ಸಾಣೇಹಳ್ಳಿ
ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ೨೦೨೫-೨೬ ನೆಯ ಸಾಲಿನ ‘ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಅಸಾಧ್ಯ ಎನ್ನುವುದು ಯಾವುದು ಇಲ್ಲ.
ಸಾಣೇಹಳ್ಳಿಯಲ್ಲಿ ಒಳ್ಳೆಯ ಅವಕಾಶಗಳು ಪ್ರತಿಯೊಬ್ಬರಿಗೂ ಲಭಿಸುತ್ತವೆ. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಇಷ್ಟು ಸುಲಭವಾಗಿ ಇಂತಹ ಅವಕಾಶಗಳು ಬೇರೆ ಕಡೆ ಸಿಗುವುದು ಕಡಿಮೆ. ವಿದ್ಯಾರ್ಥಿಯು ಮನಸ್ಸನ್ನು ದುರ್ಬಲ ಮಾಡಿಕೊಳ್ಳಬಾರದು. ಮಾಡಿಕೊಂಡರೆ ಏನು ಮಾಡಲು ಸಾಧ್ಯವಿಲ್ಲ. ಮಕ್ಕಳು ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಸಾಧನೆಗೆ ಯಾವುದೇ ಅಡ್ಡ ದಾರಿಗಳು ಇರುವುದಿಲ್ಲ; ಇರುವುದೊಂದೇ ದಾರಿ ಅದು ಪರಿಶ್ರಮದ ದಾರಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಸಂಘದ ಮೂಲ ಉದ್ದೇಶ ನಾಯಕತ್ವ ಗುಣಕ್ಕಿಂತ ನೈತಿಕ ನೆಲೆಗಟ್ಟು ಬಹಳ ಮುಖ್ಯ. ನಮ್ಮ ರಾಜಕೀಯ ನಾಯಕರ ಬದುಕಿನ ವಿಧಾನ ನೋಡಿದರೆ ಯಾವ ರೀತಿ ತರಬೇತಿ ಆಗಿದೆ ಅನ್ನೋದನ್ನು ಗಮನಿಸಬೇಕು.
ನಾಯಕನಾದವನು ಗಂಧದ ಕೊರಡಿನಂತೆ ತನ್ನನ್ನು ತಾನು ಬದುಕನ್ನು ಸವೆಸಬೇಕು. ತನ್ನನ್ನು ತಾನು ಸುಟ್ಟುಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ನಾಯಕರಾದವರು ಸತ್ಯ, ಪ್ರಾಮಾಣಿಕತೆ, ದಯೆ ಇಂತಹ ಗುಣಗಳನ್ನು ಅಳವಡಿಸಿಕೊಂಡು ತ್ಯಾಗ ಜೀವಿಗಳಾಗಿ ಲೋಕಕ್ಕೆ ಬೇಕಾಗಿದ್ದನ್ನು ಕೊಡಬೇಕಾಗಿತ್ತು. ಆದರೆ ಇವತ್ತಿನ ನಾಯಕರು ಈ ಎಲ್ಲ ಗುಣಗಳನ್ನು ಗಾಳಿಗೆ ತೂರಿ ಹೇಗೆ ಸುಲಿಗೆ ಮಾಡಿ ತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯಬಹುದು ಎನ್ನುವುದನ್ನು ಯೋಚಿಸಿ ಮಾಡುತ್ತಿರುವನು.
ನಿಜವಾದ ನಾಯಕ ಜನರ ನೋವುಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರ ನೀಡುವವನು. ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಪದೇ ಪದೇ ಹೇಳ್ತಾ ಇದ್ದದ್ದು “ಜನರು ಬಯಸಿದ್ದನ್ನು ಕೊಡುವವನು ನಿಜವಾದ ನಾಯಕನಲ್ಲ; ಜನರಿಗೆ ಏನು ಬೇಕೋ ಅದನ್ನು ಕೊಡುವವನು ನಿಜವಾದ ನಾಯಕ” ಎಂದು ಪ್ರತಿಯೊಬ್ಬರು ಕಾಯಕ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಅನೇಕ ಹಳ್ಳಿಗಳಲ್ಲಿ ಯುವಕರು ಸೋಮಾರಿಗಳಾಗಿ ಕಾಲ ಕಳೆಯುವರು. ವಿದ್ಯಾರ್ಥಿಗಳಿಗೆ ನಾಯಕತ್ವದ ತರಬೇತಿ ಕೊಡುವುದಕ್ಕಿಂತ ನೈತಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ನೆಲೆಗಟ್ಟು ಕುಸಿಯದ ಹಾಗೆ ನೋಡಿಕೊಳ್ಳಬೇಕು.

ಯಾವ ಮಕ್ಕಳೂ ದಡ್ಡರಲ್ಲ. ಇರುವ ಬುದ್ದಿಯನ್ನು ಸತತ ಪರಿಶ್ರಮದ ಮೂಲಕ ಉತ್ತಮಗೊಳಿಸಿಕೊಂಡರೆ ಸಾಧನೆ ಸಿದ್ದಿಸುವುದು. ಪಠ್ಯವನ್ನು ಕಂಠಪಾಠ ಮಾಡದೆ ಪುನರ್ ಮನನದ ಮೂಲಕ ಕರಗತ ಮಾಡಿಕೊಂಡರೆ ಎಂಥದ್ದೇ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾಗುವುದು. ಈ ನಿಟ್ಟಿನಲ್ಲಿ ಶಿಕ್ಷಕರು ಜಡತ್ವ ಬಿಟ್ಟು ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ಇಂಥ ಸ್ಪೂರ್ತಿದಾಯಕ ಕಾರ್ಯಕ್ರಮ ಮಕ್ಕಳ ನಾಳಿನ ಬಾಳಬುತ್ತಿಯಾಗಬಲ್ಲವು. ವಿದ್ಯಾರ್ಥಿ, ಶಿಕ್ಷಕರು ಹಾಗೂ ಪೋಷಕರ ಮಧ್ಯೆ ಅವಿನಾಭಾವ ಸಂಬಂಧ ಇರಬೇಕು. ಮೂವರಲ್ಲಿ ಸಂಬಂಧ ಸರಿಯಾಗಿದ್ದರೆ ಒಳ್ಳೆಯ ಫಲಿತಾಂಶ ನಿರೀಕ್ಷಿಸಲು ಸಾಧ್ಯ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸಬೇಕು.
ಬಾಲ್ಯ ಬಹಳ ಮುಖ್ಯವಾದದ್ದು. ಇವತ್ತು ನಾವು ಮಕ್ಕಳಿಗೆ ಏನು ಕೊಡುತ್ತೇವೆಯೋ ಅದನ್ನು ಸ್ವೀಕರಿಸುವರು. ಎಂತಹ ಬೀಜವನ್ನು ಬಿತ್ತುತ್ತೇವೆಯೋ ಅಂತಹ ಬೆಳೆಗಳನ್ನು ಬೆಳೆಯುತ್ತೇವೆ.
ಇವತ್ತಿನಿಂದ ಎಲ್ಲ ಚಟುವಟಿಕೆಗಳು ಪ್ರಾರಂಭ ಆಗಬೇಕು. ಎಲ್ಲ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದು ಬರಹ ಜೊತೆಗೆ ಉಳಿದ ಬೇರೆ ಬೇರೆ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಂಡರೆ ನಿಮ್ಮ ಗುರಿಯನ್ನು ಮುಟ್ಟಲು ಸಾಧ್ಯ. ನಮ್ಮ ಉದ್ಧಾರದ ಶಿಲ್ಪಿಗಳು ನಾವೇ. ನೈತಿಕ ನೆಲೆಗಟ್ಟು ಕುಸಿಯದ ಹಾಗೆ ಎಚ್ಚರದಿಂದ ಓದಬೇಕು. ಆಗ ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುವುದು. ಶಿಕ್ಷಕರ ಮುಖದಲ್ಲಿ ತೇಜಸ್ಸು, ಕಳೆ ಇರಬೇಕು. ಆಗ ಮಕ್ಕಳು ಉತ್ಸಾಹದಿಂದ ಪಾಠ ಕೇಳುವರು.
ವಿದ್ಯಾರ್ಥಿ ಸಂಘಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಪಿಎಂ ಪೋಷಣ್ ಸಹಾಯಕ ನಿರ್ದೇಶಕರಾದ ಆರ್ ಶಾಂತಪ್ಪ ಮಾತನಾಡಿ ನಮಗೆ ಸಾಣೇಹಳ್ಳಿಯೇ ವಿಧಾನಸೌಧ ಇದ್ದಂತೆ. ಇಲ್ಲಿ ಅಚ್ಚುಕಟ್ಟಾಗಿ ಎಲ್ಲ ಕೆಲಸ ಕಾರ್ಯಗಳು ನಡೆಯುತ್ತವೆ. ಸಮಯಕ್ಕೆ ಹೆಚ್ಚು ಮಹತ್ವ ನೀಡುವಂಥ ಮಠ. ಇಡೀ ಹೊಸದುರ್ಗ ತಾಲ್ಲೂಕಿನಲ್ಲಿ ಸಾಣೇಹಳ್ಳಿ ವಿದ್ಯೆಯ ಜೊತೆಗೆ ಸಂಸ್ಕೃತಿಯನ್ನು ಕಲಿಸುವಂತಹ ಮಠ. ವಿದ್ಯಾರ್ಥಿ ಸಂಘಗಳ ಉದ್ದೇಶ ನಾಯಕತ್ವದ ಗುಣಗಳನ್ನು ಬೆಳೆಸುವುದಾಗಿದೆ. ವಿಷಯವಾರು ಸಂಘಗಳು ಆ ವಿಷಯದಲ್ಲಿ ಪರಿಣಿತಿ ಹೊಂದಿ ಮುಂದೆ ಉತ್ತಮ ಭವಿಷ್ಯವನ್ನು ಬೆಳೆಸಿಕೊಳ್ಳಲು ಸಾಧ್ಯ.
ಎಲ್ಲ ಮಕ್ಕಳಲ್ಲಿ ಪ್ರತಿಭೆ ಇದ್ದೇ ಇದೆ. ಅಂತಹ ಪ್ರತಿಭೆಯನ್ನು ಗುರುತಿಸುವ ಕಾರ್ಯ ಶಿಕ್ಷಕರದ್ದಾಗಿದೆ. ಸಾಣೇಹಳ್ಳಿಯಲ್ಲಿ ಎಲ್ಲ ಸವಲತ್ತುಗಳನ್ನು ಇಲ್ಲಿ ಓದುವ ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕು. ತಾಯಿಯ ಮಡಿಲು ತಂದೆಯ ಹೆಗಲು ಪವಿತ್ರವಾದ ಸ್ಥಳಗಳು. ಇವುಗಳ ಮಹಿಮೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರತಿಭೆ ಯಾರಪ್ಪನ ಸ್ವತ್ತಲ್ಲ ಅದು ಸಾಧಕನ ಸ್ವತ್ತು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಭಾವಂತನಾಗಬೇಕು. ಆಗ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬಹುದು. ರೈತ, ಸೈನಿಕ ನಮ್ಮ ದೇಶದ ಬೆನ್ನೆಲುಬು. ಅಂಥವರಿಗೆ ಗೌರವ ಕೊಡುವ ಕೆಲಸ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ ಸಿ ಚಂದ್ರಪ್ಪ ಮಾತನಾಡಿ; ಇಲ್ಲಿ ಓದುವ ವಿದ್ಯಾರ್ಥಿಗಳು ಪುಣ್ಯವಂತರು. ಇಲ್ಲಿನ ಮಕ್ಕಳು ಕೇವಲ ಪಠ್ಯದಲ್ಲಿ ಮಾತ್ರವಲ್ಲ; ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಂಗೀತ, ನೃತ್ಯ, ನಾಟಕ, ಭಾಷಣ ಮೊದಲಾದವುಗಳಲ್ಲೂ ಸದಾ ಮುಂದಿರುತ್ತಾರೆ. ಕಾರ್ಯಕ್ರಮ ನಿರ್ವಹಿಸುತ್ತಿರುವ ಮಕ್ಕಳಲ್ಲಿ ಕಾಗುಣಿತ ದೋಷ, ಉಚ್ಛಾರಣಾ ದೋಷ, ಸಭಾ ಕಂಪನಗಳನ್ನು ಕಾಣಲಾಗದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಖಜಾಂಚಿ ಕೆ ಸಿ ಶಿವಮೂರ್ತಿ ಮಾತನಾಡಿ; ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ಅಂತಹ ವೃತ್ತಿಯನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳು ಎತ್ತರಸ್ಥಾನಕ್ಕೆ ಹೋದರೆ ಅದೇ ಶಿಕ್ಷಕರಿಗೆ ಕೊಡುವ ಗೌರವ. ಪೋಷಕರು ಹಾಗೂ ಶಿಕ್ಷಕರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದರೆ ವಿದ್ಯಾರ್ಥಿ ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ. ಕಲೆ ಸಾಹಿತ್ಯ, ಸಂಸ್ಕೃತಿ, ವಿದ್ಯಾರ್ಥಿ ಸಂಘಗಳ ಕಾರ್ಯಚಟುವಟಿಕೆಗಳು ಪೂಜ್ಯರ ಪ್ರೋತ್ಸಾಹದಿಂದ ನಿರಂತರವಾಗಿ ನಡೆಯುತ್ತವೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ಗಳಿಸಿದ ಹಣ ಮುಖ್ಯವಲ್ಲ. ಮಾಡಿದ ಕೆಲಸ ಸದಾ ನೆನಪಿನಲ್ಲಿರುವುದು ಎಂದರು.
ವೇದಿಕೆಯ ಮೇಲೆ ನಿವೃತ್ತ ಮುಖ್ಯ ಶಿಕ್ಷಕ ಎಸ್ ಸಿದ್ಧಪ್ಪ, ಉಭಯ ಶಾಲಾ ಮುಖ್ಯ ಶಿಕ್ಷಕರಾದ ಬಸವರಾಜ, ಶಿಲ್ಪ, ಶಿವಕುಮಾರ ಇದ್ದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ ಹೆಚ್ ಎಸ್ ಹಾಗೂ ಶರಣ್ ವಚನಗೀತೆಗಳನ್ನು ಹಾಡಿದರು. ಶ್ರೀ ಗುರುಪಾದೇಶ್ವರ ಪ್ರೌಢಶಾಲಾ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯರೂಪಕವನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪುರಸ್ಕೃತ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಕ್ಷಕಿ ಸಂಧ್ಯಾ ಪಿ ಎಲ್ ಸ್ವಾಗತಿಸಿದರೆ ಶೋಭ ಎಸ್ ಪಿ ನಿರೂಪಿಸಿ ವಂದಿಸಿದರು.