ಮೈಸೂರು
ಭಾರತದ ೩ ಸಾವಿರ ವರ್ಷಗಳ ಇತಿಹಾಸದಲ್ಲಿ ಹೊರ ಹಾಕುವ ಮತ್ತು ಒಳಗೊಳ್ಳುವ ಸಂಸ್ಕೃತಿಗಳ ವಿರುದ್ಧ ಸಾಂಸ್ಕೃತಿಕ ಸಂಘರ್ಷ ನಡೆದಿದೆ. ಲೋಕಾಯತರಿಂದ ಲಿಂಗಾಯತರವರೆಗೆ ಅದು ಮುಂದುವರಿದಿದೆ.
ಒಳಗೊಳ್ಳುವ ಲೋಕಾಯತ, ಬೌದ್ಧ, ಲಿಂಗಾಯತ ಧರ್ಮದ ವಿರುದ್ಧ ಹೊರಹಾಕುವ ಸಂಸ್ಕೃತಿಯವರು ಶಸ್ತ್ರ ಹೋರಾಟ ನಡೆಸಿದ್ದಾರೆ. ಹೀಗಾಗಿಯೇ 12ನೇ ಶತಮಾನದಲ್ಲಿ ಲಕ್ಷದ ತೊಂಬತ್ತಾರು ಸಾವಿರ ಶರಣರು ಜೀವ ಉಳಿಸಿಕೊಳ್ಳಲು ಹರಿದು ಹಂಚಿ ಹೋಗಬೇಕಾಯಿತು ಎಂದು ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು.
.ಮೈಸೂರು ವಿಶ್ವವಿದ್ಯಾನಿಲಯ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಆಯೋಜಿಸಿರುವ ಸರಣಿ ಉಪನ್ಯಾಸ ಮಾಲಿಕೆ ಹಾಗೂ ಮಹಾಮನೆ ಉದ್ಘಾಟನೆ ಸಮಾರಂಭದಲ್ಲಿ ‘ವೇದ ಶಾಸ್ತ್ರ ಪುರಾಣ ಆಗಮ ಕುರಿತ ಶರಣರ ಚಿಂತನೆಗಳು’ ವಿಷಯ ಕುರಿತು ಅವರು ಮಾತನಾಡಿದರು.
ಗಡಿಯಿಲ್ಲದ ಬಸವ ಧರ್ಮ
ಜಾತಿ, ವರ್ಗ, ಲಿಂಗ ಸಹಿತವಾಗಿ ಯಾವುದೇ ಭೇದಗಳಿಲ್ಲದವು ವಚನಗಳು, ಬಸವ ಧರ್ಮ ಸಂಸಾರ ಧರ್ಮ ಸಕಲ ಜೀವಾತ್ಮರಿಗೆ ಸೇರಿದ್ದು. ವಿಶ್ವವೇ ಅದರ ಮಹಾಮನೆ. ಬಯಲು ತತ್ವದಿಂದ ರೂಪಿತವಾದ ಈ ಧರ್ಮಕ್ಕೆ ಗಡಿರೇಖೆಗಳಿಲ್ಲ. ಹೀಗಾಗಿ ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾದುದಲ್ಲ, ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು.
ಕ್ರೌರ್ಯವನ್ನು ಸ್ಪಷ್ಟವಾಗಿ ಹೇಳಿದ ಅತ್ಯಂತ ಪ್ರಾಮಾಣಿಕ ಪುಸ್ತಕ ಮನುಸ್ಮೃತಿ. ಇಂತಹ ಪ್ರಾಮಾಣಿಕ ಪುಸ್ತಕ ಮತ್ತೊಂದಿಲ್ಲ. ಹೀಗಾಗಿಯೇ ಇಂದು ದ್ವೇಷ ಸಂಸ್ಕೃತಿ ಬೆಳೆದಿದೆ ಎಂದು ದರ್ಗಾ ಅಭಿಪ್ರಾಯಪಟ್ಟರು.
ಬಸವ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಅರವಿಂದ ಮಾಲಗತ್ತಿ ಮಾತನಾಡಿ, ವೇದ, ಪುರಾಣ, ಶಾಸ್ತ್ರ ಆಗಮಗಳ ಕುರಿತು ವಸ್ತುನಿಷ್ಠೆ ಚಿಂತನೆ ಮೂಡಿಸಲು ಸರಣಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೈ,ಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಸಂದರ್ಶಕ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ, ಡಾ ಮೈಲಹಳ್ಳಿ ರೇವಣ್ಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಇದ್ದರು.