ಚನ್ನಬಸವಣ್ಣ ವಚನ ನಿರ್ವಚನ: ಅಂಗಭೋಗ, ಲಿಂಗಭೋಗ ವಿರುದ್ಧ ತತ್ವಗಳಲ್ಲ

ಚನ್ನಬಸವಣ್ಣನವರ ವಚನ ಅಂಗಭೋಗ, ಲಿಂಗಭೋಗಗಳ ಕುರಿತಾದ ಗೊಂದಲವನ್ನು ನಿವಾರಿಸುತ್ತದೆ.

ಗುಳೇದಗುಡ್ಡ

ವಾರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಶನಿವಾರ ಶರಣ ಬಸವರಾಜ ಬ. ಬರಗುಂಡಿ ಅವರ ಮನೆಯಲ್ಲಿ ಜರುಗಿತು.

ಅನುಭಾವಕ್ಕಾಗಿ ಅವಿರಳ ಜ್ಞಾನಿ ಚನ್ನಬಸವ ತಂದೆಗಳ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಅಂಗಭೋಗವನೆ ಕುಂದಿಸಿ ಪ್ರಸಾದವನು ರುಚಿಸುವೆವೆಂಬ
ಲಿಂಗವಂತರೆಲ್ಲ ಅರಿವುಗೇಡಿಗಳಾಗಿ ಹೋದರು.
ಅಂಗಭೋಗವೆ ಲಿಂಗಭೋಗ,
ಅಂಗಭೋಗವು ಲಿಂಗಕ್ಕೆ ಅರ್ಪಿತವಾಗಿ,
ಅಂಗಕ್ಕೆ ಬಂದ ರುಚಿ ಲಿಂಗಕ್ಕೆ ಬಾರದೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಪಾಕಸಂಬಂಧಿಗೆ ಪ್ರಸಾದ ದೂರ.

ವಚನದ ಅನುಭಾವವನ್ನು ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು ಮಾಡುತ್ತಾ ಚನ್ನಬಸವಣ್ಣನವರು ಈ ವಚನದಿಂದ ಅಂಗಭೋಗ, ಲಿಂಗಭೋಗ ಹಾಗೂ ಪ್ರಸಾದವನ್ನು ಕುರಿತಾದ ಗೊಂದಲವನ್ನು ಪರಿಹರಿಸಿದ್ದಾರೆ. ಅಲ್ಲದೆ ಪದಾರ್ಥ ಪ್ರಸಾದಗಳ ಕುರಿತು ಭ್ರಮಿತಗೊಂಡ ಲಿಂಗಾಯತರನ್ನೇ ಛೇಡಿಸಿದ್ದಾರೆ. ಇಲ್ಲಿಯವರೆಗೆ ನಾವು ತಿಳಿದುಕೊಂಡಂತೆ ಹಾಗೂ ಚನ್ನಬಸವಣ್ಣನವರು ಬೇರೆ ವಚನಗಳಲ್ಲಿ ತಿಳಿಸಿರುವಂತೆ ಅಂಗಭೋಗವೇ ಬೇರೆ, ಲಿಂಗಭೋಗವೇ ಬೇರೆ. ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ.

ಹೀಗಾಗಿ ಲಿಂಗವಂತರೆಲ್ಲ ಅಂಗಭೋಗವನ್ನು ಅಲಕ್ಷಿಸಿ ಲಿಂಗಭೋಗವನ್ನೇ ಅಪೇಕ್ಷಿಸಿದರು. ಇದು ವಿಪರೀತ ಆಚರಣೆಗೆ ತಿರುಗುತ್ತಿರುವುದನ್ನು ಕಂಡ ಚನ್ನಬಸವಣ್ಣನವರು, ಸಾಧಕರು ಅಂಗ-ಲಿಂಗಗಳ ಸಂಬಂಧದ ಸೂಕ್ಷ್ಮತೆಯನ್ನು ಅರಿಯಬೇಕು. ಇವೆರಡೂ ಪರಸ್ಪರ ವಿರುದ್ಧ ತತ್ವಗಳಲ್ಲ ಒಂದಕ್ಕೊಂದು ಪೂರಕವಾದವುಗಳು. ಅಂಗಭೋಗ ಕುಂದಿಸಿ, ಪ್ರಸಾದವನ್ನು ಸ್ವೀಕರಿಸುವುದೂ ಕೂಡಾ ಒಂದು ತೆರನಾದ ಸ್ಥಾವರ ಪಾರಮ್ಯವೇ ಹೀಗಾಗ ಕೂಡದು.ಇದು ಗಣಪತಿಯನ್ನು ಮಾಡಹೋಗಿ ಹನಮಂತನನ್ನು ಮಾಡಿದ ಶಿಲ್ಪಿಯಂತಾಗುತ್ತದೆ.

ಅಂಗದ ಮೂಲಕವೇ ಲಿಂಗಭೋಗವಾಗಬೇಕಾದಾಗ ಸಹಜವಾಗಿ ಅದು ಅಂಗದ ಭೋಗವೂ ಆಗಿರುತ್ತದೆ. ಪದಾರ್ಥಗಳ ರುಚಿಯನ್ನು ಕೇವಲ ನಾಲಿಗೆ ರುಚಿಸದೆ, ಪ್ರಸನ್ನತೆಯ ಮೂಲಕ ಭಾವಕ್ಕೆ ಸಮರ್ಪಿತವಾಗಬೇಕು. ಆಗ ಸಹಜವಾಗಿಯೇ ಲಿಂಗಸಂಬಂಧಿಯಾಗುತ್ತದೆ. ಈ ಸ್ಥಿತಿ ಒಬ್ಬ ಸಾಧಕ ಅನುಭಾವಿಯ ಮಟ್ಟಕ್ಕೇರಿದಾಗ ಸಾಧ್ಯಥವಾಗುತ್ತದೆ. ಆ ನಿಲುವಿನಲ್ಲಿ ನಿಂತ ಚನ್ನಬಸವಣ್ಣನವರು ಈ ವಚನವನ್ನು ಹೇಳಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಪ್ರಸ್ತುತ ವಚನವನ್ನು ಕುರಿತು ಅನುಭಾವದ ನುಡಿಯನ್ನಾಡುತ್ತ ಪ್ರಾಸ್ತಾವಿಕವಾಗಿ ಪ್ರೊ. ಶ್ರೀಕಾಂತ ಮ. ಗಡೇದ ಅವರು ‘ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣನವರ ಕಿರು ಪರಿಚಯವನ್ನು ಮಾಡಿಕೊಡುತ್ತ, ಚನ್ನಬಸವಣ್ಣನವರು ವಯಸ್ಸಿನಲ್ಲಿ ಉಳಿದ ಶರಣರಿಗಿಂತ ಕಿರಿಯರಾಗಿದ್ದರೂ ಅನುಭವದಲ್ಲಿ ಮಿಗಿಲಾದ ಜ್ಞಾನಿಗಳಾಗಿದ್ದರು. ಅಂತೆಯೇ ವ್ಯೋಮ ಮೂರುತಿ ಅಲ್ಲಮಪ್ರಭುಗಳ ನಂತರ ಶ್ಯೂನ್ಯ ಪೀಠವನ್ನು ಅವರು ಅಲಂಕರಿಸಿದರು. ಚನ್ನಬಸವಣ್ಣನವರ ಒಂದೊಂದು ವಚನವೂ ಅಮೂಲ್ಯ ತತ್ವಗಳಿಂದ ಕೂಡಿವೆ. ಶರಣರ ಪ್ರಸಾದ ಮಹತ್ವ ಈ ವಚನದಲ್ಲಿ ಮೂಡಿ ಬಂದಿದೆ ಎಂದು ತಿಳಿಸಿದರು.

ಡಾ ಗೀರಿಶ ನೀಲಕಂಠಮಠ ಅವರು ಈ ವಚನವನ್ನು ಆಳವಾಗಿ ವಿಶ್ಲೇಷಿಸುತ್ತ ಶರಣ ಆದಯ್ಯನವರ ವಚನವನ್ನು ಉಲ್ಲೇಖಿಸಿ ಅಂಗ-ಲಿಂಗಗಳ ಸಕೀಲ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಅಂಗದ ಮುಖಗಳಾದ ಘ್ರಾಣ, ಜಿಹ್ವೆ, ನೇತ್ರ, ತ್ವಚೆ, ಶ್ರೋತ್ರ ಮತ್ತು ಹೃದಯಗಳಲ್ಲಿ ಕ್ರಮವಾಗಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಮತ್ತು ಮಹಾಲಿಂಗಗಳನ್ನು ಅನುಷ್ಠಾನಗೊಳಿಸುವ ರೀತಿಯನ್ನು, ಅದರಿಂದ ಉಂಟಾಗುವ ಪರಿಣಾಮವನ್ನು ವಿವರವಾಗಿ ತಿಳಿಸಿದರು.

ಹೀಗಾಗಿ ಕೇವಲ ಲಿಂಗ ಧರಿಸಿದ ಮಾತ್ರಕ್ಕೆ ಯಾರೂ ಲಿಂಗಾಯತರಾಗುವುದಿಲ್ಲ. ಆ ಲಿಂಗ ತತ್ವದಲ್ಲಿ ಬದುಕಬೇಕು. ಆಗ ಅಂಗ-ಲಿಂಗದ ನಡುವಣ ಅಂತರ ತೊಲಗುತ್ತದೆ. ಅಂಗಕ್ಕೆ ಅರ್ಪಿಸಿದ ಪದಾರ್ಥವೂ ಪ್ರಸಾದವಾಗುತ್ತದೆ. ಅದೇ ಲಿಂಗಭೋಗವಾಗುತ್ತದೆ. ಜೊತೆಗೆ ಪ್ರಸಾದ ಕಾಯವಾಗುತ್ತದೆಯೆಂದು ವಿವರಿಸಿದರು.

ಹಿರಿಯ ಅನುಭವಿಗಳಾದ ಪ್ರೊ. ಮಹಾದೇವಯ್ಯ ಪಿ. ನೀಲಕಂಠಮಠ ಅವರು ಇದೇ ವಚನದ ಸಾರವನ್ನು ವಿವರಿಸುತ್ತ ನಾವು ಹುಗ್ಗಿ, ಹೋಳಿಗೆ ಮೊದಲಾದ ಸಿಹಿ ಪದಾರ್ಥಗಳನ್ನು ತಿಂದರೂ ಅದರ ಸಿಹಿ ಒಂದು ಚಿಕ್ಕದಾದ ಬೆಲ್ಲದ ಕಣ್ಣಿ (ತುಂಡಿನಲ್ಲಿ)ಯಲ್ಲಿರುವಂತೆ, ಎಲ್ಲ ಇಂದ್ರಿಯಗಳ ಮುಖದಿಂದ ಸ್ವೀಕರಿಸುವ ಪದಾರ್ಥಗಳು ಪ್ರಸಾದವಾಗಬೇಕು. ಅದುವೇ ಮುಖ್ಯವಾದುದು. ಪ್ರಸಾದವೆಂದರೆ ಕೇವಲ ಭುಂಜಿಸುವುದಷ್ಟೇ ಅಲ್ಲ. ನಾವು ಸೇವಿಸುವ ಎಲ್ಲ ಇಂದ್ರಿಯ ಮೂಲಕ ಪಡೆದ ಪದಾರ್ಥಗಳು ಇದು ಅನುಭವವಾಗುತ್ತದೆ. ಅದನ್ನು ಮೀರಿ ಲಿಂಗಭಾವದಿಂದ ಸ್ವೀಕರಿಸಿದರೆ ಪ್ರಸಾದವಾಗುತ್ತದೆ. ಹೀಗೆ ನಾವು ಕೇವಲ ಪಾಕ ಸಂಬಂಧಿಯಾಗದೆ ಪ್ರಸಾದ ಸಂಬಂಧಿಯಾಗಬೇಕು ಎಂದರು.

ಪ್ರಾರಂಭದಲ್ಲಿ ಶರಣೆಯರಾದ ಸುನಂದ ಸೋ. ಜೋಗೂರ ಹಾಗೂ ಪೂರ್ಣಿಮಾ ಗಂ. ದೇಶಮುಖ ಅವರು ಸಾಮೂಹಿಕ ವಚನ ಪ್ರಾರ್ಥನೆ ಮಾಡಿದರು. ಕೊನೆಯಲ್ಲಿ ಬಸವರಾಜ ಬರಗುಂಡಿ ಮತ್ತು ಜಯಶ್ರೀ ಬರಗುಂಡಿ ಅವರಿಂದ ವಚನ ಮಂಗಲವಾಯಿತು. ಕಾರ್ಯಕ್ರಮದಲ್ಲಿ ಕೃಷ್ಣಾಜಿ ಮಹೀಂದ್ರಕರ, ಪಾಂಡಪ್ಪ ಕಳಸಾ, ಚನ್ನಮಲ್ಲಪ್ಪ ಮಂಗಳೂರ, ರಾಚಣ್ಣ ಕೆರೂರ, ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ರಾಜಣ್ಣ ತೊರ್ಲಿ, ಮಂಜುನಾಥ ನಾಯನೇಗಲಿ, ಪ್ರೊ. ಸುರೇಶ ರಾಜನಾಳ, ಪ್ರೊ. ಶಿವಕುಮಾರ ಶೀಪ್ರಿ, ಶರಣೆಯರಾದ ಸುವರ್ಣ ಸಾಲಿಮಠ, ನೀಲಮ್ಮ ಯಳಮೇಲಿ, ರತ್ನಕ್ಕ ಯಳಮೇಲಿ, ಲಕ್ಷ್ಮೀ ತೊರ್ಲಿ, ಮಮತಾ ಗೋರೆಬಾಳ, ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು, ಬಂಧುಬಳಗದವರು ಮೊದಲಾದವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *