ಹಾವೇರಿ :
ಇಲ್ಲಿನ ಬಸವ ಭವನದಲ್ಲಿ ಬಸವ ಬಳಗದಿಂದ ರವಿವಾರ ದೇವರ (ಜೇಡರ) ದಾಸಿಮಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಶ್ರೇಷ್ಠ ಶರಣರು ದಾಸಿಮಯ್ಯನವರಾಗಿದ್ದಾರೆ. ಅವರು ಆದ್ಯ ವಚನಕಾರರಾಗಿ ತಮ್ಮ ವಚನಗಳ ಮೂಲಕ ಸಮಾಜ ಮುನ್ನಡೆಗೆ ಸಂದೇಶ, ಮಹಿಳಾ ಸಮಾನತೆ, ಅನುಭಾವದ ಶ್ರೇಷ್ಠತೆ ಸಾರಿದ್ದಾರೆ.
ಸಾಮಾನ್ಯನೂ ಸಹ ಶಿವನ ಮತ್ತು ಗುರುವಿನ ಕೃಪೆಗೆ ಪಾತ್ರರಾಗುವ ಬಗ್ಗೆ ಸಂದೇಶಗಳನ್ನು ನೀಡಿದ್ದಾರೆ. ಏಕದೇವೋಪಾಸನೆಯ ತತ್ವನಿಷ್ಟೆ ದಾಸಿಮಯ್ಯ ಶರಣರದಾಗಿತ್ತು ಎಂದು ಹೇಳಿದರು.
ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಅವರು ದಾಸಿಮಯ್ಯನವರ ವಚನಗಳ ವಿಶ್ಲೇಷಣೆ ಮಾಡಿದರು. ಗೌರವ ಸಲಹೆಗಾರ ಶಿವಬಸಪ್ಪ ಮುದ್ದಿ ಅವರು ದಾಸಿಮಯ್ಯನವರ ಕಾಯಕ ತತ್ವ ಮತ್ತು ಅದರ ಮಹತ್ವ ಹೇಳಿದರು.

ಸಿ. ಬಿ. ಇಟಗಿ ಅವರು ದಾಸಿಮಯ್ಯ ಹಾಗೂ ಅವರ ಪತ್ನಿ ದುಗ್ಗಳೆಯರ ಅನೋನ್ಯ ದಾಂಪತ್ಯ ಜೀವನದ ಬಗ್ಗೆ ವಿವರಿಸಿದರು. ಶಿವಯೋಗಿ ಬೆನ್ನೂರ, ಧ್ರುವ ಕಾಯಕದ ಅವರು ಸಹ ಮಾತನಾಡಿದರು.
ಕಾವ್ಯ ಅಂಗಡಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೊಟ್ರೇಶ ಬಿಜಾಪುರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮುರುಗೆಪ್ಪ ಕಡೆಕೊಪ್ಪ, ಹಾವೇರಿ ಹೊಂಡದಮಠದ ಅಕ್ಕನ ಬಳಗದ ಅಧ್ಯಕ್ಷೆ ವಿಮಲಾ ಮರ್ತೂರ ಕೋರಿಶೆಟ್ಟರ, ನಾಗೇಂದ್ರಪ್ಪ ಮಂಡಕ್ಕಿ, ಶಿವಾನಂದ ಹೊಸಮನಿ, ಗಂಗಣ್ಣ ಮಾಸೂರ, ಶಿವರಾಜ ಕಾಯಕದ ದಂಪತಿ, ಅಂಗಡಿ ದಂಪತಿ, ಪುಟ್ಟಪ್ಪ ಗಾಣಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
