ಬಸವ ಮಾಸ ಕಾರ್ಯಕ್ರಮ: ಶರಣ ಚಳುವಳಿಗೆ ಅಲ್ಲಮರ ವಿಶಿಷ್ಟ ಕೊಡುಗೆ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು

ಶಿವಯೋಗ ಮತ್ತು ಸಾಮಾಜಿಕ ಸೇವಾಕಾರ್ಯಗಳಲ್ಲಿ ಹೆಸರು ಮಾಡಿದ್ದ ಸೊಲ್ಲಾಪುರದ ನೊಳಂಬರ ರಾಜಗುರುವಾಗಿದ್ದ ಸಿದ್ದರಾಮೇಶ್ವರರು ಮಹಾನ್ ಸಾಧಕರಾಗಿದ್ದರು. ಆದರೂ ಸಹ ಇದಕ್ಕಿಂತಲೂ ಉನ್ನತ ಸಾಧನೆ ಬೇರೆಯೇ ಇದೆ ಎಂದು ಅಲ್ಲಮಪ್ರಭುದೇವರು ಸಿದ್ದರಾಮೇಶ್ವರರಿಗೆ ಅರಿವು ಮೂಡಿಸಿ ಕಲ್ಯಾಣಕ್ಕೆ ಕರೆದುಕೊಂಡು ಬಂದರು.

ಹಾಗೆಯೇ ಕಲ್ಯಾಣದಲ್ಲಿ 12 ವರ್ಷಗಳ ಕಾಲ ಗುಪ್ತವಾಗಿ ಶರಣರ ಪ್ರಸಾದ ಎಲೆಗಳ ಶುಚಿತ್ವದಲ್ಲಿ ತೊಡಗಿದ್ದ ಅಫ್ಘಾನಿಸ್ತಾನದಿಂದ ಬಂದಿದ್ದ ಸೂಫಿ ಸಂತ ಮರಳುಶಂಕರದೇವರನ್ನ ಅಲ್ಲಮರು ಗುರುತಿಸಿ ಬಸವಣ್ಣನವರಿಗೆ ಪರಿಚಯಿಸಿದರು, ಎಂದು ಶರಣ ಚಳುವಳಿಗೆ ವಿಶಿಷ್ಟ ಕೊಡುಗೆ ನೀಡಿದ ಅಲ್ಲಮ ಪ್ರಭುದೇವರನ್ನು ಮಾತಾಜಿ ಗುರುವಾರ ಸ್ಮರಿಸಿದರು.

ಪಟ್ಟಣದಲ್ಲಿ ‘ಬಸವಣ್ಣನವರ ಜೀವನ ದರ್ಶನ’ ಎಂಬ ವಿಚಾರವಾಗಿ ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು 30 ದಿನಗಳ ಪ್ರವಚನ ನೀಡುತ್ತಿದ್ದಾರೆ. ಫ.ಗು. ಹಳಕಟ್ಟಿನಗರದಲ್ಲಿ ನಾಲ್ಕನೇ ವರ್ಷದ ಬಸವ ಮಾಸ ಕಾರ್ಯಕ್ರದ ಅಂಗವಾಗಿ ಪ್ರವಚನ ನಡೆಯುತ್ತಿದೆ.

ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಳ್ಳಿಯ ಪ್ರಭುಸ್ವಾಮಿ ದಂಪತಿಗಳು ಹಾಗು ಬಸವೇಶ್ವರಿ ಮಾತಾಜಿಯವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಕುಮಾರಿ ವರ್ಷಿತ ಅವರಿಂದ, ಪ್ರಾರ್ಥನೆ ನಿವೃತ್ತ ಶಿಕ್ಷಕರಾದ ಕಮ್ಮರಹಳ್ಳಿಯ ನಾಗಪ್ಪ ಅವರಿಂದ, ವಂಧನಾರ್ಪಣೆ ಕುಮಾರಿ ಸುಕನ್ಯಾ ಅವರಿಂದ ನಡೆಯಿತು. ಕುಮಾರಿ ತೇಜಸ್ವಿನಿ ಆರೋಗ್ಯ ಮಾಹಿತಿ ನೀಡಿದರು.

ನಿವೃತ್ತ ಉಪನ್ಯಾಸಕರಾದ ಪಡಗೂರು ಪಿ.ಸಿ.ರಾಜಶೇಖರ್ ದಿನದ ಪ್ರಸಾದ ದಾಸೋಹಿಗಳಾಗಿದ್ದರು.

Share This Article
Leave a comment

Leave a Reply

Your email address will not be published. Required fields are marked *