ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರನ್ನು ಸತ್ಕರಿಸಲಾಯಿತು
ಬಸವಕಲ್ಯಾಣ
ಜಗತ್ತಿಗೆ ಪ್ರಜಾಪ್ರಭುತ್ವ ಮೊದಲು ಕೊಟ್ಟಿದ್ದು ಕಲ್ಯಾಣ ನಾಡು, ಪ್ರಪಂಚಕ್ಕೆ ಮಾನವೀಯ ತತ್ವಗಳನ್ನು ಪರಿಚಯಿಸಿದ್ದು ಲಿಂಗಾಯತ ಧರ್ಮ. 900 ವರ್ಷಗಳ ಹಿಂದೆಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.
ಅವರು ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ, ಬಸವಕಲ್ಯಾಣ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆದ ಲಿಂಗಾಯತ ಧರ್ಮೋದಯ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ‘ಲಿಂಗಾಯತ’ ಪದ ಶ್ರೇಷ್ಠ ಅರ್ಥವುಳ್ಳದ್ದು, ಕಾಯವನ್ನು ಶುದ್ಧ ಮಾಡಿಕೊಂಡು, ಅಂಗದ ಮೇಲೆ ಇಷ್ಟಲಿಂಗವನ್ನು ದೀಕ್ಷೆಯಿಂದ ಅಳವಡಿಸುವುದು ಮತ್ತು ಅಂತರಂಗಕ್ಕೆ ಮಂತ್ರದಿಂದ ಪ್ರಾಣಲಿಂಗ ಸಂಬಂಧಿಸುವುದು. ಸದಾಚಾರಕ್ಕೆ ಮೂಲ ಇಷ್ಟಲಿಂಗ. ಇದರ ಧಾರಣೆಯಿಂದ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಿ ಸದಾಚಾರಗಳೆನಿಸುವುದು ವಚನಗಳು, ಪಂಚಾಚಾರ, ಷಟಸ್ಥಲಗಳು ಲಿಂಗಾಯತರ ಆಚರಣೆಗಳಾಗಿವೆ ಎಂದರು.
ಹರಳಯ್ಯ ಗವಿಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಲಿಂಗಾಯತ ಧರ್ಮ ವೈಜ್ಞಾನಿಕ, ವೈಚಾರಿಕ ಮಾನವ ಆಧಾರಿತ ಧರ್ಮವಾಗಿದೆ. ಶೂನ್ಯ ಸ್ವರೂಪಿ ಪರಮಾತ್ಮ ಎಲ್ಲರ ಅಂತರಂಗದಲ್ಲಿಯೇ ಇದ್ದಾನೆ. ಅದಕ್ಕೆ ನಿನ್ನೊಳಗಿನ ಶಕ್ತಿ ನಿನ್ನ ಪರಮಾತ್ಮ ಅದನ್ನು ನೀನು ಆರಾಧಿಸಬೇಕು ಎಂದು ಬಸವಣ್ಣನವರು ಇಷ್ಟಲಿಂಗ ನೀಡಿದ್ದಾರೆ.
ಇದು ಬಸವಣ್ಣನವರಿಂದ ಆವಿಷ್ಕಾರವಾಗಿದೆ. ಲಿಂಗಾಯತ ಧರ್ಮ ಪ್ರಕೃತಿ ಧರ್ಮ, ಸೃಷ್ಟಿಯ ಮೂಲಕಾರಕಗಳನ್ನು ಅಂಗೀಕರಿಸಿಕೊಂಡು ಹುಟ್ಟಿದ ಧರ್ಮವಾಗಿದ್ದು, ಸೃಷ್ಟಿಯ ಎಲ್ಲಾ ಮೌಲ್ಯಗಳು, ಗುಣಗಳು ಹೊತ್ತುಕೊಂಡು ಬಂದ ಧರ್ಮವಾಗಿದೆ ಎಂದರು.
ಅಕ್ಕಮಹಾದೇವಿಯ ಗವಿಯ ಪೂಜ್ಯ ಸತ್ಯಕ್ಕತಾಯಿ ವಚನ ಪಠಣ ಮಾಡಿಸಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ರೇವಣಪ್ಪಾ ರಾಯವಾಡೆ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಜಂಟಿಕಾರ್ಯದರ್ಶಿ ಈಶ್ವರ ಶೀಲವಂತ, ಮೇದಾರ ಕೇತಯ್ಯ ಸಮಾಜದ ಗಾಯತ್ರಿ ಟೀಚರ್ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ನಾಮದೇವ ಸೂರ್ಯವಂಶಿ ಧ್ವಜಾರೋಹಣಗೈದರು. ನಿವೃತ್ಯ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ, ಕಾಶಪ್ಪಾ ಬಾಲಿಕಿಲೆ, ಶ್ರೀಶೈಲ ಹುಡೇದ, ಶಂಕರ ಕರಣೆ, ಸುಲೋಚನಾ ಮಾಮಾ, ವಿದ್ಯಾವತಿ ಶೇರಿಕಾರ, ಶಿವರಾಜ ನೀಲಕಂಠೆ, ಮಂಗಲಾ ಪಾಟೀಲ ಸೇರಿಂದತೆ ಇತರರಿದ್ದರು.
ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವಿಂದ್ರ ಕೊಳಕೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ತೋಗರಖೇಡೆ ನಿರೂಪಿಸಿದರು. ಅಕ್ಕನ ಬಳಗದ ಶರಣೆಯರಿಂದ ಸಿದ್ಧರಾಮೇಶ್ವರರರ ತ್ರಿವಿಧಿಗಳನ್ನು ಪಠಿಸಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರನ್ನು ಸತ್ಕರಿಸಲಾಯಿತು.