ಲಿಂಗಾಯತ ಸಂಸ್ಕೃತಿ ನಾಶಕ್ಕೆ ವ್ಯವಸ್ಥಿತ ಸಂಚು: ಡಾ. ಜೆ.ಎಸ್. ಪಾಟೀಲ

ಅನ್ನಪೂರ್ಣ ಯೋಜನೆಗೆ ಚಾಲನೆ; ವಚನ ವಿಜಯೋತ್ಸವ ಪಥ ಸಂಚಲನ

ಬೀದರ

ಲಿಂಗಾಯತ ಸಂಸ್ಕೃತಿ ನಾಶಕ್ಕೆ ಹಲವು ವರ್ಷಗಳಿಂದ ಹುನ್ನಾರ ನಡೆದಿದ್ದು, ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು ಎಂದು ವಿಜಯಪುರದ ಶರಣ ತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೊತ್ಸವದ ಎರಡನೇ ದಿನವಾದ ಶನಿವಾರ ನಡೆದ ಸಮವಸ್ತ್ರಧಾರಿ 770 ಶರಣ-ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಕಾರ್ಯಕ್ರಮದಲ್ಲಿ ‘ಲಿಂಗಾಯತ ಚಳವಳಿ ಐತಿಹಾಸಿಕ ಹಿನ್ನೆಲೆ’ ಕುರಿತು ಅವರು ಮಾತನಾಡಿದರು.

ಲಿಂಗಾಯತರು ಸಾಂಸ್ಕೃತಿಕ ದಬ್ಬಾಳಿಕೆಗಳಿಗೆ ಬಲಿಯಾಗಬಾರದು. ಅಸತ್ಯದ ವಿರುದ್ಧ ಹೊರಾಟ ನಡೆಸಬೇಕು ಎಂದು ತಿಳಿಸಿದರು. ಸಂಸ್ಕೃತಿಯ ಅರಿವಿಲ್ಲದಿದ್ದರೆ ಅನ್ಯ ಸಂಸ್ಕೃತಿಯ ದಾಸರಾಗಬೇಕಾಗುತ್ತದೆ. ಕಾರಣ, ಲಿಂಗಾಯತರು ತಮ್ಮ ಸಂಸ್ಕೃತಿ ಹಾಗೂ ಇತಿಹಾಸವನ್ನು ಅರಿಯಬೇಕು ಎಂದು ಹೇಳಿದರು.

ಲಿಂಗಾಯತರು ಉತ್ಕೃಷ್ಟ ಸಂಸ್ಕೃತಿಯ ವಾರಸುದಾರರು. ಲಿಂಗಾಯತ ಚಳವಳಿ ಹುಟ್ಟಿದ್ದು ರಾಷ್ಟ್ರ ರಕ್ಷಣೆಗಾಗಿ. ಲಿಂಗಾಯತರು ರಾಷ್ಟ್ರೀಯ ವಾದಿಗಳು. ನಿಜವಾದ ದೇಶಭಕ್ತರು ಎಂದು ನುಡಿದರು.

ಇಷ್ಟಲಿಂಗ ಲಿಂಗಾಯತರ ದೇವರು. ಶೋಷಣಾ ಕೇಂದ್ರಗಳಿಂದ ದೂರವಿದ್ದು, ಶೋಷಣೆ ರಹಿತವಾದ ಇಷ್ಟಲಿಂಗವನ್ನು ಪೂಜಿಸಬೇಕು ಎಂದು ತಿಳಿಸಿದರು.

ಬಸವಣ್ಣ ಬಾರದಿದ್ದರೆ ನಾವೆಲ್ಲ ಶೋಷಿತರಾಗುತ್ತಿದ್ದೆವು. ಅಂದು ನಡುಬೀದಿಯಲ್ಲಿ ಓಡಾಡುವ ಹಾಗಿರಲಿಲ್ಲ. ಅಂದಿನ ಸಮಾಜದ ಸ್ಥಿತಿ-ಗತಿಗಳನ್ನು ಗಮನಿಸಿದ ಬಸವಣ್ಣ ಸರ್ವ ಶೋಷಣಾ ಮುಕ್ತ ಸಮಾಜ ಕಟ್ಟಲು ಹೋರಾಟ ಆರಂಭಿಸಿದರು. ಜಾತಿಯತೆಯನ್ನು ಹೋಗಲಾಡಿಸಿದರು. ಅವರ ಕಾಯಕ-ದಾಸೋಹ ತತ್ವ ಜಗದಲ್ಲಿ ಹೊಸ ಗಾಳಿ ಬೀಸಿತು ಎಂದು ತಿಳಿಸಿದರು.

ಹೈಕೋರ್ಟ್ ನ್ಯಾಯವಾದಿ ಸಂತೋಷ ಎಸ್. ನಾಗರಾಳೆ ಮಾತನಾಡಿ, ಅಕ್ಕ ಅವರದ್ದು ಅದ್ಭುತ ವ್ಯಕ್ತಿತ್ವ. ಯಾವಾಗಲೂ ನಗುತ್ತಲಿದ್ದರು. ಆನಂದ ಭಾವ ಅವರಲ್ಲಿತ್ತು. ಅನಾರೋಗ್ಯದ ಕಷ್ಟವಿದ್ದರೂ, ಹಸನ್ಮುಖಿಯಾಗಿರುತ್ತಿದ್ದರು ಎಂದು ಹೇಳಿದರು. ಬಸವಗಿರಿಯನ್ನು ಸಾಧನೆಯ ಕೇಂದ್ರವಾಗಿ ಕಟ್ಟಿದರು. ನಾವು ಭಕ್ತರಾಗುವ ವಾತಾವರಣ ನಿರ್ಮಿಸಿ ಮೂಲ ಅರಿವಿಗೆ ಒಯ್ದರು ಎಂದು ತಿಳಿಸಿದರು. ಬಸವಗಿರಿ ಅಕ್ಕ ಅನ್ನಪೂರ್ಣತಾಯಿ ಅವರ ಆತ್ಮ. ವಚನ ಪಠಣ, ಪರುಷ ಕಟ್ಟೆ, ವಚನ ವಿಜಯೋತ್ಸವದಲ್ಲಿ ಅಕ್ಕನವರು ಇದ್ದಾರೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅಕ್ಕನವರಲ್ಲಿ ಧರ್ಮ ಪ್ರಸಾರದ ಅಪಾರ ಕಳಕಳಿ ಇತ್ತು. ನಾಡಿನಾದ್ಯಂತ ಅವರ ಪ್ರವಚನಗಳು ಜನಪ್ರಿಯವಾಗಿದ್ದವು. ಒಮ್ಮೆ ಅವರ ಪ್ರವಚನ ಕೇಳಿದವರು ಮತ್ತೆಂದೂ ತಪ್ಪಿಸುತ್ತಿರಲಿಲ್ಲ ಎಂದು ಹೇಳಿದರು.

ಬಸವಣ್ಣನವರ ಉದ್ದೇಶ ತತ್ವ ಸಂಘಟನೆಯಾಗಿತ್ತು. ಎಲ್ಲ ಜಾತಿಯವರಿಗೆ ಸಂಸ್ಕಾರ ನೀಡಿ ಲಿಂಗಾಯತರಾಗಿಸಿದ್ದರು. ಅನೇಕ ಬಸವ ತತ್ವ ಪ್ರಸಾರಕರಿಗೆ ಲಿಂಗಾನಂದರು ಪ್ರೇರಣೆಯಾಗಿದ್ದರು. ಅಕ್ಕನವರ ಕಣ ಕಣ, ರೋಮ ರೋಮಗಳಲ್ಲೂ ಬಸವಣ್ಣನೇ ತುಂಬಿದ್ದರು. ಅನ್ಯ ಆಚರಣೆಗಳಿಂದ ಬಸವ ತತ್ವಕ್ಕೆ ಕರೆ ತರುವಲ್ಲಿ ನಿಸ್ಸೀಮರಾಗಿದ್ದರು ಎಂದು ತಿಳಿಸಿದರು. ಅಕ್ಕನವರು ಬಹಳ ಸಮರ್ಥರಾದ ಪ್ರಭುದೇವ ಸ್ವಾಮೀಜಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಭುದೇವ ಸ್ವಾಮೀಜಿ ನೂರಾರು ಕಡೆ ಪ್ರವಚನ ಮಾಡಿದ್ದಾರೆ. ಬಸವ ಬೆಳಕು ವಿಸ್ತರಿಸಿದ್ದಾರೆ ಎಂದು ಹೇಳಿದರು.

ಅನ್ನಪೂರ್ಣ ಯೋಜನೆಗೆ ಚಾಲನೆ

‘ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡಿದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಹೆಸರಲ್ಲಿ ಹಸಿದವರಿಗೆ ಉಣ್ಣಿಸಲು ಅನ್ನಪೂರ್ಣ ಯೋಜನೆ ಆರಂಭಿಸಿರುವುದು ಸಂತೋಷದ ವಿಷಯ. ಇದೊಂದು ಮಾನವೀಯ ಕಾರ್ಯ. ಗುರುತರವಾದ ಜವಾಬ್ದಾರಿ ಎಂದು ಹೇಳಿದರು.

ಭೂಮಿಯೊಳಗೆ ಬಿದ್ದ ಬೀಜ ಕೆಟ್ಟಿತೆನಬೇಡ. ಅಕ್ಕನವರು ಬಿತ್ತಿದ ಬೀಜ ಬೆಳೆ ನೀಡೇ ನೀಡುತ್ತವೆ. ಅಕ್ಕನ ಭಕ್ತರು ಆಚರಣೆಯಲ್ಲಿ ಗಟ್ಟಿ ಕಾಳಾಗಿದ್ದಾರೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ, ಡಾ. ವಚನಶ್ರುತಿ ಮಾತನಾಡಿದರು. ಅಶ್ವಿನಿ ರಾಜಕುಮಾರ ಚಿಟ್ಟಾ ವಚನ ಸಂಗೀತ ಸುಶ್ರಾವ್ಯವಾಗಿ ನಡೆಸಿಕೊಟ್ಟರು. ಆಳಂದದ ಕೋರಣೇಶ್ವರ ಸ್ವಾಮೀಜಿ ಸಮ್ಮುಖ, ನೀಲಮ್ಮನ ಬಳಗದ ನೀಲಮ್ಮ ರೂಗನ್ ಅಧ್ಯಕ್ಷತೆ ವಹಿಸಿದ್ದರು.

ಖೇಳಗಿಯ ಶಿವಲಿಂಗ ಸ್ವಾಮೀಜಿ, ಕಲಬುರಗಿಯ ಮಾತೆ ಪ್ರಭುಶ್ರೀ, ನಿಡವಂಚಾದ ಮಾತೆ ಮೈತ್ರಾದೇವಿ, ಬೀದರನ ಶರಣಮ್ಮ ತಾಯಿ, ಅಲಿಯಾಬಾದ್‍ನ ಲಲಿತಾ ತಾಯಿ, ಅಕ್ಕ ಮಹಾದೇವಿ, ಕಮಲಾಬಾಯಿ ತಾಯಿ ಇದ್ದರು.

‘ವಚನ ವಿಜಯೋತ್ಸವ ಪಥ ಸಂಚಲನ’

ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವ ನಿಮಿತ್ತ ಲಿಂಗಾಯತ ಮಹಾಮಠದ ವತಿಯಿಂದ ನಗರದಲ್ಲಿ ಶನಿವಾರ ಭವ್ಯ ‘ವಚನ ವಿಜಯೋತ್ಸವ ಪಥ ಸಂಚಲನ’ ನಡೆಯಿತು. ಪಾಪನಾಶ ಗೇಟ್‍ನಿಂದ ಆರಂಭಗೊಂಡ ಪಥ ಸಂಚಲನವು ಪಾಪನಾಶ ದೇಗುಲದ ಮೂಲಕ ಹಾಯ್ದು ಬಸವಗಿರಿಗೆ ತಲುಪಿ ಸಮಾರೋಪಗೊಂಡಿತು.

ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಹಸ್ರಾರು ಶರಣ- ಶರಣೆಯರು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಶ್ರದ್ಧೆ-ಭಕ್ತಿಯಿಂದ ಸಾಗಿದರು. ಷಟ್‍ಸ್ಥಲ ಧ್ವಜ, ಛತ್ರಿ, ಚಾಮರಗಳು ಪಥ ಸಂಚಲನದ ವೈಭವ ಹೆಚ್ಚಿಸಿದವು.

ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಅಕ್ಕ ಅನ್ನಪೂರ್ಣತಾಯಿ ಅವರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ಪಥ ಸಂಚಲನವು ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯ ರಕ್ಷಣೆಗೆ ಶರಣರು ಕಾಡಿನಲ್ಲಿ ಸಂಚರಿಸಿದಂತಹ ಅನುಭವ ನೀಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
1 Comment
  • ಅಕ್ಕ‌ ಅನ್ನಪೂರ್ಣ ತಾಯಿಯವರ ಪ್ರಥಮ ಸ್ಮರಣೋತ್ಸವದಲ್ಲಿ,ಲಿಂಗಾಯತ ಅಸ್ಮಿತೆಗಾಗಿ ,ಲಿಂಗಾಯತ ಸಂಸ್ಕ್ರತಿಗಾಗಿ ಎಲ್ಲರೂ ಸಂಘಟಿತರಾಗಿದ್ದು ಖುಷಿ, ಬೀದರ್ ನಿಂದ ಶುರುವಾದ ಈ ಐಕ್ಯದ ಧ್ವನಿ ಕರ್ನಾಟಕದ ಇನ್ನೊಂದು ತುದಿ ಚಾಮರಾಜನಾಗದವರೆಗೆ ತಲುಪಿ, ಲಿಂಗಾಯತ ಅಸ್ಮಿತೆಗಾಗಿ ಒಂದಾಗುವ ಹೋರಾಟ ಶುರುವಾಗಲಿ,ಲಿಂಗಾಯತ ಸ್ವತಂತ್ರ ಧರ್ಮವಾಗಿದೆ, ಅದಕ್ಕೆ ಮಾನ್ಯತೆ ದೊರಕಲಿ.

Leave a Reply

Your email address will not be published. Required fields are marked *