ಬೀದರ
ವಚನ ಸಾಹಿತ್ಯದಲ್ಲಿ ಚೌಡಯ್ಯನವರು ವಿಶೇಷ ಶರಣರು. ವೈಚಾರಿಕ ಚಿಂತನೆ ಬೆಳೆಸುವ ಜೊತೆಗೆ ಅವರು ಸಮಾಜದ ತಪ್ಪುಗಳನ್ನು ತಮ್ಮ ವಚನ ಸಾಹಿತ್ಯದ ಮೂಲಕ ವಿರೋಧಿಸಿದರು ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಮಾಸಿಕ ಶರಣ ಸಂಗಮ, ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಅಂಬಿಗರ ಚೌಡಯ್ಯನವರಲ್ಲಿ ವೈಚಾರಿಕ ಪ್ರಜ್ಞೆ ಅತ್ಯಂತ ತೀಕ್ಷ್ಣವಾಗಿದೆ. ಜಿಡ್ಡುಗಟ್ಟಿದ ಸಮಾಜ ಹಾಗೂ ಅರ್ಥ ಕಳೆದುಕೊಂಡ ಧರ್ಮ ಇವೆರಡರ ಶುದ್ಧೀಕರಣ ಕಾರ್ಯವನ್ನು ಇವರು ತೀವ್ರವಾಗಿ ಕೈಕೊಂಡರು.
ಇಂದಿನ ಬಂಡಾಯ ಸಾಹಿತ್ಯದ ನಿಜವಾದ ಬೇರುಗಳು ೧೨ನೇ ಶತಮಾನದ ಅಂಬಿಗರ ಚೌಡಯ್ಯನವರಲ್ಲಿ ದಟ್ಟವಾಗಿರುವುದು ಸ್ಪಷ್ಟವಾಗುತ್ತದೆ. ತುಂಬಿದ ನದಿಗೆ ದೋಣಿಗೆ ಹುಟ್ಟು ಹಾಕುವ ಮಾತ್ರವಲ್ಲದೆ ಭವಸಾಗರವೆಂಬ ಈ ಸಂಸಾರದ ಶರಧಿಯನ್ನು ಅರಿವೆಂಬ ಹುಟ್ಟು ಹಾಕಿ ದಾಟಿಸುವ ಕೌಶಲ್ಯವುಳ್ಳವರಾಗಿದ್ದರು ಎಂದು ಹೇಳಿದರು.
ಕರ್ನಾಟಕ ಸಿವಿಲ್ ಇಂಜಿನಿಯರ್ ಪರಿಷತ್ತಿನ ನೂತನ ನಿರ್ದೇಶಕರಾದ ಹಾವಶೆಟ್ಟಿ ಪಾಟೀಲರು ಸನ್ಮಾನ ಸ್ವೀಕರಿಸಿ ಮಾತನಾಡಿ, ಬಸವತತ್ವವು ಚಿಂತನೆಗಳನ್ನು ಒಳಗೊಂಡಿದೆ. ಸಮಾನತೆ , ಸಮಾಜ ಸುಧಾರಣೆ ಮತ್ತು ಅಹಿಂಸೆಯಂತಹ ಅಂಶಗಳು ಇದರ ಪ್ರಮುಖ ಭಾಗಗಳು. ಕಾಯಕದಿಂದಲೇ ಜೀವನ ನಡೆಸಬೇಕು ಎಂದರು.

ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಮೊಳಕೇರಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರಕೃತಿಯ ಒಂದು ಭಾಗವಾಗಿರುವ ನಾವು ಅದರ ನಡೆ ನುಡಿಯಲ್ಲಿ ಜೀವನ ಸಾಗಿಸಬೇಕಾಗಿದೆ. ೧೨ನೇ ಶತಮಾನದ ವಚನಕಾರರು ಪ್ರಕೃತಿಯನ್ನು ಪ್ರೀತಿಸಿದರು ಮತ್ತು ಆರಾಧಿಸಿದರು. ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ನಮ್ಮದಾದರೆ ಬರುವ ತೊಂದರೆಗಳನ್ನು ತಡೆಗಟ್ಟಬಹುದು ಎಂದರು.
ಸಾಮಾಜಿಕ ಕಾರ್ಯಕರ್ತ ಬಸವರಾಜ ಮಾಳಗೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗುರುನಾನಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರಾಜಶೇಖರ ಸೇಡಂಕರ್ ಧ್ವಜಾರೋಹಣಗೈದರೆ, ಹರಳಯ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳ್ಳೆಕರ್ ವಚನ ಪಠಣ ಮಾಡಿದರು. ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರಿಂದ ಮೂಡಿ ಬಂದ ಪರಿಸರ ಗೀತೆಗಳು ಸೇರಿದ ಜನರನ್ನು ಹುಬ್ಬೆರಿಸುವಂತೆ ಮಾಡಿದವು.
ಈಶ್ವರಮ್ಮಾ ಪಟೇಲ ಭಕ್ತಿ ದಾಸೋಹಗೈದರು. ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸ್ವಾಗತಿಸಿದರೆ, ಸುಮಾ ಭೂಶೆಟ್ಟಿ ನಿರೂಪಿಸಿದರು. ಕಲ್ಯಾಣಿ ರಾಜಕುಮಾರ, ಚೇತನಾ ಬಸವರಾಜ ಪಾಟೀಲ ಗುರುಪೂಜೆ ನಡೆಸಿಕೊಟ್ಟರು. ಗುರುನಗರದ ನೀಲಮ್ಮನ ಬಳಗ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು.