ನರಗುಂದ
ಅಭಿನವ ಬಸವಣ್ಣನಾಗಿ ಈ ನಾಡಿನಲ್ಲಿ ಸಾಮಾಜಿಕ ಕ್ರಾಂತಿಯ ಜೊತೆಗೆ ವೈಚಾರಿಕ ಕ್ರಾಂತಿ ಮಾಡಿದ ಈ ಶತಮಾನ ಕಂಡ ಶ್ರೇಷ್ಠ ಸಂತರು ಡಾ. ತೋಂಟದ ಸಿದ್ದಲಿಂಗ ಶ್ರೀಗಳು. ಅವರು ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ, ಅವರ ಜೀವನವೇ ನಮಗೆಲ್ಲ ಆದರ್ಶ ಎಂದು ನರಗುಂದ ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಮಣ್ಣೂರಮಠ ಅವರು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೋಮುಸೌಹಾರ್ದತೆಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ೭೬ ನೇ ಜಯಂತ್ಯುತ್ಸವ ಹಾಗೂ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಭಾವೈಕ್ಯತೆಯ ಹರಿಕಾರರಾದ ಪೂಜ್ಯರು ಯಾವುದಕ್ಕೂ ರಾಜಿಯಾಗದೆ ಇದ್ದುದನ್ನು ಇದ್ದ ಹಾಗೆ ಹೇಳುತ್ತಿದ್ದ ನೇರ ನಿಷ್ಠುರವಾದಿಗಳಾಗಿದ್ದರು.
ಈ ದೇಶದ ಇತಿಹಾಸದಲ್ಲಿ ಭಾವೈಕ್ಯತೆಗೆ ಹೊಸ ಬಾಷ್ಯ ಬರೆದ ಪೂಜ್ಯರು ಸರ್ವರೂ ನಮ್ಮವರೆಂದು ಎಲ್ಲರನ್ನೂ ಒಪ್ಪಿ ಅಪ್ಪಿಕೊಂಡಿದ್ದರು ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ನರಗುಂದ ತಾಲೂಕ ಕಸಾಪ ಅಧ್ಯಕ್ಷ ಪ್ರೊ. ಬಿ. ಸಿ. ಹನಮಂತಗೌಡ್ರ ಅವರು ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠವಾದ ಭಾಷೆ ಕನ್ನಡ ಭಾಷೆ ಅದಕ್ಕೆ ತನ್ನದೆಯಾದ ಇತಿಹಾಸವಿದೆ. ಜಗತ್ತಿನಾದ್ಯಾಂತ ಸುಮಾರು ೭೧೦೦ಕ್ಕಿಂತ ಹೆಚ್ಚು ಭಾಷೆಗಳಿವೆ, ಅದರಲ್ಲಿ ಕನ್ನಡ ಭಾಷೆಯ ಅಕ್ಷರ ಅತ್ಯಂತ ಸುಂದರ ಹಾಗೂ ಸುಲಲಿತವಾಗಿದೆ. ಎಲ್ಲರೂ ಮಾತೃಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು ಮತ್ತು ಅದನ್ನು ಉಳಿಸಿ-ಬೆಳೆಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಶಾಂತಲಿಂಗ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಬೆಳಗಾವಿಯಲ್ಲಿ ಕನ್ನಡ ಮಾತನಾಡುವಂತೆ ಹೇಳಿದ ಕರ್ನಾಟಕ ಸಾರಿಗೆಯ ನಿರ್ವಾಹಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ವಿಕೃತಿ ಮರೆದ ಮರಾಠಿ ಯುವಕರ ನಡೆ ಖಂಡನೀಯವಾದುದು. ಪದೆ ಪದೆ ಕನ್ನಡಿಗರ ಶಾಂತಿ ಹಾಗೂ ಸ್ವಾಭಿಮಾನವನ್ನು ಕೆಣಕುತ್ತಿರುವ ಮರಾಠಿಗರ ಅಟ್ಟಹಾಸಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ಕಾನೂನು ಕ್ರಮ ತಗೆದುಕೊಳ್ಳಬೇಕು.
ನಾಡು ನನ್ನದು ಎನ್ನದವನ ಎದೆ ಸುಡಗಾಡು. ಆ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಗಾಳಿ-ಬೆಳಕು-ನೀರನ್ನು ಸೇವಿಸಿ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿರುವುದು ಹೆತ್ತ ತಾಯಿಗೆ ಅಪಚಾರವೆಸಗಿದಂತೆ, ಅಂತವರನ್ನು ಗಡಿಪಾರು ಮಾಡಬೇಕು ಎಂದರು.
ಉಪನ್ಯಾಸಕ ಆರ್. ಕೆ. ಐನಾಪೂರ, ವೀರಯ್ಯ ಸಾಲಿಮಠ, ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಪ್ರಮುಖರು ಉಪಸ್ಥಿತರಿದ್ದರು.