ಚಿತ್ರದುರ್ಗ
ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ಆಯೋಜಿಸಿರುವ ‘ತರಳಬಾಳು ಹುಣ್ಣಿಮೆ’ ಮಹೋತ್ಸವ ಫೆಬ್ರವರಿ 4ರಿಂದ 12ರವರೆಗೆ ತಾಲ್ಲೂಕಿನ ಭರಮಸಾಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಿಂದ ಭರಮಸಾಗರ ದವರೆಗೆ ಬೃಹತ್ ಬೈಕ್ ರ್ಯಾಲಿಯ ಮೂಲಕ ಶ್ರೀ ತರಳಬಾಳು ಜಗದ್ಗುರು ಡಾ. ಶಿವ ಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಕರೆತರಲಾಗುವುದು.
ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭಕ್ಕೆ 200 ಎಕರೆ ಪ್ರದೇಶದಲ್ಲಿ ನೂತನ ಮಹಾಮಂಟಪ, ಸಭಾವೇದಿಕೆ, ಪುಸ್ತಕ ಮಾರಾಟ ಮಳಿಗೆ, ಕೃಷಿ ಪ್ರದರ್ಶನ ಮಳಿಗೆ, ಕ್ರೀಡಾ ಅಂಕಣಗಳು ಹಾಗೂ ಕುಸ್ತಿ ಅಖಾಡ ಸಿದ್ಧಗೊಂಡಿದೆ.
9 ದಿನ ನಡೆಯುವ ಮಹೋತ್ಸವದಲ್ಲಿ ಮಠಾಧೀಶರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ 4ರಂದು ಸಂಜೆ 4.30ಕ್ಕೆ ಭರಮಸಾಗರದ ಭರಮಣ್ಣ ನಾಯಕನ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಆ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಫೆ.12ರಂದು ಸಮಾರೋಪ ಸಮಾರಂಭ ನಿಗದಿಯಾಗಿದೆ. ಅಂದು ಶ್ರೀಗಳ ಬೆಳ್ಳಿಪಲ್ಲಕ್ಕಿ ಉತ್ಸವ, ಸದ್ಧರ್ಮ ಸಿಂಹಾಸನಾರೋಹಣ ಸಮಾರಂಭ ಜರುಗಲಿವೆ. ಉತ್ಸವದ ಅಂಗವಾಗಿ ಶ್ರೀಗಳು ಹುತಾತ್ಮ ವೀರಯೋಧರ ಕುಟುಂಬಗಳ ಸದಸ್ಯರಿಗೆ ತಲಾ ₹1 ಲಕ್ಷ ಆರ್ಥಿಕ ನೆರವು ನೀಡಲಿದ್ದಾರೆ.