ನರಗುಂದ
ರಕ್ತದಾನ ಎಲ್ಲ ದಾನಗಳಿಗಿಂತ ಅತೀ ಶ್ರೇಷ್ಠವಾದುದು ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಆಸರೆಯಾಗಬೇಕು. ಮಾರಣಾಂತಿಕ ಪರಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಿಗೆ ದೀರ್ಘಕಾಲ ಬದುಕಲು ರಕ್ತದಾನ ಅತ್ಯುಪಯುಕ್ತವಾಗಿದೆ ಎಂದು ನರಗುಂದ ತಾಲೂಕಾ ಆಸ್ಪತ್ರೆಯ ಆಪ್ತಸಮಾಲೋಚಕರಾದ ನೀಲಕಂಠ ಮಡಿವಾಳರ ಅವರು ಉಪನ್ಯಾಸ ನೀಡಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತ, ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡುವುದರಿಂದ ಆರೋಗ್ಯ ಸಮತೋಲನ ಸ್ಥಿತಿಯಲ್ಲಿರುತ್ತದೆ. ರಕ್ತಕ್ಕೆ ಯಾವುದೇ ಜಾತಿ ಬೇಧ ಭಾವವಿಲ್ಲ ಅದು ಎಲ್ಲರಿಗೂ ಎಲ್ಲ ಕಾಲಕ್ಕೂ ಸಲ್ಲುವಂತದ್ದಾಗಿದೆ. ಇಂದಿನ ಯುವ ಸಮುದಾಯ ದುಶ್ಚಟಕ್ಕೆ ಬಲಿಯಾಗಿ ರಕ್ತವಿಲ್ಲದೆ ಸಾವಿನ ದವಡೆಯಲ್ಲಿ ಸಿಲುಕುತ್ತಿದ್ದಾರೆ, ರಕ್ತವೆಂದರೆ ಅದು ಜೀವದ್ರವ್ಯ ಹೀಗಾಗಿ ಸತ್ವಯುತ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಎ.ಎಸ್. ಮಕಾನದಾರ, ಭಾರತೀಯರಾದ ನಾವು ಜಾತಿಯತೆಯನ್ನು ಮೀರಿ ಮನಸ್ಸನ್ನು ಹಸಿರಾಗಿಸಿಕೊಂಡು ಸಂವಿಧಾನದ ಆಶಯದಂತೆ ಸಹಬಾಳ್ವೆಯನ್ನು ಮಾಡಬೇಕು. ಗತಕಾಲದ ಇತಿಹಾಸದ ಪ್ರಜ್ಞೆ ಸರ್ವ ಯುವಕರಲ್ಲೂ ಮೂಡಬೇಕು. ಸತತ ಅಧ್ಯಯನದ ಮೂಲಕ ಹೊಸ ಇತಿಹಾಸವನ್ನು ಸೃಷ್ಠಿ ಮಾಡಿ ದೇಶಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಬೇಕೆಂದು ಯುವ ಸಮುದಾಯಕ್ಕೆ ಕರೆಕೊಟ್ಟರು.
ಈ ಸಂದರ್ಭದಲ್ಲಿ ಇತ್ತಿಚಿಗೆ ನಿವೃತ್ತರಾದ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿರಸ್ತೇದಾರ ಬಸವರಾಜ ಮ. ಕುಕನೂರ, ನ್ಯಾಯಾಂಗ ಇಲಾಖೆಯ ವಿಶ್ರಾಂತ ಪ್ರಥಮ ದರ್ಜೆ ಸಹಾಯಕ ಎ.ಎಸ್. ಮಕಾನದಾರ ಹಾಗೂ ವಿಶ್ರಾಂತ ಶಿಕ್ಷಕರಾದ ಸಂಗಮೇಶ ಫ. ಕೊಣ್ಣೂರ, ಹೆಚ್.ಕೆ. ಪಾಟೀಲ ಅವರನ್ನು ಶ್ರೀಮಠದಿಂದ ಅಭಿನಂದಿಸಿ ಸತ್ಕರಿಸಲಾಯಿತು.

ಪೂಜ್ಯ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು, ಜನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ, ವಿಶ್ರಾಂತ ಶಿರಸ್ತೆದಾರ ಬಸವರಾಜ ಮ. ಕುಕನೂರ ಹಾಗೂ ಎಸ್.ವೈ. ಎಸ್. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಗುರು ಕಲ್ಲೇದ ಅವರು ಮಾತನಾಡಿದರು.
ವೇದಿಕೆ ಮೇಲೆ ವಿಶ್ರಾಂತ ಶಿಕ್ಷಕ ಎಸ್. ಎಫ್. ಕೊಣ್ಣೂರ, ಬಿ .ಕೆ. ಹಿರೆಗೌಡ್ರ, ಮುದಬಸಪ್ಪ ನಾಶಿ, ಕರಬಸಪ್ಪ ಐನಾಪೂರ, ಪ್ರೊ ಆರ್. ಬಿ. ಚಿನಿವಾಲರ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6