ಪಾಂಡವಪುರ
ತಾಲ್ಲೂಕಿನ ಎಂ. ಬೆಟ್ಟಹಳ್ಳಿ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವವು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಎಲ್ಲಾ ಜನಾಂಗದವರು ಒಳಗೊಂಡಂತೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೇಬಿ ಬೆಟ್ಟ ಶೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲೇ ಸಮಾನತೆಯ ಬೀಜವನ್ನು ಬಿತ್ತಿ ಎಲ್ಲಾ ವರ್ಗದವರನ್ನು ಒಳಗೊಂಡಂತೆ, ಜಾತಿ ವರ್ಣ ವರ್ಗ ರಹಿತವಾದ ಸಮಾಜವನ್ನು ನಿರ್ಮಿಸಿ, ಎಲ್ಲರನ್ನು ಅಪ್ಪಿ ಒಪ್ಪಿದವರು ಬಸವಣ್ಣ, ಬಸವಾದಿ ಶರಣರಾಗಿದ್ದರು. ಹಾಗಾಗಿ ಮಹಾತ್ಮರು ಒಂದು ಜನಾಂಗಕ್ಕೆ ಸೇರಿದವರಲ್ಲ ಅವರೆಲ್ಲ ಮನುಷ್ಯಕುಲಕ್ಕೆ ಸೇರಿದವರು ಎಂದು ಬಣ್ಣಿಸಿದರು.

ದೇವಾಲಯಗಳಿಗೆ ಮುಕ್ತವಾಗಿ ಪ್ರವೇಶ ಇಲ್ಲದ ಸಂದರ್ಭದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣ ಎಲ್ಲಾ ಜನಾಂಗದವರಿಗೂ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರ ಕೈಗೆ ಇಷ್ಟಲಿಂಗವನ್ನು ನೀಡಿ ಲಿಂಗಾಯತ ಧರ್ಮೀಯರನ್ನಾಗಿಸಿದರು. ತುಳಿತಕ್ಕೊಳಗಾಗಿದ್ದ ದೀನದಲಿತರನ್ನು, ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಎಲ್ಲಾ ಜನಾಂಗದವರಿಗೂ ಇಷ್ಟಲಿಂಗವನ್ನು ನೀಡಿ ಸಮಾನತೆಯ ಭದ್ರ ಬುನಾದಿ ಹಾಕಿದರು. ಇಷ್ಟಲಿಂಗವನ್ನು ಕೆಲವು ಸಿದ್ದಾಂತದ ಪ್ರಕಾರವಾಗಿ ಎಲ್ಲರು ಧರಿಸಬಹುದೆಂದರು.
ಹಿಂದೂ ಧರ್ಮಾಚರಣೆ ಬಹುದೇವರ ಆರಾಧನೆಯಾಗಿದೆ. ಮೂಢನಂಬಿಕೆಯ ವೈದಿಕ ಆರಾಧನೆಗೆ ಪರ್ಯಾಯವಾಗಿ ಲಿಂಗಾಯತ ಧರ್ಮ ಸ್ಥಾಪನೆಯಾಯಿತು, ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ. ಹಿಂದು ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ ಇದೆ, ಅದಕ್ಕು ಇದಕ್ಕು ಸಂಬಂಧವಿಲ್ಲವೆಂದರು. ಎಲ್ಲರೂ ಬಸವಾದಿ ಶರಣರ ತತ್ವಾದರ್ಶಗಳನ್ನ ಪಾಲಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ದೇವಪ್ಪ ವಚನ ಗಾಯನ ಮಾಡಿದರು. ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಮಂಜುನಾಥ ಮಾತನಾಡಿ, ಬಸವಣ್ಣನವರು 770 ಶರಣರನ್ನು ಒಟ್ಟಿಗೆ ಸೇರಿಸುವ ಆಗಿನ ಅನುಭವ ಮಂಟಪ ಇವತ್ತಿನ ಪಾರ್ಲಿಮೆಂಟ್ ಆಗಿದೆ, ಕಸಗುಡಿಸುವ ಸತ್ಯಕ್ಕ, ಸೂಳೆ ಸಂಕವ್ವನಿಂದ ಹಿಡಿದು ಮೇಲು ಪರ್ವತ ಅಲ್ಲಮಪ್ರಭುಗಳು ಒಳಗೊಂಡಂತೆ ಮುಕ್ತವಾದ ಅನುಭವ ಮಂಟಪ ಸ್ಥಾಪಿಸಿದರು. ಲಿಂಗಾಯತರಲ್ಲಿ 105ಕ್ಕೂ
ಜಾಸ್ತಿ ಪಂಗಡಗಳು ಇವೆ, ಎಲ್ಲಾ ಜನಾಂಗದವರು ಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನ ಪಡೆದಿದ್ದರೂ ಗೌಡ ಲಿಂಗಾಯತ, ಮಡಿವಾಳ ಲಿಂಗಾಯತ, ಗಾಣಿಗ, ಕುರುಬ ಲಿಂಗಾಯತ ಜನಾಂಗ ಹೀಗೆ ಜಾತಿಯ ಹೆಸರಿನಲ್ಲಿ ಇರುವುದರಿಂದ, ಲಿಂಗಾಯತರ ಜನಸಂಖ್ಯೆ ಜನಗಣತಿಯಲ್ಲಿ ಕಡಿಮೆ ತೋರುತ್ತಿದೆ, ಅದಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭಾ ಇಡೀ ರಾಜ್ಯಯಾದ್ಯಂತ ಎಲ್ಲ ಪಂಗಡಗಳನ್ನು ಒಟ್ಟುಗೂಡಿಸುವ ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮಕ್ಕಾಗಿ ಎಲ್ಲಾ ಒಳಪಂಗಡಗಳನ್ನು ಒಟ್ಟಿಗೆ ಸೇರಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾದದ್ದು, 105 ಪಂಗಡದವರಿಗೂ ಬಸವಣ್ಣನೇ ಧರ್ಮಗುರು ಎಂದು ಎಲ್ಲರೂ ತಿಳಿಯಬೇಕೆಂದರು.
ಇದೇ ವೇಳೆ ಅನೇಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ, ತಾಲೂಕ ಅಧ್ಯಕ್ಷ ಶಿವಕುಮಾರ್, ಪಿ. ಮಾದಪ್ಪ, ಪಟೇಲ ಶಂಭುಲಿಂಗಪ್ಪ, ಹೊನ್ನೇನಳ್ಳಿ ಜಯಣ್ಣ, ಡಿಎಸ್ಎಸ್ ಮುಖಂಡ ಅಂಕಯ್ಯ, ಮೀನಾಕ್ಷಿ ಮಾದಪ್ಪ, ಗ್ರಾಮ ಪಂಚಾಯತಿ ಸದಸ್ಯ ಕಾಂತರಾಜ, ಜಯಣ್ಣಚಾರಿ, ಎಂ ಶಿವಕುಮಾರ್, ಲೋಕೇಶ, ವೆಂಕಟೇಶ, ಯೋಗೇಂದ್ರ, ಪಾಪ ಶೆಟ್ಟಿ, ಮಹದೇವಸ್ವಾಮಿ, ದೇವರಾಜ, ಮಂಜು, ರಾಜೇಶ, ಪುನೀತ್,ಆಕಾಶ, ಬಸಪ್ಪ , ಕರಿಯಯ್ಯ, ನಾಗು ಅನೇಕ ಮುಖಂಡರು, ಮಹಿಳೆಯರು, ಯುವಕರು, ಅಕ್ಕ ಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.