ಬೆಂಗಳೂರು
ನಗರದ ಬಸವ ಸಂಘಟನೆಗಳು ಆಯೋಜಿಸಿದ್ದ ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ‘ಬಸವ ಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ‘ಬಸವಣ್ಣ, ನನ್ನ ಬದುಕಿನ ಪ್ರೇರಣ ಶಕ್ತಿ. ಅವರ ಕಾಯಕ, ದಾಸೋಹ, ಸಮ ಸಮಾಜದ ತತ್ವಗಳು ನನ್ನ ಬದುಕನ್ನು ರೂಪಿಸಿವೆ. ಬಸವಣ್ಣನ ಹೆಸರಲ್ಲಿ ಪ್ರಶಸ್ತಿ ನೀಡಿರುವುದು, ಗೌರವದ ಜೊತೆಗೆ, ಜವಾಬ್ದಾರಿಯನ್ನೂ ನೆನಪಿಸಿದೆ’ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ವಿ.ವಿ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ‘ನಮ್ಮಲ್ಲಿರುವ ಒಳಪಂಗಡಗಳು ಒಗ್ಗಟ್ಟಾದರೆ ರಾಜಕೀಯವಾಗಿ ಅಭಿವೃದ್ಧಿ ಹೊಂದಬಹುದು. ಈ ನಿಟ್ಟಿನಲ್ಲಿ ಒಳಪಂಗಡಗಳನ್ನು ಮರೆತು, ಒಗ್ಗಟ್ಟಿನಿಂದ ಸಂಘಟಿತರಾದರೆ ಸಮುದಾಯವೂ ಬಲವರ್ಧನೆಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.
ತುಮಕೂರಿನ ಸಿದ್ದಗಂಗಾಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಅಕ್ಕನ ಬಳಗ ಮಹಿಳಾ ಸಮಾಜದ ಅಧ್ಯಕ್ಷೆ ಪಂಕಜ ಶಿವಾನಂದ ಮತ್ತಿತರರು ಹಾಜರಿದ್ದರು.
ಅಕ್ಕನ ಬಳಗ ಮಹಿಳಾ ಸಮಾಜ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶೀಲಮ್ಮ ಅವರಿಗೆ ‘ಅಕ್ಕಮಹಾದೇವಿ ಪ್ರಶಸ್ತಿ’ ಶ್ರೀಬಸವೇಶ್ವರ ಸೇವಾ ಸಮಿತಿ ಡಾ.ದೀಪಕ್ ಶಿವರಾತ್ರಿ ಅವರಿಗೆ ‘ಕಾಯಕ ಯೋಗಿ’ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ ಅವರಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡಿಗೌರವಿಸಿತು. ಇದೇ ವೇಳೆ ವಿವಿಧ ಕ್ಷೇತ್ರಗಳ ಒಂಬತ್ತು ಸಾಧಕರಿಗೆ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶ್ರೀಬಸವೇಶ್ವರ ಸೇವಾ ಸಮಿತಿ, ಅಕ್ಕನ ಬಳಗ ಮಹಿಳಾ ಸಮಾಜ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.