ಧಾರವಾಡ
ತ್ರಿವಿಧ ದಾಸೋಹ ಮೂರ್ತಿ ಪೂಜ್ಯ ಮಹಾಂತಪ್ಪಗಳು ಕನ್ನಡ ನಾಡು ಕಂಡ ಅಪ್ರತಿಮ ತ್ರಿವಿಧ ದಾಸೋಹಿಗಳಾಗಿದ್ದರು. ಅಕ್ಷರ, ಅನ್ನದಾಸೋಹ ಕಾರ್ಯವನ್ನು ಇಷ್ಟಲಿಂಗ ಪೂಜೆ ಎಂದು ಭಾವಿಸಿ ಮುನ್ನಡೆಸಿಕೊಂಡು ಬಂದಿದ್ದರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಹೇಳಿದರು.
ಮುರಘಾಮಠದಳ್ಳಿ ಶ್ರೀ ಮಹಾಂತಪ್ಪಗಳ ೩೧ ನೇ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀಮಠದಲ್ಲಿ ಶಿಕ್ಷಣ ಹಾಗೂ ದಾಸೋಹ ನಿರಂತರವಾಗಿ ನಡೆಸಿಕೊಂಡು ಬಂದಿದ್ದ ಅಪ್ಪಗಳು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಬಹಳಷ್ಟು ಶ್ರಮಿಸಿದ್ದಾರೆ. ಯಾರು ಮಠದ ಸಂಸ್ಕಾರ ಪಡೆಯುತ್ತಾರೋ ಅವರು ಜ್ಞಾನದ ಬೆಳಕಿನಡೆ ಸಾಗಿ ತಮ್ಮ ಭವಿಷ್ಯವನ್ನು ಪ್ರಜ್ವಲಿಸಿಕೊಳ್ಳುತ್ತಾರೆ. ಅಪ್ಪಗಳು ಮಾಡಿದ ಕಾರ್ಯ ಯಾರಿಗೂ ಮಾಡಲು ಸಾದ್ಯವಿಲ್ಲ. ಅವರನ್ನು ಸ್ಮರಿಸಿದರೆ ಸಾಲದು ನಿತ್ಯ ನಿರಂತರವಾಗಿ ಪೂಜಿಸಬೇಕು ಎಂದರು.
ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮಿಜಿ ಸಾನಿಧ್ಯವಹಿಸಿ ಮಾತನಾಡಿ, ದೇವರು, ದಯೆ, ಭಕ್ತಿ, ಗುರುವಿನ ಮಾರ್ಗದರ್ಶನ ಪಡೆದು ನಮ್ಮ ಬದುಕಿಗೆ ನಾವು ಒಳ್ಳೆಯವರಾಗಬೇಕು. ಆಗ ಮಾತ್ರ ಮನುಷ್ಯನ ಭವಿಷ್ಯ ಪ್ರಜ್ವಲಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ತನ್ನ ತಾ ಅರಿತರೆ ತಾನೇ ದೇವನಾಗಬಲ್ಲನು ಅಂತರಂಗ ಹಾಗೂ ಬಹಿರಂಗಗಳಲ್ಲಿ ಸತ್ಯಶುದ್ದ ಆಚರಣೆ ಇದ್ದಾಗ ದೇವರೆ ನಮ್ಮನ್ನು ಪ್ರೀತಿಸುತ್ತಾನೆ. ನಾವು ಅವನನ್ನು ಪ್ರೀತಿಸುವಂತಾಗದೇ ಅವನೇ ನಮ್ಮನ್ನು ಪ್ರೀತಿಸುವಂತೆ ನಾವು ನಡೆಯಲ್ಲಿ ನುಡಿಯಲ್ಲಿ ಎಚ್ಚೆತ್ತುಕೊಂಡು ಧರ್ಮ, ಸಂಸ್ಕೃತಿ ಧಾರೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದರು.

ಮುರಘಾಮಠದ ಪೀಠಾಧ್ಯಕ್ಷ ಡಾ. ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ ಆಶಿರ್ವಚನ ನೀಡಿ ಮಾತನಾಡಿ, ಅಪ್ಪಗಳು ನಮಗೆಲ್ಲರಿಗೂ ಸುಜ್ಞಾನದ ಮಾರ್ಗದರ್ಶನ ಮಾಡಿದವರು, ಜೀವನದುದ್ದಕ್ಕೂ ತ್ಯಾಗಭಾವನೆ ಎಲ್ಲರೊಂದಿಗೆ ಪ್ರೀತಿಯಿಂದ ಸಹಕರಿಸಿಕೊಂಡು ನಡೆದಿದ್ದರು. ಅವರ ಸಾತ್ವಿಕತೆ, ವಿಚಾರದ ಜ್ಞಾನ ಬಂಡಾರ ಎಲ್ಲರೂ ಅಳವಡಿಸಿಕೊಂಡು ಅತ್ಯುತ್ತಮ ಜೀವನ ಸಾಗಿಸಬೇಕು ಎಂದರು.
ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಜಿ ಸಮ್ಮುಖ ವಹಿಸಿದ್ದರು. ಡಾ.ಸಂಗಮನಾಥ ಲೋಕಾಪೂರ ಉಪನ್ಯಾಸ ನೀಡಿದರು. ನಿವೃತ್ತ ಇಂಜನೀಯರ ಶಿವಯೋಗಿ ಹಿರೇಮಠ ಅವರನ್ನು ಸತ್ಕರಿಸಲಾಯಿತು.
ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ವಿ.ಎಮ್. ಕಟಗಿ, ಎಸ್.ಎಸ್.ಲಕ್ಷ್ಮೇಶ್ವರ, ಶರಣಪ್ಪ ಕೊಟಗಿ ಇದ್ದರು.
ಡಾ. ಮೃತ್ಯುಂಜಯ ಶೆಟ್ಟರ ವಚನ ಸಂಗೀತ ನಡೆಸಿಕೊಟ್ಟರು. ಎಂ.ಎಸ್. ಗಾಣಗೇರ ನಿರೂಪಿಸಿ ಸ್ವಾಗತಿಸಿದರು. ಸಮಾರಂಭಕ್ಕೂ ಮುನ್ನ ಬೆಳಗ್ಗೆ ೧೦ ಕ್ಕೆ ಮುರಘಾಮಠದಿಂದ ಶ್ರೀ ಮಹಾಂತಪ್ಪಗಳ ಭಾವಚಿತ್ರದ ಪಲ್ಲಕ್ಕಿ ಹೊರಟು ಮುಖ್ಯ ರಸ್ತೆ ಮೂಲಕ ಹಾಯ್ದು ನಂತರ ಶ್ರೀಮಠಕ್ಕೆ ಆಗಮಿಸಿತು. ಇದರಲ್ಲಿ ಹರಗುರು ಚರಮೂರ್ತಿಗಳು ಹಾಗೂ ಭಕ್ತ ವೃಂದದವರು ಭಾಗವಹಿಸಿದ್ದರು.