ಕಲಬುರಗಿ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಣ, ಬರೆಹಗಳನ್ನು ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಬಸವಣ್ಣನ ಬಗ್ಗೆ ಅಂಬೇಡ್ಕರ್ ಬರೆದಿರುವ ಒಂದು ಸಣ್ಣ ಟಿಪ್ಪಣಿ ಕಾಣಿಸಿತು. ಕುತೂಹಲದಿಂದ ಈ ಟಿಪ್ಪಣಿಗೆ ಆಕರವಾದ ‘ಲಿಂಗಾಯತ ಮೂವ್ ಮೆಂಟ್’ ಎನ್ನುವ ಮೂಲ ಇಂಗ್ಲಿಷ್ ಕೃತಿಯನ್ನು ಓದಿದೆ. ಹೀಗೆ ಬೆಳೆದ ಕುತೂಹಲ ಅಂಬೇಡ್ಕರ್ ಲಿಂಗಾಯತ ಸಮುದಾಯದ ಬಗ್ಗೆ ಚರ್ಚಿಸಿದ ಮತ್ತು ಉಲ್ಲೇಖಿಸಿದ ಘಟನಾವಳಿಗಳ ಚಾರಿತ್ರಿಕ ಪಲ್ಲಟಗಳನ್ನು ಅಧ್ಯಯನ ಮಾಡಿದೆ. ನಮಗಿರುವ ಆಕರಗಳ ಪ್ರಕಾರ 1918ರಿಂದಲೇ ಅಂಬೇಡ್ಕರ್ ಲಿಂಗಾಯತ ಸಮುದಾಯವನ್ನು ಉಲ್ಲೇಖಿಸಿರುವುದು ಕಾಣಿಸಿತು.
ಬ್ರಿಟಿಷ್ ಭಾರತದಲ್ಲಿ ಚುನಾವಣಾ ಸುಧಾರಣೆ ಮಾಡಲು ಮತ್ತು ಮತಾಧಿಕಾರವನ್ನು ನಿರ್ಧರಿಸಲು ಇಂಗ್ಲೆಂಡ್ನಿಂದ 1918-19ರಲ್ಲಿ ಸೌತ್ ಬರೋ ಸಮಿತಿ ಭಾರತಕ್ಕೆ ಬರುತ್ತದೆ. ಆಗ ಈ ಸಮಿತಿಗೆ ನೀಡಿದ ಲಿಖಿತ ಹೇಳಿಕೆಯಲ್ಲಿ ಅಂಬೇಡ್ಕರ್ ಲಿಂಗಾಯತ ಸಮುದಾಯವನ್ನು ಉಲ್ಲೇಖಿಸುತ್ತಾರೆ. ಮುಂಬೈ ಕರ್ನಾಟಕಕ್ಕೆ ಸೇರಿದ ಬೆಳಗಾವಿ, ಬಿಜಾಪುರ, ಧಾರವಾಡ ಜಿಲ್ಲೆಗಳ ಮಂಡಳಿಗಳ ಸದಸ್ಯರ ಸಂಖ್ಯೆ 12,730 ಎಂತಲೂ, ಈ ಮೂರು ಜಿಲ್ಲೆಗಳ ಒಟ್ಟು ಲಿಂಗಾಯತರ ಸಂಖ್ಯೆ 9,33,123 ಎಂತಲೂ ಈ ವರದಿಯಲ್ಲಿ ಅಂಕಿ ಸಂಖ್ಯೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಲಿಂಗಾಯತರನ್ನು ಬ್ರಾಹ್ಮಣೇತರ ಮತದಾರರು ಎಂದೇ ಪರಿಭಾವಿಸಿದ್ದಾರೆ. (ಸಂ:1/288). ಅಂಬೇಡ್ಕರ್ ಮುಂಬೈ ಸರಕಾರದಲ್ಲಿದ್ದ ಕಾರಣ ಈ ಅಂಕಿ ಸಂಖ್ಯೆಯನ್ನು ಅಧಿಕೃತವಾಗಿ ಸೌತ್ ಬರೋ ಸಮಿತಿಗೆ ಸಲ್ಲಿಸುತ್ತಾರೆ. ಇಲ್ಲಿ ಲಿಂಗಾಯತರನ್ನು ಮೊದಲ ಬಾರಿಗೆ ಬ್ರಾಹ್ಮಣೇತರ ಎಂದು ಗುರುತಿಸುವುದು ಗಮನಾರ್ಹವಾಗಿದೆ.
ಅಂಬೇಡ್ಕರ್ ಅವರು ಬ್ರಿಟಿಷ್ ಆಡಳಿತದಲ್ಲಿ ಭಾರತೀಯ ಶಾಸಕಾಂಗ ಸುಧಾರಣೆಯ ಜಂಟಿ ಸಮಿತಿಯಲ್ಲಿ ಸದಸ್ಯರಾಗಿ ಕೆಲಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಆಗಸ್ಟ್ 2, 1933ರಲ್ಲಿ ನಡೆದ ಚರ್ಚೆಯಲ್ಲಿ ಅಂಬೇಡ್ಕರ್ ಅವರು ಎಲ್ಲಾ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಬ್ರಾಹ್ಮಣರು ಅಲ್ಲವೇ, ಮುಂಬೈ ಪ್ರಾಂತದಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳೂ ಬ್ರಾಹ್ಮಣರ ವಶದಲ್ಲಿವೆ ಅಲ್ಲವೇ? ಎನ್ನುತ್ತಾರೆ. ಮತ್ತೋರ್ವ ಸದಸ್ಯರಾಗಿದ್ದ ದೇಶಪಾಂಡೆ ಎನ್ನುವವರು ಇಲ್ಲ ಬೇರೆಯವರ ವಶದಲ್ಲಿಯೂ ಇವೆ, ಉದಾಹರಣೆಗೆ ಲಿಂಗಾಯತರು ಎನ್ನುತ್ತಾರೆ. ಆಗ ಅಂಬೇಡ್ಕರ್ ಅವರು, ಹಿಂದೂ ಧರ್ಮದ ಕಕ್ಷೆಯಲ್ಲಿ ಬರುವ ಲಿಂಗಾಯತರು, ಜೈನ, ಬೌದ್ಧರು ಈ ಎಲ್ಲಾ ಧಾರ್ಮಿಕ ಸಂಸ್ಥೆಗಳು ಬ್ರಾಹ್ಮಣರ ವಶದಲ್ಲಿಯೇ ಇವೆಯಲ್ಲವೇ? ಎಂದು ಅನುಮಾನ ವ್ಯಕ್ತಪಡಿಸುತ್ತಾರೆ. (ಸಂ:2/ಪು:945-960). ಮುಂದುವರಿದು ವಿ.ಡಿ.ಸಾವರ್ಕರ್ರ ಹಿಂದೂ ಧರ್ಮದ ವ್ಯಾಖ್ಯಾನವನ್ನು ವಿಶ್ಲೇಷಣೆಗೆ ಒಡ್ಡುತ್ತಾ ಲಿಂಗಾಯತ ಧರ್ಮ ವಿಶಾಲ ಹಿಂದೂ ಧರ್ಮದ ವ್ಯಾಪ್ತಿಯಲ್ಲಿಯೇ ಬರುತ್ತದೆ ಎಂದ ಸಾವರ್ಕರ್ರ ಉಲ್ಲೇಖವನ್ನು ಉದಾಹರಣೆ ಕೊಟ್ಟು ಚರ್ಚಿಸುತ್ತಾರೆ. (ಸಂ:6/ಪು:499). 1918ರಲ್ಲಿ ಲಿಂಗಾಯತರನ್ನು ಬ್ರಾಹ್ಮಣೇತರರು ಎಂದು ಲೆಕ್ಕ ಕೊಡುವ ಅಂಬೇಡ್ಕರ್ ಅವರು ಈ 1933ರ ಸಂದರ್ಭದಲ್ಲಿ ಲಿಂಗಾಯತರನ್ನು ಜೈನ, ಬೌದ್ಧರ ಜತೆ ಸೇರಿಸಿ ಇವರೆಲ್ಲರೂ ಬ್ರಾಹ್ಮಣರ ವಶದಲ್ಲಿರಬಹುದೇ ಎನ್ನುವ ಅನುಮಾನವನ್ನು ವ್ಯಕ್ತ ಪಡಿಸುತ್ತಾರೆ. ಈ ಪಲ್ಲಟಕ್ಕೆ ಅವರು ತಿರುಗಾಟದಲ್ಲಿ ಕಂಡುಕೊಂಡ ಘಟನೆಗಳ ಪ್ರಭಾವವೂ ಇರಬಹುದು.
ಪ್ರತ್ಯೇಕ ಕರ್ನಾಟಕ ಚರ್ಚೆಯ ಸಂದರ್ಭದಲ್ಲಿ ಎಪ್ರಿಲ್ 3, 1938ರಲ್ಲಿ ಅಂಬೇಡ್ಕರ್ ಅವರು ಕರ್ನಾಟಕ ಪ್ರಾಂತವು ರಾಜ್ಯ ವಾಗುವುದಾದರೆ, ಅದು ಉಳಿದೆಲ್ಲರ ವಿರುದ್ಧವಾದ ಲಿಂಗಾಯತರ ಪ್ರಾಂತವಾಗುವುದು ಎಂದು ಆತಂಕಪಡುತ್ತಾರೆ. ಕರ್ನಾಟಕ ಪ್ರತ್ಯೇಕ ಪ್ರಾಂತವಾದರೆ ಮರಾಠಿಗರು ಕನ್ನಡಿಗರ ವಿರುದ್ಧ ಒಂದುಗೂಡುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. (ಸಂ:2/ಪು:245) ಇದನ್ನು ಗಮನಿಸಿದರೆ ಲಿಂಗಾಯತರು ಕೂಡ ಪ್ರಭಾವಿ ಮೇಲ್ಜಾತಿಗಳಾಗಿದ್ದು ಬ್ರಾಹ್ಮಣರ ಪ್ರಭಾವದಲ್ಲಿ ಅಸ್ಪಶ್ಯರನ್ನು ಮತ್ತು ದಮನಕ್ಕೆ ಒಳಗಾದ ಕೆಳಜಾತಿಗಳನ್ನು ಶೋಷಿಸುವ ಸಮುದಾಯ ಎಂದು ಅಂಬೇಡ್ಕರ್ ಪರಿಭಾವಿಸುತ್ತಾರೆ. ಈ ಕಾರಣದಿಂದ ಪ್ರತ್ಯೇಕ ಕರ್ನಾಟಕವಾದರೆ ಅದು ಲಿಂಗಾಯತರ ರಾಜ್ಯವಾಗಿಬಿಡಬಲ್ಲದು ಎಂದು ಸಹಜವಾದ ಆತಂಕ ವ್ಯಕ್ತ ಪಡಿಸಿದ್ದಾರೆ.
ಅಂಬೇಡ್ಕರ್ ಅವರ ರಾಜಕೀಯ ಚಟುವಟಿಕೆಯ ಸಂದರ್ಭವದು. 1939ರಲ್ಲಿ ಕಾಂಗ್ರೆಸ್ನಿಂದ ಹೊರಬಂದಿರುತ್ತಾರೆ. ಆಗ ಬೆಳಗಾವಿಯಲ್ಲಿ ಮುಸ್ಲಿಮ್ ಲೀಗ್ ಪಕ್ಷದವರು 25 ಡಿಸೆಂಬರ್ 1939ರಲ್ಲಿ ಜಿನ್ನಾರವರ ಜಯಂತಿಯನ್ನು ಆಚರಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರನ್ನು ಆಮಂತ್ರಿಸಲಾಗಿತ್ತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಮಾತನಾಡುತ್ತಾ, ‘‘ಭಾರತದಲ್ಲಿರುವ ಮುಸ್ಲಿಮರು ತಾವೆಲ್ಲಾ ಹಿಂದೂಗಳೆನ್ನುವುದನ್ನು ಮರೆಯಬಾರದು. ಈ ದೇಶದಲ್ಲಿಯೇ ಹುಟ್ಟಿ ಇಲ್ಲಿಯೇ ಸಾಯಬೇಕಾಗುತ್ತದೆ. ಹಿಂದೂಸ್ಥಾನದ ಸ್ವಾತಂತ್ರ್ಯದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲಿನ ಲಿಂಗಾಯತರು ಮತ್ತು ಮರಾಠರು ಬ್ರಾಹ್ಮಣರ ವಿರುದ್ಧ ಇದ್ದಾರೆಂದು ತಿಳಿಯಿತು. ಲಿಂಗಾಯತ, ಮರಾಠ, ಮುಸಲ್ಮಾನ, ಅಸ್ಪಶ್ಯರೆಲ್ಲರೂ ಸಮಾನ ದುಃಖಿಗಳು. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ವರ್ತಿಸಿರಿ. 1939ಕ್ಕಿಂತ ಮೊದಲು ಮುಂಬೈ ಸರಕಾರದಲ್ಲಿ ಲಿಂಗಾಯತ, ಮರಾಠಾ, ಮುಸಲ್ಮಾನರೇ ದಿವಾನರಾಗಿದ್ದರಲ್ಲವೇ? ಆಗ ಜಗಳವಾಡದೆ ಪರಸ್ಪರ ಸೌಹಾರ್ದವಾಗಿ ಇದ್ದರಲ್ಲವೇ? ಈಗಲೂ ಅದೇ ಒಗ್ಗಟ್ಟನ್ನು ಪ್ರದರ್ಶಿಸಬೇಕು’’ ಎನ್ನುತ್ತಾರೆ. (ಸಂ:20/ಪು:39). ಇಲ್ಲಿ ಎರಡು ನೆಲೆಗಳಿವೆ. ಅಂಬೇಡ್ಕರ್ ಮುಸ್ಲಿಮರೂ ಹಿಂದೂಗಳೇ ಎಂದು ಹೇಳುವಾಗಲೂ ಅವರು ಕರ್ಮಟ ಬ್ರಾಹ್ಮಣರ ಅಸ್ಪಶ್ಯತಾ ಆಚರಣೆಯನ್ನು ಒಳಗೊಂಡ ಹಿಂದೂ ಧರ್ಮದ ಬಗ್ಗೆ ಹೇಳುತ್ತಿಲ್ಲ. ಮುಸ್ಲಿಮರು ಹಿಂದೂಗಳೆಂದು ಭಾವಿಸಿಕೊಂಡು ಯಾರ ಜತೆ ಗುರುತಿಸಿಕೊಳ್ಳಬೇಕು ಎನ್ನುವ ಮಾರ್ಗದರ್ಶನವನ್ನೂ ಮಾಡುತ್ತಾರೆ. ಅಂದರೆ ರಾಜಕೀಯ ಶಕ್ತಿಯಾಗಲು ಮುಸ್ಲಿಮರು ಮರಾಠ ಮತ್ತು ಲಿಂಗಾಯತರ ಜತೆ ಸೇರಬೇಕಿದೆ ಎನ್ನುವುದರ ಕಡೆ ಗಮನಸೆಳೆಯುತ್ತಾರೆ.
ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಕಾಯ್ದೆ ಮಂಡನೆಯ ಸಂದರ್ಭದಲ್ಲಿ ಪರಿಭಾವಿಸುವ ‘ಹಿಂದೂ’ ಪರಿಕಲ್ಪನೆ ಬಹಳ ವಿಶಾಲವಾಗಿದೆ. 1950ರಲ್ಲಿ ನಡೆದ ಲೋಕಸಭಾ ಚರ್ಚೆಯಲ್ಲಿ ಹಿಂದೂ ಕೋಡ್ ಬಿಲ್ ಕಾಯ್ದೆಯ ಪರಿವ್ಯಾಪ್ತಿಯ ಬಗ್ಗೆ ಚರ್ಚಿಸುತ್ತಾ ಲಿಂಗಾಯತ ಮತ್ತು ವೀರಶೈವವನ್ನು ಉಲ್ಲೇಖಿಸುತ್ತಾರೆ. ಈ ಸಂಹಿತೆಯು ಯಾರು ಯಾರಿಗೆ ಅನ್ವಯಿಸುತ್ತದೆ ಎಂದು ಪೀಠಿಕೆಯಲ್ಲಿ ಚರ್ಚಿಸುವಾಗ ಹಿಂದೂಗಳಾಗಿರುವ ಎಲ್ಲಾ ವ್ಯಕ್ತಿಗಳಿಗೆ ವೀರಶೈವರು ಅಥವಾ ಲಿಂಗಾಯತರು ಎಂದು ಹೆಸರಿಸುತ್ತಾರೆ.(ಸಂ:14/ಪು:44). ಇಲ್ಲಿ ಪುನಃ ಲಿಂಗಾಯತರನ್ನು ವಿಶಾಲ ಹಿಂದೂ ಧರ್ಮದ ವ್ಯಾಪ್ತಿಯ ಒಳಗೆ ತರುತ್ತಾರೆ. ಮೊದಲ ಬಾರಿಗೆ ಲಿಂಗಾಯತದ ಜತೆ ವೀರಶೈವವನ್ನು ಜಂಟಿಯಾಗಿ ಉಲ್ಲೇಖಿಸುತ್ತಾರೆ.
ಕರ್ನಾಟಕದಲ್ಲಿ ಲಿಂಗಾಯತ ಸ್ವಾಮಿಯೊಬ್ಬರು 1952ರ ಸಂದರ್ಭದಲ್ಲಿ ಡೋರ್ ಜಾತಿಯ ಜನರನ್ನು ಶುದ್ಧೀಕರಣ ಮಾಡಿ ಅವರನ್ನು ಇನ್ನುಮುಂದೆ ಯಾರೂ ಅಸ್ಪಶ್ಯರಂತೆ ನಡೆಸಿಕೊಳ್ಳಬಾರದು ಎಂದು ಹೇಳಿದ್ದರಂತೆ. ಆಗ ಮರಾಠಿ ಪತ್ರಕರ್ತರು ‘‘ಸ್ವಾಮೀಜಿಗಳೇ ಅಸ್ಪಶ್ಯರ ಬದಲಿಗೆ ಮುಸ್ಲಿಮ್ ಮತ್ತು ಕ್ರೈಸ್ತರನ್ನು ಶುದ್ಧೀಕರಿಸಿದ್ದರೆ ಚೆನ್ನಾಗಿತ್ತು’’ ಎಂದಿದ್ದರಂತೆ. ಅಂದರೆ ಇವರ ಮನಸ್ಸಿನಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರನ್ನು ಕರೆದುಕೊಂಡು ಅವರನ್ನು ಜಾತಿಗಳನ್ನಾಗಿಸಿದರೂ ಪರವಾಗಿಲ್ಲ ಅಸ್ಪಶ್ಯರಿಗೆ ದೀಕ್ಷೆ ಕೊಡಬಾರದಿತ್ತು ಎನ್ನುತ್ತಾರೆ. ಇದು ಬ್ರಾಹ್ಮಣ ಜಾತಿಯ ವರ್ಚಸ್ಸಿಗೆ ಕುಂದು ಉಂಟಾಯಿತು ಎನ್ನುವಂತೆ ನಡೆದ ಚರ್ಚೆಯನ್ನು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. (ಸಂ:22/ಪು:102) ಈ ಚರ್ಚೆಯಲ್ಲಿ ಲಿಂಗಾಯತರು ದಲಿತ ಜಾತಿಗಳಿಗೆ ಲಿಂಗಧಾರಣೆ ಮಾಡುವ ಕ್ರಮದ ಬಗ್ಗೆ ಸಹಮತವಿದ್ದಂತೆ ಕಂಡರೂ, ಈ ಕ್ರಮವನ್ನು ಇದೇ ಲಿಂಗಾಯತ ಮತ್ತು ಮರಾಠಾ ಸಮುದಾಯ ಹೇಗೆ ಪರಿಭಾವಿಸಿತು ಎನ್ನುವ ವೈರುಧ್ಯಗಳನ್ನು ಗ್ರಹಿಸುತ್ತಾರೆ.
ಗಣೇಶೋತ್ಸವವನ್ನು ಹಿಂದೂಗಳ ಸಾರ್ವಜನಿಕ ಉತ್ಸವ ಎಂದು ಹೇಳಬಹುದೇ ವಿನಃ ರಾಷ್ಟ್ರೀಯ ಹಬ್ಬವೆಂದು ಕರೆಯಲಾಗದು ಎಂದು ಅಂಬೇಡ್ಕರ್ ಚರ್ಚಿಸುತ್ತಾರೆ. ಕಾರಣ ಮೂರ್ತಿ ಪೂಜೆಯನ್ನು ನಂಬದ ಆರ್ಯ ಸಮಾಜ, ಬ್ರಹ್ಮಸಮಾಜ, ಪ್ರಾರ್ಥನಾ ಸಮಾಜವನ್ನು ಮತ್ತು ವೈದಿಕ ಧರ್ಮದ ಒಳಗೆ ಸೇರದ ಲಿಂಗಾಯತ, ಜೈನ, ಸಿಖ್, ಬೌದ್ಧ ಪಂಥೀಯರನ್ನೂ ಹಿಂದೂಗಳಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಈ ದೃಷ್ಟಿಯಿಂದ ಗಣೇಶೋತ್ಸವ ಹಿಂದೂಗಳ ಸಾರ್ವಜನಿಕ ಉತ್ಸವವೇ ಹೊರತು ಅದೊಂದು ರಾಷ್ಟ್ರೀಯ ಉತ್ಸವ ಆಗಲಾರದು ಎಂದು ಅಂಬೇಡ್ಕರ್ ಚರ್ಚಿಸುತ್ತಾರೆ. (ಸಂ:22/ಪು:116) ಹೀಗೆ ಹೇಳುವಾಗ ಗಣೇಶನು ಲಿಂಗಾಯತರು ಆರಾಧನೆ ಮಾಡುವ ದೇವರಲ್ಲ ಎನ್ನುವುದಕ್ಕೆ ಒತ್ತು ಕೊಡುತ್ತಾರೆ. ಅಂತೆಯೇ ಮತ್ತೊಮ್ಮೆ ಲಿಂಗಾಯತವನ್ನು ಜೈನ, ಸಿಖ್, ಬೌದ್ಧ ಪಂಥೀಯರ ಜತೆ ಹಿಂದೂವಲ್ಲದ ಪ್ರತ್ಯೇಕ ಧರ್ಮಗಳ ಜತೆ ಸೇರಿಸುತ್ತಾರೆ.
ಖೈರಮೋಡೆ ಅವರು ಅಂಬೇಡ್ಕರ್ ಜೀವನ ಚರಿತ್ರೆಯ ಸಂಪುಟ ಒಂದರ 116-117ನೇ ಪುಟದಲ್ಲಿ ಅಂಬೇಡ್ಕರ್ ಬಸವಣ್ಣನ ಬಗ್ಗೆ ಮಾತನಾಡಿರುವುದನ್ನು ಉಲ್ಲೇಖಿಸುತ್ತಾರೆ. ಈ ಉಲ್ಲೇಖವನ್ನು ಆಧರಿಸಿ ಅಂಬೇಡ್ಕರ್ ಬಸವಣ್ಣನ ಬಗೆಗೆ ಬರೆದ ಟಿಪ್ಪಣಿಯು ಕನ್ನಡದಲ್ಲಿ ಪ್ರಕಟವಾದ ಅಂಬೇಡ್ಕರ್ ಸಂಪುಟ 22ರ 541ನೇ ಪುಟದಲ್ಲಿದೆ. ಈ ಟಿಪ್ಪಣಿಯಲ್ಲಿ ಅಂಬೇಡ್ಕರ್ ಅವರು ಹುಣಶ್ಯಾಳ್ ಅವರ ‘ದಿ ಲಿಂಗಾಯತ ಮೂವ್ಮೆಂಟ್’ ಕೃತಿಯ 20ನೇ ಪುಟದ ಉಲ್ಲೇಖದಿಂದ ಬಸವಣ್ಣನ ಬಗೆಗೆ ವಿವರಿಸಿದ್ದಾರೆ. ಬಹುಶಃ ಅಂಬೇಡ್ಕರ್ 1918ರಿಂದಲೂ ಲಿಂಗಾಯತವನ್ನು ಒಂದು ಸಮುದಾಯವಾಗಿ ಗ್ರಹಿಸಿದ್ದರು. ಆದರೆ ಲಿಂಗಾಯತವನ್ನು ಹುಟ್ಟುಹಾಕಿದ ಬಸವಣ್ಣನ ಬಗ್ಗೆ ತಿಳಿದಿರುವುದಿಲ್ಲ. 1947ರಲ್ಲಿ ‘ಲಿಂಗಾಯತ ಮೂವ್ಮೆಂಟ್’ ಕೃತಿಯನ್ನು ಅಧ್ಯಯನ ಮಾಡಿದ ಕಾರಣ ಲಿಂಗಾಯತ ಮತ್ತು ಬಸವಣ್ಣನ ಬಗ್ಗೆ ಅಂಬೇಡ್ಕರ್ ಹೆಚ್ಚು ಅರಿತಂತೆ ಕಾಣುತ್ತದೆ.
ಕನ್ನಡದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬರಹದ ಓದು ಚರ್ಚೆ ಯಾವಾಗ ಆರಂಭವಾಯಿತು ಎನ್ನುವ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲ. ಆದರೆ 1947ರಲ್ಲಿ ಪ್ರಕಟವಾದ ‘ಲಿಂಗಾಯತ ಮೂವ್ಮೆಂಟ್’ ಕೃತಿಯು ಒಂದು ವಿಶೇಷ ಮಾಹಿತಿಯನ್ನು ಒದಗಿಸುತ್ತದೆ. ಬೌದ್ಧದಮ್ಮದ ಮತಾಂತರದ ನಿರ್ಧಾರಕ್ಕೂ ಮುನ್ನ ಅಂಬೇಡ್ಕರ್ ಜಗತ್ತಿನ ಬಹುತೇತ ಧರ್ಮಗಳನ್ನು ಅಭ್ಯಸಿಸುತ್ತಾರೆ. ರವಿದಾಸ ಪಂಥದಂತಹ ಸಣ್ಣಪುಟ್ಟ ಪಂಥಗಳನ್ನೂ ಗಮನಿಸುತ್ತಾರೆ. ಅಂತೆಯೇ ಕರ್ನಾಟಕದ ಶರಣರ ಚಳವಳಿ ಬಗ್ಗೆ 1947ರಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ‘ಕರ್ನಾಟಕ ಸಾಹಿತ್ಯ ಮಂದಿರ ಪ್ರಕಟಿಸಿದ ಎಸ್.ಎಂ.ಹುಣಶ್ಯಾಳ ಅವರು ಬರೆದ ‘ದಿ ಲಿಂಗಾಯತ್ ಮೂವ್ ಮೆಂಟ್: ಎ ಸೋಷಿಯಲ್ ರೆವಲೂಷನ್ ಇನ್ ಕರ್ನಾಟಕ ಎನ್ನುವ ಕೃತಿಯನ್ನು ಅಧ್ಯಯನ ಮಾಡುತ್ತಾರೆ. 2018ರಲ್ಲಿ ಚಿನ್ನವ್ವ ಚಂದ್ರಶೇಖರ ವಸ್ತ್ರದ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪರಿಣಾಮ ಬಸವೇಶ್ವರರ ಬಗ್ಗೆ ಅಂಬೇಡ್ಕರ್ ‘ಬಸವನು 12ನೇ ಶತಮಾನದಲ್ಲಿ ವೈದಿಕಶಾಹಿ ಸನಾತನತೆಯ ವಿರುದ್ಧ ಹೋರಾಟ ಮಾಡಿದವ, ವರ್ಣಾಶ್ರಮ ಧರ್ಮದ ವಿರುದ್ಧ ಬಂಡೆದ್ದವ’ ಎಂದು ಬರೆಯುತ್ತಾರೆ.
ವಿಶೇಷವೆಂದರೆ 1947ರಲ್ಲಿ ಪ್ರಕಟವಾದ ಈ ಕೃತಿಯು ಲಿಂಗಾಯತ ಧರ್ಮದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಹೊಂದಿದೆ. ಜಗತ್ತಿನ ಪ್ರಮುಖ ಧರ್ಮಗಳ ಜತೆ, ಹಲವು ಜ್ಞಾನಶಾಖೆಗಳ ಜತೆ ಲಿಂಗಾಯತ ಧರ್ಮವನ್ನು ತೌಲನಿಕವಾಗಿ ವಿಶ್ಲೇಷಿಸಿದ್ದಾರೆ. ಅಂತೆಯೇ ಲೇಖಕರಾದ ಹುಣಶ್ಯಾಳ ಅವರು ಕೊಡುವ ಕೃತಿ ಆಕರದ ಪಟ್ಟಿಯಲ್ಲಿ 1936ರಲ್ಲಿ ಪ್ರಕಟವಾದ ಡಾ.ಅಂಬೇಡ್ಕರ್ ಅವರ ‘ಅನಿಲೇಷನ್ ಆಫ್ ಕಾಸ್ಟ್’ ಕೃತಿಯೂ ಇದೆ. ಕೃತಿಯಲ್ಲಿ ಹಿಂದೂ ಧರ್ಮ ಹೇಗೆ ಮನುಷ್ಯರನ್ನು ಹಂತ ಹಂತವಾಗಿ ವಿಭಾಗಿಸುತ್ತದೆ ಎನ್ನುವ ಅಂಬೇಡ್ಕರ್ ಅವರ ವಿಶ್ಲೇಷಣೆಯ ಒಂದು ಪುಟವನ್ನು ಉಲ್ಲೇಖ ಮಾಡುತ್ತಾರೆ. ಈ ಉಲ್ಲೇಖದ ಮೂಲಕ ಹುಣಶ್ಯಾಳ ಅವರು ಲಿಂಗಾಯತವು ಹಿಂದೂ ಧರ್ಮಕ್ಕಿಂತ ಭಿನ್ನವಾದುದು ಎನ್ನುವುದನ್ನು ಮನವರಿಕೆ ಮಾಡಲು ಪ್ರಯತ್ನಿ ಸುತ್ತಾರೆ. ಇದನ್ನು ಗಮನಿಸಿದರೆ ‘ಲಿಂಗಾಯತ ಮೂವ್ಮೆಂಟ್’ ಕೃತಿ ರಚನೆಯ ಹಿಂದೆ ಅಂಬೇಡ್ಕರ್ ಚಿಂತನೆಗಳ ಪ್ರಭಾವವೂ ಇದೆ.
ಬಹುಶಃ ಅಂಬೇಡ್ಕರ್ ಅವರನ್ನು ಓದಿ ಆಕರವಾಗಿ ಬಳಸಿದ ಆರಂಭದ ಕನ್ನಡ ವಿದ್ವಾಂಸರಲ್ಲಿ ಎಸ್.ಎಂ. ಹುಣಶ್ಯಾಳ ಅವರನ್ನು ಗುರುತಿಸಬೇಕಾಗಿದೆ. ಹಾಗಾಗಿ ‘ಲಿಂಗಾಯತ ಮೂವ್ಮೆಂಟ್’ ಕೃತಿ ಅಂಬೇಡ್ಕರರಿಗೆ ಬಸವಣ್ಣನವರನ್ನು ಪರಿಚಯಿಸಿದಂತೆ, ಲೇಖಕ ಹುಣಶ್ಯಾಳ 1947ರಲ್ಲೇ ಕನ್ನಡಿಗರಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸಿದ್ದೂ ಮತ್ತೊಂದು ಮಹತ್ವದ ಸಂಗತಿಯಾಗಿದೆ. ಹೀಗೆ ಅಂಬೇಡ್ಕರ್ ಅವರ ಲಿಂಗಾಯತ ಮತ್ತು ಬಸವಣ್ಣನ ಬಗೆಗಿನ ಉಲ್ಲೇಖ ಮತ್ತು ಚರ್ಚೆ ಚಾರಿತ್ರಿಕವಾಗಿ ಮುಖ್ಯವಾಗಿವೆ.
(ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು 2015ರಲ್ಲಿ ಪ್ರಕಟಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟಗಳನ್ನು ಆಕರವಾಗಿ ಬಳಸಲಾಗಿದೆ.)
ಅತ್ಯುತ್ತಮ ಮಾಹಿತಿ. ಲಿಂಗಾಯತ ಧರ್ಮದ ಸ್ವತಂತ್ರ ಧರ್ಮದ ಮಾನ್ಯತೆಗೆ ಇಂತಹ ಆಕರಗಳನ್ನು ಉಪಯೋಗಿಸಿಕೊಳ್ಳಬಹುದು.
ನನಗೆ ಇದುವರೆಗೂ ತಿಳಿದಿರದ ಅತ್ಯುತ್ತಮ ಮಾಹಿತಿ. ಅರುಣ್ ಜೋಳದಕೂಡ್ಲಿಗಿಯವರಿಗೆ ಧನ್ಯವಾದಗಳು