ಬಸವಕಲ್ಯಾಣ
ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಹಾಗೆ ಮಕ್ಕಳಿಗೆ ಬಾಲ್ಯದಲ್ಲೇ ಸರಿಯಾದ ಸಂಸ್ಕಾರದೊಂದಿಗೆ ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ, ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೂಜ್ಯ ಡಾ. ಗಂಗಾ ಮಾತಾಜಿ ಹೇಳಿದರು.

ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಮೇ 6 ರಿಂದ 10ರವರೆಗೆ ಮಕ್ಕಳಿಗಾಗಿ ನಡೆದ ಶರಣ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಸ್ತುತ ಸಮಾಜದ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು ಅವುಗಳನ್ನು ಹೆಚ್ಚಿಸುವಲ್ಲಿ ಇಂತಹ ಸಂಸ್ಕಾರ ಶಿಬಿರಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಎಲ್ಲಾ ಕಡೆ ಇಂತಹ ಶಿಬಿರಗಳನ್ನು ನಡೆಸುವ ಅವಶ್ಯಕತೆ ಇದೆ ಎಂದರು.

ಮಕ್ಕಳು ಚಿಕ್ಕವರಿರುವಾಗ ಅವರಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮುಂದೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಭಾಲ್ಕಿ ಹಿರೇಮಠದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಗುರುಬಸವ ಪಟ್ಟದ್ದೇವರು ಮಾತನಾಡುತ್ತ, ಬಸವಕಲ್ಯಾಣದಲ್ಲಿ ಸತತ ಮೂರು ವರ್ಷಗಳಿಂದ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಸಹಯೋಗದೊಂದಿಗೆ ಮಕ್ಕಳ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ನೂರಾರು ಮಕ್ಕಳಿಗೆ ಸಂಸ್ಕಾರ ಸಿಗುವಂತಾಗಿದೆ ಎಂದರು.

ಅನುಭವ ಮಂಟಪದ ಸಂಚಾಲಕ ಶಿವಾನಂದ ಮಹಾಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಮಾರುತಿರಾವ್ ಮೂಳೆ ಮಾತನಾಡಿ, ಇಂದಿನ ಮಕ್ಕಳಿಗೆ ಇಂತಹ ಶಿಬಿರಗಳ ಅವಶ್ಯಕತೆ ಬಹಳಷ್ಟು ಇದೆ. ಈ ಶಿಬಿರವನ್ನು ಆಯೋಜನೆ ಮಾಡಿದ ಪೂಜ್ಯರಿಗೆ ಕೃತಜ್ಞತೆ ಹೇಳಿದರು. ಡಾ. ಗಂಗಾಂಬಿಕೆ ಅಕ್ಕನವರು ವೇದಿಕೆಯಲ್ಲಿದ್ದರು.

ಮೌಲ್ಯಮಾಪನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ತನುಶ್ರೀ ರಾಜರೆಡ್ಡಿ, ಪ್ರೀತಿ ನಾಗಪ್ಪ, ದ್ವಿತೀಯ ಸ್ಥಾನ ಪಡೆದ ನಿವೇದಿತಾ ಅಮರೇಶ ಕೋಡ್ಲಿ ಹಾಗೂ ತೃತೀಯ ಸ್ಥಾನ ಪಡೆದ ಅನುಶ್ರೀ ಶ್ರೀಕಾಂತ ಮತ್ತು ಶಿವಪ್ರಸಾದ್ ಶರಣಯ್ಯ ಒಟ್ಟು ಐದು ಮಕ್ಕಳಿಗೆ ಪೂಜ್ಯರು ಪ್ರಶಸ್ತಿ ಪತ್ರಗಳನ್ನು ಮತ್ತು ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ನೀಡಿದರು.


ಮಹಾರಾಷ್ಟ್ರದ ಖ್ಯಾತ ಪ್ರವಚನಕಾರರಾದ ಶಿವಾನಂದ ಹೈಬತಪುರೆ, ಬಸವಕಲ್ಯಾಣದ ಸುಗುಣಾತಾಯಿ, ಹಾಲಮ್ಮತಾಯಿ, ಶಿವಬಸವ ದೇವರು, ವೀರಶೆಟ್ಟಿ ಇಮಡಾಪುರ, ಪ್ರಭುಲಿಂಗ ದೇವರು, ಬಸವ ದೇವರು ಉಪಸ್ಥಿತರಿದ್ದರು.