ಕೂಡಲಸಂಗಮ
ಬಸವ ಜಯಂತಿ ನಿಮಿತ್ಯ ಬಸವಣ್ಣನವರ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ನಡೆದ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮದ ನಿಮಿತ್ಯ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಮುಂಭಾಗದಲ್ಲಿ ವಚನ ಕಟ್ಟುಗಳ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಬಸವ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕ ವಿಜಯಾನಂದ ಕಾಶಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಿಲ್ಲಾಧಿಕಾರಿ ಜಾನಕಿ. ಕೆ.ಎಂ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮುಂತಾದವರು ಪಾಲ್ಗೊಂಡಿದ್ದರು.
ಸಂಗಮೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆ ಬಸವೇಶ್ವರ ವೃತ್ತ ಮೂಲಕ ಸಭಾ ಭವನಕ್ಕೆ ಬಂದು ತಲುಪಿತು. ಎರಡು ಸ್ತಬ್ಧಚಿತ್ರ ರಥಗಳು ಮೆರವಣಿಗೆಗೆ ಮೆರಗು ಕೊಟ್ಟವು.

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ವೀರಗಾಸೆ, ಕರಡಿ ಮಜಲು, ಖಣಿವಾದನ, ಹಲಗೆ ಮಜಲು, ತಾಸೇವಾದನ, ಡೊಳ್ಳು ಕುಣಿತ, ಹೂವಿನ ನೃತ್ಯ, ಹೆಜ್ಜೆ ಮೇಳ, ಕೀಲು ಕುಣಿತ, ಗೊಂಬೆ ಕುಣಿತ, ಲಂಬಾಣಿ ನೃತ್ಯ, ತಾಷಾರಾಮ್ ಡೋಲು, ಬೀಸು ಕಂಸಾಳೆ, ಪೂಜಾ ಕುಣಿತ, ಕಂಗೀಲು ನೃತ್ಯ, ಚಂಡೆವಾದನ, ನಂದಿಧ್ವಜ, ಯಕ್ಷಗಾನ ವೇಷ, ಸತ್ತಿಗೆ ಕುಣಿತ, ಕೋಳಿ ನೃತ್ಯ, ಗಾರುಡಿಗೊಂಬೆ, ಜಾಂಜ್ ಪಥಕ್ ಜನಮನ ಸೆಳೆದವು.
ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಕಲಾ ತಂಡಗಳ ಕಲೆಯನ್ನು ನೋಡಿ ಸಂಭ್ರಮಿಸಿ, ಕುಣಿದರು. ಮೆರವಣಿಗೆಯಲ್ಲಿ ವಿವಿಧ ಶರಣರ ಭಾವಚಿತ್ರಗಳು ಆಕರ್ಷಕವಾಗಿದ್ದವು. ವಚನ ಗಾಯನ ಎಲ್ಲರು ಭಕ್ತಿ ಪರವಂಶವಾಗುವಂತೆ ಮಾಡಿದವು.

ಸಭಾ ಭವನದ ಬಸವ ವೇದಿಕೆಯಲ್ಲಿ ಅಮರಾವತಿಯ ಬಸವರಾಜ ಅವರ ಶಹನಾಯಿ ವಾದನ, ಇಲಕಲ್ದ ವಿನಯ ಹರಿಹರ ಅವರ ವಚನ ಸಂಗೀತ, ಬದಾಮಿಯ ಪವಿತ್ರಾ ಜಕ್ಕಪ್ಪನವರ ಅವರ ಜನಪದ ಸಂಗೀತ, ಮೈಸೂರು ಜನಾರ್ಧನ ತಂಡದ ಸಂಗೀತ ಗಾಯನ, ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ವಚನ ಗಾಯನ ಎಲ್ಲರ ಗಮನ ಸೆಳೆಯಿತು.
ಸಭಾ ಭವನದ ಮಧ್ಯಭಾಗದಲ್ಲಿ ಎಳೆ ಬಿಟ್ಟ ಬುದ್ದ, ಬಸವ, ಅಂಬೇಡ್ಕರ ಚಿತ್ರದ ಪರದೆಗಳು, ಸಭಾ ಭವನ ಮುಂಭಾಗದ ಬಸವಣ್ಣನ ಮೂರ್ತಿಗಳು ಆಕರ್ಷಕವಾಗಿದ್ದವು.

ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸಮಾರಂಭಕ್ಕೆ ಆಗಮಿಸಿದ ಜನರಿಗೆ ಹಾಲುಗ್ಗಿ, ಬಂದನೆಕಾಯಿ ಪಲ್ಲೆ, ಅನ್ನ ಸಾಂಬರ ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದರು. ಮೂರು ದಿನಗಳ ಕಾಲ ವಾಹನ ಪ್ರವೇಶ ಶುಲ್ಕ ಸ್ಥಗಿತ ಮಾಡಿದ್ದರು.