ವಿಭಿನ್ನ ಅಕ್ಕಮಹಾದೇವಿ ಅವರ 875ನೇ ಜಯಂತಿ ಕಾರ್ಯಕ್ರಮ
ನೆಲಮಂಗಲ:
ಬಸವಣ್ಣ ದೇವರ ಮಠದ ಆವರಣದಲ್ಲಿ ನಡೆದ ವೀರವಿರಾಗಿಣಿ ಶರಣೆ ಅಕ್ಕಮಹಾದೇವಿ ಅವರ 875ನೇ ಜಯಂತಿಯು ವಿಭಿನ್ನ, ವಿಶೇಷ, ಅರ್ಥಪೂರ್ಣ ರೀತಿಯ ಆಚರಣೆ ಮೂಲಕ ಎಲ್ಲರ ಗಮನ ಸೆಳೆಯಿತು.
ಅಕ್ಕನ ಬಳಗ ಮತ್ತು ಕದಳಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಸಂಕಲ್ಪ ಮಾಡಿದಂತೆ ಅಕ್ಕಮಹಾದೇವಿ ಅವರ ವಚನಗಳ ಪುಷ್ಪಾರ್ಚನೆಯ ಗಾಯನವನ್ನು ಮಾಡಲಾಯಿತು. ಸತತ 4 ಗಂಟೆ 10 ನಿಮಿಷಗಳ ಕಾಲ 434 ವಚನಗಳ ಪ್ರಾರ್ಥನೆ, ಗಾಯನ ಮಾಡಿ, ಪುಷ್ಪಾರ್ಚನೆ ಮಾಡಿರುವಂಥದ್ದು ವಿಶೇಷವೆಂದೆನಿಸಿತು.

ಕದಳಿ ವೇದಿಕೆಯ ಅಧ್ಯಕ್ಷರಾದ ಮಂಜುಳಾ ಸುರೇಶ, ಅರ್ಚನಾ ಕುಲಕರ್ಣಿ, ತೇಜಸ್ವಿನಿ, ಮಂಜುಳಾ, ಶೀಲಾ, ಶಾರದಾ, ಶಾಂತಮ್ಮ, ಪ್ರಮೀಳಾ, ರಾಜೇಶ್ವರಿ, ಬಸಮ್ಮ, ದೇವಿಕಾ, ಸುಮಲತಾ, ಗೀತಾ, ರಾಧಾ, ಹೇಮಲತಾ, ರೇಣುಕಮ್ಮ, ಜಗದಾಂಬ, ಪರಿಮಿಳಾ, ಶೈಲಜಾ, ರುದ್ರಾಣಮ್ಮ, ಚಂದ್ರಕಲಾ, ಮಂಗಳಮ್ಮ ಅವರು ಸುಶ್ರಾವ್ಯವಾಗಿ ಎಲ್ಲ ವಚನಗಳನ್ನು ಹಾಡಿ, ಪ್ರಾರ್ಥಿಸಿ ಸರ್ವರಿಂದಲೂ ಶಭಾಷ್ ಎನಿಸಿಕೊಂಡರು.

ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಈ ಸಂದರ್ಭದಲ್ಲಿ ಮಾತನಾಡುತ್ತ, 434 ವಚನಗಳನ್ನು ನಿರಂತರ 5 ತಿಂಗಳುಗಳ ಕಾಲ ಅಭ್ಯಾಸ ಮಾಡಿ ಇದನ್ನು ಯಶಸ್ವಿಗೊಳಿಸಲಾಯಿತು.
ಕರ್ನಾಟಕದ ಇತಿಹಾಸದಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಅವರ ವಚನ ಗಾಯನ, ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿರುವುದು ಇದೇ ಮೊದಲಾಗಿದೆ, ಇದೊಂದು ಹೊಸ ದಾಖಲೆ ಎನ್ನಬಹುದು ಎಂದರು. ಮತ್ತು ನಾವೆಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮಗೆಲ್ಲ ಸಂತಸ ತಂದಿದೆ. ಶರಣೆ ಅಕ್ಕಮಹಾದೇವಿ ಆಶೀರ್ವಾದ ಸದಾಕಾಲ ಮನುಕುಲದ ಮೇಲಿರಲಿ ಎಂದು ಹೇಳುವುದಕ್ಕೆ ಮತ್ತಷ್ಟು ಸಂತಸವಾಗುತ್ತದೆ ಎಂದರು.
ವನಕಲ್ಲು ಮಠದ ಡಾ. ಬಸವ ರಮಾನಂದ ಸ್ವಾಮೀಜಿ ಸಹ ಮಾತನಾಡಿದರು. ಬಂಡೆಮಠದ ಮಹಾಲಿಂಗ ಸ್ವಾಮೀಜಿ, ದೊಡ್ಡಮಠದ ಶಿವಬಸವ ಸ್ವಾಮೀಜಿ, ಕಂಬಾಳಮಠದ ಶಿವಾಚಾರ್ಯ ಸ್ವಾಮೀಜಿ, ನಗರಸಭಾ ಸದಸ್ಯೆ ಪೂರ್ಣಿಮಾ, ವೀರಶೈವ ಲಿಂಗಾಯತ ಮಹಾಸಭಾದ ರೇವಣಸಿದ್ದಯ್ಯ, ರಾಜಮ್ಮ, ವೇದಾವತಿ, ನಾಗರಾಜು, ಬಾಲಚಂದ್ರ, ಅಕ್ಕನ ಬಳಗ, ಕದಳಿ ವೇದಿಕೆ ಸದಸ್ಯರು, ಬಸವೇಶ್ವರ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

