಕೊಂಡು ಸಮಾಜ ಬಡವಾಗಿದೆ ಎಂದು ತಿಳಿಸಿದರು.
ವಚನಗಳನ್ನು ಓದುವುದರಿಂದ ನಾಲಿಗೆ, ಕಿವಿ, ಹೃದಯವಷ್ಟೇ ಅಲ್ಲ; ಜೀವನವೂ ಶುದ್ಧವಾಗುತ್ತದೆ. 108 ವಚನಗಳನ್ನು ಓದಿದರೆ ಬದುಕಿನ ಹಲವು ಕಷ್ಟಗಳು ಪರಿಹಾರಗೊಳ್ಳುತ್ತವೆ ಎಂದರು.

ಅಕ್ಕನವರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದರು. ವಚನ ವೈಭವ ಅಕ್ಕನವರಿಂದ ಆರಂಭವಾಗಿತ್ತು ಎಂದು ಭಾಲ್ಕಿ ಹಿರೇಮಠದ ಮಹಾಲಿಂಗ ಸ್ವಾಮೀಜಿ ಸ್ಮರಿಸಿದರು. ವಚನಗಳನ್ನು ಓದಿ, ಅನುಷ್ಠಾನಿಸುವುದು ವಚನ ಪಾರಾಯಣದ ಉದ್ದೇಶ. ವಚನ ಪಾರಾಯಣದಿಂದ ಮಾತು ಮೌನವಾಗಿ ಅಪರಿಮಿತ ಆನಂದ ಲಭಿಸುತ್ತದೆ ಎಂದು ಪರುಷ ಕಟ್ಟೆಯ ಚನ್ನಬಸವಣ್ಣ ಹೇಳಿದರು. ಇನ್ನೊಬ್ಬರಲ್ಲಿ ದೋಷ ಹುಡುಕುವುದನ್ನು ಬಿಟ್ಟು, ತ್ಯಾಗ ಭಾವನೆ ಅಳವಡಿಸಿಕೊಳ್ಳಬೇಕು. ಪರಚಿಂತೆ ನಮಗೇಕಯ್ಯ ಎಂಬ ಬಸವಾಣಿಯನ್ನು ಮರೆಯಬಾರದು. ಅಕ್ಕನವರು ಹೇಳಿದಂತೆ ಯಾವಾಗಲೂ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಲ್ಪನಾ ಬೀದೆ ಅಕ್ಕನವರ ಜೀವನ ಹಾಗೂ ಸಂದೇಶಗಳನ್ನು ಬಣ್ಣಿಸುವ ಸ್ವರಚಿತ ಕವನ ವಾಚಿಸಿದರು. ಕಲಬುರಗಿಯ ಪತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ಉದ್ಯಮಿ ಚಂದ್ರಶೇಕರ ಹೆಬ್ಬಾಳೆ, ಹುಮನಾಬದ್ನ ಮಲ್ಲಿಕಾರ್ಜುನ ರಟಕಲ್, ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು. ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ರೇವಣಪ್ಪ ಮೂಲಗೆ ಹಾಗೂ ಮಹೇಶ ಬಿರಾದಾರ ತಂಡದವರ ವಚನ ಸಂಗೀತ ಗಮನ ಸೆಳೆಯಿತು.
ಲಿಂಗಾಯತ ಸೇವಾ ದಳದ ಅದ್ಯಕ್ಷ ಅಭಿಷೇಕ ಮಠಪತಿ ಸ್ವಾಗತಿಸಿದರು. ಸಿ.ಎ. ಪಾಟೀಲ, ಅಣವೀರ ಕೂಡಂಬಲ ಶರಣು ಸಮರ್ಪಿಸಿದರು. ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು.