ಕಾಮಗಾರಿ ನಿಂತಿರುವ ಬಸವ ಪುತ್ಥಳಿಗೆ 5 ಲಕ್ಷ ರೂಪಾಯಿ ದಾಸೋಹ ಘೋಷಿಸಿದ ಯು.ಟಿ. ಖಾದರ್

ಬಸವ ಮೀಡಿಯಾ
ಬಸವ ಮೀಡಿಯಾ

“ನಮ್ಮ ಸಚಿವರಿಗೆ, ಶಾಸಕರಿಗೆ ಕಾಣಿಕೆ ಕೊಡಲು ತಿಳಿಸುತ್ತೇನೆ.”

ಬೆಂಗಳೂರು

ನಗರದ ಕುಂಬಳಗೋಡಿನಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣನವರ 112 ಅಡಿ ಪುತ್ಥಳಿಗೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಕಳೆದ ಬುಧವಾರ ರಾಜಾಜಿನಗರದ ಬಸವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವಾಗ ಕುಂಬಳಗೋಡಿನಲ್ಲಿ ನಿರ್ಮಾಣವಾಗುತ್ತಿರುವ 112 ಅಡಿ ಪುತ್ಥಳಿಯ ಕಾಮಗಾರಿ ಕೆಲಸ ಆರ್ಥಿಕ ಸಮಸ್ಯೆಯಿಂದ ನಿಂತಿದೆ. ಆದ್ದರಿಂದ ನನ್ನ ವೈಯಕ್ತಿಕ 5 ಲಕ್ಷಗಳನ್ನ ಪರಮಪೂಜ್ಯ ಮಾತೆ ಗಂಗಾದೇವಿ ಹಾಗೂ ಪರಮಪೂಜ್ಯ ಬಸವಯೋಗಿ ಸ್ವಾಮೀಜಿಯವರಿಗೆ ಕೊಡುವುದಲ್ಲದೆ ನಮ್ಮ ಸಚಿವರಿಗೆ ಶಾಸಕರಿಗೆ ಹೇಳಿ ಕಾಣಿಕೆ ಕೊಡಲು ತಿಳಿಸುತ್ತೇನೆ, ಎಂದು ಹೇಳಿದರು.

ಬಸವಣ್ಣನವರ ಮೂಲ ಆಶಯವನ್ನು ವಚನ ಸಾಹಿತ್ಯದ ಮೂಲ ವಿಚಾರವನ್ನು ಈ ಜಗತ್ತಿಗೆ ಪ್ರಸಾರ ಮತ್ತು ಪ್ರಚಾರ ಮಾಡಿದರಲ್ಲಿ ಮೊದಲಿಗರಾದ ಪರಮಪೂಜ್ಯ ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿ, ಪರಮಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರ ಕಾರ್ಯ ನಾವು ಮರೆಯುವ ಹಾಗಿಲ್ಲ ಎಂದರು.

ಸರ್ವ ಜನಾಂಗದ ಶಾಂತಿಯ ತೋಟದ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಬಸವ ತತ್ವದಿಂದ ಮಾತ್ರ ಸಾಧ್ಯ, ಎಂದು ಹೇಳಿದರು.

ವಿಶ್ವಗುರು ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅವರಂತೆ ಬದುಕುವುದರಿಂದ ಮನಸ್ಸು ಮತ್ತು ಹೃದಯ ವಿಶಾಲವಾಗಿ ಭಾರತ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರೇಷ್ಠವಾಗಿ ಬೆಳೆಯಲು ಅನುಕೂಲವಾಗುತ್ತದೆ. ಬಸವಣ್ಣನವರು ಸಮ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಿ ಸಾಧಿಸಿ ತೋರಿಸಿದ್ದಾರೆ.

ಬಸವಾದಿ ಶರಣರ ಆಶಯಗಳನ್ನು ಪೂರ್ಣ ಮಾಡಲಿಕ್ಕೆ ವಿಶ್ವ ಕಲ್ಯಾಣ ಮಿಷನ್, ರಾಷ್ಟ್ರೀಯ ಬಸವ ದಳ ಹಾಗೂ ಬಸವ ಧರ್ಮ ಪೀಠದ ಮುಖ್ಯಸ್ಥರಾದ ಪರಮಪೂಜ್ಯ ಮಾತೆ ಗಂಗಾದೇವಿ ಹಾಗೂ ಪರಮಪೂಜ್ಯ ಬಸವಯೋಗಿ ಸ್ವಾಮೀಜಿ ಸಾಗುತ್ತಿರುವುದು ಈ ರಾಜ್ಯ ಈ ರಾಷ್ಟ್ರಕ್ಕೆ ಆದರ್ಶರಾಗಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಪರಮಪೂಜ್ಯ ಮಾತೆ ಗಂಗಾದೇವಿಯವರು ‘ಮನಸ್ಸಿನ ಮೈಲಿಗೆ ತೊಳೆಯಬೇಕಾದರೆ ಅದು ಬಸವಣ್ಣನವರು ಕೊಟ್ಟಂತಹ ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ. ಕಾಯಕಕ್ಕೆ ಮಹತ್ವವನ್ನು ಕೊಟ್ಟು ಕಾಯಕ ಜೀವಿಗಳ ಸಮಾಜವನ್ನು ಕಟ್ಟುವಲ್ಲಿ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು, ಸಮಾನ ಹಕ್ಕುಗಳು ದೊರೆಯಬೇಕೆಂದು ಪ್ರಯತ್ನ ಪಟ್ಟು ಸಾಧಿಸಿ ತೋರಿಸಿದ ವಿಶ್ವದ ಏಕೈಕ ಪ್ರವಾದಿ ಎಂದರೆ ಅದು ವಿಶ್ವಗುರು ಬಸವಣ್ಣನವರು. ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ಬಂದ ಬಸವಣ್ಣನವರು ಈ ವಿಶ್ವಕ್ಕೆ ದಾರಿದೀಪವಾಗಿದ್ದಾರೆ” ಎಂದು ಆಶೀರ್ವದಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಕುಂಬಳಗೋಡಿನ ಬಸವ ಗುಂಗೋತ್ರಿ ಆಶ್ರಮದ ಪರಮಪೂಜ್ಯ ಬಸವಯೋಗಿ ಸ್ವಾಮೀಜಿ ‘ಬಸವ ತತ್ವದಿಂದ ಮಾತ್ರ ಭಯೋತ್ಪಾದನೆ ಮತ್ತು ದುಷ್ಟ ಶಕ್ತಿಗಳನ್ನು ತಡೆಯಲು ಸಾಧ್ಯವಾಗುತ್ತದೆ. ಪಹಲ್ಗಾಮ್‌ ನಲ್ಲಿ ನಡೆದ ಕ್ರೌರ್ಯವನ್ನು ನಾವು ವಿರೋಧಿಸುತ್ತೇವೆ ಮತ್ತು ಈ ಕೃತ್ಯ ಎಸಗಿದ ಪಾಪಿಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಯಾವ ನಿರ್ಣಯ ತೆಗೆದುಕೊಂಡರೂ ನಮ್ಮ ಬೆಂಬಲವಿದೆ.

ಯುವ ಜನಾಂಗ ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉನ್ನತ ಮಟ್ಟದ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ದುಶ್ಚಟಗಳಿದೆ ದಾಸರಾಗದೆ ರಾಷ್ಟ್ರ ಕಟ್ಟುವಲ್ಲಿ ಮತ್ತು ನಮ್ಮ ವೈಯಕ್ತಿಕ ಜೀವನವು ದೈವಿ ಜೀವನವಾಗಲು ಬಸವ ತತ್ವದಲ್ಲಿ ಸಾಧ್ಯವಿದೆ ಆದ್ದರಿಂದ ಯುವ ಸಮೂಹ ಇದರ ಬಗ್ಗೆ ಗಮನ ಹರಿಸಬೇಕು. ಪವಿತ್ರ ಬಸವ ಜಯಂತಿಯಂದು ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ, ಸದ್ಗುಣವನ್ನು ತೆಗೆದುಕೊಂಡು ಹೋಗಿ” ಎಂದರು.

ಹಿರಿಯ ಪತ್ರಕರ್ತರು ಮಾಧ್ಯಮ ಮುಖ್ಯಸ್ಥರು ಆದ ರಹಮತ್ ಕಂಚಗಾರ ಮಾತನಾಡಿ, ‘ಕಲ್ಯಾಣ ಕ್ರಾಂತಿ ಆದ ನಂತರ ಚದುರಿದ ಶರಣರನ್ನು ಒಂದುಗೂಡಿಸಿದ ಶ್ರೇಯಸ್ಸು ಪರಮಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಪರಮಪೂಜ್ಯ ಮಾತೆ ಮಹಾದೇವಿಯವರಿಗೆ ಸಲ್ಲುತ್ತದೆ. ಸರ್ವಧರ್ಮದ ಸಮನ್ವಯ ಮಾಡಬೇಕಾದರೆ, ಮನುಷ್ಯನ್ನು ಮನುಷ್ಯನನ್ನಾಗಿ ಮಾಡಬೇಕಾದರೆ ಅದು ಅಪ್ಪಟ ಬಸವತತ್ವ ಸಂಘಟನೆಯಾದ ರಾಷ್ಟ್ರೀಯ ಬಸವ ದಳದಿಂದ ಮಾತ್ರ ಸಾಧ್ಯ.

ಶಾಂತಿಯ ಪ್ರಣತೆಯನ್ನು ದೇಶ ವಿದೇಶಗಳ ತುಂಬೆಲ್ಲ ತೆಗೆದುಕೊಂಡು ಹೋಗುವ ಶಕ್ತಿ ಮತ್ತು ಸಾಮರ್ಥ್ಯ ರಾಷ್ಟ್ರೀಯ ಬಸವ ದಳಕ್ಕಿದೆ. ರಾಷ್ಟ್ರೀಯ ಬಸವ ದಳವು ಪಾಕಿಸ್ತಾನದಲ್ಲೂ ತನ್ನ ಶಾಖೆಯನ್ನು ತೆರೆದು ಅಲ್ಲಿರುವಂತಹ ದುಷ್ಟ ಪಾಕಿಗಳಿಗೆ ಬುದ್ದಿ ಕಲಿಸುವ ಕೆಲಸ ಮಾಡುವ ಸಾಮರ್ಥ್ಯ ಈ ರಾಷ್ಟ್ರೀಯ ಬಸವ ದಳಕ್ಕಿದೆ” ಎಂದು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಮ್ಮುಖವನ್ನು ಪೂಜ್ಯ ಬಸವರತ್ನದೇವಿ ಮತ್ತು ಮಾತೆ ವಿಜಯಾಂಬಿಕಾದೇವಿ ವಹಿಸಿದರು. ಬೆಂಗಳೂರಿನ ಮಾಜಿ ಮಹಾಪೌರರಾದ ಶರಣೆ ಗಂಗಾಂಬಿಕೆ ಮಲ್ಲಿಕಾರ್ಜುನ ಅವರಿಗೆ ವಿಶೇಷ ಸತ್ಕಾರ ಜರಗಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶರಣ ಶ್ರೀ ಲಿಂಗಣ್ಣ ಗುಂಡಳ್ಳಿ ಬಸವ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶರಣ ಸುರೇಶ್ ಮರೂರಕರ್, ಶರಣ ಪ್ರವೀಣ ಕೊಚ್ಚಾಕಿ, ಅಧ್ಯಕ್ಷತೆಯನ್ನು ಶರಣ ಚಂದ್ರಮೌಳಿ ಎನ್. ಲಿಂಗಾಯತ ವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
2 Comments
  • ಜಾತಿಯ ಮೇಲಿರಿಮೆಗೆ ಬಿದ್ದು ಅಸ್ಪ್ರಶ್ಯತೆಯನ್ನು ಆಚರಿಸುತ್ತಾ ಶೋಷಕರಾಗಿರುವ ನಮ್ಮ ಸುತ್ತಲಿನವರ ಮನಪರಿವರ್ತನೆ ಮಾಡುವುದು ಶರಣರ ಮೊದಲ ಆದ್ಯತೆಯಾಗಬೇಕು ಅಲ್ಲದೆ ಜಾತಿದೌರ್ಜನ್ಯದಿಂದ ನೊಂದವರನ್ನು ಕಂಡು ಸಂತೈಸುವುದಲ್ಲದೆ ಅವರೊಂದಿಗೆ ಬೆರೆತು ಒಡನಾಟದಲ್ಲಿದ್ದುಕೊಂಡು ಸಮಾಜದ ಕಣ್ಣು ತೆರೆಸಿದರೆ ವಿಶ್ವಗುರು ಬಸವಣ್ಣನವರ ಆಶಯಗಳಿಗೆ ಜೀವ ತುಂಬಿದಂತಾಗುವುದು

Leave a Reply

Your email address will not be published. Required fields are marked *