ಚಿಕ್ಕಮಗಳೂರು
ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರ ಸಾಮಾಜಿಕ ಕಳಕಳಿ ಹಾಗೂ ಚಿಂತನೆಯನ್ನು ಜನಮಾನಸಕ್ಕೆ ತಲುಪಿಸುವ ಬಸವ ಸಂಸ್ಕೃತಿ ಅಭಿಯಾನವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದು ಯಳನಾಡು ಸಂಸ್ಥಾನದ ಪೂಜ್ಯ ಜ್ಞಾನಪ್ರಭು ಸಿದ್ದರಾಮ ದೇಶಿಕೆಂದ್ರ ಮಹಾಸ್ವಾಮೀಜಿ ಹೇಳಿದರು.
ಅವರು ನಗರದ ಬಸವತತ್ವ ಪೀಠದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತ, ಬಸವಣ್ಣನವರ ಕನಸು ಕಲ್ಯಾಣ ರಾಜ್ಯದ ಕನಸಾಗಿತ್ತು. ಅವರ ಕನಸ್ಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಬಸವತತ್ವ ಪೀಠದ ಪೂಜ್ಯ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಬಸವತತ್ವವನ್ನು ಪ್ರತಿಯೊಬ್ಬರ ಮನ, ಬುದ್ದಿ, ಭಾವದಲ್ಲಿ ಬಿತ್ತುವ ಕೆಲಸ ಮಾಡುವ ನಿಟ್ಟಿನಲ್ಲಿ ಲಿಂಗಾಯುತ ಮಠಾಧೀಶರ ಒಕ್ಕೂಟದ ಚಿಂತನೆಯ ಫಲವೇ ಬಸವ ಸಃಸ್ಕೃತಿ ಅಭಿಯಾನ ಎಂದರು.

ಚಿಕ್ಕಮಗಳೂರಲ್ಲಿ ಸೆಪ್ಟಂಬರ್ 20 ರಂದು ನಡೆಯಲಿದ್ದು, ಅಂದು ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ, ಪಾದಯಾತ್ರೆ, ಸಾರ್ವಜನಿಕ ಸಮಾರಂಭ, ಉಪನ್ಯಾಸ, ವಚನಗೀತೆ, ನಾಟಕ, ದಾಸೋಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲರೂ ತನು, ಮನ, ಧನ, ಸಹಕಾರದೊಂದಿಗೆ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅದ್ಯಕ್ಷತೆ ವಹಿಸಿ ಶಾಸಕ ಹೆಚ್. ಡಿ. ತಮ್ಮಯ್ಯ ಮಾತಾನಾಡುತ್ತ, ಬಸವಣ್ಣನವರ ಸಾಮಾಜಿಕ ಚಿಂತನೆ ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತವಾಗಿವೆ. ಬಸವಾದಿ ಶರಣರ ಸೇವೆ ಮಾಡೋದು ನಮ್ಮೆಲ್ಲರ ಸೌಭಾಗ್ಯ. ನಾವೆಲ್ಲರೂ ಸೇರಿ ಕಲ್ಯಾಣದ ಕೆಲಸವನ್ನು ಯಶಸ್ವಿಗೊಳಿಸೋಣ ಎಂದರು.
ಜೆ. ಎಲ್. ಎಂ. ಜಿಲ್ಲಾಧ್ಯಕ್ಷ ಹೆಚ್. ಗಂಗಾಧರಪ್ಪ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಪ್ರಚಾರ ಕಾರ್ಯವನ್ನು ಪ್ರತಿ ತಾಲ್ಲೂಕುಗಳಲ್ಲೂ ಹಮ್ಮಿಕೊಳ್ಳಲಾಗುವುದು ಎಂದರು. ಮಹಡಿಮನೆ ಸತೀಶ್, ಹೆಚ್. ಸಿ ಕಲ್ಮರುಡಪ್ಪ, ಚಿದಾನಂದ ಅವರು ಸಹ ಅಭಿಯಾನ ಯಶಸ್ಸು ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಉದ್ಯಮಿ ಬಿ.ಎನ್. ಚಿದಾನಂದ ಅವರನ್ನು ನೇಮಕ ಮಾಡಲಾಯಿತು. ಅನೇಕ ಬಸವಭಕ್ತರು, ಅಭಿಮಾನಿಗಳು ಅಭಿಯಾನ ಕಾರ್ಯಕ್ರಮಕ್ಕೆ ದೇಣಿಗೆಯನ್ನು ಘೋಷಿಸಿದರು.
ಜೆ. ಎಲ್. ಎಂ. ಮಹಿಳಾ ಘಟಕದ ಅಧ್ಯಕ್ಷೆ ಎಸ್. ಗಾಯತ್ರಮ್ಮ, ನಂಜೇಶ್, ಡಿ.ಪಿ. ರಾಜಪ್ಪ, ರಾಷ್ಪೀಯ ಬಸವದಳ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು, ಸಧಸ್ಯರು ಹಾಗೂ ಬಸವಾಭಿಮಾನಿಗಳು ಬಾಗವಹಿಸಿದ್ದರು.
ನಿವೃತ್ತ ಉಪನ್ಯಾಸಕ ತಿಪ್ಪೇರುದ್ರಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಜಯಚನ್ನೆಗೌಡ ಪ್ರಾರ್ಥಿಸಿ, ರಾಜೇಶ್ ಸ್ವಾಗತಿಸಿ, ಹೆಚ್. ಆರ್. ಚಂದ್ರಪ್ಪ ನಿರೂಪಿಸಿದರು.