ವಿಶ್ವಬಂಧು ಮರುಳಸಿದ್ದರ ,ಬಸವಾದಿ ಶಿವಶರಣರ ತತ್ವಗಳನ್ನು ಸಮಾಜಕ್ಕೆ ಉಣಬಡಿಸುತ್ತಾ ಬಂದಿರುವ ಕಾರ್ಯಕ್ರಮ ತರಳಬಾಳು ಹುಣ್ಣಿಮೆ
ದಾವಣಗೆರೆ
ಭಾರತ ದೇಶ ವಿವಿಧ ರೀತಿಯ ಹಲವು ಧರ್ಮಗಳ, ಕೋಮುಗಳ, ಜಾತಿಗಳ, ವರ್ಗಗಳ, ಲಿಂಗಗಳ, ಪರಂಪರೆಗಳ,ಸಂಸ್ಕೃತಿಗಳ, ರೂಡಿ -ಸಂಪ್ರದಾಯಗಳ, ಜೀವನ ಪದ್ಧತಿಗಳ, ನೀತಿ -ನಿಯಮಗಳ, ಕಟ್ಟುಪಾಡುಗಳ, ನಂಭಿಕೆಗಳ, ಬಣ್ಣಗಳ, ಭಾಷೆಗಳ, ವೇಷ-ಭೂಷಣಗಳ, ವಿವಿಧ ಜಾತಿಯ ಗಿಡ -ಮರಗಳ, ಪ್ರಾಣಿ -ಪಕ್ಷಿಗಳ, ಮಣ್ಣುಗಳುಳ್ಳ ಬಹುತ್ವದ ತವರೂರು.
ಇಂತಹ ಬಹುತ್ವದ ಭಾರತದಲ್ಲಿ ಅಸಂಖ್ಯಾತ ಋಷಿ ಮುನಿಗಳು, ಧರ್ಮ ದರ್ಶಕರು ಜನ್ಮ ತಾಳಿದ್ದರೂ ಸಹ ಈ ನೆಲದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅಲ್ಲೋಲ-ಕಲ್ಲೋಲ ದುರ್ಘಟನೆಗಳು ನಡೆಯುತ್ತಾ ಅರಾಜಕತೆ, ಅಶಿಸ್ತು, ಅಶಾಂತಿ, ಧರ್ಮ -ಧರ್ಮಗಳ ನಡುವೆ ಸಂಘರ್ಷ, ಜಾತಿ -ಜನಾಂಗೀಯ ಸಂಘರ್ಷ, ಕೋಮು ಗಲಭೆ, ರಕ್ತಪಾತ, ಕೊಲೆ -ಸುಲಿಗೆ, ಪೈಶಾಚಿಕತೆ ತಲೆ ಎತ್ತಿ ನಿಂತು ತಾಂಡವಾಡುತ್ತಲಿವೆ.

ಹಿಂದೆಂದಿಗಿಂತಲೂ ಇಂದು ಭಾರತೀಯರ ಬದುಕು ಜರ್ಜಿರಿತವಾಗಿದೆ. ಮತಾಂಧತೆ, ಜಾತೀಯತೆ, ಧರ್ಮಾoದತೆ, ಸಾಮಾಜಿಕ ಅನಿಷ್ಟ ಪದ್ಧತಿಗಳು, ಮೂಢನಂಭಿಕೆಗಳು, ಅಂಧಶ್ರದ್ದೆ, ಕಂದಾಚಾರಗಳು ಪ್ರಜೆಗಳನ್ನು ವಶೀಕರಣ ಮಾಡಿಕೊಂಡಿವೆ.
ಇಂಥ ವಿಷಮಯ ಸಂದರ್ಭದಲ್ಲಿ ಮಣ್ಣು ಪಾಲಾಗುತ್ತಿರುವ ಬಂಧುತ್ವವನ್ನು, ಭಾವೈಕ್ಯತೆಯನ್ನು, ಸೌಹಾರ್ದತೆಯನ್ನು ಪುನಃ ಸ್ಥಾಪಿಸುವ, ಜ್ಞಾನ, ಬೆಳಕು, ಅನುಭಾವಗಳ ದಾಸೋಹಗಳನ್ನು ಉಣಬಡಿಸಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವಂತೆ, ಪ್ರೀತಿಸುವಂತೆ, ಸಹಿಸುವಂತೆ ಮಾಡುವ, ಅಗಣಿತ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡು ಕೊಂಡು ಬದುಕು ಸಾರ್ಥಕ ಮಾಡಿಕೊಳ್ಳುವ ಅಪರೂಪದ ಕಾರ್ಯಕ್ರಮವೆಂದರೆ ಸಿರಿಗೆರೆ ಮಠದವರು ಪ್ರತೀ ವರ್ಷ ಆಚರಿಸುತ್ತಾ ಬಂದಿರುವ “ತರಳಬಾಳು ಹುಣ್ಣಿಮೆ ಮಹೋತ್ಸವ”.

ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಉತ್ತರ ಭಾಗದಲ್ಲಿ ಬಸವಾದಿ ಶಿವಶರಣರು ಸಂಘಟಿತರಾಗಿ ಮತ್ತು ಮದ್ಯ ಭಾಗದಲ್ಲಿ ಶ್ರೀ ವಿಶ್ವಬಂಧು ಮರುಳಸಿದ್ದರು ಏಕಾಂಗಿಯಾಗಿ ಸಮಾಜದಲ್ಲಿ ನೆಲೆಯೂರಿದ್ದ ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಮೂಢನಂಭಿಕೆ, ಪ್ರಾಣಿ ಬಲಿ, ಯಜ್ಞ-ಯಾಗಾದಿ, ಅಂಧಶ್ರದ್ದೆ, ಕಂಧಾಚಾರ, ಶೋಷಣೆ,ವರ್ಗ-ಜಾತಿ -ಲಿಂಗ ತಾರತಮ್ಯ, ಮೇಲು -ಕೀಳು ತಾರತಮ್ಯಗಳ ವಿರುದ್ದ ಮತ್ತು ಇಂತಹ ಅನಿಷ್ಟ ಪದ್ಧತಿಗಳ ಪೋಷಕರಾಗಿದ್ದ ಮೂಲಭೂತವಾದಿಗಳ, ಪಟ್ಟಭದ್ರ ಪುರೋಹಿತರ ವಿರುದ್ಧ ಯಾವುದೇ ಪಿತೂರಿ, ಸಂಚು, ಕಷ್ಟ, ಸಾವು-ನೋವಿಗೂ ಅಂಜದೆ-ಹೆದರದೆ ಪವಾಡ ಪುರುಷನಂತೆ ಎದ್ದು ಬಂದು ಜೀವಪರ ತತ್ವಗಳ ಆಚರಣೆಗಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟ ಮಾಡಿ ಸಮಾಜವನ್ನು ಜಾಗೃತಗೊಳಿಸಿ ಸಮತೆಯ ತತ್ವವನ್ನು, ಚಿಂತನೆಗಳನ್ನು, ಸಿದ್ದಾಂತಗಳನ್ನು, ಮಾನವೀಯ ಮೌಲ್ಯವುಳ್ಳ ವಿಚಾರಗಳನ್ನು ನಾಡಿನಾದ್ಯಂತ ಸಾರುತ್ತಾ ಬಂದರು.
ಇಂತಹ ಒಬ್ಬ ಸಾಮಾಜಿಕ, ಧಾರ್ಮಿಕ ಹೋರಾಟಗಾರನಾದ ಶ್ರೀ ವಿಶ್ವ ಬಂಧು ಮರುಳಸಿದ್ದರೇ ಸಿರಿಗೆರೆಯ ಶ್ರೀ ತರಳಬಾಳು ಮದ್ದುಜ್ಜಯಿನಿ ಸದ್ದರ್ಮ ಪೀಠಕ್ಕೆ ಮೂಲ ಪುರುಷರು.

ಹೀಗೆ ಜೀವಪರ ಹೋರಾಟ ನಡೆಸುತ್ತಾ ಬಂದ ಶ್ರೀ ವಿಶ್ವಬಂಧು ಮರುಳಸಿದ್ದರು ತನ್ನ ನಂತರದಲ್ಲೂ ತಮ್ಮ ತತ್ವ-ಸಿದ್ಧಾಂತಗಳು, ವಿಚಾರಗಳು, ಚಿಂತನೆಗಳು ಆಚರಣೆಗಳೊಂದಿಗೆ ಈ ಲೋಕದ ತರಳರ ಬಾಳಿಗೆ ಬೆಳಕಾಗಬೇಕೆಂಬ ಉದಾತ್ತ ಸಂಕಲ್ಪದೊಂದಿಗೆ ನಾಡಿಗೆ ಸಮಾನತೆಯ ಸಂದೇಶವನ್ನು ಸಾರಲು ಉಜ್ಜಯಿನಿಯಲ್ಲಿ ಬಾಚಣ್ಣಗೌಡ ನಿಂದ ತನ್ನ 9 ಪಾದಗಳನ್ನಿಟ್ಟು ಅಷ್ಟೂ ವಿಸ್ತೀರ್ಣದ ಭೂಮಿಯನ್ನು ಪಡೆದುಕೊಂಡು ಅಲ್ಲೊಂದು ಸದ್ದರ್ಮ ಪೀಠವನ್ನು ಸ್ಥಾಪಿಸಿ ತನ್ನ ಶಿಷ್ಯ ತೆಲುಗುಬಾಳು ಸಿದ್ದೇಶ್ವರರನ್ನು ಉಜ್ಜಯಿನಿಯ ಸದ್ದರ್ಮ ಪೀಠಕ್ಕೆ ಕೂರಿಸಿ ಮನುಕುಲದ ಅಬ್ಯುದಯವೇ ಅಡಗಿರುವ “ತರಳಾ ಬಾಳು ” ಎಂಬ ಪಂಚಾಕ್ಷರಿ ಮಂತ್ರದೊಂದಿಗೆ ಹರಸಿ- ಆಶೀರ್ವದಿಸಿದ ದಿನವಾದ ಮಾಘ ಶುದ್ಧ ಹುಣ್ಣಿಮೆಯೇ ಮುಂದೊಂದು ದಿನ “ತರಳಬಾಳು ಹುಣ್ಣಿಮೆ “ಯಾಗಿ ಪ್ರಸಿದ್ದಿಗೆ ಬಂದಿತು.
ಹೀಗೆ ಶ್ರೀ ವಿಶ್ವಬಂಧು ಮರುಳಸಿದ್ದನ ಆಶೀರ್ವಾದದಿಂದ ಪ್ರಾರಂಭವಾದ ಶ್ರೀ ತರಳಬಾಳು ಗುರುಪರಂಪರೆಯ 20 ನೆಯ ಜಗದ್ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಾಹಾಸ್ವಾಮೀಜಿಯವರು ಮತ್ತು ಸಮಾಜದ ಹಿರಿಯರಾಗಿದ್ದ ತಿಪಟೂರಿನ ಶರಣ ಎಸ್ ಆರ್. ಮಲ್ಲಪ್ಪನವರು ಜೊತೆಗೊಂಡು ಮರುಳಸಿದ್ದನ ಪರಂಪರೆಯ, ತರಳಬಾಳು ಗುರುಪರಂಪರೆಯ ಇತಿಹಾಸವನ್ನು ಮತ್ತು ಮರುಳಸಿದ್ದನ ಸಮಕಾಲೀನರಾಗಿದ್ದ ಐತಿಹಾಸಿಕ ಶರಣರಾಗಿರುವ ಬಸವಾದಿ ಶಿವಶರಣರ ಇತಿಹಾಸವನ್ನು ಜನಕ್ಕೆ ಪ್ರಚಾರ ಮಾಡುವುದಕ್ಕಾಗಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಪ್ರತೀ ವರ್ಷ ಮಾಘ ಶುದ್ಧ ಸಪ್ತಮಿಯಿಂದ ಮಾಘ ಶುದ್ಧ ಹುಣ್ಣಿಮೆಯವರೆಗಿನ 9 ದಿನಗಳವರೆಗೆ ಆಚರಿಸಲು ನಿರ್ಣಯಿಸಿ, ಅಂದಿನಿಂದ ಶ್ರೀ ಮಠ ಸಿರಿಗೆರೆಯಲ್ಲಿಯೇ ಸುಮಾರು 5-6 ವರ್ಷಗಳವರೆಗೆ ಸರಳವಾಗಿ ಆಚರಿಸುತ್ತಾ ಬಂದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಬಹಿರಂಗ ಸ್ವರೂಪ ಕೊಡಬೇಕೆಂದು ಮತ್ತು ನಾಡಿನ ವಿವಿಧ ಭಾಗಗಳಲ್ಲಿ ಧರ್ಮಾತೀತವಾಗಿ, ಜ್ಯಾತ್ಯಾತೀತವಾಗಿ ಸೈದ್ದಾಂತಿಕವಾಗಿ ವೈಚಾರಿಕವಾಗಿ ಆಚರಿಸಲು ತೀರ್ಮಾನ ಕೈಗೊಂಡು ನಂತರ ಮೊಟ್ಟಮೊದಲ ಬಾರಿಗೆ ಬಹಿರಂಗವಾಗಿ 1950 ರಲ್ಲಿ ಜಗಳೂರಿನಲ್ಲಿ ಮೊದಲ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಆಚರಣೆ
ಮಾಡಿದಂದಿನಿಂದ ಇಂದಿನವರೆಗೂ ನಾಡಿನ ಆನೇಕ ಭಾಗಗಳಲ್ಲಿ ಉದಾತ್ತ ಧ್ಯೆಯೋದ್ದೇಶಗಳೊಂದಿಗೆ ಅತ್ಯಂತ ಆದರ್ಶಮಯವಾಗಿ ಆಚರಿಸುತ್ತಾ ಬಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಜನಮಾನಸದಲ್ಲಿ ಅಚ್ಚಳಿಯದೆ ಮನೆಮಾಡಿದೆ.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಈ ನಾಡಿನಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯಕ ಪರಂಪರೆಗೆ, ಸಮಾಜದ ಹಿತಚಿಂತನೆಯ ಸತ್ಕಾರ್ಯಗಳಿಗೆ ಸಲ್ಲಿಸುತ್ತಿರುವ ಸೇವೆ ಚಿರಸ್ಮರಣೀಯವಾದದ್ದು.ವೈಚಾರಿಕ ಕ್ರಾಂತಿಯ ಜ್ಯೋತಿಯಾದ ಶ್ರೀ ಪೀಠದ ಮೂಲ ಪುರುಷ ಶ್ರೀ ವಿಶ್ವಬಂಧು ಮರುಳಸಿದ್ದರಂತಹ ಮಹಾನ್ ಸಾಧಕರ ಆಶೀರ್ವಾಣಿ “ತರಳಾ ಬಾಳು ” ಎಂಬ ಮೂಲ ಮಂತ್ರವನ್ನು ತನ್ನ ಆದರ್ಶವಾಗಿಟ್ಟುಕೊಂಡು ಲೋಕದ ಎಲ್ಲಾ ತರಳರ ಬಾಳನ್ನು ಹಸನು ಮಾಡುವಲ್ಲಿ ಶ್ರಮಿಸುತ್ತಾ ಬಂದಿದೆ ಮತ್ತು ಮರುಳಸಿದ್ದರ, ಬಸವಾದಿ ಶಿವಶರಣರ ತತ್ವಗಳನ್ನು, ವಿಚಾರಗಳನ್ನು, ಚಿಂತನೆಗಳನ್ನು ತಮ್ಮ ಬಾಳ ಬುತ್ತಿಯಾಗಿ ಕಟ್ಟಿಕೊಂಡು ತಮ್ಮ ಸುತ್ತಲಿನ ಸಮಾಜಕ್ಕೆ ಉಣಬಡಿಸುತ್ತಾ ಬಂದಿದೆ.ಅಲ್ಲದೆ ಶತಶತಮಾನಗಳಿಂದಲೂ ಸಮಾಜದಲ್ಲಿ ಬೇರೂರಿಕೊಂಡು ತಾಂಡವಾಡುತ್ತಿರುವ ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಅಜ್ಞಾನ,ಅಸ್ಪೃಶ್ಯತೆ, ಅನೈತಿಕತೆ, ಶೋಷಣೆ,ಅಂಧಕಾರ,ಕಂದಾಚಾರ, ಮೂಢನಂಬಿಕೆ, ಅಸಮಾನತೆ, ಜಾತೀಯತೆ, ಲಿಂಗ ಭೇದ, ಕೋಮು ಸಂಘರ್ಷ, ವರ್ಗ ಸಂಘರ್ಷ, ಮೇಲು -ಕೀಳು ತಾರತಮ್ಯಗಳ ನಿವಾರಣೆಗಾಗಿ ಭಕ್ತರ ಮನೆಗಳೆಲ್ಲಾ ಮಠoಗಳಯ್ಯಾ ಎಂಬ ಬಸವ ವಾಣಿಯಂತೆ ಜನರಲ್ಲಿ ಕಾಯಕ, ಗೌರವ, ಶಾಂತಿ, ಸಹಬಾಳ್ವೆ, ಸಹಕಾರ, ಸೌಹಾರ್ದತೆ, ಭಾವೈಕ್ಯತೆ, ವಿಶ್ವ ಬ್ರಾತೃತ್ವ, ಬಂಧುತ್ವ ಮೂಡಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ತರಳಬಾಳು ಪರಂಪರೆಯ ಇತಿಹಾಸ ಸ್ಮರಣೆ ಮಾಡುವ ಹಾಗೂ “ದ್ವೇಷ -ವೈಷಮ್ಯಗಳ ಗೋಡೆಯನ್ನು ಕೆಡವೋಣ, ಪ್ರೀತಿ ವಿಶ್ವಾಸಗಳ ಸೇತುವೆಯನ್ನು ಕಟ್ಟೋಣ” ಎಂಬ ದ್ಯೇಯವನ್ನೊಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ರಾಷ್ಟ್ರೀಯ
ಭಾವೈಕ್ಯತಾ ಪರಿಷತ್ತಾಗಿ ರೂಪುಗೊಂಡಿದೆ ಎಂದರೆ ತಪ್ಪಾಗಲಾರದು.

ವಿವಿಧ ಜಾತಿ, ವರ್ಗ, ಧರ್ಮ,ಮತ-ಪಂಥಗಳ ಮದ್ಯೆ ಈ ನೆಲದಲ್ಲೇ ಹುಟ್ಟಿದ ಜೈನ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮ, ಸಿಖ್ ಧರ್ಮ, ಲಿಂಗಾಯಿತ ಧರ್ಮಗಳೊಂದಿಗೆ ಹೊರಗಿನಿಂದ ಬಂದ ಇಸ್ಲಾಂ ಧರ್ಮ ಮತ್ತು ಕ್ರೈಸ್ತ ಧರ್ಮಗಳನ್ನೂ ಸೇರಿಸಿದಂತೆ ಎಲ್ಲಾ ಧರ್ಮಿಯರಿಗೂ ಅವರದೇ ಧರ್ಮದ ಹಕ್ಕು,ರಕ್ಷಣೆ,ಸಹಬಾಳ್ವೆಯ ಘನತೆಯನ್ನು ತೋರಿಸಿರುವುದು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಎಂದು ಹೇಳಬಹುದು.
ಮಾನವೀಯ, ನೈತಿಕ ಭಾಂಧವ್ಯವನ್ನು ಗಟ್ಟಿಯಾಗಿ ಬೆಸೆದು ತನ್ಮೂಲಕ ಸರ್ವ ಧರ್ಮಗಳ ತಿರುಳುಗಳನ್ನು,
ಪ್ರತಿಪಾದನೆಗಳನ್ನು ಅನುಷ್ಠಾನಕ್ಕೆ ತರಲು ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆದ್ಯಾತ್ಮಿಕ, ಶೈಕ್ಷಣಿಕ, ಸಾಹಿತ್ಯಕ ಹೋರಾಟಗಳನ್ನು, ಮಾನವೀಯ ಮೌಲ್ಯಗಳನ್ನು, ಜನಸಾಮಾನ್ಯರಿಗೆ ನಿಲುಕುವಂತಹ ಸಾಮಾಜಿಕ ಹೊಣೆ ಗಾರಿಕೆಯ ಸಂದೇಶಗಳನ್ನು,ನಾಡಿನ ಜನರ ಜನಜೀವನವನ್ನು ಸಹಬಾಳ್ವೆಯೊಂದಿಗೆ, ಬಂಧುತ್ವದೊಂದಿಗೆ ಪ್ರಗತಿಯತ್ತ ಕೊಂಡೊಯ್ಯುವ ಮಹತ್ಕಾರ್ಯವನ್ನು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬಿತ್ತರಿಸುತ್ತಾ ಬಂದಿದೆ.
ತರಳಬಾಳು ಹುಣ್ಣಿಮೆ ಮಹೋತ್ಸವವು 12 ನೆಯ ಶತಮಾನದಲ್ಲಿದ್ದ ಅನುಭವ ಮಂಟಪದ ನೆನಪನ್ನು ತರುವಂತಿದೆ. ಅನುಭವ ಮಂಟಪದಲ್ಲಿ ಹೇಗೆ ಜಾತಿ, ಮತ, ಪಂಥ,ದೇಶ, ಭಾಷೆ, ಲಿಂಗಗಳ ತಾರತಮ್ಯವನ್ನು ತೊರೆದು ಮಾನವರೆಲ್ಲ ಒಂದಾಗಿ ಬದುಕುತ್ತಿದ್ದರೋ ಅದೇ ರೀತಿ ಈ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿಯೂ ಅನುಭವ ಮಂಟಪದಲ್ಲಿದ್ದ ದೃಶ್ಯವನ್ನು ಕಾಣಬಹುದು.
ಭಾರತದಂತಹ ವೈವಿದ್ಯಮಯ ದೇಶದಲ್ಲಿ ಸುಮಾರು 900 ವರ್ಷಗಳಿಂದ ಅಖಂಡವಾಗಿ ಪ್ರಜ್ವಲಿಸುತ್ತಾ ಬಂದ ಬಸವ ಜ್ಯೋತಿಗೆ ಅನಾಚಾರಿ ಅನುಯಾಯಿಗಳಿಂದ ಹಿಡಿದ ಮಂಕನ್ನು ತಿದ್ದಿ ತೀಡಿ ಆ ಜ್ಯೋತಿಯನ್ನು ಮತ್ತೆ ಉಜ್ವಲವಾಗಿ ಬೆಳಗುವಂತೆ ಮಾಡುವುದು, ಮಾನವರೆಲ್ಲರೂ ದೇವರ ಮಕ್ಕಳು ಅವರೆಲ್ಲರಿಗೂ ದೇವರನ್ನು ಪೂಜಿಸುವ ಹಕ್ಕಿದೆ ಅಂತಹ ಹಕ್ಕನ್ನು ಇಷ್ಟಲಿಂಗದ ಮೂಲಕ ಸರ್ವರಿಗೂ ಒದಗಿಸಿದ ಬಸವಾದಿ ಶಿವಶರಣರ ಮಾರ್ಗದಲ್ಲಿ ಜನತೆಯನ್ನು ಕರೆದೊಯ್ಯುವ, ಎಲ್ಲರೂ ಪ್ರೀತಿ ವಿಶ್ವಾಸಗಳಿಂದ ಬದುಕಲು ಜನರ ಜೀವನ ಪಾವನವಾಗಬೇಕು ಶುಭಕರವಾಗಬೇಕು ಎಂಬ ಆಶಯವನ್ನು ಮೂಡಿಸುವ, ಹತ್ತು ಹಲವು ವಿಚಾರಗಳನ್ನು ಜನತೆಗೆ ತಿಳಿಹೇಳಿ ಅವರಿಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೆರೇಪಿಸುವ, ದೇಶದ ಜನತೆಯ ಅಜ್ಞಾನವನ್ನು ಕಳೆಯುವ, ಅಸಮಾನತೆಯನ್ನು ತೊಡೆದು ಹಾಕುವ, ಸರ್ವ ಧರ್ಮಿಯರಿಗೂ ಮುಕ್ತ ಪ್ರವೇಶ ನೀಡಿ ಬಂಧುತ್ವದ ಸಂದೇಶ ಸಾರುವ, ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಾ ಬಂದಿರುವ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವಂತೆ ವ್ಯಕಿತ್ವ ವಿಕಾಸ ಮತ್ತು ಸಂವಹನ ಕೌಶಲ್ಯ ಬೆಳೆಸುವ, ಅಂತರಂಗ, ಬಹಿರಂಗ ಶುದ್ಧತೆ ತರುವ ಇಡೀ ಮಾನವ ಜನಾಂಗವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಚಲನಶೀಲ, ಚಿಂತನಶೀಲ,ಜಂಗಮಶೀಲವಾದ ಮತ್ತು ಕಣ್ಣ್ ಮನಗಳಿಗೆ ಮುದ ನೀಡುವ, ಮೆದುಳಿಗೆ ಕಸರತ್ತು ಕಲಿಸುವ, ಲೌಕಿಕ ಹಾಗೂ ಪಾರಲೌಕಿಕ ಚಿಂತನೆ ನಡೆಸುವ ಹಾಗೂ ಕಲ್ಲೊಳಗೆ ಹೊನ್ನುoಟು, ಮರದೊಳಗೆ ಅಗ್ನಿಯುoಟು, ಹಾಲಿನಲ್ಲಿ ತುಪ್ಪವುಂಟು, ಅಂತರ್ಯದಲ್ಲಿ ಶಿವನಿಹನು ಎಂಬುದನ್ನು ತೋರಿಸಿಕೊಟ್ಟ, ಭಕ್ತಿಭಾವಗಳ ಸಂಗಮವಾಗುವ ತರಳಬಾಳು ಹುಣ್ಣಿಮೆ ಮಹೋತ್ಸವವು ಒಂದು ಜ್ಞಾನ ಜ್ಯೋತಿಯಾಗಿದೆ.

ಹಾಗಾಗಿಯೇ ಅಲ್ಲಮ ಪ್ರಭುದೇವರು ತಮ್ಮ ಒಂದು ವಚನದಲ್ಲಿ,
“ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ!
ನಿನ್ನ ಒಡವೆ ಎಂಬುದು ಜ್ಞಾನ ರತ್ನ ಮಾತ್ರ
ಅಂತಪ್ಪ ರತ್ನವ ನೀನು
ಅಲಂಕರಿಸಿದೆಯಾದಡೆ ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ.”
ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭಾವೈಕ್ಯತೆಗೆ ಆಪತ್ತು ಒದಗಿರುವ ಇಂದಿನ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಗುರುತಿಸಿ ಸರ್ವರಿಗೂ ಸಮಬಾಳು -ಸಮ ಪಾಲು ಎಂದು ಸಾರುವ ನಿರ್ಲಕ್ಷಕ್ಕೆ ಒಳಗಾಗಿರುವ ಸಮಾಜಕ್ಕೆ ಕಾಯಕಲ್ಪ ನೀಡಿ ಸದೃಢ ಸ್ವಾಭಿಮಾನಿ ಸಮಾಜವನ್ನು ಕಟ್ಟಲು, ಸ್ವಾಭಿಮಾನದ ಸತ್ಪ್ರಜೆಗಳನ್ನಾಗಿ ಬೆಳೆಸುವ, ಮನುಕುಲದ ಸರ್ವತೋಮುಖ ಅಭಿವೃದ್ಧಿಗಾಗಿ ಜನಜಾಗೃತಿ ಮೂಡಿಸುವ ಸಮಾಜಮುಖಿ ಸಮಾರಂಭವಾದ ಮತ್ತು ಸಂಕುಚಿತ ಬುದ್ದಿಯ ಮೂಲಭೂತವಾದಿಗಳ ಕೋಲಾಹಲದಿಂದಾಗಿ ವಿವಿಧ ಧರ್ಮಗಳ ಮದ್ಯೆ ಸಂಶಯದ ಅಡ್ಡ ಗೋಡೆಗಳು ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಭೇದ -ಭಾವ, ಮೇಲು -ಕೀಳು ತಾರತಮ್ಯಗಳಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿ ಭಾವನಾತ್ಮಕವಾಗಿ ಬೆಸೆಯುವ, ಈ ಬಹುತ್ವದ ನಾಡಿನಲ್ಲಿ ಬಂಧುತ್ವ ಸಾರುವ,ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ, ಏಕವ್ಯಕ್ತಿಯ ಪ್ರದರ್ಶನವಿಲ್ಲದೆ ಭಕ್ತರಿಂದ ಭಕ್ತರಿಗಾಗಿ ಭಕ್ತರಿಗೋಸ್ಕರ ನಡೆಯುವ ಏಕೈಕ ಮಹೋತ್ಸವವೇ ತರಳಬಾಳು ಹುಣ್ಣಿಮೆ ಮಹೋತ್ಸವ.

ಹೀಗೆ 9 ದಿನಗಳವರೆಗೆ ನಡೆಯುವ ವೈಶಿಷ್ಟಪೂರ್ಣ, ವೈವಿದ್ಯಮಯ, ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪ್ರತೀ ದಿನ ಬೆಳಿಗ್ಗೆ ಯಿಂದ ಕಾರ್ಯಕ್ರಮ ಮುಗಿಯುವ ವರೆಗೂ ಸಕ್ರೀಯವಾಗಿ ಭಾಗವಹಿಸುವ ನಾಡಿನ ಸಮಸ್ತ ಜನರು ತಮ್ಮ ಕಾಯಕವನ್ನು ಮುಗಿಸಿ ದೇಹದ ಹಸಿವನ್ನು ನೀಗಿಸಿಕೊಂಡು ಜ್ಞಾನದ ಹಸಿವನ್ನು ಹಿಂಗಿಸಿಕೊಳ್ಳಲು ಸಿದ್ದರಾಗಿ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮಕ್ಕೆ ಬರುತ್ತಿರುವುದನ್ನು ನೋಡಿದರೆ ಹೆಮ್ಮೆ ಅನಿಸುತ್ತದೆ. ತರಳಬಾಳು ಹುಣ್ಣಿಮೆ ಮಹೋತ್ಸವವು ಒಂದು ಯಾoತ್ರಿಕ ಕಾರ್ಯಕ್ರಮವಾಗದೆ ಅದೊಂದು ಉತ್ಸಾಹದ, ಪ್ರೋತ್ಸಾಹದ ಟಾನಿಕ್ ಆಗಿ, ಜನತೆಯ ಆಶೋತ್ತರಗಳ ಪ್ರತೀಕವಾಗಿ ನಾಡಿನ ನಾನಾ ಮೂಲೆಗಳಲ್ಲಿ ಸಡಗರ ಸಂಭ್ರಮಗಳಿಂದ ಪ್ರತೀ ವರ್ಷ ಆಚರಿಸುತ್ತಾ ಬಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ರಾಷ್ಟ್ರ ಕವಿ ಕುವೆಂಪುರವರ ವಾಣಿಯಂತೆ:
“ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ “…..
ಎಂಬ ವಿಶ್ವ ಮಾನವ ಸಂದೇಶವನ್ನು ಸರ್ವ ಧರ್ಮ ಸಮನ್ವಯ ಸಂದೇಶವನ್ನು ಸಾರುತ್ತಾ ಬಂದಿದ್ದು, ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬಿತ್ತರಿಸುವ ದಿವ್ಯ ಸಂದೇಶಗಳು ಬರಲಿರುವ ಹೊಸ ಶತಮಾನಕ್ಕೆ, ಹೊಸ ಸಹಸ್ರಮಾನಕ್ಕೆ ಮಂಗಳರಕ್ಷೆಯಾಗಿರಲಿ ಎಂದು ಆಶಿಸೋಣ…..