ದಾವಣಗೆರೆ:
ಇದೇ ಮಾರ್ಚ್ 29 ಭಾನುವಾರ ಸಂಜೆ 6 ಗಂಟೆಗೆ ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದಲ್ಲಿ, ಬಸವ ಜಯಂತಿ ಆಚರಣೆಯ ಪೂರ್ವಸಿದ್ದತಾ ಸಭೆಯನ್ನು ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅವರ ನೇತೃತ್ವದಲ್ಲಿ ಕರೆಯಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ ತಿಳಿಸಿದ್ದಾರೆ.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿಯನ್ನು 1913ರಲ್ಲಿ ದಾವಣಗೆರೆ ವಿರಕ್ತಮಠದಲ್ಲಿ ಆಚರಣೆ ಮಾಡಿದ ಕೀರ್ತಿಯು ಅಂದಿನ ಮಠಾಧೀಶರಾದ ಮೃತ್ಯುಂಜಯ ಅಪ್ಪಗಳು, ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ. ವಿಶ್ವದಲ್ಲಿಯೇ ಮೊಟ್ಟಮೊದಲು ಬಸವ ಜಯಂತಿ ಆಚರಣೆ ಮಾಡಿದ ನಗರಿ ದಾವಣಗೆರೆ ಎಂಬುದೀಗ ಪ್ರಸಿದ್ಧಿಯನ್ನು ಪಡೆದಿದೆ.
ಮಹಾನಗರದಲ್ಲಿರುವ ಎಲ್ಲಾ ಬಸವಭಕ್ತರು, ಲಿಂಗಾಯತ, ಬಸವಪರ ಸಂಘಟನೆಗಳು ಸೇರಿಕೊಂಡು ಪ್ರತಿವರ್ಷವೂ ಬಸವ ಜಯಂತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತ ಬರಲಾಗಿದೆ. ಈ ವರ್ಷವೂ ಬಸವ ಜಯಂತಿಯನ್ನು ವಿಶೇಷವಾಗಿ ಆಚರಣೆ ಮಾಡಬೇಕೆಂಬುದು ಎಲ್ಲಾ ಬಸವಾಭಿಮಾನಿಗಳ ಸದಾಶಯವಾಗಿದೆ.
ಎಲ್ಲಾ ಬಸವ ಭಕ್ತರು, ಬಸವಪರ ಸಂಘಟನೆಯವರು, ಎಲ್ಲಾ ಸಮಾಜದ ಮುಖಂಡರುಗಳು, ಪ್ರಮುಖ ರಾಜಕೀಯ ಧುರೀಣರು ಸಭೆಗೆ ಆಗಮಿಸಿ ತಮ್ಮ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಲು ಮನವಿ ಮಾಡಲಾಗಿದೆ.
