ಚಿಂಚೋಳಿ:
ಪಟ್ಟಣದಲ್ಲಿ ಬಸವ ಭವನ ನಿವೇಶನ ಮಂಜೂರಿಗೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳ ಭರವಸೆ ಮೇರೆಗೆ ವಾಪಸ್ ಪಡೆಯಲಾಗಿದೆ.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ಸಂಗಮನಾಥ ಹಿರೇಮಠ ತಹಶೀಲ್ದಾರ್ ಹಳೆಯ ಕಚೇರಿ ಎದುರಿಗಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಮನವೊಲಿಸಿದರು.
ನಂತರ ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕ ಮತ್ತು ಬಸವಪರ ಸಂಘಟನೆಗಳ ಅಧ್ಯಕ್ಷ ಶರಣು ಪಾಟೀಲ ನೇತೃತ್ವದಲ್ಲಿ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆಯಲಾಯಿತು. ಪಟಾಕಿ ಸಿಡಿಸಿ, ಸಿಹಿ ತಿಂದು ಸಂಭ್ರಮಿಸಿದರು.
ಚಿಂಚೋಳಿ ಪಟ್ಟಣ ವ್ಯಾಪ್ತಿಯ ನೀಮಾ ಹೊಸಳ್ಳಿ ಕ್ರಾಸ್ನಲ್ಲಿ ಬರುವ ಸ.ನಂ. 242ರಲ್ಲಿ ಬರುವ ಸರ್ಕಾರಿ ಗಾಯರಾಣ ಜಮೀನಿನಲ್ಲಿ 2 ಎಕರೆ ಜಮೀನು ಮಂಜೂರಾತಿಯ ಭರವಸೆ ನೀಡಿದ್ದಾರೆ.
ಜೂನ್ 21ರ ರಾತ್ರಿ ತಹಶೀಲ್ದಾರ್ ಹಳೆಯ ಕಚೇರಿ ಆವರಣದಲ್ಲಿ ಬಸವ ಭವನದ ಫಲಕ ನೆಟ್ಟು ಧ್ವಜ ಕಟ್ಟಲಾಗಿತ್ತು. ಇದನ್ನು ತಾಲ್ಲೂಕು ಆಡಳಿತ ಸೋಮವಾರ ತೆರವುಗೊಳಿಸಿತ್ತು. ಇದನ್ನು ಖಂಡಿಸಿ ಸೋಮವಾರ ರಾತ್ರಿಯಿಂದಲೇ ಧರಣಿ ಆರಂಭಿಸಲಾಗಿತ್ತು.
ಧರಣಿಯಲ್ಲಿ ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ ಗೊಣಗಿ, ಸೂರ್ಯಕಾಂತ ಹುಲಿ, ವೀರೇಶ, ಶಿವಶರಣಪ್ಪ, ನಂದಿಕುಮಾರ, ಸುಭಾಷ ಸೀಳಿನ್, ಸಂತೋಷ ಕಶೆಟ್ಟಿ, ಸುರೇಶ ದೇಶಪಾಂಡೆ, ಬಸವರಾಜ ಪುಣ್ಯಶೆಟ್ಟಿ, ಕಾಶಿನಾಥ ಹುಣಜೆ, ಗುರು ಪಡಶೆಟ್ಟಿ, ಶಿವು ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.