ಚಿಕ್ಕೋಡಿ
‘ದಯವೇ ಧರ್ಮದ ಮೂಲವಯ್ಯಾ ಎಂದು ಹೇಳಿದ ಅಣ್ಣ ಬಸವಣ್ಣನವರ ವಚನಗಳು ಇಡೀ ವಿಶ್ವಕ್ಕೆ ದಾರಿದೀಪವಾಗಿವೆ. ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು’ ಎಂದು ಹಿರಿಯ ಸಾಹಿತಿ ಎಸ್.ವೈ.ಹಂಜಿ ಹೇಳಿದರು.
ಕೂಡಲಸಂಗಮದಲ್ಲಿ ಏ.29, 30ರಂದು ನಡೆಯಲಿರುವ ರಾಜ್ಯಮಟ್ಟದ ಬಸವ ಜಯಂತಿ ಅಂಗವಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಚಿಕ್ಕೋಡಿಗೆ ಆಗಮಿಸಿದ ಅನುಭವ ಮಂಟಪ ರಥಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
‘ಬಸವಣ್ಣ ಸೇರಿದಂತೆ ಸಮಕಾಲಿನ ಶರಣರ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹಾಗೂ ಇತರೆ ಶರಣರು ಸಮಾನತೆಗಾಗಿ ಶ್ರಮಿಸಿದರು’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ‘21ನೇ ಶತಮಾನದಲ್ಲಿರುವ ನಾವು 12ನೇ ಶತಮಾನದತ್ತ ತಿರುಗಿ ನೋಡಬೇಕಾಗಿದೆ. ಆಗಿನ ಶರಣರ ಆಚಾರ ವಿಚಾರಗಳು ಮತ್ತೆ ಮುಂಚೂಣಿಗೆ ಬರಬೇಕಿದೆ’ ಎಂಬ ಆಶಯ ವ್ಯಕ್ತಪಡಿಸಿದರು.
ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ, ಅಶೋಕ ಹರಗಾಪೂರೆ, ಎಸ್.ಬಿ.ಸೊಲ್ಲಾಪೂರೆ, ಸಂಜಯ ಕವಟಗಿಮಠ, ಎಂ.ಐ.ಬೆಂಡವಾಡೆ, ಎಸ್.ಎ.ಖಡ್ಡ, ಬಿ.ಐ.ಪಾಟೀಲ, ಶೇಖರ ಚಿತ್ತವಾಡಗಿ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಪಿಎಸ್ಐ ಬಸಗೌಡ ನೇರ್ಲಿ, ಆರ್.ಐ.ನಾಯಕ, ಪಿ.ಬಿ. ಶೀಲವಂತ, ಪ್ರವೀಣ ಗಂಧ, ದೇಸಾಯಿ ಇದ್ದರು.
ಹುನಗುಂದ

ಬಸವ ಜಯಂತಿ ನಿಮಿತ್ಯ ಅನುಭವ ಮಂಟಪ-ಬಸವಾದಿ ಶರಣರ ವೈಭದ ರಥಯಾತ್ರೆ ವಾಹನವನ್ನು ತಾಲ್ಲೂಕು ಆಡಳಿತದ ಪರವಾಗಿ ಪಟ್ಟಣದ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಶುಕ್ರವಾರ ಸ್ವಾಗತಿಸಿ ಬರಮಾಡಿಕೊಂಡರು.
ಪಟ್ಟಣದ ನಾಗರಾಳ ಪೆಟ್ರೋಲ್ ಬಂಕ್ದಿಂದ ರಥಯಾತ್ರೆ ಆರಂಭಗೊಂಡು ಪ್ರವಾಸಿ ಮಂದಿರ, ತಹಶೀಲ್ದಾರ್ ಕಚೇರಿ ಮುಂಭಾಗ, ಕನಕ ವೃತ್ತ, ಬಸ್ ನಿಲ್ದಾಣ, ವಿಜಯ ಮಹಾಂತೇಶ ವೃತ್ತ, ಚನ್ನಮ್ಮ ವೃತ್ತ ನ್ಯಾಯಾಲಯದ ಮುಂಭಾಗದವರೆಗೆ ರಥಯಾತ್ರೆ ಉದ್ದಕ್ಕೂ ಡೊಳ್ಳುಕುಣಿತ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು.
ಕರ್ನಾಟಕ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ ವ್ಯಾಪಕವಾಗಿ ಪ್ರಚಾರಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಏಪ್ರಿಲ್ 29 ಮತ್ತು 30 ರಂದು ಎರಡು ದಿನಗಳ ಕಾಲ ‘ಅನುಭವಮಂಟಪ ಬಸವಾದಿ ಶರಣರ ವೈಭವ’ ಕಾರ್ಯಕ್ರಮವನ್ನು ಬಸವ ಜಯಂತಿ ಅಂಗವಾಗಿ ಆಯೋಜಿಸಲಾಗಿದೆ.
ತಾಲ್ಲೂಕು ಪಂಚಾಯ್ತಿ ಇಒ ಮುರುಳೀಧರ್ ದೇಶಪಾಂಡೆ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಸದಸ್ಯರಾದ ಚಂದ್ರು ತಳವಾರ, ಬಸವರಾಜ ಗೊನ್ನಾಗರ, ಮುಖಂಡರಾದ ಶಿವಾನಂದ ಕಂಠಿ, ದೇವು ಡಂಬಳ, ಸಂಗಣ್ಣ ಗಂಜಿಹಾಳ, ಸಿದ್ದಲಿಂಗಪ್ಪ ಬೀಳಗಿ, ರಾಜು ಬಯ್ಯಾಪೂರ, ವಿಶ್ವನಾಥ ಬ್ಯಾಳಿ, ಮಹಾಂತೇಶ ಹಳ್ಳೂರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಾಲಿಂಗಪುರ

ಕೂಡಲಸಂಗಮದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿರುವ ಅನುಭವ ಮಂಟಪ, ಬಸವಾದಿ ಶರಣರ ವೈಭವ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ರಥಯಾತ್ರೆಗೆ ಪಟ್ಟಣದಲ್ಲಿ ಶನಿವಾರ ಸ್ವಾಗತ ಕೋರಲಾಯಿತು.
ಇಳಕಲ್ಲ, ಬಾಗಲಕೋಟೆ ಮಾರ್ಗವಾಗಿ ರನ್ನಬೆಳಗಲಿಯಿಂದ ಆಗಮಿಸಿದ ರಥಯಾತ್ರೆಯನ್ನು ಕಮಾನು ಬಳಿ ಶಾಸಕ ಸಿದ್ದು ಸವದಿ, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿಕೊಂಡರು.
ಅಲ್ಲಿಂದ ಹೊರಟ ಯಾತ್ರೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಚನ್ನಮ್ಮ ವೃತ್ತದ ಮಾರ್ಗವಾಗಿ ಚಿಮ್ಮಡ ಗ್ರಾಮದತ್ತ ತೆರಳಿತು.
ತೇರದಾಳ ತಹಶೀಲ್ದಾರ್ ವಿಜಯ ಕುಮಾರ ಕಡಕೋಳ ಗೌರವ ಸಲ್ಲಿಸಿದರು.
ಉಪತಹಶೀಲ್ದಾರ್ ರಾಜಶೇಖರ ಕೊಂಡಗೂಳಿ, ಗ್ರಾಮ ಲೆಕ್ಕಧಾಧಿಕಾರಿ ಎಂ.ಎಸ್.ನೀಲನ್ನವರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಸದಸ್ಯ ಶೇಖರ ಅಂಗಡಿ, ಸಿ.ಎಸ್.ಮಠಪತಿ, ಚಂದ್ರು ಗೊಂದಿ, ಬಸವರಾಜ ಮೇಟಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಎಂ.ಎಂ.ಮುಗಳಖೋಡ, ಎಂ.ಎಸ್.ಮುಲ್ಲಾ, ಎಂ.ಕೆ.ದಳವಾಯಿ ಇತರರು ಇದ್ದರು.