ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ರವಿವಾರ ಬಸವಾದಿ ಶರಣ ಮಾದರ ಚೆನ್ನಯ್ಯನವರ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಯಿತು.
ಬೆಟ್ಟಪ್ಪ ಕಸ್ತೂರಿ ಅವರು ಮಾತನಾಡಿ, ಚೆನ್ನಯ್ಯನವರು ಬಸವಣ್ಣನವರ ಕಲ್ಯಾಣಕೀರ್ತಿ ವಾರ್ತೆಯನ್ನು ಕೇಳಿ ಕಲ್ಯಾಣಕ್ಕೆ ಬಂದು ಸೇವೆಗೈಯುತ್ತ ಅನುಭಾವದ ತುತ್ತ ತುದಿಗೇರಿದ ಮಹಾನ್ ಸಾಧಕ. ಇವರ ಅನುಭವವೇ ಅರಿವಿನ ಮನೆಯಾಯಿತೆಂದು ಮಾತನಾಡಿದರು.
ಪಾರ್ವತಿ ಪಾಟೀಲರು ಮಾತನಾಡಿ, ಲಿಂಗಾಂಗಯೋಗದ ಮಹತ್ವ ಮತ್ತು ಸಾಧನೆ ಕುರಿತು ತಿಳಿಸಿದರು. ಮತ್ತು ಬಸವಕಲ್ಯಾಣದಲ್ಲಿ ನಡೆದ 46ನೇ ಶರಣ ಕಮ್ಮಟದ ಕುರಿತು ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ಬಸವರಾಜ ಕುರುಗೋಡ ಅವರು, ದುಬೈಯಲ್ಲಿ ನಡೆದ ಶರಣರ ಕಾರ್ಯಕ್ರಮ ಕುರಿತಾಗಿ ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ರಾಚನಗೌಡ ಕೋಳೂರ ಮಾತನಾಡಿ, ಇದೇ ಡಿಸೆಂಬರ್ 20 ಮತ್ತು 21ರಂದು ಶಿವಶರಣೆಯರ 12ನೇ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಸಾನಿಧ್ಯವನ್ನು ಗುರು ಮಹಾಂತಪ್ಪಗಳು ವಹಿಸಿಕೊಳ್ಳಲಿದ್ದಾರೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಿದರು.

ಆರಂಭದಲ್ಲಿ ಶರಣ ಮಾದರ ಚೆನ್ನಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ವಚನ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ ಹಾಗೂ ನಾಗೇಶಪ್ಪ ಎ.ಎಸ್.ಐ ನಡೆಸಿಕೊಟ್ಟರು.
ಉಪಾಧ್ಯಕ್ಷರಾದ ವಿಜಯಕುಮಾರ ಸಜ್ಜನ ಸ್ವಾಗತಿಸಿದರು. ವೆಂಕಣ್ಣ ಆಶಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವ ಮಹಾಜನಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು. ಜಾ.ಲಿಂ. ಮಹಾಸಭಾ ತಾಲೂಕ ಅಧ್ಯಕ್ಷ ಜೆ. ಬಸವರಾಜ ಶರಣು ಸಮರ್ಪಿಸಿದರು.
ಜಗದೇವಿ ಚನ್ನಬಸವ, ಲಲಿತಾ ಡಾ. ಎಂ. ಬಸನಗೌಡ, ಸಿ.ಬಿ. ಪಾಟೀಲ, ಎ. ವೀರಭದ್ರಪ್ಪ, ಪಿ. ಸೋಮಶೇಖರ್, ಗೌರವಾಧ್ಯಕ್ಷರಾದ ಹರವಿ ನಾಗನಗೌಡರು, ಜಯಶ್ರೀ ಮಹಾಜನಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
